ಜೂ ಎನ್ಟಿಆರ್ಗೆ ಧನ್ಯವಾದ ಹೇಳುವುದಿಲ್ಲ ಎಂದ ರಾಮ್ ಚರಣ್
ನಟ ರಾಮ್ ಚರಣ್ ತೇಜ ಹಾಗೂ ಜೂ ಎನ್ಟಿಆರ್ ನಟಿಸಿರುವ ಹೊಸ ಸಿನಿಮಾ 'ಆರ್ಆರ್ಆರ್' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಸಿನಿಮಾದಲ್ಲಿ ಐತಿಹಾಸಿಕ ಹೋರಾಟಗಾರ ಕೋಮರಂ ಭೀಮ್ ಪಾತ್ರದಲ್ಲಿ ಜೂ ಎನ್ಟಿಆರ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟ ರಾಮ್ ಚರಣ್ ತೇಜ ನಟಿಸಿದ್ದಾರೆ. ಸಿನಿಮಾವು ಜನವರಿ 07 ಕ್ಕೆ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯ ಬಹಳ ಜೋರಾಗಿ ನಡೆಯುತ್ತಿದೆ.
ಸಿನಿಮಾದ ಟ್ರೈಲರ್ನಲ್ಲಿ ರಾಮ್ ಚರಣ್ ಹಾಗೂ ಜೂ ಎನ್ಟಿಆರ್ ಗೆಳೆತನದ ಬಗ್ಗೆ ದೃಶ್ಯ ತುಣುಕುಗಳು ಇವೆ. ಇಬ್ಬರೂ ಒಟ್ಟಿಗೆ ಮಾಡಿರುವ ಡ್ಯಾನ್ಸ್ ಸ್ಟೆಪ್ ಅಂತೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ಪ್ರಚಾರಕ್ಕೆ ಎಲ್ಲಿಗೇ ಹೋದರೂ ಅದೇ ಸ್ಟೆಪ್ಸ್ ಮಾಡುತ್ತಿದ್ದಾರೆ ರಾಮ್ ಹಾಗೂ ಜೂ ಎನ್ಟಿಆರ್. ಇತ್ತೀಚಿನ ಒಂದು ಪ್ರಚಾರ ಸಂಬಂಧಿ ಸಂದರ್ಶನದಲ್ಲಿ ತಾವು ಜೂ ಎನ್ಟಿಆರ್ಗೆ ಧನ್ಯವಾದ ಹೇಳುವುದಿಲ್ಲ ಎಂದಿರುವ ರಾಮ್ ಚರಣ್ ಅದಕ್ಕೆ ಕಾರಣವನ್ನೂ ನೀಡಿದ್ದಾರೆ.
ಚೆನ್ನೈನಲ್ಲಿ ಮಾತನಾಡಿದ ರಾಮ್ ಚರಣ್ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು, ತಮಿಳಿನಲ್ಲಿ ಡಬ್ ಮಾಡಲು ಸಹಾಯ ಮಾಡಿದವರಿಗೂ ಧನ್ಯವಾದ ಅರ್ಪಿಸಿದರು. ಆದರೆ ಸಹ ನಟ ಜೂ ಎನ್ಟಿಆರ್ಗೆ ಧನ್ಯವಾದ ಹೇಳಲಿಲ್ಲ. ಇದಕ್ಕೆ ಕಾರಣವನ್ನೂ ರಾಮ್ ಚರಣ್ ನೀಡಿದರು. ರಾಮ್ ನೀಡಿದ ಕಾರಣಕ್ಕೆ ಜೋರು ಕರತಾಡನಗಳ ಸುರಿಮಳೆಯೇ ಆಯಿತು.

ಜೂ ಎನ್ಟಿಆರ್ಗೆ ಧನ್ಯವಾದ ಹೇಳಲ್ಲ: ರಾಮ್ ಚರಣ್
''ನಾನು ಎಲ್ಲರಿಗೂ ಧನ್ಯವಾದ ಹೇಳಬಲ್ಲೆ ಆದರೆ ತಾರಕ್ (ಜೂ ಎನ್ಟಿಆರ್)ಗೆ ಧನ್ಯವಾದ ಹೇಳಲಾರೆ. ನಾವಿಬ್ಬರೂ ಬಹಳ ಆಪ್ತರು, ನಮ್ಮ ನಡುವೆ, ಕ್ಷಮೆ, ಥ್ಯಾಂಕ್ಸ್ಗೆ ಸ್ಥಾನವೇ ಇಲ್ಲ. ಒಂದೊಮ್ಮೆ ನಾನು ಧನ್ಯವಾದ ಹೇಳಿದರೆ ಅದು ನಮ್ಮಿಬ್ಬರ ನಡುವಿನ ಬಂಧವನ್ನು ಹಾಳು ಗೆಡವುತ್ತದೆ. ನಮ್ಮಿಬ್ಬರ ನಡುವಿನ ಬಂಧಕ್ಕೆ ಅಪಮಾನವಾದಂತೆ ಆಗುತ್ತದೆ'' ಎಂದರು ರಾಮ್ ಚರಣ್ ತೇಜ.

ಕೊನೆ ಉಸಿರಿನ ವರೆಗೆ ಗೆಳೆತನ ಉಳಿಸಿಕೊಳ್ಳುತ್ತೇನೆ: ರಾಮ್ ಚರಣ್
''ತಾರಕ್ ನನಗಿಂತಲೂ ಒಂದು ವರ್ಷ ಚಿಕ್ಕವನು. ಆದರೆ ಅವನ ವರ್ತನೆಗಳೆಲ್ಲ ಸಣ್ಣ ಮಕ್ಕಳ ರೀತಿಯಲ್ಲಿಯೇ. ಅವನದ್ದು ಮಗುವಿನಂಥಹಾ ಮನಸ್ಸು ಆದರೆ ಸಿಂಹದಂತಹಾ ವ್ಯಕ್ತಿತ್ವ. ನಾನು ನನ್ನ ಕೊನೆಯ ಉಸಿರು ಇರುವವರೆಗೆ ಜೂ ಎನ್ಟಿಆರ್ ಜೊತೆಗೆ ಸಹೋದರ ಸಂಬಂಧವನ್ನು ಉಳಿಸಿಕೊಳ್ಳುತ್ತೇನೆ'' ಎಂದು ಪ್ರತಿಜ್ಞೆ ಮಾಡಿದರು ರಾಮ್ ಚರಣ್. ರಾಮ್ ಮಾತು ಕೇಳಿ ಜೂ ಎನ್ಟಿಆರ್ ಭಾವುಕರಾದರು. ರಾಮ್ ಹೇಳಿದ ಮಾತಿಗೆ ಜೋರು ಕರತಾಡನ, ಶಿಳ್ಳೆಗಳನ್ನು ಹಾಕಲಾಯಿತು. ರಾಜಮೌಳಿ ಸಹ ತಮ್ಮ ಇಬ್ಬರೂ ನಟರನ್ನು ತಬ್ಬಿಕೊಂಡು ಭಾವುಕರಾದರು.

ಇಬ್ಬರೂ ಆಪ್ತ ಗೆಳೆಯರು
'ಆರ್ಆರ್ಆರ್' ಸಿನಿಮಾ ಪ್ರಾರಂಭವಾಗುವ ಮುಂಚೆಯಿಂದಲೂ ರಾಮ್ ಚರಣ್ ಹಾಗೂ ಜೂ ಎನ್ಟಿಆರ್ ಆಪ್ತ ಗೆಳೆಯರು. ನಂದಮೂರಿ ಕುಟುಂಬ ಹಾಗೂ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ನಡುವೆ ತಣ್ಣನೆಯ ವೈಷಮ್ಯವೊಂದು ಬಹಳ ವರ್ಷಗಳಿಂದಲೂ ಇದ್ದೇ ಇದೆ. ನಟ ಬಾಲಕೃಷ್ಣ ಅಂತೂ ಈ ಬಗ್ಗೆ ಕೆಲವು ಸಂದರ್ಭದಲ್ಲಿ ಬಹಿರಂಗವಾಗಿಯೇ ಮಾತನಾಡಿದ್ದಾರೆ. ವೈಷಮ್ಯದ ನಡುವೆಯೇ ಜೂ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜ ಗೆಳೆತನ ಬೆಳೆಸಿಕೊಂಡರು. ಇಬ್ಬರೂ ಪರಸ್ಪರರ ಸಿನಿಮಾಗಳಿಗೆ ಕ್ಲ್ಯಾಪ್ ಮಾಡಿದರು. ಪರಸ್ಪರರ ಮನೆಗಳಿಗೆ ಹಬ್ಬಗಳಿಗೆ ಅತಿಥಿಗಳಾಗಿ ಆಗಮಿಸಿದರು. ಇಷ್ಟು ದಿನ ಈ ಎರಡು ಸಿನಿಮಾ ಕುಟುಂಬದ ನಡುವೆ ವೈಷಮ್ಯ ನೋಡಿದ್ದ ತೆಲುಗು ಸಿನಿಮಾ ಪ್ರೇಕ್ಷಕರು ಈ ಯುವನಟರ ಸ್ನೇಹ ಕಂಡು ಆಶ್ಚರ್ಯ ವ್ಯಕ್ತಪಡಿಸಿತ್ತು.

ಜನವರಿ 7 ಕ್ಕೆ ಸಿನಿಮಾ ಬಿಡುಗಡೆ
ಇದೀಗ ಈ ಇಬ್ಬರು ನಿಜ ಜೀವನದ ಸ್ನೇಹಿತರು ಸಿನಿಮಾದಲ್ಲಿಯೂ ಸ್ನೇಹಿತರಾಗಿ ನಟಿಸುತ್ತಿದ್ದು, ಸಿನಿಮಾದ ಮೂಲಕ ಸ್ನೇಹದ ಮಹತ್ವವನ್ನು ಮತ್ತಷ್ಟು ಗಟ್ಟಿಯಾಗಿ ಸಾರಲಿದ್ದಾರೆ. 'ಆರ್ಆರ್ಆರ್' ಸಿನಿಮಾವು ಜನವರಿ 7 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಜೂ ಎನ್ಟಿಆರ್, ರಾಮ್ ಚರಣ್ ತೇಜ ಹೊರತಾಗಿ ಬಾಲಿವುಡ್ ನಟಿ ಆಲಿಯಾ ಭಟ್, ಅಜಯ್ ದೇವಗನ್, ಶ್ರೆಯಾ ಶಿರಿನ್ ಇನ್ನೂ ಹಲವರು ಇದ್ದಾರೆ. ಸಿನಿಮಾಕ್ಕೆ ಕೀರವಾಣಿ ಸಂಗೀತ ನೀಡಿದ್ದು, ಹಾಡುಗಳು ಈಗಾಗಲೇ ಹಿಟ್ ಆಗಿವೆ. ಬಿಡುಗಡೆ ಮಾಡಲಾಗಿರುವ ಟ್ರೈಲರ್ ಸಹ ಸಖತ್ ವೈರಲ್ ಆಗಿದೆ.


Click it and Unblock the Notifications











