ಅವರಿಗೆ ಕೋಟಿ ಕೋಟಿ ಕೊಟ್ರೆ ಮತ್ತೇನಾಗುತ್ತೆ? ಬಾಲಿವುಡ್ ಚಿತ್ರಗಳ ಸೋಲಿಗೆ ಅದೇ ಕಾರಣ: ರಾಜಮೌಳಿ
ಈ ವರ್ಷ ಬಾಲಿವುಡ್ ಮಂಕಾಗಿದೆ. ದಕ್ಷಿಣದ ಸಿನಿಮಾಗಳೇ ಹಿಂದಿ ಬೆಲ್ಟ್ನಲ್ಲೂ ಧೂಳೆಬ್ಬಿಸಿವೆ. KGF-2, RRR, ಕಾಂತಾರ, ವಿಕ್ರಮ್ ಹೀಗೆ ಕನ್ನಡ, ತೆಲುಗು, ತಮಿಳು ಸಿನಿಮಾಗಳು ದೇಶ ವಿದೇಶಗಳಲ್ಲಿ ಸದ್ದು ಮಾಡಿವೆ. ಬಾಲಿವುಡ್ ಸಿನಿಮಾಗಳ ಸೋಲಿಗೆ ಒಬ್ಬೊಬ್ಬರು ಒಂದೊಂದು ಕಾರಣ ಕೊಡುತ್ತಿದ್ದಾರೆ. ಇದೀಗ ನಿರ್ದೇಶಕ ಎಸ್. ಎಸ್ ರಾಜಮೌಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದ್ಕಾಲದಲ್ಲಿ ಭಾರತೀಯ ಚಿತ್ರರಂಗ ಅಂದರೆ ಬಾಲಿವುಡ್ ಅನ್ನುವಂತಾಗಿತ್ತು. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ. ಬಿಟೌನ್ ಸೂಪರ್ ಸ್ಟಾರ್ಗಳೇ ಒಂದು ಒಂದು ಹಿಟ್ ಕೊಡಲು ತಿಣುಕಾಡುತ್ತಿದ್ದಾರೆ. ಏನೇ ಸರ್ಕಸ್ ಮಾಡಿದರೂ ಸಕ್ಸಸ್ ಮರೀಚಿಕೆಯಾಗಿದೆ. "ಕಾರ್ಪೋರೇಟ್ ವ್ಯಕ್ತಿಗಳು ಬಾಲಿವುಡ್ ಪ್ರವೇಶಿಸಿದ ನಂತರ ಈ ರೀತಿ ಆಗಿದೆ" ಎಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ. ಇದೇ ಹಿಂದೆ ಸಿನಿಮಾಗಳ ಸೋಲಿಗೆ ಮುಖ್ಯ ಕಾರಣ ಎಂದು ವಿವರಿಸಿದ್ದಾರೆ.
ಫಿಲ್ಮ್ ಕಂಪಾನಿಯನ್ ಸಂದರ್ಶನವೊಂದರಲ್ಲಿ ಮಾತನಾಡಿರುವ 'RRR' ನಿರ್ದೇಶಕ ರಾಜಮೌಳಿ "ಬಾಲಿವುಡ್ ಅಂಗಳಕ್ಕೆ ಯಾವಾಗ ಕಾರ್ಪೋರೇಟ್ನವರು ಅಡಿ ಇಟ್ಟರು. ಅಂದಿನಿಂದ ನಟ- ನಟಿಯರಿಗೆ , ನಿರ್ದೇಶಕರಿಗೆ ಹೆಚ್ಚು ಹೆಚ್ಚು ಸಂಭಾವನೆ ಕೊಡಲು ಆರಂಭಿಸಿದರು. ಹೇಗಿದ್ದರೂ ಒಳ್ಳೆ ಸಂಭಾವನೆ ಕೈಗೆ ಬರುತ್ತಿದೆ ಎಂದು ಒಳ್ಳೆ ಸಿನಿಮಾ ಮಾಡಬೇಕು ಎನ್ನುವ ಹಸಿವು ಅವರಲ್ಲಿ ಕಮ್ಮಿ ಆಗಿದೆ. ಇದೇ ಕಾರಣಕ್ಕೆ ಬಾಲಿವುಡ್ ಸಿನಿಮಾಗಳು ಸದ್ದು ಮಾಡ್ತಿಲ್ಲ" ಎಂದಿದ್ದಾರೆ.

"ಸೌತ್ನಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಇಲ್ಲಿ ಗೆಲುವಿಗಾಗಿ ಎಲ್ಲರೂ ಈಜಲೇ ಬೇಕು. ಇಲ್ಲದಿದ್ದರೆ ಮುಳುಗಿ ಹೋಗಬೇಕು. ಸದ್ಯಕ್ಕೆ ದಕ್ಷಿಣದ ಸಿನಿಮಾಗಳು ಜೋರಾಗಿ ಸದ್ದು ಮಾಡ್ತಿವೆ. ಇಂತಹ ಸಮಯದಲ್ಲಿ ಎಚ್ಚರಿಕೆಯಿಂದ ಅಡಿ ಇಡಬೇಕು. ಸಿನಿಮಾ ಅನೌನ್ಸ್ಮೆಂಟ್ಗೆ ಸಿಕ್ಕಿದ ಪ್ರತಿಕ್ರಿಯೆ ನೋಡಿ, ಅಲ್ಲಿವರೆಗೂ ನಡೆದ ಬ್ಯುಸಿನೆಸ್ ನೋಡಿ ಆತ್ಮಸಂತೃಪ್ತಿ ಆಗಿ ಸುಮ್ಮನಾಗದೇ ಪ್ರೇಕ್ಷಕರ ಮುಂದೆ ಸಿನಿಮಾ ತರುವವರೆಗೂ ಶ್ರಮಪಡಬೇಕು. ಆಗ ಮಾತ್ರ ಸಕ್ಸಸ್ ಸಿಗುತ್ತದೆ. ಇಲ್ಲದಿದ್ದರೆ ಇಲ್ಲೂ ಸೋಲು ತಪ್ಪಿದ್ದಲ್ಲ" ಎಂದು ಮೌಳಿ ಕಿವಿಮಾತು ಹೇಳಿದ್ದಾರೆ.
ಸದ್ಯ ರಾಜಮೌಳಿ ಹೇಳಿಕೆ ವೈರಲ್ ಆಗಿದೆ. ಮೌಳಿ ನಿರ್ದೇಶನದ 'RRR' ಸಿನಿಮಾ ಜಪಾನ್ ಬಾಕ್ಸಾಫೀಸ್ನಲ್ಲಿ ಸದ್ದು ಮಾಡ್ತಿದೆ. ರಜನಿಕಾಂತ್ ನಟನೆಯ 'ಮುತ್ತು' ಸಿನಿಮಾ ದಾಖಲೆ ಮುರಿದು ಮುನ್ನುಗ್ಗುತ್ತಿದೆ. 'RRR' ನಂತರ ರಾಜಮೌಳಿ, ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ಈ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ಬಿಗ್ಬಿ ಅಮಿತಾಬ್ ಬಚ್ಚನ್ ಕೂಡ ನಟಿಸ್ತಾರೆ ಎನ್ನಲಾಗುತ್ತಿದೆ.


Click it and Unblock the Notifications











