ಅರ್ಜುನನಿಗಿಂತ ಕರ್ಣ ಬಲಶಾಲಿಯೇ? 'ಕಲ್ಕಿ 2898 AD' ಚಿತ್ರದಿಂದ ಶುರು ಹೊಸ ಚರ್ಚೆ?
ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಪ್ರಭಾಸ್- ಅಮಿತಾಬ್ ಪರ್ಫಾರ್ಮೆನ್ಸ್ ಹಾಗೂ ನಾಗ್ ಅಶ್ವಿನ್ ಕಲ್ಪನೆ, ಮೇಕಿಂಗ್ ಅಬ್ಬಬ್ಬಾ ಎನ್ನುವಂತಿದೆ. ಒಂದಷ್ಟು ನ್ಯೂನ್ಯತೆಗಳ ನಡುವೆಯೂ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ಕಿದೆ.
ಮಹಾಭಾರತದ ಪಾತ್ರಗಳು, ಕಥೆಗಳಿಗೆ ಲಿಂಕ್ ಕೊಟ್ಟು ಕಲಿಯುಗದ ಭವಿಷ್ಯತ್ ಕಾಲದಲ್ಲಿ ಒಂದು ಕಾಲ್ಪನಿಕ ಕಥೆಯನ್ನು ಕಟ್ಟಿಕೊಡಲಾಗಿದೆ. ಧರ್ಮ ಸ್ಥಾಪನೆಗಾಗಿ ಕಲ್ಕಿ ಅವತಾರದಲ್ಲಿ ಮತ್ತೆ ಕೃಷ್ಣ ಅವತಾರ ಎತ್ತಿ ಬರುತ್ತಾನೆ ಎನ್ನುವ ನಂಬಿಕೆಯಿದೆ. ಅದನ್ನೇ ಕೇಂದ್ರವಾಗಿಟ್ಟುಕೊಂಡು 'ಕಲ್ಕಿ 2898 AD' ಕಥೆ ಹೇಳಲಾಗಿದೆ. ಶಂಬಲದಲ್ಲಿ ಕಲ್ಕಿ ಹುಟ್ಟುವ ಮುನ್ನ ಏನೆಲ್ಲಾ ಆಗಬಹುದು ಎಂದು ಊಹಿಸಿಕೊಂಡು ನಾಗ್ ಅಶ್ವಿನ್ ಈ ಕಥೆ ಹೆಣೆದಿದ್ದಾರೆ.

ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಕುರುಕ್ಷೇತ್ರದ ಯುದ್ಧದ ಅರ್ಜುನ- ಕರ್ಣಯ ಯುದ್ಧ ಪ್ರಸಂಗವನ್ನು ತೆರೆಗೆ ತಂದಿದ್ದಾರೆ. ಅರ್ಜುನನಾಗಿ ವಿಜಯ್ ದೇವರಕೊಂಡ ಹಾಗೂ ಕರ್ಣನಾಗಿ ಪ್ರಭಾಸ್ ಅಬ್ಬರಿಸಿದ್ದಾರೆ. ಕೆಲವೇ ಸೆಕೆಂಡ್ಗಳು ಈ ಎಪಿಸೋಡ್ ಬಂದು ಹೋದರೂ ನೋಡುಗರಿಗೆ ಅದ್ಭುತ ಅನುಭವ ನೀಡುತ್ತದೆ. ಆದರೆ ಈ ದೃಶ್ಯ ಹೇಳಿರುವ ಒಂದು ವಿಚಾರದ ಬಗ್ಗೆ ಇದೀಗ ಭಾರೀ ಚರ್ಚೆ ನಡೆಯುತ್ತಿದೆ. ಕರ್ಣ- ಅರ್ಜುನ ಇಬ್ಬರಲ್ಲಿ ಯಾರು ಬಲಶಾಲಿ ಎನ್ನುವ ವಾದ ಶುರುವಾಗಿದೆ.
ಮಹಾಭಾರತದ ವೀರರಲ್ಲಿ ಒಬ್ಬರಿಗಿಂತ ಒಬ್ಬರು ಅಸಾಮಾನ್ಯ ಬಲಶಾಲಿಗಳು. ಗುರುಕುಲದಲ್ಲಿ 64 ವಿದ್ಯೆಗಳನ್ನು ಕಲಿತಿದ್ದು ಮಾತ್ರವಲ್ಲದೇ ತಪಸ್ಸು ಮಾಡಿ ಅಸ್ತ್ರ-ಶಸ್ತ್ರಗಳನ್ನು ಪಡೆದು ವೀರಾಧಿವೀರರು. ಅದರಲ್ಲೂ ದೋಣಾಚಾರ್ಯರ ಪ್ರಿಯ ಶಿಷ್ಯ ಅರ್ಜುನ ಮಹಾನ್ ವೀರ. ತನ್ನೆಲ್ಲಾ ವಿದ್ಯೆಯನ್ನು ಅರ್ಜುನನಿಗೆ ಆಚಾರ್ಯರು ಧಾರೆ ಎರೆದಿದ್ದರು. ಸೂತಪುತ್ರನಾದ ಅವನಿಗೆ ಶಸ್ತ್ರವಿದ್ಯಾಭ್ಯಾಸ ಕಲಿಸುವ ಆಚಾರ್ಯರು ದೊರೆಯಲಿಲ್ಲ. ಕೊನೆಗೆ ಪರುಶರಾಮನ ಬಳಿಸುಳ್ಳು ಹೇಳಿ ಧನುರ್ವಿದ್ಯಾಪಾರಂಗತನಾಗುತ್ತಾನೆ.
ಕರ್ಣ ಕೌರವರ ಪಕ್ಷ ಸೇರಿ ಮಾಡಬಾರದ ತಪ್ಪುಗಳನ್ನು ಮಾಡುತ್ತಾನೆ. ತನ್ನ ಆಶ್ರಯ, ರಾಜ್ಯ ಕೊಟ್ಟ ಸ್ನೇಹಿತ ದುರ್ಯೋಧನನ ಬೆಂಬಲಕ್ಕೆ ನಿಲ್ಲುತ್ತಾನೆ. ವ್ಯಾಸಭಾರತದಲ್ಲಿ ಕರ್ಣನನ್ನು ದುರ್ಯೋಧನನ ದುಷ್ಟಚತುಷ್ಟಯದಲ್ಲೊಬ್ಬ ಎಂದ ವರ್ಣಿಸಲಾಗಿದೆ.
ಕರ್ಣ ಹಲವು ವಿಧದಲ್ಲಿ ಪಡೆದ ಶಾಪಗಳೇ ಕುರುಕ್ಷೇತ್ರ ಯುದ್ಧದಲ್ಲಿ ಆತನ ಸೋಲಿಸಿ, ಸಾವಿಗೆ ಕಾರಣವಾಗುತ್ತದೆ. ಆದರೆ ಅರ್ಜುನನಿಗೆ ಸರಿ ಸಮನಾಗಿ ಯುದ್ಧ ಮಾಡುವ ಪರಾಕ್ರಮಿಯನ್ನು ಕೃಷ್ಣ ತನ್ನ ಚಾಣಾಕ್ಯತನದಿಂದ ಸೋಲಿಸುತ್ತಾನೆ. 'ಕಲ್ಕಿ 2898 AD' ಚಿತ್ರದಲ್ಲಿ ಅರ್ಜುನನಿಗಿಂತ ಕರ್ಣ ಪರಾಕ್ರಮಿ ಎಂದು ಹೇಳುವ ದೃಶ್ಯವಿದೆ. ಅದನ್ನು ಶ್ರೀಕೃಷ್ಣನೇ ಹೇಳುತ್ತಾನೆ. ಆದರೆ ಇದನ್ನು ಕೆಲವರು ಒಪ್ಪಲು ಸಿದ್ಧರಿಲ್ಲ. ವ್ಯಾಸಭಾರತದಲ್ಲಿ ಅಂತಹ ಉಲ್ಲೇಖವೇ ಇಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ.

ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನ(ವಿಜಯ್ ದೇವರಕೊಂಡ) ನೋಡಿದ ಕೇಶವಾ, ಕರ್ಣ ನನಗೆ ಸಮಾನನೇ? ನನ್ನ ಬಾಣಕ್ಕೆ ಕರ್ಣ(ಪ್ರಭಾಸ್)ನ ರಥ 8 ಹೆಜ್ಜೆ ಹಿಂದಕ್ಕೆ ಹೋಗಿದೆ. ಆತನ ಬಾಣಕ್ಕೆ ನಮ್ಮ ರಥ 2 ಹೆಜ್ಜೆ ಹಿಂದಕ್ಕೆ ಹೋಗಿದೆ ಎನ್ನುತ್ತಾನೆ. ಆಗ ಕೃಷ್ಣ, ಹೇ ಧನಂಜಯ ನಿನ್ನ ರಥ ಅಗ್ನಿದೇವನ ವರ. ಕಾಪಾಡುತ್ತಿರುವುದು ಹನುಮ ಧ್ವಜ. ಸಾರಥಿ ನಾನು. ಆದರೂ 2 ಹೆಜ್ಜೆ ಹಿಂದಕ್ಕೆ ತಳ್ಳಿದ್ದಾನೆ ಅಂದ್ರೆ, ಆತ ಸಾಮಾನ್ಯ ಯೋಧ ಅಲ್ಲ ಎಂದು ಕೃಷ್ಣ ಹೇಳುತ್ತಾನೆ.
ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ನಾಯಕ ಪ್ರಭಾಸ್. ಹಾಗಾಗಿ ಪ್ರಭಾಸ್ ಮಾಡಿರುವ ಕರ್ಣನ ಪಾತ್ರವನ್ನೇ ಹೈಲೆಟ್ ಮಾಡಲಾಗುತ್ತಿದೆ. ಅರ್ಜುನನಿಗಿಂತ ಕರ್ಣ ಬಲಶಾಲಿ ಎಂದು ವ್ಯಾಸಭಾರತದಲ್ಲಿ ಹೇಳಲಿಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ಇದೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಕೆಲವರು ಹೌದು ಕರ್ಣನೇ ಬಲಶಾಲಿ. ಆತನೇ ಶಾಪಗಳೇ ಅವನಿಗೆ ಮೃತ್ಯವಾಯ್ತು. ಕೌರವರ ಪಡೆ ಸೇರಿದ್ದು ಅವನ ದೊಡ್ಡ ತಪ್ಪು, ಇಲ್ಲದಿದ್ದರೆ ಅವನೇ ಮಹಾಭಾರತದ ಅಸಾಮಾನ್ಯ ವೀರ ಎನ್ನುತ್ತಿದ್ದಾರೆ.


Click it and Unblock the Notifications











