ಅಸೆಂಬ್ಲಿಯಲ್ಲಿ ನಡೆದಿದ್ದು ತಲೆ ತಗ್ಗಿಸುವ ವಿಚಾರ: ಜೂ ಎನ್ಟಿಆರ್
ಆಂಧ್ರ ಪ್ರದೇಶದ ರಾಜಕೀಯದಲ್ಲಿ ಚಂದ್ರಬಾಬು ನಾಯ್ಡು ಮಾಧ್ಯಮಗಳ ಮುಂದೆ ಅತ್ತು ಕಣ್ಣೀರು ಸುರಿಸಿದ್ದು ಬಹುವಾಗಿ ಚರ್ಚೆಯಾಗುತ್ತಿದೆ.
ಅಸೆಂಬ್ಲಿಯಲ್ಲಿ ಆಡಳಿತ ಪಕ್ಷದ ಸದಸ್ಯರು ಅತಿರೇಕದಿಂದ ವರ್ತಿಸಿದ್ದಲ್ಲದೆ, ಚಂದ್ರಬಾಬು ನಾಯ್ಡು ಪತ್ನಿಯ ಬಗ್ಗೆ ಕಟ್ಟದಾಗಿ ಮಾತನಾಡಿದ ಘಟನೆ ವಿಧಾನಸಭೆಯಲ್ಲಿ ನಡೆದಿದ್ದು, ಇದೇ ಕಾರಣಕ್ಕೆ ಪತ್ರಿಕಾಗೋಷ್ಠಿಯಲ್ಲಿ ಚಂದ್ರಬಾಬು ನಾಯ್ಡು ಕಣ್ಣೀರು ಹಾಕಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡಿರುವ ಜೂ ಎನ್ಟಿಆರ್, ''ಮಾತು ನಮ್ಮ ವ್ಯಕ್ತಿತ್ವಕ್ಕೆ ಕನ್ನಡಿ. ರಾಜಕೀಯದಲ್ಲಿ ಒಬ್ಬರ ಮೇಲೆ ಟೀಕೆ, ಪ್ರತಿಟೀಕೆ ಸಾಮಾನ್ಯ. ಈ ಟೀಕೆ, ವಿಮರ್ಶೆಗಳು ಪ್ರಜೆಗಳಿಗಾಗಿ ಇರಬೇಕೆ ಹೊರತು, ವೈಯಕ್ತಿಕ ನಿಂದನೆ ಆಗಬಾರದು'' ಎಂದಿದ್ದಾರೆ.

ಸ್ತ್ರೀಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ: ಜೂ ಎನ್ಟಿಆರ್
''ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ತೀವ್ರ ದುಃಖ ಉಂಟು ಮಾಡಿದೆ. ಪ್ರಜೆಗಳ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ವ್ಯಕ್ತಿಗತ ದೋಷಾರೋಪಣೆಗೆ ಇಳಿದುಬಿಟ್ಟಿದ್ದಾರೆ. ಅದರಲ್ಲೂ ಮಹಿಳೆಯರ ಬಗ್ಗೆ ಪುರುಷ ಅಹಂಕಾರದಿಂದ ಮಾತನಾಡುತ್ತಿದ್ದಾರೋ ಅದು ಅರಾಜಕ ಆಡಳಿತ ವ್ಯವಸ್ಥೆ ಆರಂಭವಾಗುತ್ತಿರುವುದರ ಸೂಚನೆ. ಅದು ಸರಿಯಲ್ಲ. ಸ್ತೀಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ, ನಮ್ಮ ಬದುಕಿನಲ್ಲಿ, ಹೃದಯ, ರಕ್ತಗಳಲ್ಲಿ ಸೇರಿಹೋಗಿರುವ ಸಂಪ್ರದಾಯವದು'' ಎಂದಿದ್ದಾರೆ ಜೂ ಎನ್ಟಿಆರ್.

ಕುಟುಂಬದ ವ್ಯಕ್ತಿಯಾಗಿ ನಾನು ಮಾತನಾಡುತ್ತಿಲ್ಲ: ಜೂ ಎನ್ಟಿಆರ್
''ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಜಾಗೃತೆಯಾಗಿ ಹಸ್ತಾಂತರಿಸಬೇಕೇ ವಿನಃ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಹೀಗೆ ಕಲುಷಿತಗೊಳಿಸಿ, ಸುಟ್ಟು ಹಾಕಲಾಗುತ್ತಿದೆ. ಮುಂದಿನ ತಲೆಮಾರಿಗೆ ನಾವು ಬಂಗಾರದಂಥಹಾ ಸಮಾಜ ಬಿಟ್ಟು ಹೋಗುತ್ತಿದ್ದೇವೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ವ್ಯಕ್ತಿಗತ ದೂಷಣೆಗೆ ಗುರಿಯಾಗಿರುವ ವ್ಯಕ್ತಿಯ (ಚಂದ್ರಬಾಬು ನಾಯ್ಡು) ಕುಟುಂಬಕ್ಕೆ ಸೇರಿದ ವ್ಯಕ್ತಿಯಾಗಿ ನಾನು ಈ ಮಾತುಗಳನ್ನು ಮಾತನಾಡುತ್ತಿಲ್ಲ. ಬದಲಿಗೆ ನಾನು ಒಬ್ಬ ಮಗನಾಗಿ, ಪತಿಯಾಗಿ, ತಂದೆಯಾಗಿ, ಈ ದೇಶದ ಪ್ರಜೆಯಾಗಿ ಹಾಗೂ ತೆಲುಗು ಭಾಷಿಕನಾಗಿ ಮಾತನಾಡುತ್ತಿದ್ದೇನೆ'' ಎಂದಿದ್ದಾರೆ.

ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ: ಜೂ ಎನ್ಟಿಆರ್
''ರಾಜಕೀಯ ನಾಯಕರಿಗೆಲ್ಲ ನನ್ನದೊಂದೇ ಮನವಿ. ಈ ಅರಾಜಕ ಸಂಸ್ಕೃತಿಯನ್ನು ಇಲ್ಲಿಗೆ ನಿಲ್ಲಿಸಿಬಿಡಿ. ಪ್ರಜೆಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಅದರ ಬಗ್ಗೆ ಹೋರಾಡಿ. ಮುಂದಿನ ತಲೆಮಾರು ನಮ್ಮನ್ನು ನೋಡಿ ಕಲಿಯುವಂತೆ ನಡವಳಿಕೆಗಳನ್ನು ತಿದ್ದಿಕೊಳ್ಳಿ. ಈ ಅರಾಜಕತೆ ಇಲ್ಲಿಗೆ ಕೊನೆಯಾಗುತ್ತದೆ ಎಂದು ಮನಸಾರೆ ಕೋರಿಕೊಳ್ಳುತ್ತಿದ್ದೇನೆ'' ಎಂದಿದ್ದಾರೆ ಜೂ. ಎನ್ಟಿಆರ್.

ಬಾಲಕೃಷ್ಣ ಸಹ ಖಂಡಿಸಿದ್ದಾರೆ
ಚಂದ್ರಬಾಬು ನಾಯ್ಡು ಕುಟುಂಬದ ಮೇಲೆ ವಿಧಾನಸಭೆಯಲ್ಲಿ ಆದ ವಾಗ್ದಾಳಿಯನ್ನು ನಟ ಬಾಲಕೃಷ್ಣ ಸಹ ಖಂಡಿಸಿದ್ದಾರೆ. ''ದೇವಾಲಯದಂಥಹಾ ವಿಧಾನಸಭೆಯಲ್ಲಿ ಮಹಿಳೆಯ ಬಗ್ಗೆ ತುಚ್ಛವಾಗಿ ಮಾತನಾಡಿರುವುದು ಅತ್ಯಂತ ಹೀನ ನಡವಳಿಕೆ'' ಎಂದು ಬಾಲಕೃಷ್ಣ ಹೇಳಿದ್ದಾರೆ. ಅಸೆಂಬ್ಲಿಯಲ್ಲಿ ನಡೆದ ಘಟನೆ ಬಗ್ಗೆ ಇನ್ನೂ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಟ, ನಿರ್ಮಾಪಕ ಬಂಡ್ಲ ಗಣೇಶ್, ಚಂದ್ರಬಾಬು ನಾಯ್ಡುಗೆ ಸಾಂತ್ವನ ಹೇಳಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಚಂದ್ರಬಾಬು ನಾಯ್ಡು ಅತ್ತಿರುವುದನ್ನು ತಮಾಷೆ ಮಾಡಿದ್ದಾರೆ. ನಟಿ, ರಾಜಕಾರಣಿ ರೋಜಾ, ಚಂದ್ರಬಾಬು ನಾಯ್ಡು ಪಾಪದ ಫಲಗಳಿವು ಎಂದಿದ್ದಾರೆ.


Click it and Unblock the Notifications











