ಆಂಧ್ರ ವಿಧಾನಸಭೆ ಚುನಾವಣೆ: ಹಿಂದೂಪುರದಲ್ಲಿ ಹ್ಯಾಟ್ರಿಕ್ ಬಾರಿಸಿದ ಬಾಲಕೃಷ್ಣ
ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಹಿಂದೂಪುರ ಕುಡ ಒಂದು. ಚಿಲಮತ್ತೂರು, ಲೇಪಾಕ್ಷಿ ಮತ್ತು ಹಿಂದೂಪುರಂ ಮಂಡಲಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. 1985 ರಿಂದ ಟಿಡಿಪಿ ಪಕ್ಷ ಇಲ್ಲಿ ಸತತ ಗೆಲುವು ಸಾಧಿಸುತ್ತಾ ಬರ್ತಿದೆ. ಹಿಂದಿನ 2 ಚುನಾವಣೆಗಳಲ್ಲಿ ತೆಲುಗು ನಟ ಬಾಲಕೃಷ್ಣ ಗೆದ್ದಿದ್ದರು.
ಬಾಲಯ್ಯ 3ನೇ ಬಾರಿ ಹಿಂದೂಪುರದ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ಟಿಡಿಪಿಯನ್ನು ಕಟ್ಟಿಹಾಕಬೇಕು ಎಂದು ಪದೇ ಪದೆ ಅಭ್ಯರ್ಥಿಗಳನ್ನು ವೈಆರ್ಎಸ್ ಕಾಂಗ್ರೆಸ್ ಪಕ್ಷ ಬದಲಿಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ದೀಪಿಕಾ ಎಂಬುವವರು ಬಾಲಯ್ಯ ವಿರುದ್ಧ ಕಣದಲ್ಲಿದ್ದರು. ಟಿಡಿಪಿ ಭದ್ರಕೋಟೆಯಲ್ಲಿ 3ನೇ ಬಾರಿ ಬಾಲಕೃಷ್ಣ ಜಯಭೇರಿ ಮೊಳಗಿಸಿದ್ದಾರೆ. 107250 ಮತಗಳನ್ನು ಗಳಿಸಿದ ಬಾಲಯ್ಯ 32597 ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ.

ಇತ್ತೀಚೆಗೆ ಬಾಲಯ್ಯ ಕಾರ್ಯಕ್ರಮವೊಂದರಲ್ಲಿ ನಡೆದುಕೊಂಡ ರೀತಿ ಭಾರೀ ಟೀಕೆಗೆ ಗುರಿಯಾಗಿತ್ತು. 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಬಾಲಕೃಷ್ಣ ಮುಖ್ಯ ಅತಿಥಿಯಾಗಿ ಬಂದಿದ್ದರು. ವೇದಿಕೆ ಮೇಲೆ ನಟಿ ಅಂಜಲಿ ಅವರನ್ನು ತಳ್ಳಿದ್ದ ವೀಡಿಯೋ ವೈರಲ್ ಆಗಿತ್ತು. ಕಾರ್ಯಕ್ರಮದ ನಡುವೆಯೂ ಮದ್ಯ ಸೇವಿಸಿ, ಈ ರೀತಿ ನಡೆದುಕೊಂಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.
ವೈಸಿಪಿ ಅಭ್ಯರ್ಥಿ ಟಿ.ಎನ್.ದೀಪಿಕಾ ವಿರುದ್ಧ 31,602 ಮತಗಳಿಂದ ಬಾಲಯ್ಯ ಜಯಗಳಿಸಿದ್ದಾರೆ. ಇದು ಅವರಿಗೆ ಹ್ಯಾಟ್ರಿಕ್ ಗೆಲುವು. ಇದಕ್ಕೂ ಮುನ್ನ ಅವರು 2014 ರಲ್ಲಿ 81,543 ಮತಗಳ ಬಹುಮತದಿಂದ ಗೆದ್ದರು. 2019 ರಲ್ಲಿ ಅವರು 91,704 ಸಾವಿರ ಮತಗಳ ಬಹುಮತದೊಂದಿಗೆ ಅಗಾಧ ಗೆಲುವು ದಾಖಲಿಸಿದ್ದರು.
ತಂದೆ ಎನ್ಟಿಆರ್ ಹಾದಿಯಲ್ಲೇ ನಟ ಬಾಲಯ್ಯ ಚಿತ್ರರಂಗಕ್ಕೆ ಬಂದರು. ತಂದೆ ರಾಜಕೀಯರಂಗ ಪ್ರವೇಶಿಸಿ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ತಂದೆಯ ಬಳಿಕ ಭಾವ ಚಂದ್ರಬಾಬು ಜೊತೆ ಬಾಲಯ್ಯ ಒಡನಾಟ ಮುಂದುವರೆಯಿತು. ಈಗ ಬಾಲಯ್ಯ- ಚಂದ್ರಬಾಬು ಬೀಗರು ಸಹ ಆಗಿದ್ದಾರೆ. ಚಂದ್ರಬಾಬು ನಾಯ್ಡು ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಿಂದೂಪುರದಲ್ಲಿ ಬಾಲಯ್ಯ ಗೆಲುವು ನಂದಮೂರಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಇನ್ನು ಜನಸೇನಾ, ಟಿಡಿಪಿ, ಬಿಜೆಪಿ ಮೈತ್ರಿ ಕೂಡ ವೈಎಸ್ಆರ್ ಜಗನ್ ನೇತೃತ್ವದ ಸರ್ಕಾರವನ್ನು ಕೆಳಗಿಳಿಸಿದೆ.


Click it and Unblock the Notifications











