ಚಿತ್ರಮಂದಿರಗಳು ಬಂದ್, ಪವನ್ ಅಭಿಮಾನಿಗಳ ವಿರುದ್ಧ ಸಿಆರ್ಪಿಎಫ್ ಯೋಧರು!
ಪವನ್ ಕಲ್ಯಾಣ್ ಹಾಗೂ ಅವರ ಸಿನಿಮಾಗಳ ಮೇಲಿನ ಆಂಧ್ರದ ಜಗನ್ ಸರ್ಕಾರದ ಅಸಹಿಷ್ಣುತೆ ಮುಂದುವರೆದಿದೆ.
ಫೆಬ್ರವರಿ 25 ರಂದು ಆಂಧ್ರ ಹಾಗೂ ತೆಲಂಗಾಣ ಎರಡೂ ರಾಜ್ಯಗಳಲ್ಲಿ 'ಭೀಮ್ಲಾ ನಾಯಕ್' ಸಿನಿಮಾ ಬಿಡುಗಡೆ ಆಗಿದೆ. ಪವನ್ ಸಿನಿಮಾ ಬಿಡುಗಡೆ ಆಗಿದ್ದೇ ತಡ ಆಂಧ್ರದಲ್ಲಿ ಚಿತ್ರಮಂದಿರಗಳು ಸೂಕ್ಷ್ಮ ಪ್ರದೇಶಗಳಾಗಿ ಪರಿವರ್ತನೆಗೊಂಡಿವೆ.
ಆಂಧ್ರದಲ್ಲಿ ಚಿತ್ರಮಂದಿರಗಳ ಮೇಲೆ ಸರ್ಕಾರವು ಹಲವು ನಿಯಮ ಹೇರಿದೆ. ಟಿಕೆಟ್ ದರವನ್ನು ಧಾರುಣವಾಗಿ ಇಳಿಸಿದೆ. ನಿಯಮ ಪಾಲಿಸದ ಚಿತ್ರಮಂದಿರಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಕಳೆದ ಬಾರಿ ಪವನ್ರ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೂ ಆಂಧ್ರ ಸರ್ಕಾರ ಹೀಗೆಯೇ ಸಮಸ್ಯೆಗಳನ್ನು ಕೊಟ್ಟಿತ್ತು. ಆಗ ಪವನ್ ಅಭಿಮಾನಿಗಳು ಹಲವೆಡೆ ಚಿತ್ರಮಂದಿರಗಳ ಬಳಿ ಗಲಾಟೆ ಮಾಡಿದ್ದರು.

ಪವನ್ ಸಿನಿಮಾಕ್ಕೆ ಮತ್ತೆ ಅಡ್ಡಗಾಲು
ಈ ಬಾರಿಯೂ ಜಗನ್ ಸರ್ಕಾರ 'ಭಿಮ್ಲಾ ನಾಯಕ್' ಸಿನಿಮಾ ಬಿಡುಗಡೆಗೆ ಸಮಸ್ಯೆ ಮಾಡುತ್ತಿದೆ. ಸಿನಿಮಾದ ಬಿಡುಗಡೆ ಆಗುವುದಕ್ಕೆ ಮುನ್ನವೇ ಕೆಲವು ಚಿತ್ರಮಂದಿರಗಳನ್ನು ಬಂದ್ ಮಾಡಿಸಲಾಗಿದೆ. ಚಿತ್ರಮಂದಿರಗಳು ಹೆಚ್ಚು ಶೋಗಳನ್ನು ಹಾಕದಂತೆ, ಟಿಕೆಟ್ ದರ ಹೆಚ್ಚು ಮಾಡದಂತೆ ನೋಡಿಕೊಳ್ಳಲು ಪ್ರತ್ಯೇಕ ದಳವನ್ನು ಸೃಷ್ಟಿಸಿ ಪ್ರತಿ ಚಿತ್ರಮಂದಿರಕ್ಕೆ ಕಾವಲು ವಿಧಿಸಲಾಗಿದೆ. ಕೆಲವು ಚಿತ್ರಮಂದಿರಗಳ ಬಳಿಯಂತೂ ಸಿಆರ್ಪಿಎಫ್ ಯೋಧರನ್ನು ಬಳಸಿಕೊಂಡು ಸಂಭಾವ್ಯ ಗಲಾಟೆಗಳನ್ನು ಹತ್ತಿಕ್ಕಲಾಗಿದೆ.

ಸಮಸ್ಯೆ ಕೊಡಲೆಂದು ದಿನಕ್ಕೆ 3 ಕೋಟಿ ಖರ್ಚು!
'ಭೀಮ್ಲಾ ನಾಯಕ್' ಸಿನಿಮಾಕ್ಕೆ ಸಮಸ್ಯೆ ಕೊಡಲೆಂದು ಜಗನ್ ಸರ್ಕಾರ ಸುಮಾರು 3 ಕೋಟಿ ರುಪಾಯಿ ಖರ್ಚು ಮಾಡಿದೆ ಎನ್ನಲಾಗುತ್ತಿದೆ. ಚಿತ್ರಮಂದಿರಗಳು ನಿಯಮ ಮೀರದಂತೆ ನೋಡಿಕೊಳ್ಳುವ ದಳ, ಅದರ ಪ್ರಯಾಣ ವೆಚ್ಚ, ಸಿಆರ್ಪಿಎಫ್ ಯೋಧರ ಪ್ರಯಾಣ ಹಾಗೂ ದಿನದ ಭತ್ಯೆ, ಹೆಚ್ಚುವರಿ ಪೊಲೀಸರ ನಿಯೋಜನೆ ಭತ್ಯೆ ಇತರೆಗಳನ್ನು ಲೆಕ್ಕ ಹಾಕಿದರೆ ದಿನವೊಂದಕ್ಕೆ ಮೂರು ಕೋಟಿಗೂ ಹೆಚ್ಚು ಹಣ ಖರ್ಚಾಗುತ್ತದೆ.

ಮಾತುಕತೆ ನಡೆಸಿರುವ ಚಿರಂಜೀವಿ
ಆಂಧ್ರ ಸಿಎಂ ಜಗನ್ ಜೊತೆಗೆ ನಟ ಚಿರಂಜೀವಿ ಈಗಾಗಲೇ ಕೆಲವು ಸುತ್ತುಗಳ ಮಾತುಕತೆ ನಡೆಸಿದ್ದು, ಇಳಿಸಿರುವ ಟಿಕೆಟ್ ದರ ಏರಿಕೆ ಸೇರಿದಂತೆ ಚಿತ್ರರಂಗದ ಹಲವು ಬೇಡಿಕೆಗಳ ಈಡೇರಿಕೆಯ ಭರವಸೆಯನ್ನು ಜಗನ್ರಿಂದ ಪಡೆದು ಬಂದಿದ್ದಾರೆ. ಆದರೆ ಜಗನ್ ಸರ್ಕಾರ ಚಿತ್ರಮಂದಿರಗಳ ಕುರಿತಾಗಿ ಹೊಸ ಆದೇಶ ಹೊರಡಿಸುವ ಮುನ್ನವೇ 'ಭೀಮ್ಲಾ ನಾಯಕ್' ಬಿಡುಗಡೆ ಆಗಿ ಮತ್ತೆ 'ಚಿತ್ರರಂಗ v/s ಜಗನ್ ಸರ್ಕಾರ' ಪರಿಸ್ಥಿತಿ ನಿರ್ಮಾಣವಾಗಿದೆ.

ಮಲಯಾಳಂ ಸಿನಿಮಾ ರೀಮೇಕ್
'ಭಿಮ್ಲಾ ನಾಯಕ್' ಸಿನಿಮಾವು ಫೆಬ್ರವರಿ 25 ರಂದು ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ನಟ ರಾಣಾ ದಗ್ಗುಬಾಟಿ ಸಹ ನಟಿಸಿದ್ದಾರೆ. ಸಿನಿಮಾವು ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾ ರೀಮೇಕ್ ಆಗಿದ್ದು, ತೆಲುಗಿನಲ್ಲಿ ಹೊಸ ನಿರ್ದೇಶಕ ಸಾಗರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಚಿತ್ರಕತೆ, ಸಂಭಾಷಣೆ ಬರೆದಿರುವುದು ಪವನ್ರ ಆಪ್ತ, ಜನಪ್ರಿಯ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್. ಸಿನಿಮಾದಲ್ಲಿ ಕನ್ನಡತಿ ನಿತ್ಯಾ ಮೆನನ್ ಸಹ ನಟಿಸಿದ್ದಾರೆ.


Click it and Unblock the Notifications











