ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ತಾರಕ್ ಸ್ಪೆಷಲ್ ಟ್ರೀಟ್: KGF ಸಾರಥಿಗೆ ಯಂಗ್ ಟೈಗರ್ ಸರ್ಪ್ರೈಸ್
ಕೇವಲ ಮೂರೇ ಮೂರು ಸಿನಿಮಾಗಳಿಂದ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ನಿರ್ದೇಶಕ ಪ್ರಶಾಂತ್ ನೀಲ್. ಕೆಜಿಎಫ್ ಸಾರಥಿ ಸಿನಿಮಾದಲ್ಲಿ ನಟಿಸೋಕೆ ಈಗ ಬಾಲಿವುಡ್ ಸ್ಟಾರ್ಸ್ ಕ್ಯೂ ನಿಂತಿದ್ದಾರೆ. ಸದ್ಯ 'ಸಲಾರ್' ಚಿತ್ರಕ್ಕೆ ನೀಲ್ ಆಕ್ಷನ್ ಕಟ್ ಹೇಳ್ತಿದ್ದಾರೆ. ನಂತರ ಜ್ಯೂ. ಎನ್ಟಿಆರ್ ಚಿತ್ರ ಕೈಗೆತ್ತಿಕೊಳ್ಳುವುದು ಪಕ್ಕಾ ಆಗಿದೆ. ನಿನ್ನೆಯಷ್ಟೆ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಚಿತ್ರೀಕರಣ ಇನ್ನು ಮುಗಿದಿಲ್ಲ. ಅಭಿಮಾನಿಗಳು ಈ ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಆಪ್ತರು ಪ್ರಶಾಂತ್ ನೀಲ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕೆಲ ದಿನಗಳಿಂದ ನೀಲ್ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದಾರೆ. ಇನ್ನು ಹೊಂಬಾಳೆ ಸಂಸ್ಥೆ ಕೂಡ 'ಸಲಾರ್' ಸೆಟ್ನಲ್ಲಿ ನಿರ್ದೇಶಕರು ಹೇಗಿರುತ್ತಾರೆ? ಅವರು ಕೆಲಸದ ವೈಖರಿ ಹೇಗಿರುತ್ತದೆ? ಎಂದು ತೋರಿಸುವ ಸ್ಪೆಷಲ್ ವಿಡಿಯೋ ಶೇರ್ ಮಾಡಿ ಶುಭ ಕೋರಿದ್ದರು.

ರಾಮ್ಚರಣ್, ಪ್ರಭಾಸ್ ಸೇರಿದಂತೆ ಹಲವು ಸೂಪರ್ ಸ್ಟಾರ್ಗಳು ನಿರ್ದೇಶಕ ಪ್ರಶಾಂತ್ ನೀಲ್ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ಆದರೆ ತಾರಕ್ ಮಾತ್ರ ಟ್ವಿಟ್ಟರ್, ಇನ್ಸ್ಟಾದಲ್ಲಿ ಶುಭಾಶಯ ಕೋರಲಿಲ್ಲ. ಇನ್ನು 'ಸಲಾರ್' ಸೆಟ್ನಲ್ಲಿ ಪ್ರಶಾಂತ್ ನೀಲ್ ಹುಟ್ಟುಹಬ್ಬ ಆಚರಿಸಿಕೊಂಡಿರುವ ಫೋಟೊಗಳು ಕೂಡ ವೈರಲ್ ಆಗಿತ್ತು. ನೀಲ್ ಪತ್ನಿ ಲಿಖಿತಾ ರೆಡ್ಡಿ, ನಿರ್ಮಾಪಕ ವಿಜಯ್ ಕಿರಗಂದೂರ್, ನಟ ಪ್ರಭಾಸ್ ಸೇರಿದಂತೆ ಇಡೀ ಚಿತ್ರತಂಡ ಈ ಸಂಭ್ರಮಾಚರಣೆಯಲ್ಲಿ ಭಾಗಿ ಆಗಿತ್ತು.
ನಾಟಿ ಕೋಳಿ ಸಾರು ಕಳಿಸಿದ ತಾರಕ್
ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಜ್ಯೂ. ಎನ್ಟಿಆರ್ ಸ್ಪೆಷಲ್ ಟ್ರೀಟ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡದಿದ್ದರೂ ತಮ್ಮದೇ ಸ್ಟೈಲ್ನಲ್ಲಿ ಸರ್ಪ್ರೈಸ್ ನೀಡಿದ್ದಾರೆ. ಮನೆಯಲ್ಲಿ ಮಾಡಿದ ನಾಟಿ ಕೋಳಿ ಸಾರನ್ನು ನೀಲ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಚಾರವನ್ನು ಲಿಖಿತಾ ರೆಡ್ಡಿ ನೀಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಪೆಷಲ್ ಫುಡ್ ಕಳುಹಿಸಿದ್ದಕ್ಕೆ ತಾರಕ್ ಅಣ್ಣನಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
ಮಾರ್ಚ್ನಲ್ಲಿ NTR31 ಆರಂಭ
ಬಹಳ ಹಿಂದೆಯೇ ಜ್ಯೂ. ಎನ್ಟಿಆರ್ ಕಾಂಬಿನೇಷನ್ನಲ್ಲಿ ಪ್ರಶಾಂತ್ ನೀಲ್ NTR31 ಸಿನಿಮಾ ಘೋಷಿಸಿದ್ದರು. ಕೋವಿಡ್ ಕಾರಣದಿಂದ ಬೇರೆ ಅವರಿಬ್ಬರು ಬೇರೆ ಕಮೀಟ್ಮೆಂಟ್ಗಳು ತಡವಾಗಿ ಈ ಸಿನಿಮಾ ಶುರುವಾಗುವುದು ತಡವಾಗುತ್ತಿದೆ. ಮುಂದಿನ ವರ್ಷ ಮಾರ್ಚ್ನಲ್ಲಿ NTR31 ಸಿನಿಮಾ ಸೆಟ್ಟೇರಲಿದೆ. ಯಂಗ್ ಟೈಗರ್ಗಾಗಿ ಒಂದು ಆಕ್ಷನ್ ಎಂಟರ್ಟೈನರ್ ಸಬ್ಜೆಕ್ಟ್ ಸಿದ್ಧಪಡಿಸಿಕೊಂಡಿದ್ದಾರೆ ಪ್ರಶಾಂತ್ ನೀಲ್. ಈ ಚಿತ್ರಕ್ಕಾಗಿ ತಾರಕ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸೆಪ್ಟೆಂಬರ್ 28ಕ್ಕೆ 'ಸಲಾರ್'
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಸೆಪ್ಟೆಂಬರ್ 28ಕ್ಕೆ ತೆರೆಗಪ್ಪಳಿಸಲಿದೆ. ಕೊನೆ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸ್ತಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ದೇವರಾಜ್, ಭಜರಂಗಿ ಲೋಕಿ, ಪ್ರಮೋದ್ ಪಂಜು ತಾರಾಗಣದಲ್ಲಿದ್ದಾರೆ. ಹೊಂಬಾಳೆ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡ್ತಿದೆ. ಶೀಘ್ರದಲ್ಲೇ ಟೀಸರ್ ರಿಲೀಸ್ ಆಗಲಿದೆ.
'ದೇವರ' ಚಿತ್ರದಲ್ಲಿ ತಾರಕ್ ಬ್ಯುಸಿ
'RRR' ಸಿನಿಮಾ ರಿಲೀಸ್ ಆಗಿ ವರ್ಷದ ನಂತರ ಜ್ಯೂ. ಎನ್ಟಿಆರ್ 'ದೇವರ' ಸಿನಿಮಾ ಕೈಗೆತ್ತಿಕೊಂಡಿದ್ದರು. ಕೊರಟಾಲ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ತಾರಕ್ ಹುಟ್ಟುಹಬ್ಬಕ್ಕೆ ಪೋಸ್ಟರ್ ಸಮೇತ ಚಿತ್ರದ ಟೈಟಲ್ ಘೋಷಣೆ ಮಾಡಲಾಗಿತ್ತು. ಚಿತ್ರದಲ್ಲಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸ್ತಿದ್ದು ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸಲಿದ್ದಾರೆ.


Click it and Unblock the Notifications











