ಗಂಡುಗಲಿ ಕೆ ಮಂಜು ಬಾಲಿವುಡ್ ಪ್ರಯಾಣಕ್ಕೆ ಸಜ್ಜು

'ರಾಮ ಶಾಮ ಭಾಮ' ಚಿತ್ರಕ್ಕೆ ಕಮಲ್ ಹಾಸನ್ ಅವರನ್ನು ಕನ್ನಡಕ್ಕೆ ಮತ್ತೆ ಕರೆ ತಂದವರು ಇದೇ ಮಂಜು. ಮಲಯಾಳಂ ಮೆಗಾ ಸ್ಟಾರ್ ಮಮ್ಮುಟ್ಟಿಯನ್ನು 'ಶಿಕಾರಿ' ಚಿತ್ರದ ಮೂಲಕ ಕನ್ನಡಿಗರಿಗೆ ತೋರಿಸಿದರು. ಗ್ಲಾಮರ್ ರಾಣಿ ರಾಗಿಣಿಗೆ ಮೊಟ್ಟಮೊದಲ ಬಾರಿಗೆ ಖಾಕಿ ತೊಡಿಸಿ 'ರಾಗಿಣಿ ಐಪಿಸಿ' ಮಾಡುತ್ತಿದ್ದಾರೆ.
ಕಠಾರಿ ವೀರ ಸುರಸುಂದರಾಂಗಿ ಚಿತ್ರದ ಬಿಡುಗಡೆ ವೇಳೆ ಆ ಚಿತ್ರದ ನಿರ್ಮಾಪಕ ಮುನಿರತ್ನ ಅವರ ವಿರುದ್ಧ ತೊಡೆತಟ್ಟಿ ನಿಂತಿದ್ದೂ ಇದೇ ಮಂಜು. ತನ್ನ ಚಿತ್ರ ಮೊದಲು ಮುಹೂರ್ತ ಕಂಡಿದೆ, ಹಾಗಾಗಿ ಗಾಡ್ ಫಾದರ್ ಕಠಾರಿವೀರನಿಗಿಂತ ಮೊದಲು ಬಿಡುಗಡೆ ಆಗಬೇಕು ಎಂದು ಕ್ಯಾತೆ ತೆಗೆದು ಭಾರೀ ಸುದ್ದಿಯಾಗಿದ್ದರು.
ತಮಿಳು ನಟ ವಿಕ್ರಮ್ ಅವರನ್ನು ನಾಲ್ಕೈದು ತಿಂಗಳ ಹಿಂದೆ ಕನ್ನಡಕ್ಕೆ ಕರೆ ತರುತ್ತೇನೆ ಎಂದು ಮಂಜು ಹೇಳಿದ್ದರಾದರೂ ಅದು ಸದ್ಯಕ್ಕೆ ಮುಂದಕ್ಕೆ ಹೋಗಿದೆ. ಬದಲಿಗೆ ಮಂಜು, ಹೊಸ ಸಾಹಸ ಮಾಡಲು ಹೊರಟಿದ್ದಾರೆ. ಬಾಲಿವುಡ್, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಲಾ ಒಂದೊಂದು ಚಿತ್ರ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಮಂಜು ನಿರ್ಮಾಣದ ತಮಿಳಿನ ಚಿತ್ರಕ್ಕೆ 'ಬ್ರಹ್ಮನ್' ಎಂದು ಹೆಸರಿಡಲಾಗಿದೆ. ಪೊರಾಲಿ, ನಾಡೋಡಿಗಳ್ ಹಾಗೂ ಸುಬ್ರಮಣ್ಯಪುರಂ ಸೂಪರ್ ಹಿಟ್ ಖ್ಯಾತಿಯ ಶಶಿಕುಮಾರ್ ಹೀರೋ. ಕಮಲ್ ಹಾಸನ್ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಕ್ರೆಟಿಸ್ ನಿರ್ದೇಶಕರು. ನಾಯಕಿ, ಮಿಕ್ಕ ತಾರಾಗಣ, ಸಂಗೀತ ಹಾಗೂ ಉಳಿದ ತಂತ್ರಜ್ಞರ ಆಯ್ಕೆ ನಡೆಯಬೇಕಾಗಿದೆ.
ಇನ್ನು ಹಿಂದಿಯಲ್ಲಿ 'ರಾಜೀವ್' ಎಂಬ ಹೊಸ ನಿರ್ದೇಶಕರೊಬ್ಬರ ಸಾರಥ್ಯದಲ್ಲಿ ಚಿತ್ರ ನಿರ್ಮಿಸುವ ಮಾತುಕತೆ ಈಗಾಗಲೇ ನಡೆದಿದೆ. ಅಂತಿಮ ತೀರ್ಮಾನವಷ್ಟೇ ಬಾಕಿ. ಆದರೆ ತೆಲುಗಿನ ನಿರ್ಮಿಸುವ ಚಿತ್ರಕ್ಕೆ ನಾಯಕ ಹಾಗೂ ನಿರ್ದೇಶಕರ ಆಯ್ಕೆ ಇನ್ನೂ ನಡೆದಿಲ್ಲ. ಸದ್ಯಕ್ಕೆ ಕೆ ಮಂಜು ಕಡೆಯಿಂದ ಬಂದ ಮಾಹಿತಿ ಇಷ್ಟು.
ಕನ್ನಡದಲ್ಲಿ ಸದ್ಯ ಸೂಪರ್ ಸ್ಟಾರ್ ಉಪೇಂದ್ರ ನಾಯಕನಾಗಿರುವ 'ಗಾಡ್ ಫಾದರ್' ಬಿಡುಗಡೆಗೆ ಸಿದ್ಧವಾಗಿದೆ. ದುನಿಯಾ ವಿಜಯ್ ನಾಯಕತ್ವದ 'ರಜನಿಕಾಂತ' ಚಿತ್ರ ಕೂಡ ಬಿಡುಗಡೆಗೆ ರೆಡಿ. 'ರಾಗಿಣಿ ಐಪಿಎಸ್' ಚಿತ್ರೀಕರಣದ ಹಂತದಲ್ಲಿದೆ. ಅಷ್ಟೇ ಅಲ್ಲ, ಇನ್ನೂ ಕೆಲವು ಕನ್ನಡ ಚಿತ್ರಗಳನ್ನು ಕೆ ಮಂಜು ನಿರ್ಮಿಸುತ್ತಿದ್ದಾರೆ. ಅದಕ್ಕಾಗಿ ಗಾಂಧಿನಗರದಲ್ಲಿ ಮಂಜು ಓಡಾಟ ನಡೆದಿದೆ.
ಕೇವಲ ನಿರ್ಮಾಪಕರು ಮಾತ್ರವಲ್ಲ, ಮಂಜು ವಿತರಕರೂ ಹೌದು. ತಮಿಳಿನ ದೊಡ್ಡ ಬ್ಯಾನರ್, ಹೀರೋಗಳ ಚಿತ್ರಗಳನ್ನು ಕರ್ನಾಟಕದಲ್ಲಿ ವಿತರಿಸುವವರು ಇದೇ ಮಂಜು. ವಿಜಯ್ ನಾಯಕನಾಗಿದ್ದ 'ವೇಲಾಯುಧಂ' ಚಿತ್ರಕ್ಕೆ ಇವರೇ ವಿತರಕರಾಗಿದ್ದರು. ಸದ್ಯ ಅಜಿತ್ ನಾಯಕತ್ವದ ಬಹುನಿರೀಕ್ಷಿತ 'ಬಿಲ್ಲಾ 2' ವಿತರಣೆ ಹಕ್ಕಿಗೆ ಮಂಜು ಮಾತುಕತೆ ನಡೆಸುತ್ತಿದ್ದಾರೆ.
ಇವೆಲ್ಲಾ ಕಾರಣ, ಬೆಳವಣಿಗೆ ಮೂಲಕ ಒಂದು ವಿಷಯವಂತೂ ಸ್ಪಷ್ಟವಾಗುತ್ತಿದೆ. ಮಂಜು ಅವರಿಗೆ ಚಿತ್ರನಿರ್ಮಾಣ ಹಾಗೂ ವಿತರಣೆ ಕೆಲಸದಲ್ಲಿ ಸಾಕಷ್ಟು ಆಸಕ್ತಿ ಹಾಗೂ ಶೃದ್ಧೆಯಿದೆ. ಕೇವಲ ಕನ್ನಡವಲ್ಲದೇ ನೆರೆಭಾಷೆ ಹಾಗೂ ಪರಭಾಷೆಯಗಳಲ್ಲೂ ವ್ಯವಹರಿಸುವ ಆಸಕ್ತಿ ಹಾಗೂ ತಾಖತ್ತು ಎಲ್ಲವೂ ಇದೆ. ಇದು, ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಸಂಗತಿಯಷ್ಟೇ ಅಲ್ಲದೇ, ಸಂತೋಷದ ಸಂಗತಿಯೂ ಹೌದು.
ಕನ್ನಡ ಚಿತ್ರರಂಗಕ್ಕೆ ಕೆ ಮಂಜು ದೊಡ್ಡ ಕೊಡುಗೆ ಎಂದು ಇವೆಲ್ಲವುಗಳ ಮೂಲಕ ಧಾರಾಳವಾಗಿ ಹೇಳಬಹುದು. ಸದ್ಯದಲ್ಲೇ ಮಂಜು ನಿರ್ಮಾಣದ ಗಾಡ್ ಫಾದರ್ ಚಿತ್ರ ತೆರೆಗೆ ಅಪ್ಪಳಿಸಲಿದೆ. ರೆಹಮಾನ್ ಸಂಗೀತದ ಹಾಡುಗಳು ಈಗಾಗಲೇ ಕನ್ನಡ ಸಿನಿಪ್ರೇಕ್ಷಕರ ಕಿವಿಗೆ ಬೀಳುತ್ತಿದೆ. ಮಂಜು ಸಾಹಸಕ್ಕೆ ಕನ್ನಡಿಗರು 'ಜೈ' ಎನ್ನುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











