₹700 ಕೋಟಿ ಭೂಹಗರಣದಲ್ಲಿ ಸಿಲುಕಿದ ಖ್ಯಾತ ನಾಯಕಿ, ಮಾಜಿ ಮುಖ್ಯಮಂತ್ರಿ ಕುಟುಂಬದ ಜೊತೆ ಸೇರಿ ಡೀಲ್..!
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಮೋಸ, ಸುಲಿಗೆ, ವಂಚನೆಯ ಪ್ರಕರಣದಲ್ಲಿ ಕೂಡ ಸಿಲುಕಿಕೊಳ್ಳುತ್ತಾರೆ. ಇದಕ್ಕೆ ಭಾರತೀಯ ಚಿತ್ರರಂಗದಲ್ಲಿ ರಾಶಿ ರಾಶಿ ಉದಾಹರಣೆಗಳಿವೆ. ಈ ಸಾಲಿಗೆ ಈಗ ರಿತು ಚೌಧರಿ ಕೂಡ ಸೇರಿಕೊಂಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ನೂರಲ್ಲ, ಇನ್ನೂರಲ್ಲ, ಬರೋಬ್ಬರಿ 700 ಕೋಟಿ ಭೂಹಗರಣದಲ್ಲಿ ರಿತು ಚೌಧರಿ ಹೆಸರು ಕೇಳಿ ಬಂದಿದೆ.
ಹೌದು, ತೆಲುಗು ಕಿರುತೆರೆಯಲ್ಲಿ ಪ್ರಸಾರವಾಗುವ ಜಬರದಸ್ತ್ ಕಾರ್ಯಕ್ರಮದ ಮೂಲಕ ಮನೆ ಮಾತಾದವರು ರಿತು ಚೌಧರಿ. ಈ ಕಾರ್ಯಕ್ರಮದಲ್ಲಿ ತಮ್ಮ ಅಭಿನಯದಿಂದ ಜನ ಮನ ಗೆದ್ದು, ಅಭಿಮಾನಿ ಬಳಗವನ್ನು ಸಂಪಾದಿಸಿದ ರಿತು ಆ ನಂತರ ತೆಲುಗಿನ ಕೆಲ ವೆಬ್ ಸರಣಿಗಳಲ್ಲಿ ಕೂಡ ಕಾಣಿಸಿಕೊಂಡರು. ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ತೆರೆದರು. ಈ ಮೂಲಕ ಪ್ರೇಕ್ಷಕರ ಹೃದಯಕ್ಕೆ ಇನ್ನು ಹತ್ತಿರವಾದರು. ಅತ್ಯಲ್ಪ ಅವಧಿಯಲ್ಲಿ ಕೀರ್ತಿಯ ಶಿಖರಕ್ಕೇರಿದರು.

ಇಂಥಾ ರಿತು ಚೌದರಿಯ ಹೆಸರು ಆಂಧ್ರ ಪ್ರದೇಶ ಮತ್ತು ಇಬ್ರಾಹಿಂಪಟ್ಟಣಕ್ಕೆ ಸೇರಿದ 700 ಕೋಟಿ ಆಸ್ತಿಗೆ ಸಂಬಂಧಿಸಿದ ಹಗರಣದಲ್ಲಿ ಕೇಳಿ ಬಂದಿದೆ. ಈ ಜಮೀನು ನೊಂದಣಿಯಲ್ಲಿ ಇವರ ಹೆಸರು ಇದೆ ಎನ್ನುವ ಸುದ್ದಿ ಸದ್ಯ ಆಂಧ್ರದೆಲ್ಲೆಡೆ ಸಂಚಲನ ಸೃಷ್ಟಿಸಿದೆ.
ಇನ್ನು 700 ಕೋಟಿ ಮೌಲ್ಯದ ಈ ಆಸ್ತಿಗೆ ಸಂಬಂಧಿಸಿದ ಹಗರಣದಲ್ಲಿ ಕೇವಲ ರಿತು ಚೌದರಿ ಮಾತ್ರವಲ್ಲದೇ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರ ವೈ ಎಸ್ ಸುನೀಲ್ ಮತ್ತು ಜಗನ್ ಅವರ ಪಿಎ ನಾಗೇಶ್ವರ್ ರೆಡ್ಡಿ ಅವರ ಹೆಸರು ಕೂಡ ಹೊರ ಬಿದ್ದಿದೆ. ರಿತು ಚೌಧರಿ ಅವರ ಪತಿ ಚೀಮಕುರ್ತಿ ಶ್ರೀಕಾಂತ್ ಅವರ ಹೆಸರು ಕೂಡ ಈ ಲಿಸ್ಟ್ನಲ್ಲಿದೆ. 700 ಕೋಟಿ ಮೌಲ್ಯದ ಜಮೀನು ಲಪಟಾಯಿಸಲು ಭೂ ಮಾಲೀಕರನ್ನು ಕಿಡ್ನ್ಯಾಪ್ ಮಾಡಿ ಗೋವಾದಲ್ಲಿ ಕೂಡಿ ಹಾಕಿದ್ದರು ಎನ್ನುವ ಆರೋಪ ಕೂಡ ಇದ್ದು ಈ ಭೂಹಗರಣವನ್ನು ಸಬ್ ರಿಜಿಸ್ಟ್ರಾರ್ ಧರ್ಮಸಿಂಗ್ ಸದ್ಯ ಬಯಲಿಗೆಳೆದಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ದೂರನ್ನು ಸಲ್ಲಿಸಿದ್ದಾರೆ. ಈ ಹಗರಣವನ್ನು ಆಂಧ್ರಪ್ರದೇಶದ ಸರ್ಕಾರ ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆ ಹಲವರ ವಿರುದ್ಧ ಪ್ರಕರಣದ ದಾಖಲಾಗಿದೆ ಎಂದು ವರದಿಯಾಗಿದೆ.
ಇನ್ನು ಈ ಪ್ರಕರಣದ ಕುರಿತು ರಿತು ಚೌಧರಿ ಇನ್ನೂ ಹೇಳಿಕೆಯನ್ನು ನೀಡಿಲ್ಲವಾದರೂ ರಿತು ಅವರ ಪತಿ ಶ್ರೀಕಾಂತ್ ತಮ್ಮ ಮೇಲೆ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಕುರಿತು ಮಾತನಾಡಿರುವ ಶ್ರೀಕಾಂತ್ ತಮ್ಮ ಮೇಲೆ ಬಂದ ಆರೋಪಗಳೆಲ್ಲ ಸುಳ್ಳು ಮಾಡಲಾದ ಆರೋಪಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದ್ಧಾರೆ. ನಾನು ಮೊದಲಿಂದ ನನ್ನ ಕುಟುಂಬದ ಆಸ್ತಿ ತೆರಿಗೆಯನ್ನು ಸರಿಯಾದ ಸಮಯಕ್ಕೆ ಪಾವತಿಸುತ್ತಾ ಬಂದಿರುವುದಾಗಿ ಹೇಳಿರುವ ಶ್ರೀಕಾಂತ್, ರಿತು ಚೌಧರಿ ಹೆಸರಿನಲ್ಲಿರುವ ಎಲ್ಲ ಆಸ್ತಿಗಳು ಸಂಪೂರ್ಣವಾಗಿ ನನ್ನದಾಗಿದ್ದು ನಾನು ಸ್ವಾಧೀನಪಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಯಾರಿಗೂ ನಾನು ಬೇನಾಮಿಯಲ್ಲ ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











