Pawan Kalyan: ಮಧ್ಯರಾತ್ರಿ ಆಂಧ್ರ ರಾಜಕೀಯದಲ್ಲಿ ಹೈಡ್ರಾಮಾ: ಪವನ್ ಕಲ್ಯಾಣ್ ಬಂಧನ!
ತೆಲುಗು ದೇಶಂ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿರುವುದು ಆಂಧ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. 2014-2019ರ ನಡುವೆ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಷನ್ನಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚಂದ್ರಬಾಬು ಅವರನ್ನು ಪೊಲೀಸರು ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ಬಂಧಿಸಿದ್ದಾರೆ.
ದಿಢೀರನೆ ಬಂಧಿಸಲಾಗಿರುವ ಚಂದ್ರಬಾಬು ನಾಯ್ಡು ಭೇಟಿಗೆ ಪವನ್ ಕಲ್ಯಾಣ್ ಮುಂದಾಗಿದ್ದರು. ಹೈದರಾಬಾದ್ನಿಂದ ರಸ್ತೆ ಮಾರ್ಗವಾಗಿ ವಿಜಯವಾಡಗೆ ಹೊರಟ ಜನಸೇನಾ ಪಕ್ಷದ ಅಧ್ಯಕ್ಷನನ್ನು ಗಿರಿಕಪಾಡು ಚೆಕ್ಪೋಸ್ಟ್ ಬಳಿ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಜನಸೇನಾ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪವನ್ ಕಲ್ಯಾಣ್ ನಡೆದುಕೊಂಡೇ ಮಂಗಳಗಿರಿಗೆ ಹೋಗಲು ಮುಂದಾದರು. ಮತ್ತೆ ಅನುಮಂಚಿಪಲ್ಲಿಯಲ್ಲಿ ಪೊಲೀಸರು ಅವರನ್ನು ತಡೆದರು.

ಪೊಲೀಸರು ಮುಂದುವರಿಯಲು ಬಿಡದ ಕಾರಣ, ಪೊಲೀಸರ ವರ್ತನೆಯನ್ನು ವಿರೋಧಿಸಿ ಪವನ್ ಕಲ್ಯಾಣ್ ರಸ್ತೆಯಲ್ಲೇ ಮಲಗಿದ್ದರು. ಪೊಲೀಸರು ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಅಷ್ಟಾದರೂ ಪವನ್ ಹಿಂದಕ್ಕೆ ಸರಿಯದ ಕಾರಣ ಪೊಲೀಸರು ಅವರನ್ನು ಬಂಧಿಸಿ ವಶಕ್ಕೆ ಪಡೆದರು. ಪವನ್ ಕಲ್ಯಾಣ್ ಜೊತೆಗೆ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂದ್ಲ ಮನೋಹರ್ ಅವರನ್ನೂ ಕೂಡ ಅನುಮಂಚಿಪಲ್ಲಿಯಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದರು.
ತಮ್ಮ ಪಕ್ಷದ ನಾಯಕರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಗೊತ್ತಾಗದೇ ಕೆಲವೊತ್ತು ಜನಸೇನಾ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದರು. ಪವನ್ ಕಲ್ಯಾಣ್ನ ಪೊಲೀಸರು ಕರೆದೊಯುತ್ತಿದ್ದ ವಾಹನಕ್ಕೆ ರಕ್ಷಾ ಕವಚದಂತೆ ಸಾಗಿದರು. ಕೆಲ ಹೊತ್ತಿನ ಬಳಿಕ ಮಂಗಳಗಿರಿಯ ಜನಸೇನಾ ಕಚೇರಿಯಲ್ಲಿ ಪೊಲೀಸರು ಪವನ್ ಹಾಗೂ ನಾದೆಂಡ್ಲ ಅವರನ್ನು ಬಿಡುಗಡೆ ಮಾಡಿದರು. ಅಷ್ಟೊತ್ತಿಗೆ ದೊಡ್ಡ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿದ್ದ ಜನಸೇನಾ ಕಾರ್ಯಕರ್ತರು ಘೋಷಣೆ ಮುಗಿಲು ಮುಟ್ಟಿತು.
ಆಂಧ್ರ ಸಿಎಂ ಜಗನ್ ವಿರುದ್ಧ ಕೆಂಡಾ ಮಂಡಲವಾದ ಪವನ್ ಕಲ್ಯಾಣ್ "ಜಾಮೀನಿನ ಮೇಲೆ ಹೊರಗಿರುವ ಸಿಎಂ ಜಗನ್ ಜೈಲಿನ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಚಂದ್ರಬಾಬು ಅವರನ್ನು ಭೇಟಿಯಾಗಲು ಹೋದಾಗ ತಮ್ಮನ್ನು ಪ್ರತಿ ಹೆಜ್ಜೆಯಲ್ಲೂ ತಡೆದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಾಮೀನಿನ ಮೇಲೆ ಹೊರಗಿರುವ ಸಿಎಂ ಜಗನ್, ಎಲ್ಲರನ್ನೂ ಜೈಲಿಗೆ ಕಳುಹಿಸಲು ಚಿಂತನೆ ನಡೆಸುತ್ತಿದ್ದಾರೆ. ಕ್ರಿಮಿನಲ್ಗಳ ಕೈಯಲ್ಲಿ ಅಧಿಕಾರ ಇರುವುದು ದುರದೃಷ್ಟಕರ ಎಂದು ಕಟುವಾಗಿ ಟೀಕಿಸಿದರು. ಸಿಎಂ ಜಗನ್ ಕ್ರಿಮಿನಲ್ ಆಗಿರುವುದರಿಂದ ಎಲ್ಲರೂ ಕ್ರಿಮಿನಲ್ ಆಗಲು ಬಯಸುತ್ತಿದ್ದಾರೆ ಎಂದು ಪವನ್ ಆಕ್ರೋಶ ವ್ಯಕ್ತಪಡಿಸಿದರು. ಚಂದ್ರಬಾಬು ಬಂಧನವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಜಿ 20 ಪ್ರತಿನಿಧಿಗಳು ದೇಶಕ್ಕೆ ಬಂದಾಗ ಇಂತಹ ಕೆಲಸ ಮಾಡುತ್ತಿರುವುದು ಪ್ರಧಾನಿ ಸ್ಫೂರ್ತಿಗೆ ಕಪ್ಪುಚುಕ್ಕೆ" ಎಂದು ಪವನ್ ಹೇಳಿದ್ದಾರೆ.
ಇದಕ್ಕೂ ಮುನ್ನ ಪೊಲೀಸರ ವಶದಲ್ಲಿರುವ ಚಂದ್ರಬಾಬು ನಾಯ್ಡು ಭೇಟಿಗೆ ಪವನ್ ಕಲ್ಯಾಣ್ ವಿಜಯವಾಡ ಬರಲು ಮುಂದಾಗಿದ್ದರು. ಜೊತೆಗೆ ಜನಸೇನಾ ಕಾರ್ಯಕ್ರಮಗಳು ನಿಗದಿಯಾಗಿತ್ತು. ವಿಶೇಷ ವಿಮಾನದಲ್ಲಿ ಶನಿವಾರ ಸಂಜೆ ಬೇಗಂಪೇಟೆ ವಿಮಾನ ನಿಲ್ದಾಣದಿಂದ ಗನ್ನವರಂಗೆ ಬರಲು ಸಿದ್ಧತೆ ನಡೆಸಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿ ನಿರಾಕರಿಸಿ ಹಿಂದೆ ಸರಿದರು. ಪವನ್ ಕಲ್ಯಾಣ್ ವಿಜಯವಾಡಕ್ಕೆ ಬಂದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಕೃಷ್ಣಾ ಜಿಲ್ಲಾ ಪೊಲೀಸರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮೇಲ್ ಕಳುಹಿಸಿದ್ದಾರೆ. ಇದರಿಂದ ವಿಮಾನ ನಿಲ್ದಾಣದ ಅಧಿಕಾರಿಗಳು ಪವನ್ ವಿಮಾನಕ್ಕೆ ಅನುಮತಿ ನಿರಾಕರಿಸಿದ್ದಾರೆ.
ಬಳಿಕ ಪವನ್ ರಸ್ತೆ ಮಾರ್ಗವಾಗಿ ವಿಜಯವಾಡಕ್ಕೆ ತೆರಳಿದ್ದರು. ಹೈದರಾಬಾದ್ನಿಂದ ರಸ್ತೆ ಮಾರ್ಗವಾಗಿ ವಿಜಯವಾಡಕ್ಕೆ ಹೊರಟಿದ್ದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಎನ್ಟಿಆರ್ ಜಿಲ್ಲೆಯ ಗರಿಕಪಾಡು ಎಂಬಲ್ಲಿ ಪೊಲೀಸರು ತಡೆದರು. ಪೊಲೀಸರ ವರ್ತನೆ ಖಂಡಿಸಿ ಜನಸೈನಿಕರು ಪ್ರತಿಭಟನೆ ನಡೆಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪವನ್, "ಎಪಿಗೆ ಪ್ರವೇಶಿಸಲು ವೀಸಾ ಮತ್ತು ಪಾಸ್ಪೋರ್ಟ್ ಅಗತ್ಯವಿದೆಯೇ" ಎಂದು ಕೇಳಿದರು.
ಹೈವೇಯಲ್ಲಿ ಪವನ್ ಬೆಂಗಾವಲು ಪಡೆ ನಿಂತ ಕಾರಣ ಟ್ರಾಫಿಕ್ ಜಾಮ್ ಉಂಟಾಯಿತು. ಪವನ್ ಗರಿಕಪಾಡುವಿನಲ್ಲಿ ಬೆಂಗಾವಲು ಪಡೆ ಬಿಟ್ಟರೂ ಅನುಮಂಚಿಪಲ್ಲಿಯಲ್ಲಿ ತಡೆಯಲಾಯಿತು. ಹಾಗಾಗಿ ಪವನ್ ವಾಹನದಿಂದ ಇಳಿದು ಹೈವೇಯಲ್ಲಿ ನಡೆದು ಬರಲು ಮುಂದಾದರು. ಪೊಲೀಸರು ಈ ವೇಳೆ ತಡೆಯಲು ಮುಂದಾದಾದ ಪವನ್ ರಸ್ತೆಯಲ್ಲಿ ಮಲಗಿ ಹೈಡ್ರಾಮಾ ನಡೀತು.


Click it and Unblock the Notifications











