ಬೆಂಗಳೂರು ಪೊಲೀಸರ ಐಡಿಯಾ ಕದ್ದ ತೆಲುಗು ನಟ ಅಲ್ಲು ಅರ್ಜುನ್!
ಕಾಲ್ತುಳಿತ ಪ್ರಕರಣ ಸಂಬಂಧ ತೆಲುಗು ನಟ ಅಲ್ಲು ಅರ್ಜುನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ಪ್ರಕರಣದಲ್ಲಿ ಬಂಧನವಾಗಿ ಬಳಿಕ ಮಧ್ಯಂತರ ಜಾಮೀನು ಪಡೆದು ಅಲ್ಲು ಅರ್ಜುನ್ ಹೊರ ಬಂದಿದ್ದರು. ಇವತ್ತು(ಡಿಸೆಂಬರ್ 24) ಪ್ರಕರಣ ಹಿನ್ನೆಲೆ ಪೊಲೀಸ್ ಠಾಣೆಗೆ ತೆರಳಿ 'ಪುಷ್ಪ'-2 ನಟ ವಿಚಾರಣೆಗೆ ಹಾಜರಾಗಿದ್ದರು.
ಡಿಸೆಂಬರ್ 4ರಂದು ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ 'ಪುಷ್ಪ'-2 ಪ್ರೀಮಿಯರ್ ಶೋ ನಡೆದಿತ್ತು. ಅಂದು ಪ್ರೇಕ್ಷಕರ ಜೊತೆ ಸಿನಿಮಾ ನೋಡಲು ಫ್ಯಾಮಿಲಿ ಜೊತೆ ಅಲ್ಲು ಅರ್ಜುನ್ ಅಲ್ಲಿಗೆ ತೆರಳಿದ್ದರು. ಈ ವೇಳೆ ಅಭಿಮಾನಿಗಳ ತಳ್ಳಾಟ ಹೆಚ್ಚಾಗಿ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆಕೆಯ ಮಗ ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಟ ಅಲ್ಲು ಅರ್ಜುನ್ ಬೇಜವಾಬ್ದಾರಿಯಿಂದಲೇ ಈ ಘಟನೆ ನಡೆಯಿತು ಎಂದು ಕೆಲವರು ಆರೋಪಿಸುತ್ತಿದ್ದಾರೆ. ಪೊಲೀಸರು ಕೂಡ ಇದೇ ವಾದ ಮುಂದಿಟ್ಟಿದ್ದಾರೆ. ಪ್ರಕರಣದಲ್ಲಿ ನಟ ಅರ್ಜುನ್ ಎ11 ಆರೋಪಿ ಆಗಿದ್ದಾರೆ. ಇನ್ನು ಜೈಲಿಗೆ ಹೋಗಿ ಬಂದ ಬಳಿಕ ನಟನ ನಿವಾಸಕ್ಕೆ ಸಾಕಷ್ಟು ಸೆಲೆಬ್ರೆಟಿಗಳು ಬಂದಿದ್ದರು. ಅಲ್ಲು ಅರ್ಜುನ್ ಭೇಟಿ ಮಾಡಿ ಧೈರ್ಯ ತುಂಬಿದ್ದರು. ಈ ಬಗ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬೇಸ ವ್ಯಕ್ತಪಡಿಸಿದ್ದರು.
ಹೈದರಾಬಾಸ್ ಜೂಬಿಲಿ ಹಿಲ್ಸ್ನಲ್ಲಿ ಅಲ್ಲು ಅರ್ಜುನ್ ನಿವಾಸ ಇದೆ. ಕಳೆದ 15 ದಿನಗಳಿಂದ ಈ ನಿವಾಸ ಎಲ್ಲರ ಗಮನ ಸೆಳೆಯುತ್ತಿದೆ. ಅಲ್ಲು ಅರ್ಜುನ್ ಮನೆಗೆ ಯಾರು ಬರುತ್ತಾರೆ? ಯಾರು ಹೋಗುತ್ತಾರೆ? ಮನೆಯ ಮುಂಭಾಗದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಅಲ್ಲು ಅರ್ಜುನ್ ಹೊಸ ತಂತ್ರದ ಮೊರೆ ಹೋಗಿದ್ದಾರೆ.
ಇತ್ತೀಚೆಗೆ ಅಲ್ಲು ಅರ್ಜುನ್ ಮನೆ ಮುಂದೆ ಕೆಲವರು ಪ್ರತಿಭಟನೆ ನಡೆಸಿದ್ದರು. ಮೃತ ರೇವತಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದರು. ಈ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದ ಘಟನೆ ಕೂಡ ನಡೆದಿತ್ತು. ಓಯು ಜಎಸಿ ಸಂಘಟನೆಯ ಸದಸ್ಯರು ಪ್ರತಿಭಟನೆಗೆ ಮುಂದಾಗ ಭದ್ರತಾ ಸಿಬ್ಬಂದಿ ತಡೆದಿದ್ದರು. ಕೂಡಲೇ ರೊಚ್ಚಿಗೆದ್ದ ಕೆಲ ಪ್ರತಿಭಟನಾಕಾರರು ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಿದ್ದರು.
ಒಟ್ಟಾರೆ ಈಗ ಅಲ್ಲು ಅರ್ಜುನ್ ನಿವಾಸ ಮೇಲೆ ಕ್ಯಾಮರಾಗಳು ಫೋಕಸ್ ಆಗಿದೆ. ಸಾಕಷ್ಟು ಜನ ಅಭಿಮಾನಿಗಳು ಮೊಬೈಲ್ ಹಿಡಿದು ಮನೆ ಮುಂದೆ ಸುತ್ತಾಡುತ್ತಿದ್ದಾರೆ. ಅದೇ ಕಾರಣಕ್ಕೆ ಮನೆ ಸುತ್ತಾ ಶಾಮಿಯಾನ ಮಾದರಿಯಲ್ಲಿ ಟಾರ್ಪಾಲ್ ಹಾಕಿಸಲಾಗಿದೆ. ಹಿಂದೆ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ವೇಳೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಪರದೆ ಹಾಕಲಾಗಿತ್ತು. ಸದ್ಯ ದರ್ಶನ್ ಜೈಲಿನಿಂದ ಬಿಡುಗಡೆ ಆಗಿ ತಮ್ಮ ಮೈಸೂರಿನ ಫಾರ್ಮ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಸದ್ಯ ಫಾರ್ಮ್ ಹೌಸ್ ಒಳಗಿನ ಯಾವುದೇ ದೃಶ್ಯ ಕಾಣಬಾರದು ಎಂದು ಗೇಟ್ ಸುತ್ತಾ ಕೂಡ ಟಾರ್ಪಾಲ್ ಹಾಕಿಸಲಾಗಿದೆ. ಅಂದು ಅನ್ನಪೂರ್ಣೇಶ್ವರಿ ಪೊಲೀಸರು ಠಾಣೆ ಸುತ್ತಾ ಶಾಮಿಯಾನ ಹಾಕಿಸಿದಂತೆ ದರ್ಶನ್ ಫಾರ್ಮ್ಹೌಸ್ ಅನ್ನು ಟಾರ್ಪಾಲ್ ಆಗಿ ಮುಚ್ಚಲಾಗಿದೆ. ಇದೀಗ ಇದೇ ತಂತ್ರವನ್ನು ನಟ ಅಲ್ಲು ಅರ್ಜುನ್ ಬಳಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ನಟ ಅಲ್ಲು ಅರ್ಜುನ್ಗೆ ನೋಟಿಸ್ ನೀಡಿ ಇಂದು ವಿಚಾರಣೆಗೆ ಕರೆಸಲಾಗಿತ್ತು. ವಕೀಲರ ಜೊತೆ ಠಾಣೆಗೆ ತೆರಳಿದ್ದ ನಟ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಂದು ತಾವು ಚಿತ್ರಮಂದಿರದ ಗೇಟ್ ಪ್ರವೇಶಿಸಿದ ಕ್ಷಣದಿಂದ ಹೊರಗೆ ಬರುವವರೆಗೂ ಏನೆಲ್ಲಾ ಆಯಿತು ಎಂದು ವಿವರಿಸಿದ್ದಾರೆ. 3 ಗಂಟೆಗೂ ಹೆಚ್ಚು ಸಮಯ ವಿಚಾರಣೆ ಮುಗಿಸಿ ಅಲ್ಲು ಅರ್ಜುನ್ ತಂದೆ ಜೊತೆ ಮನೆಗೆ ವಾಪಸ್ ಆಗಿದ್ದಾರೆ. ಅಷ್ಟರಲ್ಲಿ ಮನೆಗೆ ಸಿಬ್ಬಂದಿ ಟಾರ್ಪಾಲ್ ಹಾಕಿದ್ದಾರೆ.


Click it and Unblock the Notifications











