'ಜೈ ಭೀಮ್' ವಿವಾದ: ಸೂರ್ಯ, ಪತ್ನಿ ಜ್ಯೋತಿಕಾ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ
ಕಾಲಿವುಡ್ ಖ್ಯಾತ ನಟ ಸೂರ್ಯ ಅಭಿನಯಿಸಿದ್ದ 'ಜೈ ಭೀಮ್' ಸಿನಿಮಾ ಭಾರೀ ಸದ್ದು ಮಾಡಿತ್ತು. ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದ ಈ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಹಲವು ಮಂದಿ ಆಗ್ರಹಿಸಿದ್ದರು. ಸದ್ಯ ಇತ್ತೀಚಿಗೆ ತಣ್ಣಗಾಗಿದ್ದ ಈ ಸಿನಿಮಾದ ಚರ್ಚೆ ಈಗ ಮತ್ತೆ ಮುನ್ನಲೆಗೆ ಬಂದಿದೆ. ಸಿನಿಮಾದಲ್ಲಿ ನಟಿಸಿದ್ದ ಸೂರ್ಯ ಹಾಗೂ ನಿರ್ದೇಶಕ ನಿರ್ಮಾಪಕರಿಗೆ ಹೊಸ ಸಂಕಷ್ಟವೊಂದು ಎದುರಾಗಿದೆ.
'ಜೈ ಭೀಮ್' ಸಿನಿಮಾದಲ್ಲಿ ವನ್ನಿಯಾರ್ ಸಮುದಾಯವನ್ನು ತಪ್ಪಾಗಿ ತೋರಿಸಿರುವ ಆರೋಪದಡಿ ನಟ ಸೂರ್ಯ ಮತ್ತು ನಿರ್ದೇಶಕ ಟಿಜೆ ಜ್ಞಾನವೇಲ್ ಹಾಗೂ ನಿರ್ಮಾಪಕಿ ಜ್ಯೋತಿಕಾ ವಿರುದ್ದ ಎಫ್ಐಆರ್ ದಾಖಲಿಸುವಂತೆ ಚೆನ್ನೈ ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡಿದೆ.
'ಜೈ ಭೀಮ್' ಚಿತ್ರದಲ್ಲಿ ಸಂಪೂರ್ಣವಾಗಿ ವನ್ನಿಯಾರ್ ಸಮುದಾಯವನ್ನು ಬಹಳ ಕಳಪೆಯಾಗಿ ತೋರಿಸಲಾಗಿದೆ ಎಂದು ರುದ್ರ ವನ್ನಿಯಾರ್ ಸೇನಾ ಸಂಘಟನೆಯಿಂದ ಸಿನಿಮಾ ವಿರುದ್ದ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನಟ ಸೂರ್ಯ ಹಾಗೂ ಪತ್ನಿ ಜ್ಯೋತಿಕಾ ವಿರುದ್ದ ಎಫ್ಐಆರ್ ದಾಖಲಿಸುವಂತೆ ಸೂಚಿಸಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

ಚಿತ್ರದಲ್ಲಿ ವನ್ನಿಯಾರ್ ಸಮುದಾಯಕ್ಕೆ ಅವಮಾನ
ವನ್ನಿಯಾರ್ ಸಮುದಾಯವು ಧಾರ್ಮಿಕ ಆಚರಣೆಗಳನ್ನು ಬಹಳ ಕಟ್ಟುನಿಟ್ಟಿನಲ್ಲಿ ಪಾಲನೆ ಮಾಡುವ ಸಮುದಾಯವಾಗಿದೆ. ದೇವರ ಮೇಲಿನ ನಂಬಿಕೆ, ಆಚರಣೆಗಳನ್ನು ನಂಬುತ್ತವೆ. ಆದರೆ ಸಿನಿಮಾದಲ್ಲಿ ವನ್ನಿಯಾರ್ ಸಮುದಾಯವನ್ನು ಕೆಟ್ಟದಾಗಿ ತೋರಿಸಲಾಗಿದೆ. ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಲಾಗಿದೆ. ಇದರಿಂದ ಸಮಾಜದಲ್ಲಿ ನಮ್ಮ ಸಮುದಾಯಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಸಮುದಾಯದ ಅನೇಕರು ಚಿತ್ರದ ವಿರುದ್ದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಚಾರಣೆ ನಡೆಸಿದ ಕೋರ್ಟ್ FIR ದಾಖಿಸುವಂತೆ ಸೂಚನೆ
ನವೆಂಬರ್ 2021 ರಲ್ಲೇ ಚೆನ್ನೈನ ಸೈದಾಪೇಟ್ ನ್ಯಾಯಲಯದಲ್ಲಿ ವನ್ನಿಯಾರ್ ಸಮುದಾಯದವರು ಸಿನಿಮಾ ವಿರುದ್ಧ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಚಿತ್ರದಲ್ಲಿ ಹಲವು ದೃಶ್ಯಗಳಲ್ಲಿ ನಮ್ಮ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಅಲ್ಲದೆ ವನ್ನಿಯಾರ್ ಬಗ್ಗೆ ಇರುವ ಪೂರ್ವಗ್ರಹ ಪೀಡಿತದಿಂದಲೇ ಸಿನಿಮಾವನ್ನು ನಿರ್ಮಿಸಲಾಗಿದೆ. ಈ ಮೂಲಕ ಸಮುದಾಯಗಳ ನಡುವೆ ಕೋಮುಗಲಭೆಯನ್ನು ಪ್ರಚೋದಿಸುವ ಉದ್ದೇಶದಿಂದ ಈ ಸಿನಿಮಾವನ್ನು ಮಾಡಲಾಗಿದೆ ಎಂದು ಆರೋಪಿಸಿ, ವನ್ನಿಯಾರ್ ಸಮುದಾಯದ ಜನರು ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸದ್ಯ ಅರ್ಜಿಯ ವಿಚಾರಣೆಯನ್ನು ನಡೆಸಿದ ಕೋರ್ಟ್ ಅರ್ಜಿದಾರರು ವಾದವನ್ನು ಆಲಿಸಿದ ನಂತರ ನಟ ಸೂರ್ಯ, ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್ ಮೇಲೆ FIR ಹಾಕಿ, ಕಾನೂನಿನ ಪ್ರಕಾರ ತನಿಖೆ ನಡೆಸುವಂತೆ ಸೂಚಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಣೆಯನ್ನು ಮೇ 20 ರಂದು ನಡೆಸಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.

'ಜೈ ಭೀಮ್' ವಿರುದ್ಧ ವನ್ನಿಯಾರ್ ಸಮುದಾಯದ ಕಿಡಿ
2021ರ ನವೆಂಬರ್ನಲ್ಲಿ 'ಜೈ ಭೀಮ್' ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋ ಮೂಲಕ ರಿಲೀಸ್ ಆಗಿತ್ತು. ಸಿನಿಮಾದಲ್ಲಿ ಬುಡಕಟ್ಟು ಸಮುದಾಯದ ಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಕುರಿತು ತೋರಿಸಲಾಗಿದೆ. ಆದರೆ ಸಿನಿಮಾದ ಕೆಲವು ದೃಶ್ಯಗಳಲ್ಲಿ ವನ್ನಿಯಾರ್ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಪ್ರಮುಖವಾಗಿ ಸಿನಿಮಾದಲ್ಲಿ ಬರುವ ಕ್ಯಾಲೆಂಡರ್ ಒಂದರಲ್ಲಿ ಅಗ್ನಿ ಕುಂಡದ ಪೋಟೋ ಇದೆ. ಅಗ್ನಿ ಕುಂಡವು ವನ್ನಿಯಾರ್ ಸಮುದಾಯದ ಚಿಹ್ನೆ. ಇದನ್ನು ದುರುದ್ದೇಶವಾಗಿಯೇ ಅಗ್ನಿ ಕುಂಡದ ಚಿತ್ರವನ್ನು ಇರಿಸಲಾಗಿದೆ. ಸಿನಿಮಾದಲ್ಲಿ ಬರುವ ಸಬ್ ಇನ್ಸ್ಪೆಕ್ಟರ್ಗೆ ಗುರುಮೂರ್ತಿ ಎಂದು ಹೆಸರು ಇಡಲಾಗಿದೆ. ಈ ಸಬ್ ಇನ್ಸ್ಪೆಕ್ಟರ್ ಸಿನಿಮಾದ ಪ್ರಮುಖ ಖಳನಾಯಕನಾಗಿ ಬಿಂಬಿಸಲಾಗಿದೆ. ಆದರೆ ಈ ಹೆಸರು ಪಿಎಂಕೆಯ ಪ್ರಮುಖ ನಾಯಕ ಕಾಡುವೆಟ್ಟಿ ಜೆ ಗುರುವನ್ನು ಪ್ರತಿನಿಧಿಸುತ್ತೆ ಎಂದು ಆರೋಪಿಸಿದ್ದಾರೆ.

ಹೈಕೋರ್ಟ್ನಲ್ಲಿ 'ಜೈ ಭೀಮ್' ತಂಡದಿಂದ ಮೇಲ್ಮನವಿ
ಸೂರ್ಯ ಮತ್ತು ಜ್ಯೋತಿಕಾ ಒಡೆತನದ 2ಡಿ ಎಂಟರ್ಟೈನ್ಮೆಂಟ್ ಬ್ಯಾನರ್ ಮೂಲಕ 'ಜೈ ಭೀಮ್' ಸಿನಿಮಾ ಮೂಡಿ ಬಂದಿತ್ತು. ಸಿನಿಮಾದಲ್ಲಿ ವಕೀಲ ಚಂದ್ರು ಪಾತ್ರದಲ್ಲಿ ನಟ ಸೂರ್ಯ ಕಾಣಿಸಿಕೊಂಡಿದ್ದರು. ಈ ಪಾತ್ರದಲ್ಲಿ ಬುಡಕಟ್ಟು ಸಮುದಾಯದ ಜನರಿಗೆ ನ್ಯಾಯ ಒದಗಿಸಿ ಕೊಡುವ ಪಾತ್ರವನ್ನು ಬಹಳ ಪ್ರಬುದ್ಧವಾಗಿ ನಟಿಸಿದ್ದರು. ಇದನ್ನು ಪ್ರೇಕ್ಷಕರು ಸಹ ಮೆಚ್ಚಿಕೊಂಡಿದ್ದರು. ಆದರೆ, ಈಗ ಇದೇ ಸಿನಿಮಾದಲ್ಲಿ ವನ್ನಿಯಾರ್ ಸಮುದಾಯವನ್ನು ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ಚಿತ್ರತಂಡಕ್ಕೆ ಹೊಸ ಸಂಕಷ್ಟ ಎದುರಾಗಿದ್ದು, ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ 'ಜೈ ಭೀಮ್' ತಂಡ ಮೇಲ್ಮನವಿ ಹಾಕುವ ಸಾಧ್ಯತೆ ಹೆಚ್ಚಿದೆ.


Click it and Unblock the Notifications











