Mahesh Babu: ನನಗೆ ಹಿಂದಿ ಚಿತ್ರರಂಗ ಬೇಕಿಲ್ಲ: ಹೀಗ್ಯಾಕಂದರು ನಟ ಮಹೇಶ್ ಬಾಬು
ದಕ್ಷಿಣ ಭಾರತ ಚಿತ್ರರಂಗವನ್ನು, ಸಿನಿಮಾಗಳನ್ನು, ಇಲ್ಲಿನ ನಟರನ್ನು ಬಾಲಿವುಡ್ಡಿಗರು ಅಪಮಾನಿಸಿದ್ದನ್ನು ದಕ್ಷಿಣದ ನಟರು ಇನ್ನೂ ಮರೆತಿಲ್ಲ. 'ಮದರಾಸಿ ಮಸಾಲಾ ಸಿನಿಮಾ', 'ಮದರಾಸಿ ಲೋಗ್' ಎಂಬ ಮೂದಲಿಕೆಗಳ ನಡುವೆಯೇ ದಕ್ಷಿಣ ಭಾರತ ಸಿನಿಮಾ ಬಾಲಿವುಡ್ ಅನ್ನು ಮೀರಿಸಿ ವಿಶ್ವಕ್ಕೆ ತನ್ನ ಶಕ್ತಿ ಪರಿಚಯಿಸಿದ್ದಾಗಿದೆ.
ಒಂದು ಕಾಲದಲ್ಲಿ ಬಾಲಿವುಡ್ಡೆಂದರೆ ಐಶಾರಾಮಿ ಚಿತ್ರರಂಗ, ಪ್ರತಿಭಾವಂತ ಚಿತ್ರರಂಗ, ಭಾರತದ ಸ್ಟಾರ್ಗಳ ಚಿತ್ರರಂಗ ಎಂಬೆಲ್ಲ ಭ್ರಮೆಗಳನ್ನು ದಕ್ಷಿಣ ಭಾರತ ಚಿತ್ರರಂಗ ಒಡೆದು ಹಾಕಿದೆ. ಬಾಲಿವುಡ್ ಸಿನಿಮಾದಲ್ಲಿ ಸಣ್ಣ ಅವಕಾಶ ಸಿಕ್ಕರೂ ಸಾಕು ಎಂದು ನಟ-ನಟಿಯರು ಹಾತೊರೆಯುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಅದು ಬದಲಾಗಿ ಬಾಲಿವುಡ್ ಸ್ಟಾರ್ಗಳು ದಕ್ಷಿಣ ಭಾರತ ಚಿತ್ರಗಳಲ್ಲಿ ನಟಿಸಲು ಸಾಲುಗಟ್ಟುತ್ತಿದ್ದಾರೆ.
ಈ ನಡುವೆ ದಕ್ಷಿಣದ ನಟರು ತಮಗೆ ಅವಕಾಶ ಸಿಕ್ಕರೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹೇಳುವ ಮಟ್ಟಕ್ಕೆ ಪರಿಸ್ಥಿತಿ ಬದಲಾಗಿದೆ. ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ತಾವು ಹಿಂದಿ ಸಿನಿಮಾಗಳಲ್ಲಿ ನಟಿಸುವುದಿಲ್ಲ, ನನಗೆ ಹಿಂದಿ ಸಿನಿಮಾಗಳ ಅವಶ್ಯಕತೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಇದು ಹಲವು ರೀತಿಯ ಚರ್ಚೆಗೆ ನಾಂದಿ ಹಾಡಿದೆ.

ಹಿಂದಿ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ: ಮಹೇಶ್ ಬಾಬು
ನಟ ಮಹೇಶ್ ಬಾಬು ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಗಾಳಿ ಸುದ್ದಿಗೆ ಪ್ರತಿಕ್ರಿಯಿಸಿರುವ ಅವರು, ''ನನಗೆ ಹಿಂದಿ ಸಿನಿಮಾಗಳನ್ನು ಮಾಡುವ ಅವಶ್ಯಕತೆ ಇಲ್ಲ. ನಾನು ತೆಲುಗು ಸಿನಿಮಾ ಮಾಡುತ್ತೇನೆ. ಅದನ್ನೇ ವಿಶ್ವದ ಸಿನಿಮಾ ಪ್ರೇಕ್ಷಕರು ನೋಡುತ್ತಾರೆ. ಈಗ ಆಗುತ್ತಿರುವುದು ಸಹ ಹಾಗೆಯೇ. ನಾನು ಕೇವಲ ತೆಲುಗು ಸಿನಿಮಾಗಳಿಗಷ್ಟೆ ನನ್ನನ್ನು ಸೀಮಿತಗೊಳಿಸಿಕೊಂಡಿದ್ದೇನೆ. ತೆಲುಗು ಸಿನಿಮಾಗಳನ್ನಷ್ಟೆ ಮಾಡುವುದು ನನಗೆ ಇಷ್ಟ'' ಎಂದಿದ್ದಾರೆ ಮಹೇಶ್ ಬಾಬು.

ನನ್ನ ಸೇವೆ, ಪರಿಶ್ರಮ ತೆಲುಗು ಚಿತ್ರರಂಗಕ್ಕೆ ಮಾತ್ರ: ಮಹೇಶ್ ಬಾಬು
''ನನ್ನ ಸೇವೆ, ಪರಿಶ್ರಮ ಏನೇ ಇದ್ದರು ಅದು ಕೇವಲ ತೆಲುಗು ಸಿನಿಮಾಗಳಿಗೆ ಮಾತ್ರವೇ ಆಗಿರುತ್ತದೆ'' ಎಂದು ಕೆಲ ವರ್ಷಗಳ ಹಿಂದೆ ಮಹೇಶ್ ಬಾಬು ಹೇಳಿದ್ದರು. ಬಾಲಿವುಡ್ ಎಂಬುದು ತೆಲುಗು ಚಿತ್ರರಂಗಕ್ಕಿಂತಲೂ ದೊಡ್ಡದೇನಲ್ಲ, ಬಾಲಿವುಡ್ಗೆ ಹೋಗಿ ಸಿನಿಮಾ ಮಾಡುವುದು ಸಾಧನೆಯೂ ಅಲ್ಲ ಎಂಬ ಉದ್ದೇಶದಿಂದ ಮಹೇಶ್ ಬಾಬು, ತಾವು ಹಿಂದಿ ಸಿನಿಮಾ ಮಾಡುವುದಿಲ್ಲ, ಬದಲಿಗೆ ತೆಲುಗು ಸಿನಿಮಾಗಳನ್ನಷ್ಟೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಮಹೇಶ್ ಬಾಬು ತಮ್ಮ ಇನ್ಸ್ಟಾಗ್ರಾಂನಲ್ಲಿ ಸಹ ತಮ್ಮ ಪರಿಚಯವನ್ನು 'ಭಾರತೀಯ ತೆಲುಗು ಸಿನಿಮಾ ನಟ' ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ ಮಾಧ್ಯಮಗಳಿಗೆ ಖಡಕ್ ಉತ್ತರ ನೀಡಿದ್ದ ಮಹೇಶ್ ಬಾಬು
ಕೆಲ ವರ್ಷಗಳ ಹಿಂದೆ ಮುಂಬೈನಲ್ಲಿ ಜಾಹೀರಾತು ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಮಹೇಶ್ ಬಾಬುವನ್ನು ಮುತ್ತಿಕೊಂಡಿದ್ದ ಮಾಧ್ಯಮಗಳು, ಸಲ್ಮಾನ್ ಖಾನ್ರು ತೆಲುಗಿನ ಯಾವ ಸಿನಿಮಾ ರೀಮೇಕ್ ಮಾಡಬೇಕು ಎಂಬುದು ನಿಮ್ಮ ಆಸೆ ಎಂದು ಪ್ರಶ್ನಿಸಿದ್ದರು, ಅದಕ್ಕೆ ನಗುತ್ತಾ ಉತ್ತರಿಸಿದ್ದ ಮಹೇಶ್, ಅವರು ಈಗಾಗಲೇ ಹಲವು ತೆಲುಗು ಸಿನಿಮಾಗಳ ರೀಮೇಕ್ನಲ್ಲಿ ನಟಿಸಿದ್ದಾರೆ. ನನ್ನ 'ಪೋಕಿರಿ' ಸಿನಿಮಾವನ್ನೂ ರೀಮೇಕ್ ಮಾಡಿದ್ದಾರೆ ಎಂದಿದ್ದರು. ಹಾಗಿದ್ದರೆ ನೀವು ಸಲ್ಮಾನ್ರ ಯಾವ ಸಿನಿಮಾ ರೀಮೇಕ್ ಮಾಡುತ್ತೀರಿ? ಎಂಬ ಪ್ರಶ್ನೆಗೆ, ನಾನು ರೀಮೇಕ್ ಸಿನಿಮಾದಲ್ಲಿ ಇಲ್ಲಿಯವರೆಗೆ ನಟಿಸಿಲ್ಲ, ಮುಂದೆ ನಟಿಸುವುದೂ ಇಲ್ಲ'' ಎಂದು ಖಡಕ್ ಆಗಿ ಉತ್ತರಿಸಿದ್ದರು. ಆಗ ಹಲವು ಬಾಲಿವುಡ್ ಮಾಧ್ಯಮಗಳು ಮಹೇಶ್ಗೆ ಅಹಂಕಾರ ಎಂಬರ್ಥ ಬರುವ ರೀತಿಯ ಸುದ್ದಿಗಳನ್ನು ಪ್ರಕಟಿಸಿದ್ದವು.

'ಸರ್ಕಾರು ವಾರಿ ಪಾಟ' ಹಿಂದಿಯಲ್ಲಿ ಬಿಡುಗಡೆ ಆಗಲ್ಲ
ಮಹೇಶ್ ಬಾಬು ಪ್ರಸ್ತುತ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಸಣ್ಣ ಸಿನಿಮಾಗಳನ್ನೂ ಪ್ಯಾನ್ ಇಂಡಿಯಾ ಮಾಡುತ್ತಿರುವ ಹೊತ್ತಿನಲ್ಲಿ ಮಹೇಶ್ ಬಾಬು ತಮ್ಮ ಸಿನಿಮಾವನ್ನು ತೆಲುಗು ಭಾಷೆಯಲ್ಲಷ್ಟೆ ವಿಶ್ವದೆಲ್ಲೆಡೆ ಬಿಡುಗಡೆ ಮಾಡಲು ಹೊರಟಿದ್ದಾರೆ. ಈ ಸಿನಿಮಾವು ಮೇ 12 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾವನ್ನು ಪರಶುರಾಮ್ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











