'RRR' ಸಿನಿಮಾ ಬಿಟ್ಟುಬಿಡುವ ಯೋಚನೆ ಮಾಡಿದ್ದ ಜೂ ಎನ್ಟಿಆರ್: ಕಾರಣ?
ರಾಜಮೌಳಿ ಭಾರತ ಚಿತ್ರರಂಗದ ಟಾಪ್ ನಿರ್ದೇಶಕ. ಅವರ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಸಿಕ್ಕರೂ ಸಾಕೆಂದು ಕಾಯುವ ನಟರಿದ್ದಾರೆ. ರಾಜಮೌಳಿ ಜೊತೆ ಸಿನಿಮಾ ಮಾಡಲೆಂದು ವರ್ಷಾನುಗಟ್ಟಲೆ ಕಾಯುವ ನಿರ್ಮಾಪಕರಿದ್ದಾರೆ. ಹೀಗಿದ್ದಾಗ ನಟ ಜೂ ಎನ್ಟಿಆರ್ ರಾಜಮೌಳಿ ಜೊತೆ ಸಿನಿಮಾ ಮಾಡುವುದು ಬೇಡ ಎಂದು ನಿರ್ಧರಿಸಿದ್ದರಂತೆ.
ರಾಜಮೌಳಿ ನಿರ್ದೇಶನದ 'RRR' ಸಿನಿಮಾದಲ್ಲಿ ಜೂ ಎನ್ಟಿಆರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೂ ಎನ್ಟಿಆರ್ ಜೊತೆಗೆ ರಾಮ್ ಚರಣ್ ಸಹ ಜೊತೆಯಾಗಿದ್ದಾರೆ. ಸಿನಿಮಾ ನಾಳೆ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ.
ಆದರೆ 'RRR' ಸಿನಿಮಾದಲ್ಲಿ ನಟಿಸಬೇಕಾದರೆ ಈ ಸಿನಿಮಾದಿಂದ ಹೊರನಡೆಯುವ ಬಗ್ಗೆ ಜೂ ಎನ್ಟಿಆರ್ ಯೋಚಿಸಿದ್ದರಂತೆ. ಅದೂ ಒಂದಲ್ಲ ಹಲವು ಬಾರಿ ತಾವು ಸಿನಿಮಾ ಬಿಟ್ಟು ಹೊರಹೋಗುವ ಬಗ್ಗೆ ನಿಶ್ಚಯಿಸಿದ್ದರಂತೆ. ಈ ಬಗ್ಗೆ ಸ್ವತಃ ಜೂ ಎನ್ಟಿಆರ್ ಹೇಳಿಕೊಂಡಿದ್ದಾರೆ.

ಸಿನಿಮಾ ಬಿಟ್ಟು ಹೊರಟುಬಿಡೋಣ ಎನಿಸಿತ್ತು: ಜೂ ಎನ್ಟಿಆರ್
'RRR' ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿರುವ ನಟ ಜೂ ಎನ್ಟಿಆರ್. ''ಒಂದು ಸಿನಿಮಾ ಮಾಡಬೇಕಾದರೆ ಬಹಳಷ್ಟು ದಿನ, ತಿಂಗಳುಗಳು ಅದೇ ಪ್ರಕ್ರಿಯೆಯಲ್ಲಿದ್ದಾಗ ಒಂದು ಹಂತದಲ್ಲಿ ಇದು ನನಗೆ ಬೇಡವೆಂದು, ಇದು ಸಾಕೆಂದು ಅನಿಸುತ್ತದೆ. ನನ್ನ ಕೈಯಿಂದ ಇನ್ನು ಸಾಧ್ಯವಾಗುವುದಿಲ್ಲ ಎನಿಸಿಬಿಡುತ್ತದೆ. ಆಗ ಸಾಕು ಇನ್ನು ನಿಲ್ಲಿಸಿಬಿಡೋಣ, ಸಿನಿಮಾದಿಂದ ಹೊರಗೆ ಹೋಗಿ ಬಿಡೋಣ ಎನಿಸಿಬಿಡುತ್ತದೆ'' ಎಂದಿದ್ದಾರೆ ಜೂ ಎನ್ಟಿಆರ್.

ನಮಗೆ ಸ್ಪೂರ್ತಿ ತುಂಬಿದ್ದು ರಾಜಮೌಳಿ: ಜೂ ಎನ್ಟಿಆರ್
''RRR' ಸಿನಿಮಾ ಮಾಡಬೇಕಾದರೆ ನನಗೆ ಹಲವು ಬಾರಿ ಹೀಗೆ ಅನ್ನಿಸಿತ್ತು. ಆದರೆ ನನಗೆ ಸ್ಪೂರ್ತಿ ತುಂಬಿದ್ದು ರಾಜಮೌಳಿ. ಸದಾ ಕಾಲ ನಮಗೆ ಸ್ಪೂರ್ತಿ ತುಂಬುತ್ತಾ, ಬೆನ್ನು ತಟ್ಟುತ್ತಾ ನಾವು ಎಲ್ಲೂ ನಿಲ್ಲದಂತೆ ನೋಡಿಕೊಂಡಿದ್ದು ರಾಜಮೌಳಿ. 'ಇನ್ನೂ ಎಷ್ಟು ಮಾಡಬಲ್ಲೆವು ನಾವು?' ಎಂದು ನಮಗೆ ಅನಿಸಿದಾಗೆಲ್ಲ ನಮ್ಮ ಮೇಲೆ ನಮಗೆ ನಂಬಿಕೆ ಕಡಿಮೆ ಆಗದಂತೆ, ನಮ್ಮಲ್ಲಿ ಸ್ಪೂರ್ತಿ ತುಂಬಿ ನಾವು ನಿಲ್ಲದಂತೆ ನೋಡಿಕೊಂಡರು. ನಮ್ಮನ್ನು ಸರಿಯಾದ ಹಾದಿಯಲ್ಲಿ ರಾಜಮೌಳಿ ನಡೆಸಿದರು'' ಎಂದಿದ್ದಾರೆ ಜೂ ಎನ್ಟಿಆರ್.

ದೈಹಿಕ ಕ್ಷಮತೆ ಮಾತ್ರ ಸರಿಹೋಗದು: ಜೂ ಎನ್ಟಿಆರ್
''ಈ ರೀತಿಯ ಸತತ ಕಾರ್ಯಗಳಿಗೆ ದೈಹಿಕ ಕ್ಷಮತೆ ಇದ್ದರೆ ಸರಿ ಹೋಗುವುದಿಲ್ಲ. ಇದಕ್ಕೆ ಮಾನಸಿಕ ಶಕ್ತಿಯ ಅವಶ್ಯಕತೆ ಇರುತ್ತದೆ. ಅದರಲ್ಲಿಯೂ 'RRR' ನಂಥಹಾ ಒಂದು ಅತಿಯಾದ ಪರಿಶ್ರಮ ಬೇಡುವ ಸಿನಿಮಾದಲ್ಲಿ ಮಾನಸಿಕ ಶಕ್ತಿ ಹೆಚ್ಚಾಗಿಯೇ ಬೇಕಾಗಿರುತ್ತದೆ. ಆ ಮಾನಸಿಕ ಶಕ್ತಿಯನ್ನು ತುಂಬುವ ಕಾರ್ಯವನ್ನು ನಿರ್ದೇಶಕ ರಾಜಮೌಳಿ ಮಾಡಿದರು'' ಎಂದಿದ್ದಾರೆ ಜೂ ಎನ್ಟಿಆರ್.

ಸೆಟ್ನಲ್ಲಿ ಬಹಳ ಶಿಸ್ತು ರಾಜಮೌಳಿಗೆ
ಜೂ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜ ಇಬ್ಬರೂ 'RRR' ಸಿನಿಮಾಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಬೆಳಿಗ್ಗೆ ಪ್ರಾರಂಭವಾಗುತ್ತಿದ್ದ ಚಿತ್ರೀಕರಣ ಮಧ್ಯ ರಾತ್ರಿಯವರೆಗೆ ನಡೆದ ಉದಾಹರಣೆಯೂ ಇದೆಯಂತೆ. ಒಂದು ಬಾರಿಯಂತೂ ರಾಮ್ ಚರಣ್ಗೆ ವಿಪರೀತ ಜ್ವರ, ಆದರೆ ಆ ದಿನವೂ ರಾಜಮೌಳಿ ರಾಮ್ ಚರಣ್ಗೆ ರಜೆ ನೀಡಲಿಲ್ಲವಂತೆ. ಜೂ ಎನ್ಟಿಆರ್ ಅವರದ್ದೂ ಇದೇ ಕತೆ, ಅವರೇ ಹೇಳಿಕೊಂಡಂತೆ, ರೋಪ್ ದೃಶ್ಯವೊಂದರ ಶೂಟ್ ನಡೆಯುತ್ತಿತ್ತು. ಆ ಸಮಯದಲ್ಲಿ ನಾನು ಬಹಳ ಸುಸ್ತಾಗಿ ಬಿಟ್ಟಿದ್ದೆ. ಮಧ್ಯ ರಾತ್ರಿ 2 ಆದರೂ ಚಿತ್ರೀಕರಣ ಇನ್ನೂ ಜಾರಿಯಲ್ಲಿತ್ತು. ಅದಾಗಲೇ ಐದು ಶಾಟ್ ಮುಗಿದಿತ್ತು. ಆದರೆ ರಾಜಮೌಳಿಗೆ ತೃಪ್ತಿಯಾಗಿರಲಿಲ್ಲ. ಅಂದು ನನಗೆ ಬಹಳ ಸುಸ್ತಾಗಿತ್ತು ಆದರೂ ರಾಜಮೌಳಿ ಬ್ರೇಕ್ ನೀಡಿರಲಿಲ್ಲ'' ಎಂದು ಹೇಳಿಕೊಂಡಿದ್ದರು.


Click it and Unblock the Notifications











