Prabas Fans vs Allu Arjun Fans: ಪ್ರಭಾಸ್ ಅಭಿಮಾನಿಯನ್ನು ಥಳಿಸಿದ ಅಲ್ಲು ಅರ್ಜುನ್ ಫ್ಯಾನ್ಸ್; ಬೆಂಗಳೂರಿನಲ್ಲಿ ಘಟನೆ
ಸ್ಟಾರ್ ನಟರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾ ವಾರ್ ನಡೆಯುತ್ತಲೇ ಇರುತ್ತದೆ. ಕಾಮೆಂಟ್ಗಳ ಮೂಲಕ ಪರಸ್ಪರ ಕೆಸರೆರಚಾಟ ನಡೆಸುತ್ತಾರೆ. ಆದರೆ ಕೆಲವೊಮ್ಮೆ ಅಭಿಮಾನ ಅತಿಯಾಗಿ ಅದು ಕೆಟ್ಟ ಸ್ವರೂಪ ಪಡೆದುಕೊಂಡುಬಿಡುತ್ತದೆ. ಪ್ರಭಾಸ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನೆಚ್ಚಿನ ನಟನ ಹುಟ್ಟುಹಬ್ಬ ಅಥವಾ ಸಿನಿಮಾ ಬಿಡುಗಡೆ ಆದಾಗ ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಿಸುತ್ತಾರೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುತ್ತಾರೆ. ಕೇಕ್ ಕತ್ತರಿಸಿ, ಬ್ಯಾನರ್ ಕಟ್ಟಿ, ಕಟೌಟ್ ಸಿಂಗರಿಸಿ, ಪಟಾಕಿ ಸಿಡಿಸಿ ಜೈಕಾರ ಹಾಕಿ ಖುಷಿಪಡುತ್ತಾರೆ. ತಮ್ಮದೇ ಸಿನಿಮಾ, ತಮ್ಮದೇ ಹುಟ್ಟುಹಬ್ಬ ಎನ್ನುವಂತೆ ಅವರ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಇದು ಇಷ್ಟಕ್ಕೆ ಸೀಮಿತವಾಗಿದ್ದರೆ ಚೆನ್ನಾಗಿರುತ್ತದೆ. ಕೆಲವೊಮ್ಮೆ ಸಂಭ್ರಮದ ವೇಳೆಯೂ ಅವಘಡಗಳು ನಡೆದು ಅಭಿಮಾನಿಗಳು ಜೀವ ಕಳೆದುಕೊಂಡಿರುವುದು ಇದೆ.

ತೆಲುಗು ನಟರಾದ ಅಲ್ಲು ಅರ್ಜುನ್ ಹಾಗೂ ಪ್ರಭಾಸ್ಗೆ ದೊಡ್ಡಮಟ್ಟದ ಅಭಿಮಾನಿ ಬಳಗವಿದೆ. ದೇಶ ವಿದೇಶಗಳಲ್ಲಿ ಇವರಿಬ್ಬರನ್ನು ಆರಾಧಿಸುವ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕ್ರಿಕೆಟ್ ಆಡುವ ವೇಳೆ ಇವರಿಬ್ಬರ ಅಭಿಮಾನಿಗಳು ಬಡಿದಾಡಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಪ್ರಭಾಸ್ ಅಭಿಮಾನಿಯೊಬ್ಬನನ್ನು ಕೆಲ ಅಲ್ಲು ಅರ್ಜುನ್ ಅಭಿಮಾನಿಗಳು ಸೇರಿ ಥಳಿಸಿದ್ದಾರೆ.
ಒಬ್ಬನ ಮೇಲೆ ನಾಲ್ಕೈದು ಜನ ಮುಗಿಬಿದ್ದು ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. 'ಜೈ ಅಲ್ಲು ಅರ್ಜುನ್' ಎಂದು ಹೇಳು ಹೇಳು ಎಂದು ಬಲವಂತ ಮಾಡಿ ಥಳಿಸಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದು. ಸದ್ಯ ಘಟನೆ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಟಾರ್ ನಟರ ನಡುವೆ ಉತ್ತಮ ಒಡನಾಟ ಇರುತ್ತದೆ. ಆದರೆ ಅವರ ಮೇಲಿನ ಹುಚ್ಚು ಅಭಿಮಾನದಿಂದ ಕೆಲವರು ಈ ರೀತಿ ಮಾಡುತ್ತಿರುತ್ತಾರೆ. ನಮ್ಮ ನೆಚ್ಚಿನ ನಟನೇ ಹೆಚ್ಚು ಮತ್ತೊಬ್ಬರು ಕಮ್ಮಿ ಎಂದು ಹೀಗೆ ಕಿರಿಕ್ ಮಾಡಿಕೊಳ್ಳುತ್ತಿರುತ್ತಾರೆ.
ಇದಕ್ಕೂ ಮುನ್ನ ಆಂಧ್ರ, ತೆಲಂಗಾಣದಲ್ಲಿ ಮಹೇಶ್ ಬಾಬು ಅಭಿಮಾನಿಗಳು, ಪವನ್ ಕಲ್ಯಾಣ್ ಅಭಿಮಾನಿಗಳು ಹಾಗೂ ರಾಮ್ಚರಣ್, ಪ್ರಭಾಸ್ ಅಭಿಮಾನಿಗಳು ಹೀಗೆ ಕಿರಿಕ್ ಮಾಡಿಕೊಂಡಿದ್ದರು. ಆದರೆ ಈ ಬಾರಿ ಬೆಂಗಳೂರಿನಲ್ಲಿ ಇಂತಹ ಘಟನೆ ಜರುಗಿದೆ. ಇನ್ನೊಮ್ಮೆ ನಮ್ಮ ಅಲ್ಲು ಅರ್ಜುನ್ ತಂಟೆಗೆ ಬಂದರೆ ಸರಿ ಇರಲ್ಲ, ಹೀಗೆ ಆಗುತ್ತದೆ ಎಂದು ಎಚ್ಚರಿಕೆ ಕೊಟ್ಟಿರುವುದು ವೀಡಿಯೋದಲ್ಲಿ ಗೊತ್ತಾಗುತ್ತದೆ.
ಪ್ರಭಾಸ್ ಅಭಿಮಾನಿ ಅಲ್ಲು ಅರ್ಜುನ್ ಕುರಿತು ತಪ್ಪಾಗಿ ಮಾತನಾಡಿದ್ದಕ್ಕೆ ಆತನ ಮೇಲೆ ಈ ರೀತಿ ದಾಳಿ ಮಾಡಿರುವುದು ಗೊತ್ತಾಗುತ್ತಿದೆ. ಯಾರೋ ಈ ವಿಡಿಯೋವನ್ನು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಟ್ವಿಟ್ಟರ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಕೂಡಲೇ ಸೂಕ್ತ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಸದ್ಯ ಅಲ್ಲು ಅರ್ಜುನ್ 'ಪುಷ್ಪ'-2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆಗಸ್ಟ್ 15ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇನ್ನು ಪ್ರಭಾಸ್ 'ಕಲ್ಕಿ 2898AD' ಸಿನಿಮಾದಲ್ಲಿ ಚಿತ್ರೀಕರಣದಲ್ಲಿದ್ದಾರೆ. ಮೇ 9ಕ್ಕೆ ಈ ಸಿನಿಮಾ ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ತೆರೆಗಪ್ಪಳಿಸಲಿದೆ. ದೇಶ ವಿದೇಶದ ಭಾಷೆಗಳಿಗೆ ಡಬ್ ಆಗುತ್ತಿದೆ. ಕಮಲ್ ಹಾಸನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಚಿತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











