ಸಿನಿಮಾ ಗೆಲ್ಲಿಸಿಕೊಳ್ಳಲು 'ಕೆಜಿಎಫ್ 2' ಚಿತ್ರತಂಡ ಮಾಡಿದ ಸಾಹಸ ವಿವರಿಸಿದ ವಿತರಕ ದಿಲ್ ರಾಜು
ದಿಲ್ ರಾಜು ತೆಲುಗು ಚಿತ್ರರಂಗದ ಜನಪ್ರಿಯ ಸಿನಿಮಾ ನಿರ್ಮಾಪಕ ಹಗೂ ವಿತರಕ. ಸಿನಿಮಾ ನಿರ್ಮಾಣಕ್ಕೂ ಮುನ್ನಾ ಹಲವಾರು ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. ಈಗಲೂ ಆಂಧ್ರ-ತೆಲಂಗಾಣದ ಯಶಸ್ವಿ ವಿತರಕ ದಿಲ್ ರಾಜು.
'ಕೆಜಿಎಫ್ 2' ಸಿನಿಮಾವನ್ನು ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ವಿತರಣೆ ಮಾಡಿದ್ದು ಇದೇ ದಿಲ್ ರಾಜು. ಇದೀಗ ಇವರ ನಿರ್ಮಾಣದ 'ಎಫ್ 3' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, 'ಕೆಜಿಎಫ್ 2' ಚಿತ್ರತಂಡ ತಮ್ಮ ಸಿನಿಮಾ ಗೆಲ್ಲಿಸಿಕೊಳ್ಳಲು ಮಾಡಿದ ಸಾಹಸದ ಬಗ್ಗೆ ಹೇಳಿದ್ದಾರೆ.
'ಕೆಜಿಎಫ್ 2' ಸಿನಿಮಾ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಎರಡೂ ರಾಜ್ಯಗಳಲ್ಲಿ ಹಿಟ್ ಎನಿಸಿಕೊಂಡಿತು. ದೊಡ್ಡ ಮಟ್ಟದ ಕಲೆಕ್ಷನ್ ಅನ್ನು ಎರಡೂ ರಾಜ್ಯದಲ್ಲಿ ಮಾಡಿತು. ಆದರೆ ತಮ್ಮ ಸಿನಿಮಾವನ್ನು ಗೆಲ್ಲಿಸಿಕೊಳ್ಳಲು ಚಿತ್ರತಂಡ ಮಾಡಿದ ಸಾಹಸ, ಕಾರ್ಯತಂತ್ರದ ಬಗ್ಗೆ ದಿಲ್ ರಾಜು ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಕೆಜಿಎಫ್ 2' ಸಿನಿಮಾದ ಬಗ್ಗೆ ಪ್ರಶ್ನೆ
ದೊಡ್ಡ ಬಜೆಟ್ನ ತೆಲುಗು ಸಿನಿಮಾಗಳಿಗೆ ಸರ್ಕಾರಿಂದ ಅನುಮತಿ ತಂದು ಮೊದಲೆರಡು ಟಿಕೆಟ್ ಬೆಲೆ ಹೆಚ್ಚು ಮಾಡಿಕೊಳ್ಳುವ ಪದ್ಧತಿ ಇದೆ. ಆದರೆ ದಿಲ್ ರಾಜು ತಮ್ಮ 'ಎಫ್ 3' ಸಿನಿಮಾಕ್ಕೆ ಹೀಗೆ ಮಾಡಿಲ್ಲ. ಅಲ್ಲದೆ ಸಿನಿಮಾಗಳಿಗೆ ಹೀಗೆ ಟಿಕೆಟ್ ಬೆಲೆ ಕಡಿತ ಮಾಡುವುದನ್ನು ಅವರು ವಿರೋಧಿಸಿದ್ದಾರೆ ಸಹ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಆಗ ಸಂದರ್ಶಕ, ನೀವು ವಿತರಿಸಿದ್ದ 'ಕೆಜಿಎಫ್ 2' ಸಿನಿಮಾಕ್ಕೆ ಸರ್ಕಾರದಿಂದ ಅನುಮತಿ ಪಡೆದು ಟಿಕೆಟ್ ಬೆಲೆ ಹೆಚ್ಚಿಸಿದ್ದಿರಲ್ಲ? ಎಂದು ಮರು ಸವಾಲು ಹಾಕಿದ್ದಾರೆ.

ನಾನು ಅವರಿಗೆ ಸಹಾಯ ಮಾಡಲಿಲ್ಲ: ದಿಲ್ ರಾಜು
ಪ್ರಶ್ನೆಗೆ ಉತ್ತರಿಸಿದ ದಿಲ್ ರಾಜು, ''ನಾನು 'ಕೆಜಿಎಫ್ 2' ಸಿನಿಮಾವನ್ನು ಷೇರ್ ಆಧಾರದ ಮೇಲೆ ಬಿಡುಗಡೆ ಮಾಡಿಸಿದ್ದೆ ಅಷ್ಟೆ, ಸಿನಿಮಾ ಕೊಂಡುಕೊಂಡಿರಲಿಲ್ಲ. ಅಲ್ಲದೆ 'ಕೆಜಿಎಫ್ 2' ಸಿನಿಮಾಕ್ಕೆ ಟಿಕೆಟ್ ಬೆಲೆ ಹೆಚ್ಚಿಸುವಲ್ಲಿ ನನ್ನ ಪಾತ್ರ ಎಳ್ಳಷ್ಟೂ ಇಲ್ಲ. ಸಿನಿಮಾದ ನಿರ್ಮಾಪಕರು, ನಾಯಕ ನಟ, ನಿರ್ದೇಶಕ ಇತರೆ ಮಂದಿ ಸೇರಿ ಸರ್ಕಾರವನ್ನು ಹೇಗೋ ಭೇಟಿ ಮಾಡಿ ಟಿಕೆಟ್ ಬೆಲೆ ಏರಿಸುವಂತೆ ಮನವಿ ಮಾಡಿದರು. ಅಂತೆಯೇ ತೆಲಂಗಾಣದಲ್ಲಿ ಅವರಿಗೆ ಗೆಲುವು ಸಿಕ್ಕಿತು. ಆದರೆ ಆಂಧ್ರದಲ್ಲಿ ಟಿಕೆಟ್ ಬೆಲೆ ಏರಿಸಲು ಸಾಧ್ಯವಾಗಲಿಲ್ಲ. ಆದರೆ ಟಿಕೆಟ್ ಬೆಲೆ ಹೆಚ್ಚಿಗೆ ಮಾಡಿಸಲು ನಾನು ಅವರಿಗೆ ಯಾವ ರೀತಿಯ ಸಹಾಯವನ್ನೂ ಮಾಡಲಿಲ್ಲ'' ಎಂದಿದ್ದಾರೆ ದಿಲ್ ರಾಜು.

ಹಲವು ಬಾರಿ 'ಕೆಜಿಎಫ್ 2' ಉಲ್ಲೇಖ
ಸಂದರ್ಶನದಲ್ಲಿ ಹಲವು ಬಾರಿ 'ಕೆಜಿಎಫ್ 2' ಸಿನಿಮಾವನ್ನು ಉದಾಹರಣೆಯಾಗಿ ನೀಡಿರುವ ದಿಲ್ ರಾಜು, ''ಆ ಸಿನಿಮಾವನ್ನು ಅವರು ಬಹಳ ದೊಡ್ಡ ಸ್ಕೇಲ್ನಲ್ಲಿ ನಿರ್ಮಾಣ ಮಾಡದ್ದರು. ಆದರೆ ಆ ಸಿನಿಮಾವನ್ನು ನಾನು ಖರೀದಿ ಮಾಡಿರಲಿಲ್ಲ. ಆದರೆ 'RRR' ಸಿನಿಮಾವನ್ನು ನಾನು ಖರೀದಿ ಮಾಡಿದ್ದೆ. ಅದಕ್ಕೂ ಎರಡೂ ರಾಜ್ಯಗಳಲ್ಲಿ, ಟಿಕೆಟ್ ಬೆಲೆ ಹೆಚ್ಚಿಸಿಕೊಳ್ಳಲು ನಮಗೆ ಅವಕಾಶ ಸಿಕ್ಕಿತು'' ಎಂದಿದ್ದಾರೆ ದಿಲ್ ರಾಜು.

ಕನ್ನಡ ಚಿತ್ರರಂಗದ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದ ದಿಲ್ ರಾಜು
ಹೈದರಾಬಾದ್ನಲ್ಲಿ ನಡೆದ 'ಕೆಜಿಎಫ್ 2' ಸಿನಿಮಾದ ಕಾರ್ಯಕ್ರಮದಲ್ಲಿ ಇದೇ ದಿಲ್ ರಾಜು, ಕನ್ನಡ ಸಿನಿಮಾವನ್ನು ಯಾರೂ ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ನಾನೂ ಸಹ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದೊಂದು ಲೋ ಬಜೆಟ್ ಚಿತ್ರೋದ್ಯಮ ಎಂದು ಎಲ್ಲರೂ ಅಂದುಕೊಂಡಿದ್ದೆವು, ಆದರೆ 'ಕೆಜಿಎಫ್' ಸಿನಿಮಾ ವಿಶ್ವಕ್ಕೆ ಕನ್ನಡ ಸಿನಿಮಾಗಳ ತಾಕತ್ತು ಪರಿಚಯಿಸಿದೆ ಎಂದಿದ್ದರು. ಅದೇ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ದಿಲ್ ರಾಜುಗೆ ತಕ್ಕ ಉತ್ತರ ನೀಡಿದ್ದ ಯಶ್, ಕನ್ನಡ ಚಿತ್ರರಂಗ ಮೊದಲಿನಿಂದಲೂ ಅದ್ಭುತ ಸಿನಿಮಾಗಳನ್ನು ನೀಡುತ್ತಲೇ ಬಂದಿದೆ'' ಎಂದಿದ್ದರು.


Click it and Unblock the Notifications











