'ಬಾಹುಬಲಿ ದಿ ಎಪಿಕ್' ಚಿತ್ರದಲ್ಲಿ ಸುದೀಪ್ ದೃಶ್ಯಕ್ಕೆ ಕತ್ತರಿ ಬಿತ್ತಾ? ರಾಜಮೌಳಿ ಹೇಳಿದ್ದಿಷ್ಟು
ಈ ವಾರ ಮತ್ತೆ ತೆರೆಮೇಲೆ 'ಬಾಹುಬಲಿ' ಆರ್ಭಟ ಶುರುವಾಗ್ತಿದೆ. ದಶಕದ ಹಿಂದೆ ಬಂದಿದ್ದ 'ಬಾಹುಬಲಿ' ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ ಒಂದೇ ಸಿನಿಮಾ ಆಗಿ ಬಿಡುಗಡೆ ಮಾಡುತ್ತಿದ್ದಾರೆ. ಒಂದಷ್ಟು ದೃಶ್ಯ, ಹಾಡುಗಳು ಕೈಬಿಟ್ಟು ಹೊಸ ಸನ್ನಿವೇಶಗಳನ್ನು ಸೇರಿಸಲಾಗ್ತಿದೆ.
ಸ್ವತಃ ನಿರ್ದೇಶಕ ರಾಜಮೌಳಿ ಮುಂದೆ ನಿಂತು ಚಿತ್ರಗಳನ್ನು ಎಡಿಟ್ ಮಾಡಿಸಿದ್ದಾರೆ. ಎರಡೂ ಸಿನಿಮಾಗಳು ಸೇರಿ ಒಟ್ಟು 5 ಗಂಟೆ 27 ನಿಮಿಷ ಕಾಲಾವಧಿ ಇತ್ತು. ಅದನ್ನು 3 ಗಂಟೆ 40 ನಿಮಿಷಕ್ಕೆ ಇಳಿಸಲಾಗಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಪ್ರಭಾಸ್, ರಾಜಮೌಳಿ ಹಾಗೂ ರಾಣಾ ಸೇರಿ 'ಬಾಹುಬಲಿ ದಿ ಎಪಿಕ್' ಸಿನಿಮಾ ಪ್ರಮೋಷನ್ ಸಹ ಮಾಡ್ತಿದ್ದಾರೆ.

ಹಳೇ ಸೂಪರ್ ಹಿಟ್ ಸಿನಿಮಾಗಳನ್ನು ಹೊಸ ತಂತ್ರಜ್ಞಾನದಲ್ಲಿ ಮತ್ತೆ ತೆರೆಗೆ ತರಲಾಗುತ್ತಿದೆ. ಕಳೆದ 15 ವರ್ಷಗಳಲ್ಲಿ ಬಂದ ಸಿನಿಮಾಗಳನ್ನು ಯಥಾವತ್ ಬಿಡುಗಡೆ ಮಾಡುತ್ತಿದ್ದಾರೆ. ಆದರೆ 2 ಭಾಗಗಳಾಗಿ ಬಂದಿದ್ದ ಚಿತ್ರಗಳನ್ನು ಒಟ್ಟಿಗೆ ಸೇರಿಸಿ ಕಥೆಯನ್ನು ಹಾಳು ಮಾಡದೇ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕಟ್ಟಿಕೊಡುವ ಪ್ರಯತ್ನ 'ಬಾಹುಬಲಿ ದಿ ಎಪಿಕ್' ಚಿತ್ರದಲ್ಲಿ ನಡೀತಿದೆ. ಪ್ರಭಾಸ್, ರಾಣಾ, ರಾಜಮೌಳಿ ಸಂದರ್ಶನದಲ್ಲಿ ಮಾತನಾಡಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮತ್ತೆ 10 ವರ್ಷಗಳ ಹಿಂದೆ ಹೋಗಿ ಬಾಹುಬಲಿ ಸರಣಿ ಸಿನಿಮಾಗಳ ಮೇಕಿಂಗ್ ದಿನಗಳನ್ನು ಮೆಲುಕು ಹಾಕಿದ್ದಾರೆ. ಇನ್ನು ಯಾವೆಲ್ಲಾ ಸನ್ನಿವೇಶಗಳನ್ನು ಎಡಿಟ್ ಮಾಡಿ ಕತ್ತರಿಸಿದ್ದೇವೆ ಎನ್ನುವುದನ್ನು ಜಕ್ಕಣ್ಣ ಬಹಿರಂಗಪಡಿಸಿದ್ದಾರೆ. ಶಿವುಡು ಹಾಗೂ ಆವಂತಿಕಾ ಲವ್ ಸ್ಟೋರಿ ಸನ್ನಿವೇಶಗಳನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದಾಗಿ ಹೇಳಿದ್ದಾರೆ. ಹೆಚ್ಚು ಕಮ್ಮಿ 2 ಗಂಟೆ ಕಾಲಾವಧಿ ದೃಶ್ಯಗಳನ್ನು ತೆಗೆದು ಹಾಕಲಾಗಿದೆ.
ಶಿವುಡು, ಆವಂತಿಕಾ ಲವ್ ಸ್ಟೋರಿ ಜೊತೆಗೆ 'ಪಚ್ಚಬೊಟ್ಟು', 'ಕನ್ನ ನಿದಿರಿಂಚರಾ', 'ಇರುಕ್ಕು ಪೋ' ಹಾಡುಗಳಿಗೆ ಕತ್ತರಿ ಹಾಕಿರುವುದಾಗಿ ಜಕ್ಕಣ್ಣ ಹೇಳಿದ್ದಾರೆ. ಜೊತೆಗೆ ವಾರ್ ಎಪಿಸೋಡ್ಗಳಲ್ಲಿ ಒಂದಷ್ಟು ದೃಶ್ಯಗಳನ್ನು ಟ್ರಿಮ್ ಮಾಡಿದ್ದೀವಿ ಎಂದಿದ್ದಾರೆ. ಕಥೆ ಹೇಳುವಂತಹ ಸನ್ನಿವೇಶಗಳು ಮಾತ್ರ ಇವೆ. ಎಮೋಷನ್, ಹೈ ಮೊಮೆಂಟ್ಸ್ ಎಲ್ಲಾ ಇರುತ್ತದೆ ಎಂದು ತಿಳಿಸಿದ್ದಾರೆ.
'ಬಾಹುಬಲಿ ದಿ ಬಿಗಿನಿಂಗ್' ಚಿತ್ರದಲ್ಲಿ ಅಸ್ಲಾಂ ಖಾನ್ ಆಗಿ ಕಿಚ್ಚು ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿದ್ದು ಗೊತ್ತೇಯಿದೆ. ಆ ದೃಶ್ಯ ಇರುತ್ತಾ ಇರಲ್ವಾ? ಎಂದು ಕಿಚ್ಚ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಇಡೀ ಬಾಹುಬಲಿ ಸರಣಿಯ ಮೊದಲ ದೃಶ್ಯ ಅದಾಗಿತ್ತು. ಅರೇಬಿಯನ್ ಆಯುಧ ವ್ಯಾಪಾರಿ ಅಸ್ಲಾಂ ಖಾನ್(ಸುದೀಪ್) ಬಂದು ಕಟ್ಟಪ್ಪ(ಸತ್ಯರಾಜ್) ನನ್ನು ಭೇಟಿಯಾಗುವ ಸನ್ನಿವೇಶ. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಕಥೆಯ ನಿರೂಪಣೆಯನ್ನು ಆರಂಭಿಸಲು ರಾಜಮೌಳಿ ಆ ದೃಶ್ಯವನ್ನು ಬಳಸಿಕೊಂಡಿದ್ದರು. ಆದರೆ ಬಳಿಕ ಅಸ್ಲಾಂ ಖಾನ್ ಪಾತ್ರ ಸರಣಿಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ನಿನಗೆ ಯಾವುದೇ ಸಹಾಯ ಬೇಕಿದ್ದರೂ ಒಬ್ಬ ಪ್ರಾಣಮಿತ್ರ ಇದ್ದಾನೆ ಎನ್ನುವುದನ್ನು ಮರೆಯಬೇಡ ಎಂದು ಅಸ್ಲಾಂ ಖಾನ್ ಹೇಳಿರುತ್ತಾನೆ. ಹಾಗಾಗಿ 'ಬಾಹುಬಲಿ ದಿ ಕನ್ಕ್ಲೂಷನ್' ಚಿತ್ರದಲ್ಲಿ ಸುದೀಪ್ ಇರ್ತಾರೆ ಎಂದು ಕೆಲವರು ಭಾವಿಸಿದ್ದರು. ಆದರೆ ಅದು ನಿಜವಾಗಲಿಲ್ಲ. ಇದೀಗ 'ಬಾಹುಬಲಿ ದಿ ಎಪಿಕ್' ಚಿತ್ರದಲ್ಲಿ ಈ ಸನ್ನಿವೇಶ ಇರುತ್ತಾ? ಎನ್ನುವ ಅನುಮಾನ ಮೂಡಿದೆ.
ಮೊದಲಿಗೆ ಒಂದೇ ಚಿತ್ರದಲ್ಲಿ 'ಬಾಹುಬಲಿ' ಕತೆ ಕಟ್ಟಿಕೊಡಲು ರಾಜಮೌಳಿ ಮನಸ್ಸು ಮಾಡಿದ್ದರು. ಆದರೆ ಸಿನಿಮಾ ಮಾಡ್ತಾ ಮಾಡ್ತಾ ರನ್ಟೈಮ್ ಹೆಚ್ಚಾಗಿತ್ತು. ಎಲ್ಲಾ ಪಾತ್ರಗಳನ್ನು ಪರಿಚಯಿಸಲು ಹಿನ್ನೆಲೆಯನ್ನು ಕಟ್ಟಿಕೊಡಲು ಒಂದಷ್ಟು ಸನ್ನಿವೇಶಗಳನ್ನು ಸೇರಿಸಲು ಬಯಸಿದರು. ಅದೆಲ್ಲವೂ ಚೆನ್ನಾಗಿದೆ ಎಂದಾಗ ಯಾವುದನ್ನು ಇಟ್ಟುಕೊಳ್ಳುವುದು, ಯಾವುದನ್ನು ಕತ್ತರಿಸುವುದು ಎನ್ನುವ ಗೊಂದಲಕ್ಕೆ ಚಿತ್ರತಂಡ ಬಿದ್ದಿತ್ತು. ಆಗ ಕಥೆಯನ್ನು ಎರಡು ಭಾಗಗಳಾಗಿ ಹೇಳುವ ಲೆಕ್ಕಾಚಾರ ಶುರುವಾಗಿತ್ತು. ಹಾಗಾಗಿ ಒಂದಷ್ಟು ಹೊಸ ಸನ್ನಿವೇಶಗಳನ್ನು ಸೇರಿಸುತ್ತಾ ಹೋಗಿ ಬಾಹುಬಲಿ ಪ್ರಪಂಚ ಸೃಷ್ಟಿಸಿದರು.
ಚಿತ್ರಿಸಿದ್ದ ಒಂದಷ್ಟು ದೃಶ್ಯಗಳನ್ನು ಕೂಡ ಕತ್ತರಿಸಿ ಎರಡು ಭಾಗಗಳಾಗಿ ಸಿನಿಮಾ ತೆರೆಗೆ ತರಲಾಗಿತ್ತು. ಆ ರೀತಿ ಕತ್ತರಿಸಿದ ಸಣ್ಣ ಸಣ್ಣ ದೃಶ್ಯವನ್ನು 'ಬಾಹುಬಲಿ ದಿ ಎಪಿಕ್' ಚಿತ್ರದಲ್ಲಿ ಸೇರಿಸಿದ್ದಾರೆ. ಆದಗೆ ಅಸ್ಲಾಂ ಖಾನ್ - ಕಟ್ಟಪ್ಪ ಭೇಟಿ ಸನ್ನಿವೇಶ ಇದ್ಯಾ? ಇಲ್ವಾ? ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಇದೇ ಶುಕ್ರವಾರ ಸಿನಿಮಾ ಬಿಡುಗಡೆ ಆಗ್ತಿದ್ದು ಎಲ್ಲಾ ಪ್ರಶ್ನೆಗಳಿಗೆ ಬ್ರೇಕ್ ಬೀಳಲಿದೆ. ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ಬಿಡುಗಡೆ ಮಾಡ್ತಿದ್ದಾರೆ. ಹಾಗಾಗಿ ಸುದೀಪ್ ದೃಶ್ಯಗಳು ಇದ್ದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ.


Click it and Unblock the Notifications











