ಬೇಲ್ ಪಡೆದು ಮನೆಗೆ ಮರಳಿದ ಜಾನಿ ಮಾಸ್ಟರ್; ಮಡದಿ, ಮಕ್ಕಳ ಪ್ರತಿಕ್ರಿಯೆ ಹೇಗಿತ್ತು?
ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ತೆಲುಗು ಕೊರಿಯೋಗ್ರಫರ್ ಜಾನಿ ಮಾಸ್ಟರ್ ಬಂಧನವಾಗಿತ್ತು. ಇತ್ತೀಚೆಗೆ ಷರತ್ತುಬದ್ಧ ಜಾಮೀನು ಪಡೆದಿದ್ದ ಅವರು ಮನೆಗೆ ಮರಳಿದ್ದಾರೆ. ತಿಂಗಳ ಬಳಿಕ ಮನೆಗೆ ವಾಪಸ್ ಆಗುತ್ತಿದ್ದಂತೆ ಮನೆಮಂದಿಯ ಸಂಭ್ರಮ ಹೇಗಿತ್ತು ಎನ್ನುವ ಬಗ್ಗೆ ವೀಡಿಯೋ ಹಂಚಿಕೊಂಡಿದ್ದಾರೆ.
"ಈ 37 ದಿನಗಳಲ್ಲಿ ನಮ್ಮಿಂದ ಬಹಳಷ್ಟು ವಿಚಾರಗಳು ದೂರವಾಗಿದೆ. ನನ್ನ ಕುಟುಂಬ ಹಾಗೂ ಹಿತೈಷಿಗಳ ಪ್ರಾರ್ಥನೆ ನನ್ನನ್ನು ಇಂದು ಇಲ್ಲಿಗೆ ತಂದು ನಿಲ್ಲಿಸಿದೆ. ಗ್ರಹಣದಿಂದ ಸತ್ಯವು ಆಗಾಗ್ಗೆ ಮರೆಯಾಗುತ್ತದೆ. ಆದರೆ ಎಂದಿಗೂ ನಶಿಸುವುದಿಲ್ಲ, ಅದು ಒಂದು ದಿನ ಮೇಲುಗೈ ಸಾಧಿಸುತ್ತದೆ. ಜೀವನದಲ್ಲಿ ನನ್ನ ಇಡೀ ಕುಟುಂಬ ಈ ಹಂತವು ನನ್ನ ಹೃದಯಕ್ಕೆ ಸದಾ ನೋವಾಗಿ ಉಳಿಯುತ್ತದೆ ಎಂದು ಬರೆದು ಜಾನಿ ಮಾಸ್ಟರ್ ವೀಡಿಯೋ ಪೋಸ್ಟ್ ಮಾಡಿದ್ದಾರೆ.

ಬಹಳ ದಿನಗಳ ಬಳಿಕ ಜಾನಿ ಮಾಸ್ಟರ್ ಮನೆಗೆ ಹೋಗುತ್ತಿದ್ದಂತೆ ಮಗಳು, ಮಗ ಬಿಗಿದಪ್ಪಿಕೊಂಡಿದ್ದಾರೆ. ಮಾಸ್ಟರ್ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದೆ. ಮಡದಿ ಸೇರಿದಂತೆ ಕುಟುಂಬ ಸದಸ್ಯರು ಸಂಭ್ರಮಿಸಿದ್ದಾರೆ. ಮಗಳು ತಂದೆ ನೆನಪಲ್ಲಿ ಚಿತ್ರ ಬಿಡಿಸಿ 'ಮಿ ಯೂ ಡ್ಯಾಡಿ' ಎಂದು ಬರೆದ ಪೇಪರ್ ಅನ್ನು ತೋರಿಸಿದ್ದಾಳೆ. ಇದನ್ನು ನೋಡಿ ಜಾನಿ ಮಾಸ್ಟರ್ ಮತ್ತಷ್ಟು ಭಾವುಕರಾಗಿದ್ದಾರೆ.
ತೆಲುಗು, ಕನ್ನಡ, ಹಿಂದಿ, ತಮಿಳಿನ ಹಲವು ಸೂಪರ್ ಹಿಟ್ ಗೀತೆಗಳಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ತಮ್ಮ ಡ್ಯಾನ್ಸ್ ಮೂಲಕ ಸಿನಿರಸಿಕರ ಮನಗೆದ್ದಿದ್ದಾರೆ. ಆದರೆ ಹಲವು ವರ್ಷಗಳಿಂದ ಅವರ ಡ್ಯಾನ್ಸ್ ತಂಡದಲ್ಲೇ ಇದ್ದ ಯುವತಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಳು. ಸಂತ್ರಸ್ಥ ಯುವತಿ ನೀಡಿದ ದೂರಿನ ಅನ್ವಯ ಜಾನಿ ಮಾಸ್ಟರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ತಾನು ಅಪ್ರಾಪ್ತೆಯಾಗಿದ್ದ ಸಮಯದಲ್ಲೇ ಜಾನಿ ಮಾಸ್ಟರ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದರು ಎಂದು ಆಕೆ ಆರೋಪಿಸಿದ್ದಾಳೆ. ಹಾಗಾಗಿ ಪೋಕ್ಸೊ ಅಡಿಯಲ್ಲಿ ಕೂಡ ದೂರು ದಾಖಲಾಗಿದೆ. ಸೆಪ್ಟೆಂಬರ್ 19ರಂದು ತೆಲಂಗಾಣ ಪೊಲೀಸರು ಗೋವಾದಲ್ಲಿ ಜಾನಿ ಮಾಸ್ಟರ್ ಅವರನ್ನು ವಶಕ್ಕೆ ಪಡೆದಿದ್ದರು. ನಡುವೆ 3 ದಿನಗಳ ಕಾಲ ಮಧ್ಯಂತರ ಜಾಮೀನು ಪಡೆದು ರಿಮ್ಯಾಂಡ್ನಲ್ಲಿದ್ದ ಮಾಸ್ಟರ್ ಹೊರಗೆ ಬಂದಿದ್ದರು.
2022ರಲ್ಲಿ ಬಂದ 'ತಿರುಚಿತ್ರಾಂಬಲಂ' ಚಿತ್ರದ ನೃತ್ಯ ನಿರ್ದೇಶನಕ್ಕಾಗಿ ಜಾನಿಗೆ ರಾಷ್ಟ್ರಪ್ರಶಸ್ತಿ ಘೋಷಣೆ ಆಗಿತ್ತು. ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಹೋಗಲು 3 ದಿನಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿತ್ತು. ಆದರೆ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗೆ ರಾಷ್ಟ್ರಪ್ರಶಸ್ತಿ ನೀಡಬಾರದು ಎನ್ನುವ ಆಗ್ರಹ ವ್ಯಕ್ತವಾಗಿತ್ತು. ಹಾಗಾಗಿ ಪ್ರಶಸ್ತಿಯನ್ನು ರದ್ದು ಮಾಡಲಾಗಿತ್ತು. ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಜೈಲು ಸೇರಿದ್ದ ಜಾನಿ ಮಾಸ್ಟರ್ ಎರಡು ದಿನಗಳ ಹಿಂದೆ ಷರತ್ತುಬದ್ಧ ಜಾಮೀನು ಪಡೆದಿದ್ದರು.
2009ರಲ್ಲಿ ಬಂದ 'ದ್ರೋಣ' ಚಿತ್ರದಲ್ಲಿ ಮೊದಲಿಗೆ ಜಾನಿ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದರು. ಬಳಿಕ ಸಾಕಷ್ಟು ತೆಲುಗು ಗೀತೆಗಳಿಗೆ ಡ್ಯಾನ್ಸ್ ಕಂಪೋಸ್ ಮಾಡಿದ್ದರು. 'ಅಕಿರಾ' ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದರು. 'ರಾಜಕುಮಾರ' ಚಿತ್ರದ 'ಅಪ್ಪು ಡ್ಯಾನ್ಸ್ ಡ್ಯಾನ್ಸ್' ಸಾಂಗ್ ಕನ್ನಡದಲ್ಲಿ ದೊಡ್ಡ ಬ್ರೇಕ್ ಕೊಟ್ಟಿತ್ತು. ಮುಂದೆ 'ಓಪನ್ ದ ಬಾಟಲ್', 'ರಾ ರಾ ರಕ್ಕಮ್ಮ' ರೀತಿಯ ಹಿಟ್ ಗೀತೆಗಳಿಗೆ ಡ್ಯಾನ್ಸ್ ಸ್ಟೆಪ್ಸ್ ಹಾಕಿಸಿದ್ದರು.


Click it and Unblock the Notifications











