ಒದ್ದು ಓಡಿಸ್ತಾರೆ, ಅಭಿಮಾನಿಗಳ ಮೇಲೆ ಕೆಂಡ ಕಾರಿದ ಜ್ಯೂ.ಎನ್ಟಿಆರ್..!
ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ ಅಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ಒಟ್ನಲ್ಲಿ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ತಾರೆಯರು ಪ್ರತಿ ದಿನ ಒಂದಿಲ್ಲೊಂದು ರೀತಿಯಲ್ಲಿ ನರಳುವಂತಾಗಿದೆ. ಇನ್ನು ಭಾರತದ ಕಲಾವಿದರಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ಹೊರ ದೇಶಗಳಲ್ಲಿ ಕೂಡ ಅಭಿಮಾನಿಗಳಿದ್ದಾರೆ.
ಹೀಗಾಗಿ ಅಲ್ಲಿಯೂ ಕೂಡ ಇವರಿಗೆ ಸ್ವಾತಂತ್ರ್ಯ ಇಲ್ಲ. ನೆಮ್ಮದಿಯಿಂದ ಸ್ಟಾರ್ಗಳು ಓಡಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಜ್ಯೂ.ಎನ್.ಟಿ.ಆರ್ ತಮ್ಮ ಅಭಿಮಾನಿಗಳ ಮೇಲೆ ಕಿಡಿ ಕಾರಿದ್ದಾರೆ. ಸೆಲ್ಪೀಗಾಗಿ ಸುತ್ತುವರೆದ ತಮ್ಮ ಅಭಿಮಾನಿಗಳ ಕಾಟ ತಾಳಲಾರದೇ ಅಸಮಾಧಾನದಿಂದ ಹೊರ ನಡೆದಿದ್ದಾರೆ.

ಹೌದು, ಅಸಲಿಗೆ ಲಂಡನ್ನಲ್ಲಿ ಆರ್.ಆರ್.ಆರ್. ಚಿತ್ರದ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ರಾಜಮೌಳಿ, ರಾಮ್ ಚರಣ್ ತೇಜಾ ಜೊತೆ ಜೂನಿಯರ್ ಎನ್.ಟಿ.ಆರ್ ಕೂಡ ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಲಂಡನ್ನ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ರಾಯಲ್ ಫಿಲ್ಹಾರ್ಮೋನಿಕ್ ಅವರ ತಂಡದ ಲೈವ್ ಆರ್ಕೆಸ್ಟ್ರಾ ಪ್ರದರ್ಶನವೂ ಇತ್ತು.
ತಮ್ಮ ಚಿತ್ರದ ಪ್ರದರ್ಶನಕ್ಕೆ ಜ್ಯೂ.ಎನ್.ಟಿ.ಆರ್ ಆಗಮಿಸಿದ ವೇಳೆ ಅಲ್ಲಿದ್ದ ಅಭಿಮಾನಿಗಳು ಅತಿರೇಕದಿಂದ ವರ್ತಿಸಿದ್ದಾರೆ. ಜ್ಯೂ ಎನ್.ಟಿ.ಆರ್ನ ಮೆಚ್ಚಿಸಲು ತಮ್ಮ ಅಭಿಮಾನದ ಪ್ರದರ್ಶನ ಮಾಡಿದ್ದಾರೆ. ಶಿಳ್ಳೆ ಹೊಡೆದು ಜೋರು ಜೋರಾಗಿ ಕಿರುಚಾಡಿದ್ದಾರೆ. ತಳ್ಳಾಡಿದ್ದಾರೆ.
ಅಭಿಮಾನಿಗಳ ಈ ವರ್ತನೆಯಿಂದ ಕಿರಿಕಿರಿಗೊಳಗಾದ ಜ್ಯೂ.ಎನ್.ಟಿ.ಆರ್, ತಮ್ಮ ಅಭಿಮಾನಿಗಳಲ್ಲಿ ಶಾಂತಿಯುತವಾಗಿ ಮನವಿ ಮಾಡಿಕೊಂಡಿದ್ದಾರೆ. ನಾನು ನಿಮ್ಮೆಲ್ಲರಿಗೆ ಸೆಲ್ಫಿ ನೀಡುತ್ತೇನೆ, ಆದರೆ ನೀವು ಕಾಯಬೇಕು, ಆತುರ ಪಡೆಬೇಡಿ ಎಂದು ಹೇಳಿದ್ದಾರೆ. ಈ ರೀತಿ ವರ್ತಿಸಬೇಡಿ, ನೀವು ಈ ರೀತಿ ನಡೆದುಕೊಂಡರೆ ಸೆಕ್ಯೂರಿಟಿಯವರು ನಿಮ್ಮನ್ನು ಒದ್ದು ಓಡಿಸುತ್ತಾರೆ ಎಂದು ಹೇಳಿದ್ದಾರೆ.
ಆದರೂ ಕೂಡ ಅಭಿಮಾನಿಗಳ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಹೀಗಾಗಿ ಅಭಿಮಾನಿಗಳ ವರ್ತನೆಯಿಂದ ಕೋಪ ಮಾಡಿಕೊಂಡ ಜ್ಯೂ.ಎನ್.ಟಿ.ಆರ್ ತಮ್ಮ ಬಾಡಿಗಾರ್ಡ್ಗಳ ಸಹಾಯದಿಂದ ಅಲ್ಲಿಂದ ತೆರಳಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಅಭಿಮಾನಿಗಳ ವರ್ತನೆಯನ್ನು ಖಂಡಿಸಿದ್ಧಾರೆ. ಇನ್ನು ಕಳೆದ ವಾರ ಲಂಡನ್ನ ಮೇಡಂ ಟುಸಾಡ್ಸ್ ಮ್ಯೂಸಿಯಂಗೆ ರಾಮ್ ಚರಣ್ ತೇಜಾ ಹೋದಾಗಲೂ ಕೂಡ ಅಭಿಮಾನಿಗಳು ಮೀತಿ ಮೀರಿ ವರ್ತಿಸಿದ್ದರು. ಜೋರು ಜೋರಾಗಿ ಕಿರುಚಾಡಿದ್ದರು. ಹೀಗಾಗಿ ಅಭಿಮಾನಿಗಳಿಂದ ಹೊರ ದೇಶಗಳಲ್ಲಿ ಸ್ಟಾರ್ಗಳು ಮುಜುಗರಕ್ಕೊಳಗಾಗುವಂತೆ ಆಗಿದೆ ಎನ್ನುವ ಅಭಿಪ್ರಾಯವನ್ನು ಕೂಡ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಹೊರದೇಶಗಳಲ್ಲಿದ್ದಾಗಲಾದರೂ ಜನರಿಗೆ ನಾಗರಿಕ ಪ್ರಜ್ಞೆ ಇರಬೇಕು ಎನ್ನುತ್ತಿದ್ದಾರೆ.
ಇನ್ನುಳಿದಂತೆ ಜ್ಯೂ.ಎನ್.ಟಿ.ಆರ್ ಸದ್ಯ ಪ್ರಶಾಂತ್ ನೀಲ್ ಅವರ ಜೊತೆ ಚಿತ್ರವನ್ನು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಈ ಚಿತ್ರದ ಚಿತ್ರೀಕರಣ ಶುರುವಾಗಿದೆ. ಎರಡು ಹಂತದ ಚಿತ್ರೀಕರಣ ಕೂಡ ಮುಗಿದಿದ್ದು ಸದ್ಯ ಪ್ರಶಾಂತ್ ನೀಲ್ ಮತ್ತವರ ತಂಡ ಕರ್ನಾಟಕದ ಹಲವಡೆ ಚಿತ್ರದ ಚಿತ್ರೀಕರಣವನ್ನು ಮಾಡುತ್ತಿದೆ.
ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್.ಟಿ.ಆರ್ ಕಾಂಬಿನೇಶನ್ನ ಈ ಬಹುನಿರೀಕ್ಷಿತ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದ್ದು ಮುಂದಿನ ವರ್ಷ ಜೂನ್ 25ರಂದು ಚಿತ್ರ ಬಿಡುಗಡೆಯಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಹೀಗೆ ಪ್ಯಾನ್ ಇಂಡಿಯಾ ಲೆವಲ್ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಭುವನ್ ಗೌಡ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ಧಾರೆ ಎನ್ನುವ ಸುದ್ದಿ ಇದೆ.


Click it and Unblock the Notifications











