ಈಗ ಬಿಡುಗಡೆ ಮುಂದಕ್ಕೆ; ರಾಜಮೌಳಿ ಕ್ಷಮೆಯಾಚನೆ
ಕನ್ನಡದ ಕಿಚ್ಚ ಸುದೀಪ್ ಅವರ ತೆಲುಗು ಹಾಗೂ ತಮಿಳು ಚಿತ್ರ 'ಈಗ' ಬಿಡುಗಡೆ ಮುಂದಕ್ಕೆ ಹೋಗಿದೆ. ಈ ಮೊದಲೂ ಕೂಡ ಬಿಡುಗಡೆ ದಿನಾಂಕ ಘೋಷಣೆಯಾದ ನಂತರ ಎರಡು ಬಾರಿ ರದ್ದಾಗಿ ಮರುಘೋಷಣೆ ಆಗಿತ್ತು. ಇತ್ತೀಚಿನ ವರದಿಯಂತೆ ಅದು ಮೇ 30, 2012 ಎನ್ನಲಾಗಿತ್ತು.
ಆದರೆ ಈಗ, 'ಈಗ' ಚಿತ್ರದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಆದರೆ ಈ ಬಾರಿ ದಿನಾಂಕವನ್ನು ಘೋಷಿಸಿಲ್ಲ. ಕಾರಣ, ಈ ಚಿತ್ರಕ್ಕೆ ಇನ್ನೂ ಮುಗಿಯದ ಗ್ರಾಫಿಕ್ಸ್ ಕೆಲಸ. ಗ್ರಾಫಿಕ್ಸ್ ಕೆಲಸ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಲೂ ಕನಿಷ್ಟ ಇನ್ನೂ ಒಂದು ತಿಂಗಳಾದರೂ ಬೇಕು ಎನ್ನಲಾಗುತ್ತಿದೆ.
ಮೇ 30ಕ್ಕೆ ಖಂಡಿತ ಬಿಡುಗಡೆಯಾಗಲಿದೆ ಎಂದು ಸ್ವತಃ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಸುದೀಪ್ ಹೇಳಿದ್ದರು. ಈಗ ಇಬ್ಬರೂ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. "ಸುದೀಪ್ ಪ್ರಮುಖ ಪಾತ್ರದಲ್ಲಿರೋ ಸಿನಿಮಾ ಬಿಡುಗಡೆ ಅಂದುಕೊಂಡಂತೆ ಸಾಧ್ಯವಾಗಿಲ್ಲ, ಗ್ರಾಫಿಕ್ಸ್ ಕೆಲಸ ಮುಗಿದಿಲ್ಲವಾದ್ದರಿಂದ ಇನ್ನೂ ಸ್ವಲ್ಪ ಕಾಲಾವಕಾಶ ಬೇಕು" ಎಂದಿದ್ದಾರೆ.
ಈಗ ಚಿತ್ರಕ್ಕೆ ನಾಣಿ ಮತ್ತು ಸಮಂತಾ ನಾಯಕ-ನಾಯಕಿಯರು, ಸುದೀಪ್ ಖಳನಟ. ಆದರೆ ನಾಯಕ-ನಾಯಕಿ ಪಾತ್ರಕ್ಕಿಂತ ಖಳನಟ ಸುದೀಪ್ ಪಾತ್ರವೇ ಹೆಚ್ಚು ತೂಕದ್ದು ಎನ್ನುವುದು ಸ್ವತಃ ರಾಜಮೌಳಿ ಮಾತು. ಈ ಚಿತ್ರ ತಮಿಳಿನಲ್ಲಿ 'ನಾನ್ ಈ' ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ನಂತರ ಮಲಯಾಳಂ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಲಿದೆ.
ಇದುವರೆಗಿನ ಗ್ರಾಫಿಕ್ಸ್ ಕೆಲಸ ತುಂಬಾ ಚೆನ್ನಾಗಿ ನಡೆದಿದೆ. ಇನ್ನುಳಿದ ಭಾಗದಲ್ಲೂ ಅದೇ ರೀತಿಯ ಅತ್ಯುನ್ನತ ಗ್ರಾಫಿಕ್ಸ್ ಬಳಸಬೇಕೆನ್ನುವುದು ನನ್ನ ಹೆಬ್ಬಯಕೆ. ತಂತ್ರಜ್ಞರು ಇದಕ್ಕಾಗಿ ರಾತ್ರಿ ಹಗಲು ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಇನ್ನು ಸ್ವಲ್ಪ ದಿನ ಕಾಯಿರಿ ಎಂದು ನಿರ್ದೇಶಕರು ಅಭಿಮಾನಿಗಳಲ್ಲಿ ಭಿನ್ನವಿಸಿಕೊಂಡಿದ್ದಾರೆ.
ರಾಜಮೌಳಿ ಈಗ ಚಿತ್ರ ಬಿಡುಗಡೆಯಾದ ನಂತರ ಕಿಚ್ಚ ಸುದೀಪ್ ಅವರಿಗೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಬಹುದು ಎನ್ನಲಾಗುತ್ತಿದೆ. ಆದರೆ "ಕನ್ನಡವೇ ತಮ್ಮ ಮೊದಲ ಆದ್ಯತೆ. ಕನ್ನಡ ಬಿಟ್ಟು ಎಲ್ಲೂ ಹೋಗುವುದಿಲ್ಲ" ಎಂದು ಇತ್ತೀಚಿಗೆ ಸುದೀಪ್ ಹೇಳಿಕೆ ನೀಡಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











