"ಕನ್ನಡ ಪ್ರೇಕ್ಷಕರು ಪಾಕಿಸ್ತಾನದವ್ರು" ಎಂದು ತೆಲುಗು ಪ್ರೇಕ್ಷಕನ ಹುಚ್ಚಾಟ
ಆಂಧ್ರ, ತೆಲಂಗಾಣದಲ್ಲಿ 'ಕಾಂತಾರ- 1' ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಹೇಳಿದವರು ಈಗ ಬಹುಪರಾಕ್ ಎನ್ನುತ್ತಿದ್ದಾರೆ. ರಿಷಬ್ ಶೆಟ್ಟಿ ನಟನೆಯ ವಿಶ್ವರೂಪ ದರ್ಶನ ನೋಡಿ ಬೆರಗಾಗಿದ್ದಾರೆ. ಕರ್ನಾಟಕದಲ್ಲಿ ತೆಲುಗು ಚಿತ್ರಗಳ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿದ್ದಾರೆ, ರಿಷಬ್ ಶೆಟ್ಟಿ ಹೈದರಾಬಾದ್ಗೆ ಬಂದು ಕನ್ನಡ ಮಾತನಾಡಿದ್ದು ಸರಿಯಲ್ಲ ಎಂದು ಕೆಲವರು ಸುಖಾಸುಮ್ಮನೆಗೆ ಕ್ಯಾತೆ ತೆಗೆದಿದ್ದರು. ಈಗ ಅವರೆಲ್ಲರೂ ಹೊಗಳುವಂತೆ ಮಾಡಿದ್ದಾರೆ ರಿಷಬ್ ಶೆಟ್ಟಿ.
'ಕಾಂತಾರ- 1' ಸಿನಿಮಾ ನೋಡಿ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದಾರೆ. ತೆಲುಗು ರಾಜ್ಯಗಳಲ್ಲಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಟಿಕೆಟ್ಗಾಗಿ ಜನ ಕ್ಯೂ ನಿಲ್ಲುವಂತಾಗಿದೆ. ತೆಲುಗು ಪ್ರೇಕ್ಷಕರು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಆದರೆ ಕೆಲವರು ಮಾತ್ರ ತಮ್ಮ ಹುಚ್ಚಾಟ ಮುಂದುವರೆಸಿದ್ದಾರೆ. ಸರಿಯಾದ ಮಾಹಿತಿ ಇಲ್ಲದೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. "ಕನ್ನಡ ಪ್ರೇಕ್ಷಕರು ಪಾಕಿಸ್ತಾನದವರು" ಎಂದು ತೆಲುಗು ಪ್ರೇಕ್ಷಕನೊಬ್ಬ ಮಾಧ್ಯಮಗಳ ಮುಂದೆ ಮಾತನಾಡಿರುವುದು ವೈರಲ್ ಆಗ್ತಿದೆ.

ರಿಷಬ್ ಶೆಟ್ಟಿ ತೆಲುಗಿನಲ್ಲಿ ಮಾತಾಡಿಲ್ಲ ಅದಕ್ಕೆ ಬಾಯ್ಕಾಟ್ ಅಂತ ಟ್ರೆಂಡ್ ಮಾಡ್ತಿದ್ದಾರಲ್ಲ, ಅದಕ್ಕೆ ಏನಂತೀರಾ? ಎನ್ನುವ ಪ್ರಶ್ನೆಗೆ ಪ್ರೇಕ್ಷಕನೊಬ್ಬ ಪ್ರತಿಕ್ರಿಯಿಸಿ "ಕನ್ನಡ ಪ್ರೇಕ್ಷಕರು ಪಾಕಿಸ್ತಾನದವ್ರು.. ಅರ್ಥ ಆಯ್ತ. ತೆಲಂಗಾಣ, ಆಂಧ್ರದವ್ರು ಭಾರತದವರು.. ಅವರು ಪಾಕಿಸ್ತಾನದವ್ರು. ಅವ್ರು ನಮ್ಮ ಸಿನ್ಮಾ ಬಾಯ್ಕಾಟ್ ಮಾಡ್ಲಿ, ನಮ್ಮ ಸಿನ್ಮಾ ಪೋಸ್ಟರ್ ಹರಿದು ಹಾಕಲಿ. ನಮ್ಮ ತೆಲುಗು ಪ್ರೇಕ್ಷಕರು ಒಳ್ಳೆಯವ್ರು, ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸ್ತಾರೆ. ಕನ್ನಡದವರು ಇದನ್ನು ನೋಡಿ ಕಲಿಯಿರಿ, ನೀವು ನಮ್ಮ 'ಆರ್ಆರ್ಆರ್', 'OG' ಸಿನಿಮಾಗಳನ್ನು ಟ್ರೋಲ್ ಮಾಡಿ, ಬ್ಯಾನರ್ ಹರಿದ್ರು ನಾವು 'ಕಾಂತಾರ- 1' ಚಿತ್ರವನ್ನು ಎದೆಯಲ್ಲಿ ಇಟ್ಟುಕೊಂಡಿದ್ದೀವಿ" ಎಂದಿದ್ದಾನೆ.
ಸದ್ಯ ಈ ವಿಡಿಯೋ ವೈರಲ್ ಆಗ್ತಿದ್ದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಪಾಕಿಸ್ತಾನದವರಲ್ಲ, ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದನ್ನು ನೀವು ತಿಳಿದು ಮಾತನಾಡಿ ಎಂದು ತಿರುಗೇಟು ಕೊಡುತ್ತಿದ್ದಾರೆ. 'ಕಾಂತಾರ- 1' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ನೆಗೆಟಿವ್ ಟ್ರೆಂಡ್ ಮಾಡಿದ್ದು ಗೊತ್ತೇಯಿದೆ.
ಪವನ್ ಕಲ್ಯಾನ್ ನಟನೆಯ 'OG' ಸಿನಿಮಾ ಕಳೆದ ವಾರ ತೆರೆಗೆ ಬಂದಿತ್ತು. ಕರ್ನಾಟಕದಲ್ಲಿ ಕೂಡ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ಮಡಿವಾಳದ ಸಂಧ್ಯಾ ಚಿತ್ರಮಂದಿರದಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ಡಿಜೆ ಹಾಕಿ ಸಂಭ್ರಮಿಸಲು ಮುಂದಾಗಿದ್ದರು. ಅದಕ್ಕೆ ಕನ್ನಡಪರ ಸಂಘಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಡಿಜೆಗೆ ಅವಕಾಶ ಇಲ್ಲ ಎಂದು ತಿಳಿ ಹೇಳಿದ್ದರು. ಆದರೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ 'OG' ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಅಡ್ಡಿಪಡಿಸುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಅದನ್ನೇ ನಂಬಿ ಕೆಲವರು 'ಕಾಂತಾರ- 1' ಚಿತ್ರವನ್ನು ಟಾರ್ಗೆಟ್ ಮಾಡಿದ್ದರು.
ಮುಖ್ಯವಾಗಿ 'ಕಾಂತಾರ- 1' ಚಿತ್ರಕ್ಕೆ ಹೆದರಿ ಪವನ್ ಕಲ್ಯಾಣ್ ಅಭಿಮಾನಿಗಳು ಬಾಯ್ಕಾಟ್ ಟ್ರೆಂಡ್ ಮಾಡುವ ಪ್ರಯತ್ನ ಮಾಡಿದ್ದರು. ಹೈದರಾಬಾದ್ನಲ್ಲಿ ರಿಷಬ್ ಶೆಟ್ಟಿ ತೆಲುಗು ಮಾತನಾಡಲಿಲ್ಲ, ಎನ್ನುವ ಕುಂಟು ನೆಪ ಮುಂದಿಟ್ಟಿದ್ದರು. ಆದರೆ ಸ್ವತಃ ಪವನ್ ಕಲ್ಯಾಣ್ 'ಕಾಂತಾರ- 1' ಚಿತ್ರ ಪ್ರದರ್ಶನಕ್ಕೆ ಯಾರು ಅಡ್ಡಿಪಡಿಸಬಾರದು ಎಂದ ಬಳಿಕ ಎಲ್ಲರೂ ಸುಮ್ಮನಾಗಿದ್ದರು.
ಕಳೆದ ವಾರ ಹೈದರಾಬಾದ್ನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್ನಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದ್ದರು. ನಾನು ಮನಸ್ಸಿನಿಂದ ಮಾತನಾಡಬೇಕು, ಅದಕ್ಕೆ ಕನ್ನಡದಲ್ಲಿ ಮಾತನಾಡುತ್ತೀನಿ. ಏನಾದರೂ ಗೊಂದಲ ಇದ್ದರೆ ನನ್ನ ಸಹೋದರ ಜ್ಯೂ. ಎನ್ಟಿಆರ್ ಅನುವಾದ ಮಾಡುತ್ತಾರೆ ಎಂದು ಹೇಳಿ ರಿಷಬ್ ಶೆಟ್ಟಿ ಮಾತು ಆರಂಭಿಸಿದ್ದರು. ತೆಲುಗು ಸ್ಪಷ್ಟವಾಗಿ ಮಾತನಾಡಲು ಬರದ ಕಾರಣ ರಿಷಬ್ ಕನ್ನಡದಲ್ಲಿ ಮಾತನಾಡಿದ್ದರು. ಆದರೆ ಕೆಲವರು ಬೇಕೆಂದೇ ಇದನ್ನು ವಿವಾದ ಮಾಡಿದ್ದರು. ಬಳಿಕ ರಿಷಬ್ ಇದಕ್ಕೆ ಸ್ಪಷ್ಟನೆ ನೀಡಿದ್ದರು. ವಿಜಯವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲುಗಿನಲ್ಲೇ ಮಾತನಾಡುವ ಪ್ರಯತ್ನ ಮಾಡಿದ್ದರು.


Click it and Unblock the Notifications











