ನಿರ್ದೇಶಕ ಎಸ್. ಎಸ್ ರಾಜಮೌಳಿ ಶಾಪದಿಂದ ಬಚಾವಾದ್ನಾ 'ದೇವರ'?
ಬಹುನಿರೀಕ್ಷಿತ 'ದೇವರ' ಸಿನಿಮಾ ತೆರೆಗಪ್ಪಳಿಸಿದೆ. ಯಂಗ್ ಟೈಗರ್ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಕೆಲವರಿಗೆ ಅದ್ಭುತ ಎನಿಸಿದರೆ ಮತ್ತೆ ಕೆಲವರಿಗೆ ಓಕೆ ಓಕೆ ಎನಿಸಿದೆ. ಕೆಲವರು ಚೆನ್ನಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸಿನಿಮಾ ಬಿಡುಗಡೆ ಆಗಿದೆ. ಕನ್ನಡಕ್ಕೂ ಡಬ್ ಆಗಿದೆ. ಬೆಂಗಳೂರಿನಲ್ಲಿ 40ಕ್ಕೂ ಅಧಿಕ ಕನ್ನಡ ಶೋಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಬೆಂಗಳೂರಿನಲ್ಲಿ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿತ್ತು. ಮಧ್ಯರಾತ್ರಿಯಿಂದಲೇ ಕೆಲವೆಡೆ ಸಿನಿಮಾ ಪ್ರದರ್ಶನ ಆರಂಭವಾಯಿತು. ತಾರಕ್ ಅಭಿಮಾನಿಗಳಂತೂ ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ.

'ಅರವಿಂದ ಸಮೇತ' ಬಳಿಕ ಸೋಲೊ ಹೀರೊ ಆಗಿ ಜ್ಯೂ.ಎನ್ಟಿಆರ್ ನಟಿಸಿದ್ದ ಯಾವುದೇ ಸಿನಿಮಾ ಬಂದಿರಲಿಲ್ಲ. ಅತ್ತ ಆಚಾರ್ಯ ರೀತಿಯ ಫ್ಲಾಪ್ ಸಿನಿಮಾ ಕೊಟ್ಟು ಕೊರಟಾಲ ಶಿವ ಸಂಕಷ್ಟಕ್ಕೆ ಸಿಲುಕಿದ್ದರು. ಹಾಗಾಗಿ ಎಲ್ಲರಿಗೂ ದೊಡ್ಡದೊಂಡು ಬ್ರೇಕ್ ಬೇಕಿತ್ತು. ಆದರೆ ರಾಜಮೌಳಿ ನಿರ್ದೇಶನದ 'RRR' ಬಳಿಕ 'ದೇವರ' ಸಿನಿಮಾ ತೆರೆಗೆ ಬಂದಿದೆ. ಇದೇ ಕಾರಣಕ್ಕೆ ತಾರಕ್ ಅಭಿಮಾನಿಗಳಿಗೆ ಆತಂಕ ಶುರುವಾಗಿತ್ತು.
ರಾಜಮೌಳಿ ಕಾರಣಕ್ಕೆ 'ದೇವರ' ಸಿನಿಮಾ ಸೋಲುತ್ತದೆ ಎನ್ನುವ ವಿಚಿತ್ರ ಚರ್ಚೆ ಮುನ್ನಲೆಗೆ ಬಂದಿತ್ತು. ಅದಕ್ಕೆ ಕಾರಣವೂ ಇದೆ. ರಾಜಮೌಳಿ ನಿರ್ದೇಶನದ ಎಲ್ಲಾ ಸಿನಿಮಾಗಳು ಹಿಟ್ ಆಗಿದೆ. ತಮ್ಮೊಟ್ಟಿಗೆ ಕೆಲಸ ಮಾಡಿದ ಎಲ್ಲಾ ನಟರಿಗೂ ಜಕ್ಕಣ್ಣ ಬ್ರೇಕ್ ಕೊಟ್ಟಿದ್ದಾರೆ. ಆದರೆ ಅವರು ನಟಿಸುವ ಮುಂದಿನ ಚಿತ್ರ ಸೋಲುತ್ತಾ ಬಂದಿದೆ. ಇದಕ್ಕೆ ಸಾಕಷ್ಟು ಉದಾಹರಣೆ ಕಣ್ಣಮುಂದಿದೆ. ಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ತಾರಕ್ ನಟಿಸಿದ್ದರು. ನಂತರ 'ದೇವರ' ಬರ್ತಿದೆ ಇದು ಗೆಲ್ಲುತ್ತಾ? ಎನ್ನುವ ಅನುಮಾನ ಕೆಲವರನ್ನು ಕಾಡ್ತಿತ್ತು.
ರಾಜಮೌಳಿ ಅದ್ಭುತ ಸಿನಿಮಾಗಳನ್ನು ಮಾಡುತ್ತಾ ಬರ್ತಿದ್ದಾರೆ. ತಮ್ಮ ಚಿತ್ರದ ಹೀರೊ ಬಹಳ ವಿಭಿನ್ನವಾಗಿ ತೆರೆಮೇಲೆ ತೋರಿಸಿ ಗೆಲ್ಲುತ್ತಾರೆ. ಹಾಗಾಗಿ ಸಹಜವಾಗಿಯೇ ಆ ನಟನ ಮುಂದಿನ ಸಿನಿಮಾ ನಿರೀಕ್ಷೆ ಹುಟ್ಟಾಕುತ್ತದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಬರದೇ ಇದ್ದರೆ ಸೋಲುತ್ತದೆ. ಆದರೂ ಪ್ರತಿಬಾರಿ ಇದೇ ರೀತಿ ಯಾಕೆ? ಆಗುತ್ತದೆ ಎಂದು ಕೆಲವು ತಲೆ ಕೆಡಿಸಿಕೊಂಡಿದ್ದರು.
ಸ್ವತಃ ತಾರಕ್ ಆರಂಭದ ದಿನಗಳಲ್ಲಿ ಮೌಳಿ ಜೊತೆ 'ಸ್ಟೂಡೆಂಟ್ ನಂ.1' ಸಿನಿಮಾ ಮಾಡಿ ಗೆದ್ದಿದ್ದರು. ಬಳಿಕ 'ಸುಬ್ಬು' ಎನ್ನುವ ಫ್ಲಾಫ್ ಸಿನಿಮಾ ಕೊಟ್ಟಿದ್ದರು. 'ಸಿಂಹಾದ್ರಿ' ಬಳಿಕ 'ಆಂಧ್ರವಾಲ' ಚಿತ್ರ ಸೋತಿತ್ತು. 'ಯಮದೊಂಗ' ಬಳಿಕ 'ಕಂತ್ರಿ' ಸಿನಿಮಾ ಹೀನಾಯವಾಗಿ ನೆಲ ಕಚ್ಚಿತ್ತು. ರಾಮ್ಚರಣ್ ನಟನೆಯ 'ಮಗಧೀರ' ಬಳಿಕ 'ಆರೆಂಜ್' ಚಿತ್ರ ಬಂದು ನಷ್ಟ ಅನುಭವಿಸಿತ್ತು.
ರಾಜಮೌಳಿ ಕಾಂಬಿನೇಷನ್ನಲ್ಲಿ 'ಛತ್ರಪತಿ' ಸಿನಿಮಾ ಪ್ರಭಾಸ್ ಸಕ್ಸಸ್ ಕಂಡರು. ಬಳಿಕ ಬಂದ 'ಪೌರ್ಣಮಿ' ಸೋತಿತ್ತು. 'ಬಾಹುಬಲಿ' ಸರಣಿ ನಂತರ ಒಂದು ದೊಡ್ಡ ಹಿಟ್ ಕೊಡಲು 'ಸಲಾರ್'ವರೆಗೂ ಕಾಯಬೇಕಾಯಿತು. ಇನ್ನು 'ವಿಕ್ರಮಾರ್ಕುಡು' ಬಳಿಕ 'ಖತರ್ನಾಕ್' ಚಿತ್ರದಲ್ಲಿ ನಟಿಸಿ ರವಿತೇಜಾ ಸಹ ಸೋತಿದ್ದರು. ಹೀಗೆ ಮೌಳಿ ಸಿನಿಮಾಗಳಲ್ಲಿ ನಟಿಸಿದ ಬಳಿಕ ಹೀರೊಗಳು ನಟಿಸಿದ ಸಿನಿಮಾ ಸೋತಿದೆ ಎನ್ನುವುದಕ್ಕೆ ದೊಡ್ಡ ಪರಂಪರೆ ಇದೆ.
ಸದ್ಯ 'ದೇವರ' ಚಿತ್ರದ ಬಗ್ಗೆಯೂ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಕಮರ್ಷಿಯಲ್ ಸಿನಿಮಾ ಆಗಿ ಬಹುತೇಕ ಗೆದ್ದಿದೆ ಎನ್ನಲಾಗ್ತಿದೆ. ಮೊದಲ ದಿನ ಒಳ್ಳೆ ಓಪನಿಂಗ್ ಸಿಗುವ ನಿರೀಕ್ಷೆಯಿದೆ. ಇನ್ನೆರಡು ದಿನಗಳಲ್ಲಿ ಸಿನಿಮಾ ಗೆಲ್ಲುತ್ತಾ? ಸೋಲುತ್ತಾ? ಎನ್ನುವುದು ನಿರ್ಧಾರವಾಗಲಿದೆ. ಫ್ಯಾಮಿಲಿ ಆಡಿಯನ್ಸ್ ಬಂದರೆ ಸಿನಿಮಾ ಗೆಲ್ಲುವ ಸಾಧ್ಯತೆಯಿದೆ. ಸೋಮವಾರದಿಂದ ಅಸಲಿ ಆಟ ಶುರುವಾಗಲಿದೆ. ದಸರಾ ವೀಕೆಂಡ್ವರೆಗೆ ಸಿನಿಮಾ ಪ್ರೇಕ್ಷಕರನ್ನು ಸೆಳೆದರೆ ಗೆಲುವಿನ ದಡ ಸೇರಬಹುದು.
ಇನ್ನು ಈ ರಾಜಮೌಳಿ ಮಿಥ್ ಬಗ್ಗೆ ಸ್ವತಃ ಅವರ ಪುತ್ರ ಕಾರ್ತಿಕೇಯ ಟ್ವೀಟ್ ಮಾಡಿದ್ದಾರೆ. "23 ವರ್ಷಗಳ ಬಳಿಕ ಆ ಮಿಥ್ ಮುರಿದಂತಾಗಿದೆ. ಇದನ್ನು ಆರಂಭಿಸಿದ ಅದೇ ತಾರಕ್ ಇದನ್ನು ಮುರಿದಿದ್ದಾರೆ. ಅವರನ್ನು ಹತ್ತಿರದಿಂದ ನೋಡುತ್ತಾ ಬೆಳೆದವನು ನಾನು. ತೆಲುಗು ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. 'ದೇವರ' ಸಿನಿಮಾ ನೋಡಿ ಮಾತುಗಳೇ ಬರುತ್ತಿಲ್ಲ. ಸಿನಿಮಾ ನೋಡುವಾಗ ಕಿರುಚಿ ಕಿರುಚಿ ಸಾಕಾಯ್ತು" ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ನಿರ್ದೇಶಕ ರಾಜಮೌಳಿ ಕೂಡ ಫ್ಯಾಮಿಲಿ ಸಮೇತ 'ದೇವರ' ಸಿನಿಮಾ ನೋಡಿದ್ದಾರೆ. ಸದ್ಯ ಮಹೇಶ್ ಬಾಬು ಕಾಂಬಿನೇಷನ್ನಲ್ಲಿ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ.


Click it and Unblock the Notifications











