ಸುದೀಪ್ ಗೆ ರಾಜಮೌಳಿ ಬುಲಾವ್ ನೀಡಿಲ್ಲ: ಗಾಸಿಪ್ ಗೆ ಸ್ಪಷ್ಟನೆ ಕೊಟ್ಟ ಕಿಚ್ಚ.!
ಟಾಲಿವುಡ್ ನ ಪ್ರಖ್ಯಾತ ನಿರ್ದೇಶಕ ರಾಜಮೌಳಿ ಮತ್ತು ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಗ್ಗೆ ನಿನ್ನೆಯಷ್ಟೇ ಒಂದು ರೋಚಕ ಸುದ್ದಿ ಬ್ರೇಕ್ ಆಗಿತ್ತು.
ರಾಜಮೌಳಿ ನಿರ್ದೇಶನದ ಹೊಸ ಸಿನಿಮಾ 'ಅರ್.ಆರ್.ಆರ್'ನಲ್ಲಿ ಸುದೀಪ್ ಅಭಿನಯಿಸಲಿದ್ದಾರಂತೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಸುದೀಪ್ ಅಬ್ಬರಿಸಿದ್ದಾರಂತೆ. ಈ ಬಗ್ಗೆ ಸುದೀಪ್ ಮತ್ತು ರಾಜಮೌಳಿ ನಡುವೆ ಈಗಾಗಲೇ ಮಾತುಕತೆ ನಡೆದಿದ್ಯಂತೆ. ರಾಜಮೌಳಿ ಕೊಟ್ಟ ಆಫರ್ ನ ಸುದೀಪ್ ಒಪ್ಪಿಕೊಂಡಿದ್ದಾರಂತೆ ಅಂತೆಲ್ಲಾ ನಿನ್ನೆ ತೆಲುಗು ಸಿನಿ ಅಂಗಳದಲ್ಲಿ ಗುಲ್ಲೋ ಗುಲ್ಲು.
ಹಾಗಾದ್ರೆ, 'ಈಗ', 'ಬಾಹುಬಲಿ' ಬಳಿಕ ಮತ್ತೊಂದು ಬಾರಿಗೆ ರಾಜಮೌಳಿ ಜೊತೆಗೆ ಸುದೀಪ್ ಕೆಲಸ ಮಾಡ್ತಾರಾ.? ಈ ಪ್ರಶ್ನೆ ಮತ್ತು ಹಬ್ಬಿದ ಗಾಸಿಪ್ ಗಳಿಗೆ ಸ್ವತಃ ಸುದೀಪ್ ಟ್ವಿಟ್ಟರ್ ನಲ್ಲಿ ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ. ನೀವೇ ನೋಡಿ...

ಸುದೀಪ್ ಕೊಟ್ಟ ಸ್ಪಷ್ಟನೆ
''ನನಗೆ 'ಆರ್.ಆರ್.ಆರ್' ಚಿತ್ರದ ಬಗ್ಗೆ ಗೌರವ ಇದೆ. ಆದ್ರೆ, ಎಲ್ಲರ ಗಮನಕ್ಕೆ ನಾನು ತರಲು ಇಚ್ಛಿಸುವುದೇನೆಂದರೆ, ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳು. 'ಆರ್.ಆರ್.ಆರ್' ಚಿತ್ರಕ್ಕಾಗಿ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ನನ್ನ ಹಾಗೂ ರಾಜಮೌಳಿ ನಡುವೆ ಮಾತುಕತೆ ನಡೆದಿಲ್ಲ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಏನಂತ ಸುದ್ದಿ ಹಬ್ಬಿತ್ತು.?
''ಜನವರಿ 20 ರಿಂದ 'ಆರ್.ಆರ್.ಆರ್' ಚಿತ್ರತಂಡವನ್ನು ಕಿಚ್ಚ ಸುದೀಪ್ ಸೇರಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆಫರ್ ನೀಡಿದ ಕೂಡಲೆ, ಕಥೆ ಕೇಳದೆ ಸುದೀಪ್ ಒಪ್ಪಿಕೊಂಡಿದ್ದಾರೆ'' ಎಂದು ನಿನ್ನೆಯಷ್ಟೇ ಗಾಳಿಸುದ್ದಿ ಹಬ್ಬಿತ್ತು. ಇದೆಲ್ಲವೂ ಸುಳ್ಳು ಅಂತ ಸುದೀಪ್ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದಾರೆ.

ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿರುವ ಆರ್.ಆರ್.ಆರ್
ಬ್ರಿಟೀಷರ ವಿರುದ್ಧ ಹೋರಾಡಿದ್ದ ತೆಲುಗಿನ ಸ್ವಾತಂತ್ರ್ಯ ಹೋರಾಟಗಾರರ ಸುತ್ತ 'ಆರ್.ಆರ್.ಆರ್' ಚಿತ್ರಕಥೆಯನ್ನು ರಾಜಮೌಳಿ ಹೆಣೆದಿದ್ದಾರೆ. 400 ಕೋಟಿ ರೂಪಾಯಿ ಬಜೆಟ್ ನಲ್ಲಿ 'ಆರ್.ಆರ್.ಆರ್' ತಯಾರಾಗಲಿದ್ದು, ಜೂ.ಎನ್.ಟಿ.ಆರ್, ರಾಮ ಚರಣ್ ತೇಜಾ, ಆಲಿಯಾ ಭಟ್, ಅಜಯ್ ದೇವ್ಗನ್, ಸಮುದ್ರಖಣಿ, ರಾಹುಲ್ ರಾಮಕೃಷ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಈ ವರ್ಷದ ಜುಲೈ ತಿಂಗಳಲ್ಲಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸುದೀಪ್ ಸಿಕ್ಕಾಪಟ್ಟೆ ಬಿಜಿ
ಇತ್ತ ಸುದೀಪ್ ಸದ್ಯ 'ಬಿಗ್ ಬಾಸ್' ಕಾರ್ಯಕ್ರಮ ಮತ್ತು 'ಕೋಟಿಗೊಬ್ಬ-3' ಚಿತ್ರದಲ್ಲಿ ತೊಡಗಿದ್ದಾರೆ. ಇವೆರಡು ಮುಗಿದ ಬಳಿಕ ಸುದೀಪ್ ಕೈಯಲ್ಲಿ 'ಫ್ಯಾಂಥಮ್' ಮತ್ತು 'ಬಿಲ್ಲಾ ರಂಗ ಬಾಷಾ' ಪ್ರಾಜೆಕ್ಟ್ ಗಳಿವೆ. ಹೀಗಾಗಿ, ಈ ವರ್ಷ ಪೂರ್ತಿ ಸುದೀಪ್ ಫುಲ್ ಬಿಜಿ.


Click it and Unblock the Notifications











