ರಶ್ಮಿಕಾ ಮಂದಣ್ಣ ಹಾದಿಯಲ್ಲಿ ಶ್ರೀನಿಧಿ ಶೆಟ್ಟಿ, ಮತ್ತೊಂದು ತೆಲುಗು ಚಿತ್ರ ಒಪ್ಪಿಕೊಂಡ ಕೆ.ಜಿ.ಎಫ್ ಕ್ವೀನ್...!
ಅದೃಷ್ಟ ಅಂದ್ರೆ ಇದು... ಹೀಗಂತ ಗಾಂಧಿನಗರದ ಮಂದಿ ಅಚ್ಚರಿಯಿಂದ ಮಾತಾನಾಡಿಕೊಂಡಿದ್ದು ಕೆಜಿಎಫ್ ಚಿತ್ರದ ಕಥಾ ನಾಯಕಿ ಶ್ರೀನಿಧಿ ಶೆಟ್ಟಿ ವಿಚಾರದಲ್ಲಿ.
ಯಾಕೆಂದರೆ.. ಕೆ.ಜಿ.ಎಫ್ ಶ್ರೀನಿಧಿ ಶೆಟ್ಟಿ ಅಭಿನಯದ ಮೊದಲ ಸಿನಿಮಾ. ಆದರೆ ಬೇರೆ ನಟಿಯರಿಗೆಮೂರು ನಾಲ್ಕು ಚಿತ್ರಗಳಾದರೂ ಸಿಗದ ಪಬ್ಲಿಸಿಟಿ ಶ್ರೀನಿಧಿಗೆ ಆ ಕಾಲದಲ್ಲಿ ಸಿಕ್ಕಿತ್ತು. ಇನ್ನೂ ಮೊದಲನೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಆಗಲೇ ಶ್ರೀನಿಧಿ ಶೆಟ್ಟಿಗೆ ಬೇರೆ ಬೇರೆ ಭಾಷೆಗಳಿಂದಲೂ ಅವಕಾಶಗಳು ಸರದಿಯಲ್ಲಿ ನಿಂತಿದ್ದವು. ಬಂದ ಈ ಅವಕಾಶಗಳನ್ನು ಶ್ರೀನಿಧಿ ಎರಡು ಕೈಯಿಂದ ಬಾಚಿಕೊಂಡಿದ್ದರು ಕೂಡ.

ಕೆ.ಜಿ.ಎಫ್ ಭಾಗ 1 ಮತ್ತು ಭಾಗ 2ರ ನಂತರ ಸೀದಾ ಕಾಲಿವುಡ್ ಕಡೆ ಮುಖ ಮಾಡಿದ್ದ ಶ್ರೀನಿಧಿ, ಚಿಯಾನ್ ವಿಕ್ರಮ್ ಜೊತೆ ತೆರೆ ಹಂಚಿಕೊಂಡರು. ಕೋಬ್ರಾದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದರು. ಕೋಬ್ರಾ ಚಿತ್ರದ ನಂತರ ಟಿಲ್ಲು ಸ್ಕ್ರೈರ್ ಖ್ಯಾತಿಯ ಸಿದ್ದು ಜೋನಲಗುಡ್ಡ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಹೋದರು ಶ್ರೀನಿಧಿ ಶೆಟ್ಟಿ. ಆದರೆ ವರ್ಷದ ಹಿಂದೆ ಶುರುವಾದ ಈ ಸಿನಿಮಾದ ಕಥೆ ಏನಾಯ್ತು.. ಆ ಸಿನಿಮಾ ಎಲ್ಲಿಗೆ ಬಂತು ಅನ್ನುವುದು ಇನ್ನೂ ನಿಗೂಢ. ಹೀಗಿರುವಾಗ ಈಗ ಶ್ರೀನಿಧಿ ಶೆಟ್ಟಿ ನಾನಿ ಅಭಿನಯದ ಹಿಟ್ 3 ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಆಂಧ್ರದಿಂದ ತೇಲಿಕೊಂಡು ಬಂದಿದೆ.
ಹೌದು.. 'ದಸರಾ' ಮೂಲಕ ಧಮಾಕ ಎಬ್ಬಿಸಿ, ಆ ನಂತರ 'ಹಾಯ್ ನನ್ನಾ' ಚಿತ್ರದ ಮೂಲಕ ಜನ ಮನ ಗೆದ್ದ ನ್ಯಾಚುರಲ್ ಸ್ಟಾರ್ ನಾನಿ, ಟಾಲಿವುಡ್ನ ಬ್ಲಾಕ್ಬಸ್ಟರ್ ಫ್ರಾಂಚೈಸಿ 'ಹಿಟ್' ಚಿತ್ರದ ಮೂರನೇ ಭಾಗಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ವರ್ಷದ ಹಿಂದೆಯೇ ಬಂದಿತ್ತು. ಅಡವಿ ಶೇಷ್ ಅಭಿನಯದ ಎರಡನೇ ಭಾಗದಲ್ಲಿ ನಾನಿ ಗೆಸ್ಟ್ ರೋಲ್ ನಿರ್ವಹಿಸಿದ ಹಿನ್ನೆಲೆ ಹರಿದಾಡುತ್ತಿದ್ದ ಸುದ್ದಿ ನಿಜ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಆ ನಂತರ ಈ ಚಿತ್ರದ ಕುರಿತು ಯಾವುದೇ ಬ್ರೇಕಿಂಗ್ ನ್ಯೂಸ್ ಹೊರ ಬಂದಿರಲಿಲ್ಲ. ಹೀಗಾಗಿ ಈ ಚಿತ್ರವನ್ನು ಬಹುತೇಕರು ಮರೆತು ಹೋಗಿದ್ದರು.
ಆದರೆ ಈಗ ಏಕಾಏಕಿ ಆಂಧ್ರದಲ್ಲಿ ಹಿಟ್-03 ಚಿತ್ರದ ಕುರಿತು ಚರ್ಚೆ ಶುರುವಾಗಿದೆ. ಡಾ. ಶೈಲೇಶ್ ಕೊಲನು ನಿರ್ದೇಶನದಲ್ಲಿ ಬರಲಿರುವ ಚಿತ್ರಕ್ಕೆ ಈಗ ಶ್ರೀನಿಧಿ ಶೆಟ್ಟಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದ ಮಾತು ಕೂಡ ಹಂಚಿಕೊಂಡಿದ್ದಾರೆ. ಹಿಟ್ 3 ನನ್ನ ಹೃದಯದ ಒಂದು ಭಾಗ ಎಂದಿದ್ದಾರೆ.
ಇನ್ನೂ ನಾನಿಯ ಮುಂದಿನ ಚಿತ್ರಕ್ಕೆ ತಾನು ನಾಯಕಿಯಾಗಿರುವ ವಿಚಾರವನ್ನು ಶ್ರೀನಿಧಿ ಶೆಟ್ಟಿ ಅಧಿಕೃತವಾಗಿ ಹಂಚಿಕೊಂಡ ಬೆನ್ನಲ್ಲಿಯೇ, ಅನೇಕರು ರಶ್ಮಿಕಾ ಮಂದಣ್ಣ ಜೊತೆ ಶ್ರೀನಿಧಿ ಶೆಟ್ಟಿ ಅವರನ್ನು ಹೋಲಿಕೆ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಕಣ್ಮರೆಯಾದಂತೆ ಶ್ರೀನಿಧಿ ಶೆಟ್ಟಿ ಕೂಡ ಸ್ಯಾಂಡಲ್ವುಡ್ಗೆ ಗುಡ್ ಬೈ ಹೇಳಿದಾರಾ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೆಜಿಎಫ್ ಹೊರತು ಪಡಿಸಿದರೆ ಶ್ರೀನಿಧಿ ಶೆಟ್ಟಿ ಬೇರೆ ಯಾವ ಕನ್ನಡ ಚಿತ್ರವನ್ನು ಒಪ್ಪಿಕೊಂಡಿಲ್ಲ. ನಿಜಾ. ಕಿಚ್ಚ ಸುದೀಪ್ ಅಭಿನಯದ ಕಾಲಿವುಡ್ ಸ್ಟಾರ್ ಡೈರೆಕ್ಟರ್ ಚೇರನ್ ನಿರ್ದೇಶನದ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ, ಆ ಚಿತ್ರ ಎಲ್ಲಿಗೆ ಬಂತು ಎನ್ನುವುದು ಸದ್ಯಕ್ಕೆ ಯಾರೆಂದರೆ ಯಾರಿಗೂ ಗೊತ್ತಿಲ್ಲ. ಆ ಚಿತ್ರದ ಕುರಿತು ಸುದ್ದಿಯೂ ಇಲ್ಲ. ನಿಜಕ್ಕೂ ರಶ್ಮಿಕಾ ಅವರಂತೆಯೇ ಶ್ರೀನಿಧಿ ಕನ್ನಡ ಚಿತ್ರರಂಗದಿಂದ ದೂರವಾಗುತ್ತಾರಾ..? ಲೆಟ್ಸ್ ಸೀ.


Click it and Unblock the Notifications











