ಆಂಧ್ರದಲ್ಲಿ ನನ್ನ ಸಿನಿಮಾ ಉಚಿತವಾಗಿ ತೋರಿಸ್ತೀನಿ: ಜಗನ್ಗೆ ಪವನ್ ಕಲ್ಯಾಣ್ ಸವಾಲು
ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಜನಸೇನಾ ಪಕ್ಷದ ಮುಖಂಡ, ಸ್ಟಾರ್ ನಟ ಪವನ್ ಕಲ್ಯಾಣ್ ನಡುವಿನ ವಾಕ್ಸಮರ ದಿನೇ-ದಿನೇ ಹೆಚ್ಚಾಗುತ್ತಲೇ ಇದೆ.
ವೈಜಾಗ್ ಉಕ್ಕು ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪವನ್ ಕಲ್ಯಾಣ್ ನೇತೃತ್ವದಲ್ಲಿ ಜನಸೇನಾ ಪಕ್ಷವು ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ಸವಾಲು ಎಸೆದರು.
''ನನ್ನ ಸಿನಿಮಾಗಳನ್ನು ತಡೆದು ಬಿಟ್ಟರು. ನನ್ನ ಸಿನಿಮಾಗಳನ್ನು ತಡೆವ ಮೂಲಕ ನನ್ನ ಆರ್ಥಿಕ ಮೂಲಗಳನ್ನು ಬಂದ್ ಮಾಡಿ ನನ್ನನ್ನು ಹೆದರಿಸಲು ನೋಡಿದರು. ಆದರೆ ನಾನು ಹೆದರುವ ವ್ಯಕ್ತಿ ಅಲ್ಲ. ನಾನು ಮನಸ್ಸು ಮಾಡಿದರೆ ನನ್ನ ಸಿನಿಮಾಗಳನ್ನು ಇಡೀ ಆಂಧ್ರ ಪ್ರದೇಶದಲ್ಲಿ ಉಚಿತವಾಗಿ ಬೇಕಾದರೆ ತೋರಿಸುತ್ತೀನಿ'' ಎಂದು ಸವಾಲು ಹಾಕಿದರು ನಟ ಪವನ್ ಕಲ್ಯಾಣ್.

ಮದ್ಯ ವ್ಯವಹಾರದಲ್ಲಿ ಪಾರದರ್ಶಕತೆ ಇದೆಯೇ? ಪವನ್ ಪ್ರಶ್ನೆ
ಮುಂದುವರೆದು ಮಾತನಾಡಿದ ಪವನ್ ಕಲ್ಯಾಣ್, ''ಸಿನಿಮಾ ಟಿಕೆಟ್ ವ್ಯವಹಾರದಲ್ಲಿ ಪಾರದರ್ಶಕತೆ ಕೊರತೆ ಇದೆ ಎಂದು ಹೇಳಿದ್ದಾರೆ. ಸರಿ ಒಪ್ಪಿಕೊಳ್ಳೋಣ, ಕೆಲವು ಚಿತ್ರಮಂದಿರ ಮಾಲೀಕರು ಸರಿಯಾಗಿ ತೆರಿಗೆ ಪಾವತಿಸದೇ ಇರಬಹುದು. ಆದರೆ ಈ ಸರ್ಕಾರ ತಾನೇ ತಯಾರಿಸಿ ಮಾರುತ್ತಿರುವ ಮದ್ಯದ ವ್ಯವಹಾರದಲ್ಲಿ ಪಾರದರ್ಶಕತೆ ಇದೆಯಾ?'' ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದರು.

ಲಾರಿಯಲ್ಲಿ ಹಣ ತುಂಬಿ ತೆಗೆದುಕೊಂಡು ಹೋಗುತ್ತಿದ್ದಾರೆ: ಪವನ್
''ಮದ್ಯಪಾನ ನಿಷೇಧ ಎಂದು ಹೇಳಿದರು ಸಿಎಂ ಆದರೆ ಕೊನೆಗೆ ತಾವೇ ಮದ್ಯ ತಯಾರಿಸಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಆ ಎಲ್ಲ ವ್ಯವಹಾರ ನಗದು ರೂಪದಲ್ಲಿಯೇ ನಡೆಯುತ್ತದೆ ಹಾಗಿದ್ದರೆ ಅದರಲ್ಲಿ ಪಾರದರ್ಶಕತೆ ಎಲ್ಲಿದೆ. ಮದ್ಯ ವ್ಯಾಪಾರದಿಂದ ಬಂದ ಹಣವನ್ನು ಲಾರಿಯಲ್ಲಿ ತುಂಬಿ ಅದರ ಭದ್ರತೆಯ ನಡುವೆ ಆ ಹಣವನ್ನು ಸಾಗಿಸಲಾಗುತ್ತಿದೆಯಂತೆ. ಇದಾ ನಿಮ್ಮ ಪಾರದರ್ಶಕತೆ'' ಎಂದು ಪವನ್ ಕಲ್ಯಾಣ್ ವಾಗ್ದಾಳಿ ನಡೆಸಿದರು.

ಟಿಕೆಟ್ ದರ ನಿಗದಿಪಡಿಸಿರುವ ಸರ್ಕಾರ
ಸಿನಿಮಾ ರಂಗದ ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿ ಜಗನ್ ಸರ್ಕಾರವು, ರಾಜ್ಯದ ಎಲ್ಲ ಚಿತ್ರಮಂದಿರಗಳ ಟಿಕೆಟ್ ಅನ್ನು ಸರ್ಕಾರವೇ ಮಾರಾಟ ಮಾಡುತ್ತದೆ ಎಂದು ಘೋಷಿಸಿದ್ದಾರೆ. ಜೊತೆಗೆ ಮಹಾ ನಗರ, ನಗರ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮೀಣ ಭಾಗದ ಚಿತ್ರಮಂದಿರಗಳ ಟಿಕೆಟ್ ದರವನ್ನು ಸರ್ಕಾರವೇ ನಿಗದಿಪಡಿಸಿದ್ದು, ನಿಗದಿತ ಟಿಕೆಟ್ ದರವನ್ನು ಮೀರಿ ಪ್ರೇಕ್ಷಕರಿಂದ ಹಣ ಪಡೆವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಅದು ಮಾತ್ರವೇ ಅಲ್ಲದೆ, ಬೆನಿಫಿಟ್ ಶೋಗಳು, ಫ್ಯಾನ್ ಶೋಗಳನ್ನು ಸಹ ಮಾಡುವಂತಿಲ್ಲ ಎಂದು ಸಹ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದೆ.

'ವಕೀಲ್ ಸಾಬ್' ಸಿನಿಮಾ ಗಲಾಟೆ
ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆದಾಗ ರಾಜ್ಯದಾದ್ಯಂತ ಆಯೋಜಿಸಿದ್ದ ಫ್ಯಾನ್ ಶೋ, ಬೆನಿಫಿಟ್ ಶೋಗಳನ್ನು ಸರ್ಕಾರ ರದ್ದು ಮಾಡಿತ್ತು. ಅಲ್ಲದೆ ಟಿಕೆಟ್ ದರದ ಮೇಲೆ ನಿಯಂತ್ರಣ ಹೇರಿತ್ತು. ಇದು ಪವನ್ ಕಲ್ಯಾಣ್ ಅನ್ನು ಹಾಗೂ ಪವನ್ ಅಭಿಮಾನಿಗಳನ್ನು ಕೆರಳಿಸಿತ್ತು. ಇದೀಗ ಕಡಿಮೆ ಮೊತ್ತದ ಟಿಕೆಟ್ ದರ ನಿಗದಿ ಮಾಡಿರುವುದಕ್ಕೆ ತೆಲುಗು ಚಿತ್ರರಂಗ ಜಗನ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ. ಹೀಗೆ ಮುಂದುವರೆದರೆ ಬಿಗ್ ಬಜೆಟ್ ಸಿನಿಮಾಗಳು ಆಂಧ್ರದಲ್ಲಿ ನಷ್ಟ ಅನುಭವಿಸಲಿವೆ ಎಂದು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿವೆ. ಆಂಧ್ರ ಪ್ರದೇಶಕ್ಕೆ ಹೋಲಿಸಿದರೆ ತೆಲಂಗಾಣದಲ್ಲಿ ಟಿಕೆಟ್ ದರಗಳು ತುಸು ಹೆಚ್ಚಿವೆ ಹಾಗಾಗಿ ಬಿಗ್ ಬಜೆಟ್ ಸಿನಿಮಾಗಳು ತೆಲಂಗಾಣದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಯೋಜನೆ ರೂಪಿಸುತ್ತಿವೆ.


Click it and Unblock the Notifications











