ನಾನು ಹಿಂದೂ ಆದರೂ ನನ್ನ ಮಕ್ಕಳು ಭಯೋತ್ಪಾದಕರಾಗುತ್ತಾರೆ ಎಂದು ಬೆದರಿಕೆ ಹಾಕಿದ್ದರು-ಪ್ರಿಯಾಮಣಿ...!
ಫೇಸ್ ಬುಕ್.. ಇನ್ಸ್ಟಾಗ್ರಾಮ್.. ಹೀಗೆ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಆದರೆ, ಇದೇ ಸಮಯದಲ್ಲಿ ವಿಕೃತಿಗಳೂ ಹೆಚ್ಚಾಗಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು.
ಇನ್ನೂ.. ಸೆಲೆಬ್ರಿಟಿಗಳ ಪಾಡಂತೂ ಹೇಳತೀರದು. ಕುಂತರು ನಿಂತರು ಅವರನ್ನು ಒಂದು ಗುಂಪು ಇಲ್ಲಿ ಸದಾ ಕಾಲ ಟಾರ್ಗೆಟ್ ಮಾಡ್ತಾನೇ ಇರುತ್ತೆ. ನಿರಂತರವಾಗಿ ಟ್ರೋಲ್ ಮಾಡುತ್ತಾನೇ ಇರುತ್ತೆ. ಅದರಲ್ಲಿಯೂ ನಟಿಯೇನಾದರೂ ಅನ್ಯಧರ್ಮದ ಹುಡುಗನನ್ನು ಮದುವೆಯಾಗಿದ್ದರೆ ಮುಗಿದೇ ಹೋಯಿತು. ಯಾವುದೋ ಚರಂಡಿಯಲ್ಲಿ ಹೊರಳಾಡಿ ಬಂದು ಹೊಟ್ಟೆ ಸೇರಿದ ಹೊಲಸನ್ನೆಲ್ಲ ಅಶ್ಲೀಲವಾದ, ಕೆಟಾತಿಕೆಟ್ಟ ಸಂದೇಶಗಳನ್ನು ಕಳುಹಿಸುವ ಮೂಲಕ ಅನೇಕರು ಕಾರುತ್ತಾರೆ. ಅವರ ಮದುವೆಗೆ ಜಾತಿ ಧರ್ಮದ ಬಣ್ಣವನ್ನು ಹಚ್ಚುವುದಲ್ಲದೇ, ಅವರಿಗೆ ಹುಟ್ಟುವ ಮಕ್ಕಳ ಕುರಿತು ಕೂಡ ತೀರಾ ಕೊಳಕು ಕಾಮೆಂಟ್ ಮಾಡುವ ಮೂಲಕ ಸಭ್ಯತೆಯ ಎಲ್ಲೆ ಮೀರಿ ವರ್ತಿಸುತ್ತಾರೆ. ಸೈಬರ್ ದಾಳಿಯನ್ನು ಮಾಡುವ ಮೂಲಕ ನೆಮ್ಮದಿಗೆ ಕೊಳ್ಳಿ ಇಡುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರಿಯಾಮಣಿ ತಮ್ಮ ಬದುಕಿನ ಅನುಭವವನ್ನು ಹಂಚಿಕೊಂಡಿದ್ದಾರೆ.

ಹೌದು, ಫಿಲ್ಮ್ ಫೇರ್ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾಮಣಿ, 2017ರಲ್ಲಿ ಮುಸ್ತಫಾ ಜೊತೆ ನಾನು ಮದುವೆಯಾಗುವ ನಿರ್ಧಾರ ಮಾಡಿದಾಗ, ನನ್ನ ನಿಶ್ಚಿತಾರ್ಥದ ಸುದ್ದಿಯನ್ನು ನಮ್ಮ ಇಬ್ಬರು ಕುಟುಂಬದ ಸಮ್ಮತಿಯೊಂದಿಗೆ ತುಂಬಾ ಖುಷಿಯಿಂದ ಫೇಸ್ಬುಕ್ನಲ್ಲಿ ಹಂಚಿಕೊಂಡೆ, ಆದರೆ.. ನನ್ನ ಈ ಸಂಭ್ರಮ ಅನೇಕರನ್ನು ಕೆರಳಿಸಿತ್ತು ಎಂದಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಖುಷಿಯ ವಿಚಾರ ಹಂಚಿಕೊಂಡ ನಂತರ ಶುಭಾಶಯಗಳ ಸಂದೇಶಕ್ಕಿಂತ ದ್ವೇಷ ತುಂಬಿದ ಸಂದೇಶಗಳೇ ನನಗೆ ಹೆಚ್ಚು ಬಂದವು ಎಂದಿರುವ ಪ್ರಿಯಾಮಣಿ ಅನೇಕರು ನನ್ನನ್ನೂ ಲವ್ ಜಿಹಾದ್ಗೆ ಒಳಗಾದವಳು ಅಂದರು. ಇನ್ನೂ ಕೆಲವರು ಮುಸ್ಲಿಂ ಎಂದರು. ತೀರಾ ಹೊಲಸು ಕಾಮೆಂಟ್ ಮಾಡಿದರು. ಸಾಲದಕ್ಕೆ ಆಗಿನ್ನೂ ಜಗತ್ತನ್ನೇ ನೋಡದ ನನ್ನ ಮಕ್ಕಳು ಮುಂದೊಂದು ದಿನ ಭಯೋತ್ಪಾದಕರಾಗಲಿದ್ದಾರೆ ಎಂದು ಭವಿಷ್ಯವನ್ನೂ ಹೇಳಿದರು ಎಂದು ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ.
ಇದೆಲ್ಲದರಿಂದ ನಾನು ಮಾನಸಿಕ ಆಘಾತಕ್ಕೊಳಗಾಗಿದ್ದೇ ಎಂದು ಹೇಳಿರುವ ಪ್ರಿಯಾಮಣಿ, ಅಂತರ್ಜಾತಿ ಮದುವೆ ಮಾಡಿಕೊಳ್ಳುವುದು ತಪ್ಪಾ ಎನ್ನುವ ಪ್ರಶ್ನೆ ಮಾಡಿದ್ದಾರೆ. ಜಾತಿ-ಧರ್ಮವನ್ನು ಮೀರಿ ಮದುವೆಯಾದ ಇನ್ನೂ ಹಲವಾರು ತಾರೆಯರು ನಮ್ಮ ನಡುವೆ ಇದ್ದಾರೆ, ಅವರು ಆ ಧರ್ಮವನ್ನು ಅಳವಡಿಸಿಕೊಂಡರು ಅಥವಾ ಅಳವಡಿಸಿಕೊಂಡಿಲ್ಲ ಎನ್ನುವುದಲ್ಲ. ಯಾಕೆಂದರೆ ಅವರು ಧರ್ಮವನ್ನು ಲೆಕ್ಕಿಸದೇ ಪ್ರೀತಿ ಮಾಡಿದರು. ಆದರೂ ನಮ್ಮ ಸುತ್ತ ಮುತ್ತ ಯಾಕೆ ಇಷ್ಟೊಂದು ದ್ವೇಷ ಇದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಈದ್ ಹಬ್ಬದ ಪ್ರಯುಕ್ತ ನಾನು ನನ್ನ ಫೋಟೋ ಹಂಚಿಕೊಂಡು ಹಬ್ಬದ ಶುಭಾಶಯವನ್ನೂ ಕೋರಿದ್ದೆ, ಇದಕ್ಕೂ ಚಕಾರವೆತ್ತಿದ ಅನೇಕರು ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಹುಯಿಲೆಬ್ಬಿಸಿದರು ಎಂದಿರುವ ಪ್ರಿಯಾಮಣಿ ನಾನು ಮತಾಂತರಗೊಂಡಿರುವುದು ನಿಮಗೆ ಗೊತ್ತಾ ಎಂದು ಪ್ರಶ್ನಿಸಿದ್ದಾರೆ. ಮದುವೆ ಮುನ್ನವೇ ನಾನು ಮತಾಂತರಗೊಳ್ಳುವುದಿಲ್ಲ ಎಂದು ಮುಸ್ತಾಫಾಗೆ ನಾನು ಹೇಳಿದ್ದೇ ಎಂದು ಹೇಳಿದ್ದಾರೆ. ಮುಂದುವರೆದು ನಾನು ಹಿಂದೂ ನನ್ನ ನಂಬಿಕೆಯನ್ನು ನಾನು ಯಾವಾಗಲೂ ಅನುಸರಿಸುತ್ತೇನೆ ಎಂದಿರುವ ಪ್ರಿಯಾಮಣಿ ಪರಸ್ಪರ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ, ಯಾವ ಒತ್ತಡವೂ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂದ್ಹಾಗೇ 2017ರಲ್ಲಿ ಮುಸ್ತಾಫ್ ರಾಜ್ ಜೊತೆ ಬೆಂಗಳೂರಿನಲ್ಲಿ ಮದುವೆಯಾದ ಪ್ರಿಯಾಮಣಿ, ಸದ್ಯಕ್ಕೆ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್ -03 ಚಿತ್ರದಲ್ಲಿ ಕೂಡ ಪ್ರಿಯಾಮಣಿ ಇದ್ದಾರೆ. ಕನ್ನಡದಲ್ಲಿ ಕೂಡ ಕೈಮರ ಎಂಬ ಚಿತ್ರದಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ.


Click it and Unblock the Notifications











