ತೆಲುಗು ನಾಯಕನ ಬತ್ತಳಿಕೆಯಲ್ಲಿ ಈಗುಳಿದಿರುವುದು ರಾಷ್ಟ್ರಗೀತೆ ಮಾತ್ರ
ಧೂಮಕೇತುವಿನಂತೆ ಕನ್ನಡ ಚಿತ್ರರಂಗಕ್ಕೆ ಅಪ್ಪಳಿಸಿ, ಅಷ್ಟೇ ರಭಸದಲ್ಲಿ ಮಾಯವಾದ ನಟನೆಂದರೆ ಸಾಯಿ ಕುಮಾರ್. ಪರಭಾಷೆಯಿಂದ ಬಂದು ಕನ್ನಡದಲ್ಲಿ ಯಶಸ್ಸು ಕಂಡ ಮೊದಲ ಹೀರೋ ಇವರು. ಪೊಲೀಸ್ ಇನ್ಸ್ಪೆಕ್ಟರ್ ಪಾತ್ರಕ್ಕೆ ಹೊಸ ಆಯಾಮವನ್ನು ತಂದಿತ್ತ ಕೀರ್ತಿಯೂ ಇವರಿಗೇ ಸಲ್ಲಬೇಕು. ಜೊತೆಗೆ ಕನ್ನಡ ಭಾಷೆಯಲ್ಲಿರುವ ಬೈಗುಳ ಪದಗಳನ್ನು ಜನಪ್ರಿಯಗೊಳಿಸಿದ್ದು ಇವರ ಸಾಧನೆ !
ಈಗ ಸಾಯಿ ಕುಮಾರ್ ಅವರ ಎರಡನೇ ಇನ್ನಿಂಗ್ಸ್ ಕೂಡ ಇಲ್ಲಿ ಮುಕ್ತಾಯವಾಗಿ ಆರು ತಿಂಗಳೇ ಕಳೆದಿವೆ. ಹಾಗಿದ್ದೂ ಹಳೇ ಬಾಕಿಗಳ ಚುಕ್ತಾ ಆಗ್ತಾ ಇದೆ. ಅದಕ್ಕೆ ಕಾರಣ ಏಕಕಾಲಕ್ಕೆ ನಾಲ್ಕೈದು ಚಿತ್ರಗಳಲ್ಲಿ ನಟಿಸುವ ಸಾಯಿ ಸಾಮರ್ಥ್ಯ.
ಖಡ್ಗ ಶುಕ್ರವಾರದಂದು ತೆರೆ ಕಂಡಿದೆ. ಸಾಯಿ ಸೀರೀಸ್ನಲ್ಲಿ ಇನ್ನು ಉಳಿದಿರುವ ಏಕೈಕ ಚಿತ್ರವೆಂದರೆ ರಾಷ್ಟ್ರಗೀತೆ. ತೆರೆಗೆ ಸಿದ್ಧವಾಗಿ ಆರು ತಿಂಗಳು ಕಳೆದರೂ ಗಿರಾಕಿಗಳ ಅಭಾವದಿಂದ ಡಬ್ಬದಲ್ಲಿ ಬಾಕಿಯಾಗಿದ್ದ ಖಡ್ಗ ಚಿತ್ರದಲ್ಲಿ ಸಾಯಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಒಂದು ಪಾತ್ರ ಪತ್ರಕರ್ತನದ್ದು. ರೋಚಕ ಸುದ್ದಿಗಳಿಗಾಗಿ ತಹತಹಿಸುವ ಪತ್ರಕರ್ತ.
ಕತ್ತಿಗಿಂತ ಲೇಖನಿ ಹರಿತ ಎನ್ನುವುದು ಚಿತ್ರದ ನೀತಿ. ಖಡ್ಗ ಚಿತ್ರವನ್ನು ವೇಣುಗೋಪಾಲ್ ನಿರ್ಮಿಸಿದ್ದು ಆನಂದ್ ಪಿ. ರಾಜು, ನಿರ್ದೇಶಿಸಿದ್ದಾರೆ. ಸಾಯಿ ಕುಮಾರ್ ಜೊತೆಗೆ ಶಿಲ್ಪಾ, ಇಂದ್ರಜ, ಶೋಭರಾಜ್, ಅವಿನಾಶ್, ದತ್ತಾತ್ರೇಯ, ಸತ್ಯ ಪ್ರಕಾಶ್, ನಟಿಸಿದ್ದಾರೆ.


Click it and Unblock the Notifications











