ಕನ್ನಡತಿಯ ಜಾಗವನ್ನು ಆಕ್ರಮಿಸಿಕೊಂಡ ಖ್ಯಾತ ನಟಿ, ಸ್ಟಾರ್ ಹೀರೋ ಜೊತೆ ರೊಮ್ಯಾನ್ಸ್ ..!
ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು, ಎಷ್ಟೇ ಅವಕಾಶಗಳು ಕೈಯಲ್ಲಿದ್ದರು ಕೂಡ, ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ.
ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ. ಮೊದಲೆಲ್ಲ ನೀವು ಇಲ್ಲದೆ ನಮ್ಮ ಚಿತ್ರವಾಗಲ್ಲ ಎನ್ನುತ್ತಿದ್ದವರೆಲ್ಲ ಆ ನಂತರ ಅದೇ ನಾಯಕಿಗೆ ಅಕ್ಕ-ತಾಯಿಯ ಪಾತ್ರವನ್ನು ನೀಡಲು ಮುಂದಾಗುತ್ತಾರೆ. ಇನ್ನು ಕೆಲವರು ಪೋಷಕ ನಟಿಯಾಗಿ ಬಡ್ತಿ ಪಡೆಯುತ್ತಾರೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಇದಕ್ಕೆ ಅಪವಾದ ಎಂಬಂತೆ ಬದುಕುತ್ತಾರೆ. ಮದುವೆಯಾದ ನಂತರವೂ ನಾಯಕಿಯಾಗಿ ಮುಂದುವರೆಯುತ್ತಾರೆ. ಉದಾಹರಣೆಗೆ ಕೀರ್ತಿ ಸುರೇಶ್.

ಹೌದು, ಕಳೆದ ವರ್ಷ ತಮ್ಮ ಬಾಲ್ಯದ ಸ್ನೇಹಿತ ಆಂಟೋನಿ ತಟ್ಟಿಲ್ ಜೊತೆ ಸಪ್ತಪದಿಯನ್ನು ತುಳಿದು ಗ್ರಹಸ್ಥಾಶ್ರಮವನ್ನು ಪ್ರವೇಶಿಸಿದ ಕೀರ್ತಿ ಸುರೇಶ್ ಅವರಿಗೆ ಇವತ್ತು ಕೂಡ ಚಿತ್ರರಂಗದಲ್ಲಿ ಡಿಮ್ಯಾಂಡ್ ಇದೆ. ಕೇವಲ ಆ ವುಡ್ಡು ಈ ವುಡ್ಡು ಮಾತ್ರವಲ್ಲ ಎಲ್ಲ ಭಾಷೆಯಲ್ಲಿ ಕೂಡ ಕೀರ್ತಿ ಸುರೇಶ್ ಅವರಿಗೆ ನಾಯಕಿಯ ಪಾತ್ರವನ್ನು ಅನೇಕರು ನೀಡಲು ಬಯಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೀರ್ತಿ ಸುರೇಶ್ ಆ ಚಿತ್ರಕ್ಕೆ ನಾಯಕಿಯಂತೆ ಈ ಚಿತ್ರಕ್ಕೆ ನಾಯಕಿಯಂತೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇವೆ. ಆ ಪೈಕಿ ವಿಜಯ್ ದೇವರಕೊಂಡ ಅವರ ಹೊಸ ಚಿತ್ರ ಕೂಡ ಒಂದು.
ಹೌದು, ಅರ್ಜುನ್ ರೆಡ್ಡಿಯ ಮೂಲಕ ಆಗಸವನ್ನು ತಲುಪಿ ಆ ನಂತರ ಪಾತಾಳಕ್ಕೆ ಕುಸಿದಿರುವ ವಿಜಯ್ ದೇವರಕೊಂಡ ಸದ್ಯ ಕಿಂಗ್ಡಮ್ ಎಂಬ ಚಿತ್ರವನ್ನು ಮಾಡುತ್ತಿದ್ದಾರೆ. ಇನ್ನೇನು ಈ ಮೇನಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎನ್ನುವ ಸುದ್ದಿ ಇದೆ. ಈ ಚಿತ್ರದ ನಂತರ ವಿಜಯ್ ದೇವರಕೊಂಡ ಮತ್ತೊಂದು ಚಿತ್ರವನ್ನು ಮಾಡುತ್ತಿದ್ದಾರೆ.
ದಿಲ್ ರಾಜು ನಿರ್ಮಾಣದ ಈ ಚಿತ್ರಕ್ಕೆ ರೌಡಿ ಜನಾರ್ದನ್ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ. ಖುದ್ದು ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಕೀರ್ತಿ ಸುರೇಶ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ ಎಂದು ಕೊಯಿ ಮೊಯಿ ವೆಬ್ ಸೈಟ್ ವರದಿಯನ್ನು ಮಾಡಿದೆ. ಕೀರ್ತಿ ಸುರೇಶ್ ಅವರಿಗೆ ನೀವು ನಮ್ಮ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡ್ತೀರಾ ಎಂದು ನಾವು ಕೇಳಿದೆವು ಅವರು ಕೂಡಲೇ ವಿಜಯ್ ದೇವರಕೊಂಡಗೆ ನಾಯಕಿಯಾಗಲು ಒಪ್ಪಿಕೊಂಡರು ಎಂದು ಹೇಳಿದರು ಎಂದು ಮ್ಯಾನೇಜರ್ ಹೇಳಿದ್ದಾರೆ ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಂದ್ಹಾಗೇ ಈ ಚಿತ್ರಕ್ಕೆ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯಾಗಲಿದ್ದಾರೆ ಎನ್ನುವ ಮಾತು ಈ ಹಿಂದೆ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ಕೆಲ ಬೆಳವಣಿಗೆಗಳು ನಡೆದಿದ್ದವು ಎನ್ನುತ್ತಾರೆ ಟಾಲಿವುಡ್ ಪಂಡಿತರು. ಆದರೆ ಸ್ಯಾಂಡಲ್ವುಡ್ದಿಂದ ಅಂತರವನ್ನು ಕಾಪಾಡಿಕೊಂಡು ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರುಕ್ಮಿಣಿ ವಸಂತ್ ಅವರಿಗೆ ಇದೇ ಸಮಯದಲ್ಲಿ ಪ್ರಶಾಂತ್ ನೀಲ್ ಮತ್ತು ಜ್ಯೂ ಎನ್.ಟಿ.ಆರ್ ಕಾಂಬಿನೇಶನ್ನಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ ನಾಯಕಿಯಾಗುವ ಯೋಗಾಯೋಗ ಕೂಡಿ ಬಂತು.
ಇನ್ನು ಪ್ರಶಾಂತ್ ನೀಲ್ ಸಿನಿಮಾ ಅಂದರೆ ಪಂಚವಾರ್ಷಿಕ ಯೋಜನೆ ಅಲ್ಲದಿದ್ದರೂ ತ್ರೈವಾರ್ಷಿಕ ಯೋಜನೆಯಡಿಯಂತೂ ಸಿದ್ಧವಾಗುತ್ತೆ. ಇವರ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರೆ ಬೇರೆ ಯಾವ ಚಿತ್ರವನ್ನು ಒಪ್ಪಿಕೊಳ್ಳುವಂತೆ ಇಲ್ಲ ಎನ್ನುವ ನಿಯಮ ಇದೆ ಎನ್ನುವ ಮಾತು ಕೂಡ ಚಿತ್ರನಗರಿಯಲ್ಲಿ ಬರುತ್ತೆ.
ಬಹುಶಃ ಈ ಕಾರಣಕ್ಕಾಗಿಯೇ ರುಕ್ಮಿಣಿ ವಸಂತ್ ಈ ಚಿತ್ರಕ್ಕೆ ನೋ ಎಂದು ಹೇಳಿದ್ದರು ಹೇಳಿರಬಹುದು. ವಿಜಯ್ ದೇವರಕೊಂಡಗಿಂತ ಜ್ಯೂನಿಯರ್ ಎನ್ಟಿಆರ್ ಜೊತೆ ಅಭಿನಯಿಸುವುದೇ ಬದುಕಿನಲ್ಲಿ ತಮಗೆ ಸಿಕ್ಕ ಬಹುದೊಡ್ಡ ಸುವರ್ಣ ಅವಕಾಶ ಎಂದು ಅಂದುಕೊಂಡಿರಬಹುದು. ಆದರೆ, ಇದರ ನಡುವೆ ಕೆಲವರು ವಿಜಯ್ ದೇವರಕೊಂಡ ಜೊತೆ ರುಕ್ಮಿಣಿ ವಸಂತ್ ಅಭಿನಯಿಸದಿರುವುದಕ್ಕೆ ರಕ್ಷಿತ್ ಶೆಟ್ಟಿ ಪ್ರಮುಖ ಕಾರಣ ಎಂಬ ಸುದ್ದಿಯನ್ನು ತೇಲಿ ಬಿಟ್ಟಿದ್ದರು.
ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರದ್ದು ಲವ್ ಮತ್ತು ಬ್ರೇಕಪ್ ಸಂಬಂಧ. ಇನ್ನು ರಕ್ಷಿತ್ ಶೆಟ್ಟಿ ಅವರಿಂದ ದೂರವಾದ ನಂತರ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಹೆಸರು ತಳುಕು ಹಾಕಿಕೊಂಡಿದೆ. ಯಾವ ಕ್ಷಣದಲ್ಲಾದರೂ ಇಬ್ಬರು ಮದುವೆಯಾಗಬಹುದು ಎಂದು ಇಬ್ಬರ ಅಭಿಮಾನಿ ಬಳಗ ಕಾದು ಕುಳಿತುಕೊಂಡಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಕುರಿತು ತಿಂಗಳಿನಲ್ಲಿ ಒಂದಾದ ಸುದ್ದಿಯಾದರು ಸದ್ದು ಮಾಡುತ್ತಲೇ ಇರುತ್ತೆ.
ಇದೆಲ್ಲ ಕಾರಣದಿಂದ ರುಕ್ಮಿಣಿ ವಸಂತ್ ಈ ರೌಡಿ ಜನಾರ್ಧನ ಚಿತ್ರದಿಂದ ಹೊರ ಬಂದಿದ್ದು ಎಂದು ಅನೇಕರು ಅಂದುಕೊಂಡಿದ್ದರು. ನಿಜಾಂಶ ಏನು ಎಂದು ಗೊತ್ತಿಲ್ಲ. ಆದರೆ ಈಗ ವಿಜಯ್ ದೇವರಕೊಂಡ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿಯಾಗಿ ಆಯ್ಕೆಯಾಗಿದ್ಧಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಕನ್ನಡತಿ ರುಕ್ಮಿಣಿ ವಸಂತ್ ಅವರ ಜಾಗವನ್ನು ಕೀರ್ತಿ ಸುರೇಶ್ ಆಕ್ರಮಿಸಿಕೊಂಡಿದ್ದಕ್ಕೆ ಒಂದು ವರ್ಗ ತಮ್ಮ ಬೇಸರವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೊರ ಹಾಕುತ್ತಿದೆ.
ಇನ್ನುಳಿದಂತೆ ವಿಜಯ್ ದೇವರಕೊಂಡ ಮತ್ತು ಕೀರ್ತಿ ಸುರೇಶ್ ಇಲ್ಲಿಯವರೆಗೆ ಒಂದು ಚಿತ್ರದಲ್ಲಿ ಕೂಡ ನಾಯಕ ನಾಯಕಿಯಾಗಿ ಅಭಿನಯಿಸಿಲ್ಲ. 2018ರಲ್ಲಿ ತೆರೆಗೆ ಬಂದ ಮಹಾ ನಟಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಕೀರ್ತಿ ಸುರೇಶ್ ಅಭಿನಯಿಸಿದ್ದರಾದರೂ ಕೂಡ ಇಬ್ಬರು ಚಿತ್ರದಲ್ಲಿ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಿದ್ದರು. ಈಗ ಇಬ್ಬರು ನಾಯಕ ನಾಯಕಿಯಾಗಿ ಮೊದಲ ಬಾರಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ಧಾರೆ. ಈ ಕಾರಣಕ್ಕೆ ಇವರಿಬ್ಬರ ಅಭಿಮಾನಿ ಬಳಗ ಈ ಚಿತ್ರವನ್ನು ಈಗ ಕಾತುರದಿಂದ ಎದುರು ನೋಡುತ್ತಿದೆ.
ವಿಜಯ್ ದೇವರಕೊಂಡ ಮತ್ತು ಕೀರ್ತಿ ಸುರೇಶ್ ಅಭಿನಯಿಸಲಿರುವ ಈ ರೌಡಿ ಜನಾರ್ಧನ ಚಿತ್ರವನ್ನು ರವಿ ಕಿಶನ್ ಕೊಲ ನಿರ್ದೇಶನ ಮಾಡಲಿದ್ದಾರೆ. ದಿಲ್ ರಾಜು ನಿರ್ಮಾಣದಡಿ ಮೂಡಿ ಬರಲಿರುವ ಈ ಚಿತ್ರ ಕೇವಲ ತೆಲುಗಿನಲ್ಲಿ ಮಾತ್ರ ಸಿದ್ಧವಾಗಲಿದೆಯಾ ಅಥವಾ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನಡಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಾ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಚಿತ್ರದಲ್ಲಿ ಬೇರೆ ಯಾರೆಲ್ಲ ಕಲಾವಿದರು ಇರಲಿದ್ದಾರೆ ಎಂಬ ಮಾಹಿತಿಯನ್ನು ಕೂಡ ಚಿತ್ರತಂಡ ಇನ್ನು ಹಂಚಿಕೊಂಡಿಲ್ಲ.
ಈ ಚಿತ್ರವನ್ನು ಹೊರತು ಪಡಿಸಿದರೆ ವಿಜಯ್ ದೇವರಕೊಂಡ ಕಿಂಗ್ಡಮ್ ಎಂಬ ಚಿತ್ರವನ್ನು ಮಾಡಿದ್ದು ಈ ಚಿತ್ರ ಈ ಮೇನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಮತ್ತೊಂದೆಡೆ ಕೀರ್ತಿ ಸುರೇಶ್ ಅಭಿನಯದ ರಿವಾಲ್ವರ್ ರೀತಾ ಮತ್ತು ಕನ್ನಿವೇದಿ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವೆರಡು ಚಿತ್ರಗಳು ಇನ್ನು ತೆರೆಗೆ ಬರಬೇಕಿವೆ. ಈ ಚಿತ್ರಗಳನ್ನು ಹೊರತು ಪಡಿಸಿದರೆ 'ಅಕ್ಕ' ಎಂಬ ವೆಬ್ ಸರಣಿಯಲ್ಲಿ ಕೂಡ ಕೀರ್ತಿ ಸುರೇಶ್ ಅಭಿನಯಿಸಿದ್ದಾರೆ. ರಾಧಿಕಾ ಆಪ್ಟೇ ಕೂಡ ಈ ಚಿತ್ರದಲ್ಲಿದ್ದಾರೆ. ಈ ಚಿತ್ರಗಳು ಮಾತ್ರವಲ್ಲದೇ ರಣ್ಬೀರ್ ಕಪೂರ್ ಅಭಿನಯದ ಮುಂದಿನ ಚಿತ್ರದಲ್ಲಿ ಕೂಡ ಕೀರ್ತಿ ಸುರೇಶ್ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ವಿಜಯ್ ದೇವರಕೊಂಡ ಮತ್ತು ಕೀರ್ತಿ ಸುರೇಶ್ ಅಭಿನಯದ ರೌಡಿ ಜನಾರ್ಧನ್ ಚಿತ್ರ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











