ತಮ್ಮ ಕುಟುಂಬ ಕಲಹದ ಬಗ್ಗೆ ಮೌನ ಮುರಿದ ತೆಲುಗು ನಟ ಮಂಚು ವಿಷ್ಣು
ಇತ್ತೀಚೆಗೆ ತೆಲುಗು ನಟ ಮೋಹನ್ ಬಾಬು ಕುಟುಂಬ ಕಲಹ ಬೀದಿಗೆ ಬಂದಿತ್ತು. ತಂದೆಯ ಜೊತೆ ಪುತ್ರ ಮನೋಜ್ ಕಿರಿಕ್ ಮಾಡಿಕೊಂಡಿದ್ದರು. ಮತ್ತೊಬ್ಬ ಪುತ್ರ ವಿಷ್ಣು ತಂದೆ ಬೆಂಬಲಕ್ಕೆ ನಿಂತಿದ್ದಾರೆ. ಆಸ್ತಿ ವಿಚಾರಕ್ಕಾಗಿ ಮೋಹನ್ ಬಾಬು ಮಕ್ಕಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿರುತ್ತದೆ. ಅವತ್ತು ತಾರಕಕ್ಕೇರಿತ್ತು. ಈ ಬಗ್ಗೆ ವಿಷ್ಣು ಫಿಲ್ಮಿಬೀಟ್ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಹೆಚ್ಚು ಕಮ್ಮಿ 50 ವರ್ಷಗಳಿಂದ ಮೋಹನ್ ಬಾಬು ತೆಲುಗು ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆರಂಭದಲ್ಲಿ ವಿಲನ್ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದಿದ್ದ ಅವರು ಬಳಿಕ ಹೀರೊ ಆಗಿದ್ದರು. ಕಲೆಕ್ಷನ್ ಕಿಂಗ್ ಎಂದು ಬಿರುದು ಪಡೆದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ಇತ್ತೀಚೆಗೆ ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ.

ಸ್ಟಾರ್ ನಟನಾಗಿ ಮೆರೆದಿದ್ದ ಮೋಹನ್ ಬಾಬು ಸಾಕಷ್ಟು ಆಸ್ತಿ ಪಾಸ್ತಿ ಸಂಪಾದಿಸಿದ್ದಾರೆ. ಒಂದು ವಿದ್ಯಾಸಂಸ್ಥೆ ಸೇರಿ ಹಲವು ಕಡೆಗಳಲ್ಲಿ ಮನೆ, ಜಮೀನು ಖರೀದಿಸಿದ್ದಾರೆ. ಅವರಿಗೆ ಮನೋಜ್, ವಿಷ್ಣು ಹಾಗೂ ಲಕ್ಷ್ಮಿ ಎಂಬ ಹೆಣ್ಣು ಮಗಳು ಇದ್ದಾರೆ. ತಂದೆ ಹಾದಿಯಲ್ಲಿ ಮೂವರು ಚಿತ್ರರಂಗಕ್ಕೆ ಬಂದರು. ಆದರೆ ದೊಡ್ಡ ಸಕ್ಸಸ್ ಸಿಗಲಿಲ್ಲ. ಸದ್ಯ ಬೇಡರ ಕಣ್ಣಪ್ಪ ಕಥೆಯನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ. ವಿಷ್ಣು ಹೀರೊ ಆಗಿ ನಟಿಸಿದ್ದಾರೆ. ಸ್ವತಃ ಮೋಹನ್ ಬಾಬು ಚಿತ್ರ ನಿರ್ಮಿಸಿದ್ದಾರೆ.
ಮನೋಜ್ ಹಾಗೂ ವಿಷ್ಣು ಆಸ್ತಿ ವಿಚಾರಕ್ಕೆ ಕಿತ್ತಾಡಿಕೊಂಡಿದ್ದರು. ಮನೋಜ್ ಸ್ವತಃ ತಂದೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮಗ ವಿರುದ್ಧ ತಂದೆ ಕೂಡ ದೂರು ನೀಡಿದ್ದರು. ವಿಷ್ಣು ಪರ ಮೋಹನ್ ಬಾಬು ನಿಂತಿದ್ದಾರೆ. ಮನೋಜ್ ಹಣ ದುರುಪಯೋಗಪಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಪೊಲೀಸ್ ದೂರು ಬಳಿಕ ಮೋಹನ್ ಬಾಬು ಮನೆಯ ಮುಂದೆ ಭಾರೀ ಹೈಡ್ರಾಮಾ ನಡೆದಿತ್ತು.
ತಂದೆ ಮನೆಗೆ ಮನೋಜ್ ಹೋಗಲು ಯತ್ನಿಸಿದ್ದರು. ಆಗ ಮೋಹನ್ ಬಾಬು ತಡೆದಿದ್ದರು. ಅದೇ ವೇಳೆ ಪ್ರಶ್ನೆ ಕೇಳಿದ ಮಾಧ್ಯಮ ವರದಿಗಾರನ ಮೇಲೆ ಮೋಹನ್ ಬಾಬು ಮೈಕ್ನಿಂದ ಹಲ್ಲೆ ಮಾಡಿದ್ದರು. ಇದ್ದೆಲ್ಲದರ ಬಳಿಕ ಮನೋಜ್ ತಂದೆ ಪರ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದರು. ನಾನು ನಮ್ಮ ಮನೆಯ ಯಾವುದೇ ಆಸ್ತಿ, ಹಣ ಕೇಳಲಿಲ್ಲ. ಆತ್ಮಗೌರವಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ವಿಷ್ಣು ಮಾತು ಕೇಳಿ ನಮ್ಮ ತಂದೆ ನನ್ನನ್ನು ದೂರ ಮಾಡುತ್ತಿದ್ದಾರೆ" ಎಂದು ಅಲವತ್ತುಕೊಂಡಿದ್ದರು.
'ಕಣ್ಣಪ್ಪ' ಬಿಡುಗಡೆ ಹಿನ್ನೆಲೆಯಲ್ಲಿ ಮಂಚು ವಿಷ್ಣು ಮಾಧ್ಯಮಗಳ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಫಿಲ್ಮಿಬೀಟ್ ಸಂದರ್ಶನದ ವೇಳೆ ತಮ್ಮ ಕುಟುಂಬದ ಕಲಹದ ಬಗ್ಗೆಯೂ ಮಾತನಾಡಿದ್ದಾರೆ. "ಎಲ್ಲಾ ಕುಟುಂಬಗಳಲ್ಲಿ ಏನಾದರೂ ಸಮಸ್ಯೆಗಳು ಇರುತ್ತವೆ. ನಮ್ಮ ತಂದೆ ಹಾಗೂ ನಮಗಿರುವ ಜನಪ್ರಿಯತೆ ಕಾರಣಕ್ಕೆ ಈ ವಿಚಾರ ದೊಡ್ಡಮಟ್ಟದಲ್ಲಿ ಸುದ್ದಿ ಆಯಿತು" ಎಂದಿದ್ದಾರೆ.
"ನನಗೆ ತಂದೆ, ತಾಯಿ, ಗುರು, ದೈವ ಮೊದಲು. ಯಾರೇ ಇದ್ದರೂ ಈ ನಾಲ್ಕು ನನಗೆ ಮುಖ್ಯ. ಇಂತಹ ಘಟನೆಗಳು ಮುಂದೆ ನಡೆಯಲ್ಲ ಅನ್ನಿಸುತ್ತೆ. ದುರಾದೃಷ್ಟವಶಾತ್ ಹೀಗೆಲ್ಲಾ ನಡೆದು ಹೋಯಿತು. ಮುಂದೆ ಕೂಡ ನಡೆಯಬಹುದು. ಆದರೆ ನಾನು ಈ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನಾನು ಪ್ರೈವೇಟ್ ಪರ್ಸನ್. ನಾನು ಈ ಬಗ್ಗೆ ಹೇಳಿಕೆ ಕೊಡಲ್ಲ. ಯಾರು ಎಷ್ಟೇ ಪ್ರಚೋದಿಸಿದರೂ ಅಷ್ಟೇ. ನಮ್ಮ ಕುಟುಂಬದ ವಿಚಾರ ಸಾರ್ವಜನಿಕವಾಗಿ ಮಾತನಾಡಲು ಇಷ್ಟಪಡಲ್ಲ" ಎಂದು ವಿಷ್ಣು ತಿಳಿಸಿದ್ದಾರೆ.
ನಮ್ಮ ತಂದೆ ಮೋಹನ್ ಬಾಬು ಚಿತ್ರರಂಗದಲ್ಲಿ 50 ವರ್ಷ ಪೂರೈಸುತ್ತಿದ್ದಾರೆ. ಈ ಸಾಧನೆ ಎಷ್ಟು ಜನರಿಗೆ ಸಾಧ್ಯ. ಅವರ ಬಗ್ಗೆ ಹೆಮ್ಮೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವವರು ಮಾತನಾಡುತ್ತಲೇ ಇರುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳಲ್ಲ, ಚಿತ್ರರಂಗಕ್ಕೆ ಬಂದಗಾಲೇ ಟೀಕೆಗಳನ್ನು ಎದುರಿಸಲು ಸಿದ್ಧನಾದೆ. ಇಂತಹ ಸಾಕಷ್ಟು ಜನರ ಟೀಕೆಗಳನ್ನು ನೋಡಿದ್ದೇನೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ, ನನ್ನ ಮನಸ್ಸು ಹೇಳಿದ್ದನ್ನು ಕೇಳುತ್ತೇನೆ, ಮಾಡುತ್ತೇನೆ ಎಂದು ಮಂಚು ವಿಷ್ಣು ವಿವರಿಸಿದ್ದಾರೆ.


Click it and Unblock the Notifications











