ಅಯೋಧ್ಯೆ ರಾಮಮಂದಿರಕ್ಕೆ ತೆಲುಗು ನಟ ಪ್ರಭಾಸ್ 50 ಕೋಟಿ ರೂ. ದೇಣಿಗೆ?
ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಬಹಳ ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೀತಿದೆ. ಈಗಾಗಲೇ ಅಲ್ಲಿ ಸಾಕಷ್ಟು ಪೂಜೆಗಳು ಶುರುವಾಗಿದೆ. ಸೋಮವಾರ(ಜನವರಿ 22) ರಾಮಮಂದಿರ ಉದ್ಘಾಟನೆ ನಡೆಯಲಿದೆ.
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಾಕಷ್ಟ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಸಾಕಷ್ಟು ಜನ ರಾಜಕೀಯ ಮುಖಂಡರು, ಸಿನಿಮಾ ತಾರೆಯರು, ಉದ್ಯಮಿಗಳಿಗೆ ಈಗಾಗಲೇ ಆಮಂತ್ರಣ ಲಭಿಸಿದೆ. 7 ಸಾವಿರಕ್ಕೂ ಅಧಿಕ ಅತಿಥಿಗಳಿಗೆ ಆಹ್ವಾನ ನೀಡಲಾಗಿದ್ದು ಇನ್ನು ಸಾಕಷ್ಟು ಜನ ಸೇರುವ ನಿರೀಕ್ಷೆಯಿದೆ. ಅಂದಹಾಗೆ ಸಾಕಷ್ಟು ಭಕ್ತರು ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಇದೀಗ ತೆಲುಗು ನಟ ಪ್ರಭಾಸ್ ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ಟಾಲಿವುಡ್ನಲ್ಲಿ ಇದೇ ವಿಚಾರ ಭಾರೀ ಸದ್ದು ಮಾಡ್ತಿದೆ. ನಟ ಪ್ರಭಾಸ್ ಅಯೋಧ್ಯೆ ರಾಮಮಂದಿರಕ್ಕೆ ಬರೋಬ್ಬರಿ 20 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎನ್ನುವ ವದಂತಿ ಹರಡಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಮತ್ತೆ ಕೆಲವರು 20 ಕೋಟಿ ರೂ. ಅಲ್ಲ, 50 ಕೋಟಿ ರೂ. ಎನ್ನುತ್ತಿದ್ದಾರೆ.
ಯೂಟ್ಯೂಬ್ ವಾಹಿನಿಯೊಂದಕ್ಕೆ ಪ್ರಭಾಸ್ ಸೋಮವಾರ ಭಕ್ತರಿಗೆ ಪ್ರಸಾದ ವಿತರಿಸಲು 50 ಕೋಟಿ ರೂ. ವ್ಯಯಿಸುತ್ತಾರೆ ಎಂದು ಹೇಳಿದ್ದು ಆ ವಿಡಿಯೋ ವೈರಲ್ ಆಗುತ್ತಿದೆ. ರಾಮಮಂದಿರ ಲೋಕಾರ್ಪಣೆ ದಿನ 300 ಜಾಗಗಳಲ್ಲಿ ಭಕ್ತಿರಿಗೆ ಪ್ರಸಾದ ವಿತರಿಸುವ ಪ್ರಯತ್ನ ನಡೆಯುತ್ತದೆ. ಅದಕ್ಕೆ ತಗುಲುವ ವೆಚ್ಚವನ್ನು ಭರಿಸಲು ತೆಲುಗು ನಟ ಪ್ರಭಾಸ್ ಮುಂದೆ ಬಂದಿದ್ದಾರೆ. ಬರೋಬ್ಬರಿ 50 ಕೋಟಿ ರೂ. ವ್ಯಯಿಸುತ್ತಿದ್ದಾರೆ ಎಂದು ಆ ವಿಡಿಯೋದಲ್ಲಿ ಹೇಳಲಾಗಿದೆ.

ಕಳೆದ ವರ್ಷ ಪ್ರಭಾಸ್ ನಟಿಸಿದ 'ಆದಿಪುರುಷ್' ಸಿನಿಮಾ ಭಾರೀ ಸದ್ದು ಮಾಡಿತ್ತು. ಭಾರೀ ಟೀಕೆಗೆ ಗುರಿಯಾಗಿ ವಿವಾದ ಸೃಷ್ಟಿಸಿತ್ತು. ಚಿತ್ರದಲ್ಲಿ ರಾಮಾಯಣದ ಪಾತ್ರಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ಬಾಹುಬಲಿ ಪ್ರಭಾಸ್ ನಟಿಸಿದ್ದರು. ಸಿನಿಮಾ ಬಗ್ಗೆ ಟೀಕೆ ವ್ಯಕ್ತವಾದರೂ ಪ್ರಭಾಸ್ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
'ಆದಿಪುರುಷ್' ಸಿನಿಮಾ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಪ್ರಭಾಸ್ ಈಗ ರಾಮಮಂದಿರಕ್ಕೆ ದೇಣಿಗೆ ನೀಡುತ್ತಿದ್ದಾರೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಇದೇ ವಿಚಾರದ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಪ್ರಭಾಸ್ ರಾಮಮಂದಿರಕ್ಕೆ 20 ಕೋಟಿ ರೂ. ಆಗಲಿ 50 ಕೋಟಿ ರೂ. ಆಗಲಿ ದೇಣಿಗೆ ನೀಡಿದ್ದಾರೆ ಎನ್ನುವುದು ಕೇವಲ ವದಂತಿ. ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರಭಾಸ್ ಆಪ್ತರೇ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.
ಇನ್ನು ಟಾಲಿವುಡ್ನಲ್ಲಿ ಮೆಗಾಸ್ಟಾರ್ ಚಿರಂಜೀವಿ, ಪ್ರಭಾಸ್ ಸೇರದಂತೆ ಹಲವರನ್ನು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಬಾಲಿವುಡ್ನಿಂದ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ರಣ್ಬೀರ್ ಕಪೂರ್, ಅಜಯ್ ದೇವಗನ್, ಸ್ಯಾಂಡಲ್ವುಡ್ನಿಂದ ಯಶ್, ರಿಷಬ್ ಶೆಟ್ಟಿ, ಕಾಲಿವುಡ್ನಿಂದ ರಜನಿಕಾಂತ್, ಧನುಷ್ ಸೇರಿದಂತೆ ಸಾಕಷ್ಟು ಸಿನಿಮಾ ತಾರೆಯರಿಗೆ ಆಮಂತ್ರಣ ಸಿಕ್ಕಿದೆ. ಕೆಲವರು ಭಾಗಿ ಆಗಲು ಉತ್ಸುಕರಾಗಿದ್ದು ಮತ್ತೆ ಕೆಲವರು ಕಾರಣಾಂತರಗಳಿಂದ ಹೋಗುತ್ತಿಲ್ಲ.
ಸದ್ಯ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಯಾಗಿ ಸಕ್ಸಸ್ ಕಂಡಿದೆ. 'ದಿ ರಾಜಾಸಾಬ್', 'ಕಲ್ಕಿ', 'ಸ್ಪಿರಿಟ್', 'ಸಲಾರ್-2' ಹೀಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.


Click it and Unblock the Notifications











