ಸಾಲ ಹೆಚ್ಚಾಗಿ ಮನೆ ಮಾರಿದ್ದೆ, ನಾನು ಮನೇಲಿ ಇರ್ಲಿಲ್ಲ, ನಮ್ಮ ಹೆಂಡ್ತಿ ಮನೆ ಖಾಲಿ ಮಾಡುವಂತಾಗಿತ್ತು; ಜಗಪತಿ ಬಾಬು
ತೆಲುಗು ನಟ ಜಗಪತಿ ಬಾಬು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಸದ್ಯ 'ಪೆದ್ದಿ' ಚಿತ್ರದ ಅಪ್ಪಲ ಸೂರಿ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಕಥೆಗೆ ದೊಡ್ಡ ತಿರುವು ಕೊಡುವ ಪಾತ್ರದಲ್ಲಿ ಜಗಪತಿ ಬಾಬು ನಟಿಸಿದ್ದಾರೆ. ವಿಭಿನ್ನ ಮೇಕಪ್ನಲ್ಲಿ ತಮ್ಮ ನಟನೆ ಮೂಲಕ ನೋಡುಗರನ್ನು ಭಾವುಕರಾಗಿಸಿದ್ದಾರೆ.
ಒಂದ್ಕಾಲದಲ್ಲಿ ಹೀರೊ ಆಗಿ ನಟಿಸುತ್ತಿದ್ದ ಜಗಪತಿ ಬಾಬು ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನೆಗೆಟಿವ್ ರೋಲ್ಗಳಲ್ಲಿ ಕೂಡ ನಟಿಸಿ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಬಹುಬೇಡಿಕೆಯ ಪೋಷಕ ನಟ ಎನಿಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ iDream ಯೂಟ್ಯೂಬ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

12 ವರ್ಷಗಳ ಹಿಂದೆ ಜಗಪತಿ ಬಾಬು ತೆಲುಗಿನ 'ಲೆಜೆಂಡ್' ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದರು. ಅದು ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಕೊಟ್ಟಿದ್ದ ಸಿನಿಮಾ. ಬಾಲಕೃಷ್ಣ ಎದುರು ಜಿತೇಂದ್ರ ಎನ್ನುವ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಚಿತ್ರೀಕರಣದ ಸಮಯದಲ್ಲೇ ತಮ್ಮ ಮನೆಯನ್ನು ಮಾರಾಟ ಮಾಡಿದ್ದರು. ಮನೆ ಖಾಲಿ ಮಾಡಬೇಕಾದ ಸಂದರ್ಭ ಎದುರಾಗಿತ್ತು. ಅಂದು ಜಗಪತಿ ಬಾಬು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಇತ್ತ ಮಡದಿ, ಮಕ್ಕಳು ಮನೆ ಖಾಲಿ ಮಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಆ ದಿನದ ಬಗ್ಗೆ ಅವರು ಮಾತನಾಡಿದ್ದಾರೆ.
ಮನೆ ಮಾರಿದ್ದನ್ನು ನಾನು ಭಾವನಾತ್ಮಕವಾಗಿ ಪರಿಗಣಿಸುವುದಿಲ್ಲ. ಪ್ರಾಕ್ಟಿಕಲ್ ಆಗಿ ನೋಡಿದಾಗ ಅದನ್ನು ನಾನು ಕೇರ್ ಮಾಡಲ್ಲ. ಆದರೆ ಅವತ್ತು ನಿಜಕ್ಕೂ ನಾನು ಮನೆಯಲ್ಲಿ ಇರಬೇಕಿತ್ತು ಎಂದು ಜಗಪತಿ ಬಾಬು ಹೇಳಿದ್ದಾರೆ. "ನನ್ನ ಪರಿಸ್ಥಿತಿ ಆ ರೀತಿ ಇತ್ತು. 'ಲೆಜೆಂಡ್' ಸಿನಿಮಾ ಚಿತ್ರೀಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೆ. ಚಿತ್ರೀಕರಣ ಬಿಟ್ಟು ಬರಬೇಕು ಎನಿಸಲಿಲ್ಲ. ಈ ವಿಚಾರದಲ್ಲಿ ಮಡದಿ, ಮಕ್ಕಳಿಗೆ ಥ್ಯಾಂಕ್ಸ್ ಹೇಳ್ಬೇಕು. ಆ ಬಗ್ಗೆ ಅವತ್ತು ಅವ್ರು ಕೇಳಲಿಲ್ಲ, ಇವತ್ತಿಗೂ ಕೇಳಲಿಲ್ಲ. ನೀವಿಲ್ಲದೇ ಮನೆ ಖಾಲಿ ಮಾಡಿದ್ವಿ ಎನ್ನುವ ವಿಚಾರದ ಬಗ್ಗೆ ಚರ್ಚೆ ಮಾಡ್ಲಿಲ್ಲ. ಮೇಲ್ನೋಟಕ್ಕೆ ಹಗುರವಾಗಿ ತೆಗೆದುಕೊಂಡ್ರು, ಒಳಗೆ ನೋವು ಇರುತ್ತೆ. ಆದ್ರೆ ಏನ್ ಮಾಡ್ಲಿ, ಆ ಪರಿಸ್ಥಿತಿ ನನ್ನ ಕೈಯಲ್ಲಿ ಇರ್ಲಿಲ್ಲ" ಎಂದಿದ್ದಾರೆ.
ಫ್ಯಾಮಿಲಿ ಬೆಂಬಲ ಚೆನ್ನಾಗಿ ಇರುವುದರಿಂದಲೇ ನನ್ನಿಷ್ಟದಂತೆ ನಾನು ಬದುಕುತ್ತಿದ್ದೀನಿ ಎಂದು ಜಗಪತಿ ಬಾಬು ವಿವರಿಸಿದ್ದಾರೆ. "ಅಂತಃಪುರ ಚಿತ್ರಕ್ಕೆ ಡಬ್ಬಿಂಗ್ ಮಾಡ್ತಿದ್ದೆ. ಅದೇ ಸಮಯದಲ್ಲಿ ನನ್ನ ಚಿಕ್ಕ ಮಗಳಿಗೆ ಎಮರ್ಜೆನ್ಸಿ ಆಗಿತ್ತು. ಆ ಸಮಯದಲ್ಲಿ ಕೂಡ ಮಡದಿ ನೋಡಿಕೊಳ್ತಿದ್ಲು. ನಮ್ಮ ಫ್ಯಾಮಿಲಿ ಅಲ್ಲಿ ಯಾರು ಕೂಡ ಚಿತ್ರರಂಗದ ಜೊತೆ ನಂಟು ಇಟ್ಟುಕೊಂಡಿಲ್ಲ. ಅವರಿಗೆ ಪಬ್ಲಿಸಿಟಿ ಕೂಡ ಬೇಡ. ಮಾಲ್ಗೆ ಹೋದ್ರು ನನ್ನ ಪಕ್ಕದಲ್ಲಿ ಅವರು ಬರಲ್ಲ. ಎಲ್ಲೇ ಹೋದ್ರು ಒಟ್ಟಿಗೆ ಓಡಾಡಲ್ಲ, ಹಿಂದೆ ಇರ್ತಾರೆ ಅಥವಾ ಮುಂದೆ ಇರ್ತಾರೆ. ಅವ್ರ ಜೀವನ ಅದು" ಎಂದು ತಿಳಿಸಿದ್ದಾರೆ.
ಈ ಹಿಂದೆ ಸಂದರ್ಶನದಲ್ಲಿ ತಾವು ಯಾಕೆ ಹಣ ಕಳೆದುಕೊಂಡು ಮನೆ ಮಾರುವ ಪರಿಸ್ಥಿತಿ ಬಂತು ಎನ್ನುವುದನ್ನು ಜಗಪತಿ ಬಾಬು ಹೇಳಿದ್ದರು. ಕೆಲವರು ಮೋಸ ಮಾಡಿದ್ರು. ಮೋಸ ಮಾಡಿದ್ರು ಎನ್ನುವುದಕ್ಕಿಂತ ನಾನೇ ಮೋಸ ಹೋದೆ. ಬಳಿಕ ಸಾಲ ಮಾಡ್ದೆ. 60%ರಷ್ಟು ಬಡ್ಡಿ ಕಟ್ಟಿದ ದಿನಗಳು ಇವೆ ಎಂದು ಹೇಳಿದ್ದರು.
ಕೆಲ ವರ್ಷಗಳ ಹಿಂದೆ ಜಗಪತಿ ಬಾಬು ಹೀರೊ ಆಗಿದ್ದರು. ಅವರ ಸಿನಿಮಾಗಳಲ್ಲಿ ರವಿತೇಜ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ರವಿತೇಜ ಹೀರೊ ಆಗಿದ್ದು ಅವರ ಸಿನಿಮಾದಲ್ಲಿ ಜಗಪತಿ ಬಾಬು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications