ಸಾಕಿನ್ನೂ ಸಿನಿಮಾ ಸಹವಾಸ ; ತಾಯಿಯ ಎದುರು ಬಿಕ್ಕಿದ್ದೇಕೆ ಶ್ರೀಲೀಲಾ ?
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಸಾಮಾಜಿಕ ಜಾಲತಾಣದಲ್ಲಿ ದಿನಾ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ನಾವು ಅಷ್ಟೂ ಮಾಡದೇ ಇದ್ದರೆ ಹೇಗೆ ಎನ್ನುವುದು ಬಹುತೇಕರ ಆಲೋಚನೆ ?

ಆದರೆ ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಮತ್ತೂ ಕೆಲವರು ನಿರ್ಲಕ್ಷ್ಯಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬಿತ್ತಲಾಗುವ ನಕಾರಾತ್ಮಕತೆಯಿಂದ ದೂರ ಇರುವ ಪ್ರಯತ್ನ ಮಾಡುತ್ತಾರೆ. ಮತ್ತೂ ಕೆಲವರು ಮಾನಸಿಕವಾಗಿ ನೊಂದು ಬೆಂದು ಹೋಗುತ್ತಾರೆ. ಕುಗ್ಗಿ ಹೋಗುತ್ತಾರೆ. ಉದಾಹರಣೆಗೆ ಶ್ರೀಲೀಲಾ.
ಹೌದು.. 2019ರ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ ''ಕಿಸ್'' ಸಿನಿಮಾ ಕೂಡಾ ಒಂದು. ಶ್ರೀಲೀಲಾ ಅವರ ಬಣ್ಣದ ಕನಸು ಆರಂಭವಾಗಿದ್ದು ಇದೇ ಚಿತ್ರದಿಂದ. ಹೀರೋ ಹೀರೋಯಿನ್ ಇಬ್ಬರೂ ಹೊಸಬರಾಗಿದ್ದರೂ ಕೂಡ ಆ ಕಾಲದಲ್ಲಿ.. ಹತ್ ಹತ್ರ 90 ಚಿತ್ರಮಂದಿರದಲ್ಲಿ 25 ದಿನ ಪೂರೈಸಿದ್ದ ''ಕಿಸ್'' ಚಿತ್ರದಿಂದ ಶ್ರೀಲೀಲಾ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದಾಚೆ ''ಭರಾಟೆ''.. ''ಬೈ ಟು ಲವ್''.. ಚಿತ್ರಗಳನ್ನು ಮಾಡಿದ ಶ್ರೀಲೀಲಾ ಆ ನಂತರ ಸೀದಾ ಹೋಗಿದ್ದು ಆಂಧ್ರ ಪ್ರದೇಶಕ್ಕೆ.
ಅಲ್ಲಿ ''ಧಮಾಕಾ'' .. ''ಭಗವಂತ್ ಕೇಸರಿ'' .. ''ಆದಿಕೇಶವ'' .. ''ಎಕ್ಸ್ಟ್ರಾ ಆರ್ಡಿನರಿ ಮ್ಯಾನ್''.. ''ಸ್ಕಂದ''.. ''ಗುಂಟೂರು ಖಾರಂ''.. ಅಬ್ಬಬ್ಬಾ.. ಒಂದಾ, ಎರಡಾ. ಕೇವಲ ಒಂದು-ಒಂದೂವರೆ ವರ್ಷದಲ್ಲಿ ಅರ್ಧ ಡಜನ್ ತೆಲುಗು ಸಿನಿಮಾ ಮಾಡಿದವರು ಇವರು. ಕೇವಲ ತೆಲುಗು ಮಾತ್ರವಲ್ಲ ಪರಾಶಕ್ತಿ ಚಿತ್ರದ ಮೂಲಕ ತಮಿಳಿನಲ್ಲಿಯೂ ಅದೃಷ್ಟ ಪರೀಕ್ಷೆ ಮಾಡಿಕೊಂಡ ಶ್ರೀಲೀಲಾ ಅಭಿನಯದ ತೆಲುಗು ಚಿತ್ರ ''ಉಸ್ತಾದ್ ಭಗತ್ ಸಿಂಗ್'' ಸದ್ಯ ತೆರೆಗೆ ಬಂದಿದೆ.
ಹೀಗೆ ಒಂದಾದ ಮೇಲೊಂದರಂತೆ ಸಿನಿಮಾ ಮಾಡುತ್ತಲೇ ಬಂದ ಶ್ರೀಲೀಲಾ ಸದ್ಯ ರಶ್ಮಿಕಾ ಮಂದಣ್ಣ ಅವರಂತೆಯೇ ಬಾಲಿವುಡ್ ನಲ್ಲಿ ಬಿಡಾರ ಹೂಡಿದ್ದಾರೆ. ಕಾರ್ತಿಕ್ ಆರ್ಯನ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ. ಇನ್ನೇನು ಈ ಚಿತ್ರ ತೆರೆಗೆ ಬರಬೇಕಿದೆ.

ಇಂಥಾ ಶ್ರೀಲೀಲಾ ಹಿಂದೊಮ್ಮೆ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದರು ಎನ್ನುವ ವಿಚಾರ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಖುದ್ದು ಶ್ರೀಲೀಲಾ ಈ ವಿಚಾರವನ್ನು ಈಗ ಹೇಳಿದ್ದಾರೆ. ಟ್ರೋಲ್ಗಳಿಂದ ಮಾನಸಿನ ನೆಮ್ಮದಿಗೆ ಕೊಳ್ಳಿ ಬಿದ್ದಿತ್ತು ಎಂದು ಬಿಕ್ಕಿದ್ದಾರೆ.
ಈ ಕುರಿತು ಆಂಧ್ರದ ಮಾತಿನ ಮಲ್ಲಿ ''ಸುಮಾ ಕನಕಾಲ'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶ್ರೀಲೀಲಾ ನನ್ನ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ನನ್ನನ್ನೂ ತುಂಬಾ ಟ್ರೋಲ್ ಮಾಡಲಾಗಿತ್ತು ಎಂದು ಹೇಳಿದ್ದಾರೆ. ನನ್ನ ಕುರಿತು ಮಾಡಲಾಗುತ್ತಿದ್ದ ಈ ನಕಾರಾತ್ಮಕವಾದ ಟ್ರೋಲ್ಗಳಿಂದ ನಾನು ತುಂಬಾನೇ ಭಯಗೊಂಡಿದ್ದೆ, ಮಾನಸಿಕವಾಗಿ ಜರ್ಜರಿತಗೊಂಡಿದ್ದೆ ಎಂದು ಹೇಳಿರುವ ಶ್ರೀಲೀಲಾ ಕೆಲವೊಮ್ಮೆ ಬಹಳ ದುಃಖವಾಗುತ್ತಿತ್ತು, ಕಣ್ಣೀರು ಹಾಕಿದ್ದು ಇದೆ ಎಂದು ಹೇಳಿದ್ಧಾರೆ.
ಮುಂದುವರೆದು ಇದೆಲ್ಲದರಿಂದ ಬೇಸತ್ತು ಚಿತ್ರರಂಗಕ್ಕೆ ಗುಡ್ ಬೈ ಹೇಳಲು ನಾನು ಮುಂದಾಗಿದ್ದೆ, ಯಾಕೆಂದರೆ ನಾನು ಮೊದಲಿಂದ ತುಂಬಾ ಸೂಕ್ಷ್ಮವಾದ ಸ್ವಭಾವದವಳು ಎಂದು ಹೇಳಿರುವ ಶ್ರೀಲೀಲಾ ನನ್ನ ತಾಯಿಯ ಬಳಿ ಹೋಗಿ ನಾನು ಇನ್ನೂ ಸಿನಿಮಾ ಮಾಡುವುದಿಲ್ಲ, ವಿದ್ಯಾಭ್ಯಾಸದತ್ತ ಗಮನ ಕೊಡುತ್ತೇನೆ ಎಂದು ಹೇಳಿದ್ದೇ ಎಂದು ಹೇಳಿದ್ದಾರೆ.
ಆಗ ನನ್ನ ತಾಯಿ ನನಗೆ ಧೈರ್ಯ ತುಂಬಿದರು ಎಂದು ಹೇಳಿರುವ ಶ್ರೀಲೀಲಾ ಈಗ ನಾನು ಟ್ರೋಲ್ಗೆಲ್ಲಾ ತಲೆ ಕೆಡಿಸಿಕೊಳ್ಳಲ್ಲ, ಟ್ರೋಲ್ಗಳನ್ನು ಎದುರಿಸುವ ಧೈರ್ಯ ನನಗೆ ಈಗ ಬಂದಿದೆ ಎಂದು ಕೂಡ ಹೇಳಿದ್ಧಾರೆ. ಸದ್ಯ ಶ್ರೀಲೀಲಾ ಅವರ ಈ ಹೇಳಿಕೆಯಿಂದ ಟ್ರೋಲ್ ಮತ್ತು ಮಾನಸಿಕ ಒತ್ತಡದ ಕುರಿತು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.


Click it and Unblock the Notifications











