ಪ್ರಭಾಸ್ ಮತ್ತು ಪ್ರಶಾಂತ್ ನೀಲ್ 'ಸಲಾರ್' ಆಡಿಷನ್ ಗೆ ಹರಿದುಬಂದ ಜನಸಾಗರ
ಕೆಜಿಎಫ್ ನಿರ್ದೇಶಕ ಪ್ರಶಾಂತ್ ಸಲಾರ್ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಕೆಜಿಎಫ್-2 ಚಿತ್ರೀಕರಣ ಮುಗಿಯುತ್ತಿದ್ದಂತೆ ಪ್ರಶಾಂತ್ ನೀಲ್ ತೆಲುಗು ಕಡೆ ಮುಖ ಮಾಡಲಿದ್ದಾರೆ. ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಗೆ, ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಸಲಾರ್ ಎಂದು ಶೀರ್ಷಿಕೆ ಇಡಲಾಗಿದೆ.
ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ದೊಡ್ಡ ಬಜೆಟ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಅಂದಹಾಗೆ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ಚಿತ್ರತಂಡ ಆಡಿಷನ್ ಗೆ ಕರೆದಿತ್ತು.
ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಿನಿಮಾದಲ್ಲಿ ನಟಿಸುವ ಆಸೆ ಇರುವವರು ಆಡಿಷನ್ ನಲ್ಲಿ ಭಾಗಿಯಾಗಿದ್ದರು. ಅಂದಹಾಗೆ ಪ್ರಭಾಸ್ ಜೊತೆ ನಟಿಸಲು ಸಿಕ್ಕ ಅವಕಾಶ ಕಳೆದುಕೊಳ್ಳುತ್ತಾರಾ? ಸಾಧ್ಯನೇ ಇಲ್ಲ, ಈಗಾಗಲೇ ಹೈದರಾಬಾದ್ ನಲ್ಲಿ ನಡೆದ ಆಡಿಷನ್ ನಲ್ಲಿ ಜನಸಾಗರವೇ ಹರಿದುಬಂದತ್ತು.

ಚಿತ್ರದ ಆಡಿಷನ್ ಗೆ ಉದ್ದದ ಕ್ಯೂ ನಿಂತಿತ್ತು. ಸಾವಿರಾರು ಜನ ಆಡಿಷನ್ ನಲ್ಲಿ ಭಾಗಿಯಾಗಿದ್ದರು. ಪೊಲೀಸ್ ಭದ್ರತೆಯಲ್ಲಿ ಆಡಿಷನ್ ನಡೆದಿದ್ದು, ಸಲಾರ್ ಆಡಿಷನ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳಗ್ಗೆ 9ಗಂಟೆ ಯಿಂದ ಸಂಜೆ 6 ಗಂಟೆವರೆಗೂ ಆಡಿಷನ್ ಪ್ರಕ್ರಿಯೆ ನಡೆದಿದೆ.
ಸದ್ಯ ಹೈದರಾಬಾದ್ ನಲ್ಲಿ ಆಡಿಷನ್ ಮಾಡಿರುವ ಸಿನಿಮಾತಂಡ ನಂತರ ಬೆಂಗಳೂರು ಮತ್ತು ಚೆನ್ನೈನಲ್ಲಿ ಆಡಿಷನ್ ಮಾಡಲು ನಿರ್ಧರಿಸಿದೆ. ಆಡಿಷನ್ ನಲ್ಲಿ ಭಾಗಿಯಾಗಲು ಯಾವುದೇ ವಯಸ್ಸಿನ ನಿರ್ಬಂಧವನ್ನು ವಿಧಿಸಿಲ್ಲ. ಎಲ್ಲಾ ವಯೋಮಾನದವರು ಆಡಿಷನ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಸದ್ಯ ಸಲಾರ್ ಸಿನಿಮಾದ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.


Click it and Unblock the Notifications











