ಆ 'ಕೆಲಸ' ಮಾಡಿದ್ದರೆ ಇವತ್ತು ನಾನು ಕೂಡ ಸೂಪರ್ ಸ್ಟಾರ್ ಆಗಿರುತ್ತಿದ್ದೆ- ಸಿದ್ಧಾರ್ಥ್ ..!
ಚಿತ್ರ ಮತ್ತು ಪಾತ್ರಗಳಿಗಿಂತ ಹೆಚ್ಚು ವಿವಾದಗಳಿಂದ ಸುದ್ದಿಯಾದವರು ಸಿದ್ಧಾರ್ಥ್. ಕೇಂದ್ರ ಸರ್ಕಾರದ ವಿರುದ್ಧ ಆಗಾಗ ಕೆಂಡವನ್ನು ಕಾರುತ್ತಾ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗುತ್ತಾ ಬಂದವರಲ್ಲಿ ಸಿದ್ಧಾರ್ಥ್ ಕೂಡ ಒಬ್ಬರು ಮತ್ತು ಪ್ರಮುಖರು.
ಇಂಥಾ ಸಿದ್ಧಾರ್ಥ್ ತಮ್ಮ ವೃತ್ತಿ ಬದುಕಿನಲ್ಲಿ ಆರಕ್ಕೇರಲಿಲ್ಲ. ಮೂರಕ್ಕೆ ಇಳಿಯಲಿಲ್ಲ. ಬಾಯ್ಸ್, ನುವೋಸ್ತಾನಂಟೆ ನೇನೋದ್ದಂತನ, ರಂಗ್ ದೇ ಬಸಂತಿ ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದರು ಕೂಡ ಸಿದ್ಧಾರ್ಥ್ ಗೆ ಸಿಗಬೇಕಿದ್ದ ಮನ್ನಣೆ ಸಿಗಲಿಲ್ಲ. ಇದಕ್ಕೆ ಕಾರಣಗಳೇನು ? ಈ ಪ್ರಶ್ನೆಗೆ ನಿಖರ ಉತ್ತರ ಹೇಳುವುದು ಕಷ್ಟಕರವಾದರೂ ಸದ್ಯ ಸಿದ್ಧಾರ್ಥ್ ತಾವ್ಯಾಕೇ ಸೂಪರ್ ಸ್ಟಾರ್ ಆಗಲಿಲ್ಲ ಎನ್ನುವುದಕ್ಕೆ ಉತ್ತರ ನೀಡಿದ್ದಾರೆ.

ಹೌದು, ಇತ್ತೀಚೆಗೆ ಹೈದ್ರಾಬಾದ್ನಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಸಿದ್ಧಾರ್ಥ್ ಭಾಗಿಯಾಗಿದ್ದರು. ಇದೇ ಸಮಯದಲ್ಲಿ ಮಾತನಾಡಿರುವ ಸಿದ್ಧಾರ್ಥ್ ಪುಸ್ತಕಗಳ ಮೇಲೆ ತಮಗೆ ಇರುವ ಒಲವು ಹೇಳಿಕೊಂಡಿದ್ದಾರೆ. ತಮ್ಮ ಪತ್ನಿ ಆದಿತಿ ರಾವ್ ಹೈದರಿ ಅವರ ತಾಯಿ ವಿದ್ಯಾ ರಾವ್ ಅವರ ಜೊತೆ ಸಂವಾದ ನಡೆಸಿದ್ದಾರೆ. ಆ ನಂತರ ನೆರೆದ ಜನರ ಜೊತೆ ಸಂವಾದವನ್ನು ನಡೆಸಿದ ಸಿದ್ಧಾರ್ಥ್ ಇದೇ ಸಮಯದಲ್ಲಿ ಬಂದ ಅವಕಾಶಗಳನ್ನೆಲ್ಲ ನಾನು ಒಪ್ಪಿಕೊಂಡಿದ್ದರೆ ದೊಡ್ಡ ಸೂಪರ್ ಸ್ಟಾರ್ ಆಗಿರುತ್ತಿದ್ದೆ ಎಂದು ಹೇಳಿದ್ದಾರೆ.
ನನಗೆ ಅವಕಾಶಗಳು ಬಂದಿಲ್ಲ ಅಂತೇನು ಇಲ್ಲ. ಬಂದಿದ್ದವು ಈಗಲೂ ಬರುತ್ತವೆ ಆದರೆ ಆ ಚಿತ್ರಗಳಲ್ಲಿ ಹುಡುಗಿಯರಿಗೆ ಹೊಡೆಯುವ, ಚುಡಾಯಿಸುವ, ಸೊಂಟದ ಮೇಲೆ ಕೈಯಾಡಿಸುವ ಸನ್ನಿವೇಶಗಳಿರುತ್ತವೆ ಎಂದಿರುವ ಸಿದ್ಧಾರ್ಥ್ ಹುಡುಗಿಯರು ಹೇಗಿರಬೇಕು ಎಂದು ಹೇಳುವ ಕೆಲ ಕೊಳಕು ಮನಸ್ಥಿತಿಯ ಕಥೆಗಳನ್ನು ನಾನು ಕೇಳಿದ್ದೇನೆ ಎಂದಿದ್ದಾರೆ. ಇಂತಹ ಚಿತ್ರಗಳನ್ನು ಪಾತ್ರಗಳನ್ನು ಮಾಡಲು ನನಗೆ ಮೊದಲಿಂದ ಇಷ್ಟ ಇಲ್ಲ ಹೀಗಾಗಿ ನಾನು ಮಾಡಲಿಲ್ಲ, ಒಂದು ವೇಳೆ ಈ ಕೆಲಸಗಳನ್ನು ನಾನು ಮಾಡಿದ್ದರೆ ನಾನು ಕೂಡ ಇವತ್ತು ದೊಡ್ಡ ಸೂಪರ್ ಸ್ಟಾರ್ ಆಗಿರುತ್ತಿದ್ದೆ ಎಂದು ಹೇಳಿದ್ದಾರೆ.
ಇನ್ನು ಈ ಅವಕಾಶಗಳನ್ನು ಕೈ ಚೆಲ್ಲಿದ್ದಕ್ಕೆ ನನಗೆ ಯಾವ ಪಶ್ಚಾತಾಪ ಇಲ್ಲ ಎಂದು ಹೇಳಿರುವ ಸಿದ್ಧಾರ್ಥ್ ನನ್ನ ಬಗ್ಗೆ ತುಂಬಾ ಜನ ಒಳ್ಳೆಯ ಮಾತುಗಳನ್ನಾಡುತ್ತಾರೆ. ಹೆಣ್ಣನ್ನು ಗೌರವಿಸುವ ಹುಡುಗ ಎನ್ನುತ್ತಾರೆ. ಹೆತ್ತವರಿಗೆ ಒಳ್ಳೆಯ ಮಗನಾಗಿದ್ದೀಯಾ ಎನ್ನುತ್ತಾರೆ, ಈಗಲೂ ಮುದ್ದಾಗಿ ಕಾಣ್ತೀಯಾ ಎಂದು ಹೇಳ್ತಾರೆ ಇಷ್ಟೇ ನನಗೆ ಸಾಕು ಎಂದಿರುವ ಸಿದ್ಧಾರ್ಥ್ ಚಿಕ್ಕ ಮಕ್ಕಳು ಕೂಡ ನನ್ನ ಚಿತ್ರವನ್ನು ಮುಜುಗರ ಇಲ್ಲದೇ ನೋಡುತ್ತಾರೆ ನನಗೆ ಅಷ್ಟೇ ಸಾಕು ಎಂದಿದ್ದಾರೆ. ಈ ಪ್ರೀತಿಗೆಲ್ಲ ಬೆಲೆ ಕಟ್ಟಲು ಸಾಧ್ಯವಾಗಲ್ಲ ಎಂದಿರುವ ಸಿದ್ಧಾರ್ಥ್ ನನಗೆ ತೆರೆಯ ಮೇಲೆ ಕಣ್ಣೀರು ಹಾಕುವುದು ಇಷ್ಟ ನಾನು ಅದನ್ನೇ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ಸಿದ್ದಾರ್ಥ್ ಮಾತನಾಡಿದ ಈ ಮಾತು ಆಂಧ್ರದಲ್ಲಿ ಅನೇಕ ಸ್ಟಾರ್ಗಳ ಅಭಿಮಾನಿಗಳನ್ನು ಕೆರಳಿಸಿದೆ. ಅದರಲ್ಲಿಯೂ ಅಲ್ಲು ಅರ್ಜುನ್ ಅವರ ಭಕ್ತಗಣ ಸಿದ್ದಾರ್ಥ್ ವಿರುದ್ದ ಕೊತ ಕೊತ ಕುದಿಯುತ್ತಿದೆ.ಯಾಕೆಂದರೆ ಪುಷ್ಪ 2 ಚಿತ್ರದ ಸಮಯದಲ್ಲಿ ಜೆಸಿಬಿ ನೋಡಲು ಕೂಡ ಜನ ಸೇರುತ್ತಾರೆ ಎಂದು ಸಿದ್ಧಾರ್ಥ್ ಹೇಳಿದ್ದರು. ಈಗ ನಾಯಕಿಯ ಸೊಂಟ ಗಿಲ್ಲುವುದು, ಐಟಂ ಸಾಂಗ್ ಮಾಡುವುದು ಎಂದೆಲ್ಲ ಸಿದ್ದಾರ್ಥ್ ಮಾತನಾಡಿದ್ದಾರೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿದ್ದಾರ್ಥ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ಅಲ್ಲು ಅರ್ಜುನ್ ಮಾತ್ರವಲ್ಲದೇ ವಿಜಯ್ ದೇವರಕೊಂಡ, ರಣ್ಬೀರ್ ಕಪೂರ್, ಶಾಹೀದ್ ಕಪೂರ್, ಹೀಗೆ ಬೆಳ್ಳಿ ತೆರೆಯ ಮೇಲೆ ರಕ್ತದ ನದಿಯನ್ನು ಹರಿಸಿದ ಮಾಚೋ ಹೀರೋಗಳ ವಿರುದ್ದ ತಮ್ಮ ಅಸಮಾಧಾನವನ್ನು ಈ ಮೂಲಕ ಸಿದ್ಧಾರ್ಥ್ ಹೊರ ಹಾಕಿದ್ದಾರೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











