Chiru-Rajini: ಹೀರೊಯಿಸಂ ಬಗ್ಗೆ ಮೆಗಾಸ್ಟಾರ್ ಕ್ಲಾಸ್: 'ಜೈಲರ್' ರಜನಿಗೆ ಟಾಂಗ್ ಕೊಟ್ರಾ ಚಿರು?
ಈ ಕಾಲದಲ್ಲಿ ಪ್ರೇಕ್ಷಕರನ್ನು ರಂಜಿಸೋದು ಅಷ್ಟು ಸುಲಭ ಅಲ್ಲ. ಎಂತಹ ಒಳ್ಳೆಯ ಕತೆ ಇದ್ದರೂ ಕಲಾವಿದರು ಸಂಪೂರ್ಣವಾಗಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಬೇಕು. ಕಮರ್ಷಿಯಲ್ ಸಿನಿಮಾಗಳಲ್ಲಿ ನಟನೆಯ ಜೊತೆಗೆ ಕಷ್ಟಬಿದ್ದು ಡ್ಯಾನ್ಸ್, ಫೈಟ್ ಮಾಡಬೇಕು. ಕಷ್ಟ ಬೀಳದಿದ್ದರೆ ನನಗೆ ತೃಪ್ತಿ ಇಲ್ಲ ಎಂದು ತೆಲುಗು ನಟ ಚಿರಂಜೀವಿ ಹೇಳಿದ್ದಾರೆ.
ವಯಸ್ಸು 60 ದಾಟಿದ್ರು ಚಿರಂಜೀವಿ ಇವತ್ತಿಗೂ ಯುವನಟರಿಗೆ ಪೈಪೋಟಿ ಕೊಡುತ್ತಿದ್ದಾರೆ. 10 ವರ್ಷಗಳ ನಂತರ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟ ಚಿರು ಮತ್ತೆ ಮೊದಲಿನ ಖದರ್ ತೋರಿಸುತ್ತಿದ್ದಾರೆ. ಸೀನಿಯರ್ ಹೀರೊ ಆದರೂ ಬಹಳ ಡೆಡಿಕೇಷನ್ ಇದೆ. ಸಿನಿಮಾಗಾಗಿ ಎಷ್ಟೆಲ್ಲಾ ಕಷ್ಟಪಡುತ್ತಾರೆ ಅನ್ನೋದು ಗೊತ್ತೇಯಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೀರೊಯಿಸಂ ಚಿರು ಮಾತನಾಡಿದ ಮಾತುಗಳು ಸಖತ್ ವೈರಲ್ ಆಗ್ತಿದೆ.

ಯಾವುದೇ ಕ್ಷೇತ್ರ ಆದರೂ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಚಿರಂಜೀವಿ ಹೇಳಿದ್ದಾರೆ. "ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು. ನಾನು ಕೂಡ ಎಷ್ಟು ದಿನ ಹೀಗೆ ಕಷ್ಟಪಟ್ಟು ಡ್ಯಾನ್ಸ್, ಫೈಟ್ ಮಾಡೋದು? ಇನ್ನು ಸಾಕಪ್ಪ ಎಂದುಕೊಳ್ಳುತ್ತಿರುತ್ತೇನೆ. ಹಾಗೆ ಸುಮ್ಮನೆ ನಡೆದುಕೊಂಡು ಬಂದು ರೀರೆಕಾರ್ಡಿಂಗ್ನಲ್ಲಿ ಢಂ ಅಂತ ಧೂಳೆಬ್ಬಿಸಬಹುದು ಅಲ್ವಾ? ಎಂದುಕೊಳ್ಳುತ್ತೇನೆ"
"ಆರಾಮಾಗಿ ಶೂಟಿಂಗ್ ಮಾಡಿ, ಮೇಕಪ್ ಅಳಿಸಿ, ಹಣ ಕೊಟ್ಟಾಗ ಜೇಬಿನಲ್ಲಿಟ್ಟುಕೊಂಡರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ. ಆದರೆ ಅಂತಹ ಪರಿಸ್ಥಿತಿ ಅಲ್ಲ ನಮ್ಮದು. ನಾವೇ ನಟಿಸಬೇಕು, ಒರಿಜಿನಲ್ ಆಗಿ ಫೈಟ್ ಮಾಡಬೇಕು, ದೇಹ ಊನ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಿರ್ಮಾಪಕರು, ನಿರ್ದೇಶಕರಿಗೆ ತೃಪ್ತಿ ಇರಲ್ಲ. ಸಿನಿಮಾ ನೋಡುವ ಪ್ರೇಕ್ಷಕರಿಗೂ ತೃಪ್ತಿ ಇರಲ್ಲ. ಅದೇ ರೀತಿ ನನಗೂ ತೃಪ್ತಿ ಇರಲ್ಲ" ಎಂದಿದ್ದಾರೆ.
ವಿಪರ್ಯಾಸ ಅಂದರೆ ಚಿರಂಜೀವಿ ಹೇಳಿಕೆಯನ್ನು ಕೆಲವರು 'ಜೈಲರ್' ಚಿತ್ರಕ್ಕೆ ಲಿಂಕ್ ಮಾಡುತ್ತಿದ್ದಾರೆ. ರಜನಿಕಾಂತ್ ಕುರಿತು ಚಿರಂಜೀವಿ ಈ ರೀತಿ ಮಾತನಾಡಿದ್ರಾ? ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ. ಚಿರು ಸಹಜವಾಗಿ ಇದ್ದದ್ದು ಇದ್ದಂತೆ ಮಾತನಾಡಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ ಎಂದು ವಾದಿಸುತ್ತಿದ್ದಾರೆ.
ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿತ್ರದ ಸಕ್ಸಸ್ನಲ್ಲಿ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಪಾಲು ದೊಡ್ಡದಿದೆ. ಚಿತ್ರಕ್ಕೆ ಬಿಜಿಎಂ ಪ್ಲಸ್ ಪಾಯಿಂಟ್ ಆಗಿತ್ತು. ತನ್ನ ಬ್ಯಾಕ್ಗ್ರೌಂಡ್ ಸ್ಕೋರ್ನಿಂದ ಚಿತ್ರಕ್ಕೆ ಹೊಸ ಖದರ್ ತಂದುಕೊಟ್ಟಿದ್ದರು. 'ಜೈಲರ್' ಸಕ್ಸಸ್ ಮೀಟ್ನಲ್ಲಿ ಅನಿರುದ್ದ್ ಮ್ಯೂಸಿಕ್ ಬಗ್ಗೆ ತಲೈವಾ ಕೊಂಡಾಡಿದ್ದರು.
ತನ್ನ ಬಿಜಿಎಂನಿಂದ ಅನಿರುದ್ಧ್ 'ಜೈಲರ್' ಚಿತ್ರವನ್ನು ಎಲ್ಲಿಗೋ ಕೊಂಡೊಯ್ದುಬಿಟ್ಟರು. ರೀರೆಕಾರ್ಡಿಂಗ್ಗೂ ಮುನ್ನ ಸಿನಿಮಾ ನೋಡಿದಾಗ ಆವರೇಜ್ ಅನ್ನಿಸಿತ್ತು. ಆದರೆ ಮ್ಯೂಸಿಕ್ ಸೇರಿಸಿದ ಮೇಲೆ ನೆಕ್ಸ್ಟ್ ಲೆವೆಲ್ ಎನಿಸಿಬಿಟ್ಟಿತು. ಒಂದರ್ಥದಲ್ಲಿ ಅನಿರುದ್ಧ್ ಸಂಗೀತವೇ ಚಿತ್ರದ ಜೀವಾಳ ಎಂದಿದ್ದರು. ರಜನಿ 'ಜೈಲರ್' ಗೆಲುವಿನ ಸಂಪೂರ್ಣ ಕ್ರೆಡಿಟ್ ಅನ್ನು ಅನಿರುದ್ದ್ಗೆ ಕೊಟ್ಟಿದ್ದಾರೆ. ನೆಲ್ಸನ್ಗೆ ಅವಮಾನ ಮಾಡಿದ್ದಾರೆ ಎಂದು ಕೆಲವರು ವಾದಿಸಿದರು.
ಚಿರು ನಟನೆಯ 'ಭೋಳಾ ಶಂಕರ್' ಹಾಗೂ ರಜನಿಕಾಂತ್ 'ಜೈಲರ್' ಸಿನಿಮಾಗಳು ಒಂದು ದಿನದ ಅಂತರದಲ್ಲಿ ತೆರೆಗೆ ಬಂದಿತ್ತು. 'ಭೋಳಾ ಶಂಕರ್' ಸಿನಿಮಾ ಹೀನಾಯವಾಗಿ ಸೋತಿತ್ತು. 'ಜೈಲರ್' ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಪರೋಕ್ಷವಾಗಿ ಚಿರು ಈಗ ರಜನಿಕಾಂತ್ಗೆ ಹೀರೊಯಿಸಂ ಬಗ್ಗೆ ಹೇಳಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.


Click it and Unblock the Notifications










