'ವಾರಣಾಸಿ'ಯಲ್ಲಿ ಮಹೇಶ್ ಬಾಬು ರುದ್ರನಾ or ಶ್ರೀರಾಮನಾ? ಏನ್ ಜಕ್ಕಣ್ಣ ಇದೆಲ್ಲಾ?
ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸುವ ಸಿನಿಮಾ ಟೈಟಲ್ ಏನು? ಕಥೆ ಏನು? ಯಾವಾಗ ಸಿನಿಮಾ ರಿಲೀಸ್ ಎನ್ನುವ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. 'ವಾರಣಾಸಿ' ಎಂಬ ಟೈಟಲ್ನಲ್ಲಿ ಗ್ಲೋಬ್ ಟ್ರಾಟರ್, ಟೈಮ್ ಟ್ರಾಟರ್ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗ್ತಿದೆ. ಟೈಟಲ್ ಟೀಸರ್ ಸಿನಿಮಾ ಕಥೆ ಬಗ್ಗೆ ಚರ್ಚೆ ಹುಟ್ಟಾಕ್ಕಿದೆ.
ಮಹೇಶ್ ಬಾಬು ಹಾಗೂ ರಾಜಮೌಳಿ ಇಬ್ಬರೂ ಕೂಡ ಇದು ನಮ್ಮ ಡ್ರೀಮ್ ಪ್ರಾಜೆಕ್ಟ್ ಎಂದಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಒಂದಷ್ಟು ಗೊಂದಲದ ನಡುವೆ ಹೈದರಾಬಾದ್ನಲ್ಲಿ ಗ್ಲೋಬ್ ಟ್ರಾಟರ್ ಈವೆಂಟ್ ನಡೀತು. ಇದೇ ಕಾರ್ಯಕ್ರಮದಲ್ಲಿ ಟೈಟಲ್ ಟೀಸರ್ ರಿಲೀಸ್ ಮಾಡಲಾಯಿತು. ಪುರಾಣ, ಭವಿಷ್ಯತ್ ಎಲ್ಲವನ್ನು ಸೇರಿಸಿ ಒಂದು ಕಾಲ್ಪನಿಕ ಕಥೆಯನ್ನು ಈ ಚಿತ್ರದಲ್ಲಿ ಹೇಳುತ್ತಿರುವುದು ಗೊತ್ತಾಗುತ್ತಿದೆ.

ಬರೀ ಪೋಸ್ಟರ್ ಟೀಸರ್ನಲ್ಲೇ ಸಾಕಷ್ಟು ವಿಚಾರಗಳನ್ನು ಜಕ್ಕಣ್ಣ ಹೇಳಿದ್ದಾರೆ. ಅಂತಿಮವಾಗಿ ವಾರಣಾಸಿ ಹಿನ್ನೆಲೆಯಲ್ಲಿ ರುದ್ರನಾಗಿ ಮಹೇಶ್ ಬಾಬು ನಂದಿಯನ್ನು ಏರಿ ಸವಾರಿ ಮಾಡುತ್ತಾ ಬರುವ ಪರಿ ಅಭಿಮಾನಿಗಳ ಮನಗೆದ್ದಿದೆ. ಇನ್ನು ವಾರಣಾಸಿಯಿಂದ ಆಫ್ರಿಕಾದ ಕಾಡುಗಳವರೆಗೆ ಗ್ಲೋಬ್ ಟ್ರಾಟರ್ ಚಿತ್ರದ ಕಥೆ ಸಾಗಲಿದೆ. ಈಗಾಗಲೇ 2 ತಿಂಗಳ ಕಾಲ ಚಿತ್ರೀಕರಣ ನಡೆಸಿರುವುದಾಗಿ ರಾಜಮೌಳಿ ಮಾಹಿತಿ ನೀಡಿದ್ದಾರೆ. ಪೋಸ್ಟರ್ ನೋಡಿದರೆ ಇದು ಬಹಳ ಸಿಂಪಲ್ ಕಥೆ ಅಲ್ಲ ಎನ್ನುವುದು ಗೊತ್ತಾಗುತ್ತಿದೆ. ಕೊನೆಪಕ್ಷ ಎರಡು ಭಾಗಗಳಲ್ಲಿ ಸಿನಿಮಾ ಮೂಡಿ ಬರುವ ಸಾಧ್ಯತೆಯಿದೆ. ಅಷ್ಟು ವಿಚಾರಗಳು ಚಿತ್ರದಲ್ಲಿದೆ ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.
ಒಂದೊಂದೇ ಮೋಷನ್ ಪೋಸ್ಟರ್ಗಳಲ್ಲಿ ಒಂದೊಂದು ಕಾಲಘಟ್ಟದ ಪರಿಚಯ ಮಾಡಿಸಲಾಗಿದೆ. 512ರಲ್ಲಿ ವಾರಣಾಸಿಯಲ್ಲಿ ಶುರುವಾಗುವ ಕಥೆ 2027ಕ್ಕೆ ಶಿಫ್ಟ್ ಆಗುತ್ತದೆ. ಆಗ ಶಾಂಭವಿ ಎಂಬ ಕ್ಷುದ್ರಗ್ರಹವು ಭೂಮಿ ಮೇಲೆ ಬೀಳುತ್ತದೆ. ಬಳಿಕ ಅಂಟಾರ್ಟಿಕಾ ಖಂಡ, ಆಫ್ರಿಕಾ ಖಂಡಗಳನ್ನು ಸುತ್ತಾಡಿಸುತ್ತದೆ. ಬಳಿಕ ಮತ್ತೆ ಉಗ್ರಭಟ್ಟಿ ಗುಹೆ ಒಳಗೆ ಹೋಗಿ ಚಿನ್ನಮಸ್ತಾ ದೇವಿಯ ದರ್ಶನ ಮಾಡಿಸುತ್ತಾರೆ. ಬಳಿಕ ಸಿನಿಮಾ ತ್ರೇತಾಯುಗಕ್ಕೆ ಜಾರುತ್ತದೆ. ಕ್ರಿ.ಪೂ 72000ರಲ್ಲಿ ಲಂಕಾ ನಗರಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ಹನುಮಂತ, ಶ್ರೀರಾಮನ ಕಥೆ ಕೂಡ ಇದೆ. ಅಂತಿಮವಾಗಿ ಸಿನಿಮಾ ವಾರಣಾಸಿಯ ಮಣಿಕರ್ಣಿಕಾ ಘಾಟ್ನಲ್ಲಿರುವ ರುದ್ರವರೆಗೆ ಬಂದು ನಿಲ್ಲುತ್ತದೆ.

ಒಟ್ಟಾರೆ ಬರೀ ಮೋಷನ್ ಪೋಸ್ಟರ್ನಲ್ಲೇ ಸಾಕಷ್ಟು ವಿಚಾರಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಎಲ್ಲಾ ಅಂಶಗಳನ್ನು ತೆರೆಮೇಲೆ ಹೇಗೆ ತರುತ್ತಾರೆ. ಅದರಲ್ಲೂ ಮುಖ್ಯರಾಗಿ ಶ್ರೀರಾಮನ ಅವತಾರದಲ್ಲಿ ಮಹೇಶ್ ಬಾಬು ಅವರನ್ನು ನೋಡಿ ನಾನೇ ಹುಬ್ಬೇರಿಸಿದೆ ಎಂದು ರಾಜಮೌಳಿ ಹೇಳಿರುವುದು ಕುತೂಹಲ ಮೂಡಿದೆ. ಇನ್ನು ಐಮ್ಯಾಕ್ಸ್ ಸ್ಕ್ರೀನ್ಗಳಿಗಾಗಿ ಸಿನಿಮಾ ಮಾಡ್ತಿರೋದಾಗಿ ಜಕ್ಕಣ್ಣ ಖಚಿತಪಡಿಸಿದ್ದಾರೆ. ಇದೊಂದು ಟೈಮ್ ಟ್ರಾವಲಿಂಗ್ ಕಥೆ ಎನ್ನುವುದು ಗೊತ್ತಾಗುತ್ತಿದೆ. ರುದ್ರನೇ ಶ್ರೀರಾಮನಾ? ಎನ್ನುವ ಕುತೂಹಲ ಮೂಡಿಸಿದೆ.
ಚಿತ್ರದಲ್ಲಿ ಕುಂಭ ಹಾಗೂ ಮಂದಾಕಿನಿ ಹಿನ್ನೆಲೆ ಏನು? ಅಷ್ಟಕ್ಕೂ ರುದ್ರದ ಮಿಷನ್ ಏನು? ಆತನ ಜರ್ನಿ ಹೇಗಗಿರುತ್ತದೆ? ಹನುಮಂತನಾಗಿ ನಟಿಸೋದು ಯಾರು? ಹೀಗೆ ನಾನಾ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ. ಎಲ್ಲದ್ದಕ್ಕೂ ಉತ್ತರ ಬೇಕು ಅಂದ್ರೆ 2027ರ ಸಮ್ಮರ್ವರೆಗೂ ಕಾಯಬೇಕು. ಎಂ ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ. ಕೆ. ಎಲ್ ನಾರಾಯಣ ಜೊತೆ ಸೇರಿ ಕಾರ್ತಿಕೇಯ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಪಿ. ಎಸ್ ವಿನೋದ್ ಛಾಯಾಗ್ರಹಣ ಚಿತ್ರಕ್ಕಿದೆ.
ಆಕ್ಷನ್, ಅಡ್ವೆಂಚರ್, ಸೈನ್ಸ್, ಇತಿಹಾಸ, ಪುರಾಣ, ಭಕ್ತಿ ಹೀಗೆ ನಾನಾ ಅಂಶಗಳು 'ವಾರಣಾಸಿ' ಚಿತ್ರದಲ್ಲಿದೆ. ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ಉಪ ಕಥೆಗಳನ್ನು ಒಂದು ಸರಳ ರೇಖೆಯಲ್ಲಿ ಸೇರಿಸಿ ರುದ್ರನ ಸಾಹಸಗಾಥೆಯನ್ನು ರಾಜಮೌಳಿ ತೆರೆಗೆ ತರುತ್ತಿದ್ದಾರೆ. ಒಟ್ಟಾರೆ ಬರೀ ಕಥೆಯನ್ನು ಊಹಿಸಿಕೊಂಡೇ ಕೆಲವರು ಥ್ರಿಲ್ಲಾಗಿದ್ದಾರೆ. ಇನ್ನು ವಿಷ್ಯುವಲಿ ಸಿನಿಮಾ ಅದ್ಭುತವಾಗಿ ತೆರೆಗೆ ಬರುವುದರಲ್ಲಿ ಅನುಮಾನವಿಲ್ಲ.
ಚಿತ್ರದಲ್ಲಿ ಮಹೇಶ್ ಬಾಬು ರುದ್ರನಾಗಿ ಶ್ರೀರಾಮನಾಗಿ ಎರಡು ಪಾತ್ರಗಳಲ್ಲಿ ನಟಿಸುತ್ತಾರಾ? ಪುನರ್ಜನ್ಮದ ಕಥೆನಾ? ಹೀಗೆ ನಾನಾ ಪ್ರಶ್ನೆಗಳು ಅಭಿಮಾನಿಗಳ ತಲೆಯನ್ನು ಕೊರೆಯುತ್ತಿದೆ. ಕೆಲವರು ತಮ್ಮದೇ ಕಲ್ಪನೆಯಲ್ಲಿ ಕಥೆಯನ್ನು ಊಹಿಸಿಕೊಳ್ಳುತ್ತಿದ್ದಾರೆ. ಕಥೆಯನ್ನು ಒಂದೇ ಚಿತ್ರಕ್ಕೆ ಮುಗಿಸದೇ ಮತ್ತೊಂದು ಚಿತ್ರದಲ್ಲಿ ಮುಂದುವರೆಸುವಂತೆ ಲಿಂಕ್ ಕೊಟ್ಟಿದ್ದೇವೆ ಎಂದು ಬಹಳ ಹಿಂದೆಯೇ ಕಥೆಗಾರ ವಿಜಯೇಂದ್ರ ಪ್ರಸಾದ್ ಹೇಳಿದ್ದರು.


Click it and Unblock the Notifications











