ವ್ಯಕ್ತಿಯೊಬ್ಬನನ್ನು ರೂಂನಲ್ಲಿ ಕೂಡಿಹಾಕಿ ಮೂರು ದಿವಸ ಹೊಡೆದಿದ್ದ ಜೂ.ಎನ್ಟಿಆರ್!
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ ಜೂ ಎನ್ಟಿಆರ್ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾದಲ್ಲಿ ವಿಲನ್ಗಳನ್ನು ಬೆಂಡೆತ್ತುವ ಜೂ ಎನ್ಟಿಆರ್ ನಿಜ ಜೀವನದಲ್ಲಿ ಬಹಳ ಸೌಮ್ಯ ಮನುಷ್ಯ ಎಂಬುದೇ ಎಲ್ಲರ ನಂಬಿಕೆ.
ಆದರೆ ಜೂ ಎನ್ಟಿಆರ್ ಬಹಳ ಕೋಪಿಷ್ಟರೆಂದು, ರೂಂನಲ್ಲಿ ವ್ಯಕ್ತಿಯೊಬ್ಬನನ್ನು ಕೂಡಿಹಾಕಿ ಸತತ ಮೂರು ದಿನಗಳ ಕಾಲ ಅವನ ಮೇಲೆ ಹಲ್ಲೆ ಮಾಡಿದ್ದರೆಂದು ಜೂ ಎನ್ಟಿಆರ್ಗೆ ಆಪ್ತವಾಗಿರುವ ನಿರ್ಮಾಪಕರೊಬ್ಬರು ಬಾಯಿ ಬಿಟ್ಟಿದ್ದಾರೆ.
ಜೂ ಎನ್ಟಿಆರ್ ನಟನೆಯ 'ಆಂಧ್ರಾವಾಲಾ' ಸಿನಿಮಾ ನಿರ್ಮಾಣ ಮಾಡಿದ್ದ ಅವುಲ ಗಿರಿ ಸಂದರ್ಶನವೊಂದರಲ್ಲಿ ಜೂ ಎನ್ಟಿಆರ್ ಹಾಗೂ ತಮ್ಮ ಬಂಧದ ಬಗ್ಗೆ ಮಾತನಾಡುತ್ತಾ, ಜೂ ಎನ್ಟಿಆರ್ ವ್ಯಕ್ತಿಯೊಬ್ಬನ ಮೇಲೆ ಧಾರುಣವಾಗಿ ಹಲ್ಲೆ ಮಾಡಿದ್ದರೆಂಬ ವಿಷಯವನ್ನು ಹೇಳಿದ್ದಾರೆ.

'ಆಂಧ್ರಾವಾಲಾ' ಬಳಿಕ ಆತ್ಮೀಯರಾಗಿದ್ದೆವು: ಆವುಲ ಗಿರಿ
'ಆಂಧ್ರಾವಾಲಾ' ಸಿನಿಮಾ ಬಳಿಕ ನಾನೂ ಮತ್ತು ಜೂ.ಎನ್ಟಿಆರ್ ಬಹಳ ಆತ್ಮೀಯರಾಗಿದ್ದೆವು. ನಮ್ಮಿಬ್ಬರ ಕುಟುಂಬಗಳು ಪರಸ್ಪರ ಹತ್ತಿರವಾಗಿದ್ದವು. ನಾನು ಜೂ ಎನ್ಟಿಆರ್ಗೆ ಹಾಗೂ ಜೂ ಎನ್ಟಿಆರ್ ನನಗೆ ಬಹಳ ಬಾರಿ ಪರಸ್ಪರ ಸಹಾಯ ಮಾಡಿಕೊಂಡಿದ್ದೆವು. ಆದರೆ ವ್ಯಕ್ತಿಯೊಬ್ಬನಿಂದಾಗಿ ನಮ್ಮಿಬ್ಬರ ನಡುವೆ ಕಂದಕ ಏರ್ಪಟ್ಟಿತು ಎಂದು ಹಳೆಯ ವಿಷಯಗಳನ್ನು ನಿರ್ಮಾಪಕ ಅವುಲ ಗಿರಿ ನೆನಪು ಮಾಡಿಕೊಂಡಿದ್ದಾರೆ.

ಮೂರು ದಿನ ಹಲ್ಲೆ ಮಾಡಿದ ಜೂ ಎನ್ಟಿಆರ್
''ಆಗ ಟಿಡಿಪಿ ಪಕ್ಷದಲ್ಲಿದ್ದ ಕೊಡಲಿ ನಾನಿ ವ್ಯಕ್ತಿಯೊಬ್ಬನನ್ನು ಜೂ. ಎನ್ಟಿಆರ್ ಬಳಿ ಕೆಲಸಕ್ಕೆಂದು ನೇಮಿಸಿದ. ಆ ವ್ಯಕ್ತಿ ಜೂ ಎನ್ಟಿಆರ್ ಹೆಸರು ಬಳಸಿ ಸಾಕಷ್ಟು ಹಣ ಮಾಡಿಕೊಂಡ. ಆ ವ್ಯಕ್ತಿ ನನ್ನ ಬಗ್ಗೆ ಜೂ ಎನ್ಟಿಆರ್ ಬಳಿ ಇಲ್ಲ ಸಲ್ಲದ ವಿಷಯಗಳನ್ನು ಹೇಳಿದ್ದ ಹಾಗಾಗಿ ನಾನೂ ಹಾಗೂ ಜೂ ಎನ್ಟಿಆರ್ ಬೇರೆಯಾಗಬೇಕಾಯಿತು. ಬಳಿಕ ಜೂ ಎನ್ಟಿಆರ್ಗೆ ಆ ವ್ಯಕ್ತಿಯ ನಿಜ ಮುಖ ಗೊತ್ತಾಯಿತು. ಕೂಡಲೇ ಅವನನ್ನು ರೂಂ ಒಂದರಲ್ಲಿ ಕೂಡಿ ಹಾಕಿ ಸತತವಾಗಿ ಮೂರು ದಿನಗಳು ಅವನನ್ನು ಜೂ ಎನ್ಟಿಆರ್ ಹೊಡೆದಿದ್ದರು'' ಎಂದು ಆವುಲ ಗಿರಿ ಹೇಳಿದ್ದಾರೆ.

ಕ್ಷಮೆ ಕೇಳಿದ ಜೂ ಎನ್ಟಿಆರ್
''ಜೂ ಎನ್ಟಿಆರ್ ಮಾತ್ರವೇ ಅಲ್ಲದೆ ಕೊಡಲಿ ನಾನಿ ಸಹ ಆ ವ್ಯಕ್ತಿಯ ಮೇಲೆ ಕೈ ಮಾಡಿದರು. ನಂತರ ನಲ್ಲಮಲುಪು ಶ್ರೀನಿವಾಸ ಬುಜ್ಜಿ ಸಹ ಆ ವ್ಯಕ್ತಿಯನ್ನು ವಿಪರೀತ ಹೊಡೆದು ಬುದ್ಧಿಕಲಿಸಿದ್ದರು. ಆ ಘಟನೆ ಬಳಿಕ ಸ್ವತಃ ಜೂ ಎನ್ಟಿಆರ್, ನನ್ನ ಬಳಿ ಕ್ಷಮಾಪಣೆ ಕೇಳಿ, ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೆ. ನಾವಿಬ್ಬರೂ ಮತ್ತೆ ಸಿನಿಮಾ ಮಾಡೋಣ ಎಂದು ಹೇಳಿದರು. ನನ್ನನ್ನು ರಾಜಮೌಳಿ ಬಳಿ ಕರೆದುಕೊಂಡು ಹೋಗಿ ಸಿನಿಮಾ ಮಾಡುವಂತೆ ಕೇಳಿದ್ದರು. ನನಗೆ ರಾಣಾ ಪ್ರತಾಪ್ ಸಿಂಹನ ಕತೆ ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಅದನ್ನೇ ರಾಜಮೌಳಿಗೆ ಹೇಳಿದ್ದೆ. ಅವರೂ ಸಿನಿಮಾ ಮಾಡೋಣವೆಂದು ಒಪ್ಪಿಕೊಂಡರು'' ಎಂದು ಆವುಲ ಗಿರಿ ಹೇಳಿದ್ದಾರೆ.

ಜೂ ಎನ್ಟಿಆರ್-ಚಿರಂಜೀವಿ ಸಿನಿಮಾ ನಿಂತು ಹೋಯಿತು
ನಟ ಚಿರಂಜೀವಿ ಹಾಗೂ ಜೂ ಎನ್ಟಿಆರ್ ಅನ್ನು ಒಟ್ಟಿಗೆ ಹಾಕಿಕೊಂಡು ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಹಾಗಾಗಿ ಈ ಬಗ್ಗೆ ಪ್ರಯತ್ನಗಳನ್ನು ಮಾಡಿದೆ. ಜೂ ಎನ್ಟಿಆರ್ ಹಾಗೂ ಚಿರಂಜೀವಿ ಇಬ್ಬರೂ ಆ ಸಮಯದಲ್ಲಿ ಅಷ್ಟೇನೂ ಹತ್ತಿರವಿರಲಿಲ್ಲ. ಅದೇ ಸಮಯದಲ್ಲಿ ರಾಜಮೌಳಿ ಸಹ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದ ಕಾರಣ ಆ ಸಿನಿಮಾ ಆಗಲಿಲ್ಲ. ಕೊನೆಗೆ ನಾನು ರಾಜಮೌಳಿ ಜೊತೆಗೆ 'ಸೈ' ಸಿನಿಮಾ ಮಾಡಿದೆ. ಅದು ಸೂಪರ್ ಹಿಟ್ ಆಯಿತು. ಆದರೆ ಜೂ ಎನ್ಟಿಆರ್, ಚಿರಂಜೀವಿ ಒಟ್ಟಿಗೆ ಮಾಡಬೇಕೆಂದುಕೊಂಡಿದ್ದ ಸಿನಿಮಾ ಹಾಗೆಯೇ ನಿಂತು ಹೋಯಿತು ಎಂದು ಆವುಲ ಗಿರಿ ಹೇಳಿದ್ದಾರೆ.


Click it and Unblock the Notifications











