ಕೆ ಮಂಜು, ಕೋಟಿ ರಾಮುಗೆ ಝಾಡಿಸಿದ ಸುದೀಪ್
ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಸುದೀಪ್ ನಟಿಸುತ್ತಿರುವಾಗಲೇ ಸಹಜವಾಗಿ ಮೊದಲೇ ಭವಿಷ್ಯ ಅರಿತಿದ್ದ ಕೆಲ ನಿರ್ಮಾಪಕರು ತಮ್ಮ ನಿರ್ಮಾಣ ಹಾಗೂ ಸುದೀಪ್ ನಟನೆಯ ಚಿತ್ರವನ್ನು ನೆರೆಭಾಷೆಗಳಿಗೆ ಡಬ್ ಮಾಡಲು ತೊಡಗಿಕೊಂಡಿದ್ದರು. ಅವರಲ್ಲೊಬ್ಬರಾದ ಶಂಕರೇಗೌಡರ ಚಿತ್ರ ಜಸ್ಟ್ ಮಾತ್ ಮಾತಲ್ಲಿ' ಬಗ್ಗೆ ಸ್ವತಃ ಸುದೀಪ್ ಸಂತೋಷಪಟ್ಟಿದ್ದರು.
ಅದಕ್ಕೆ ಕಾರಣ, ಸದೀಪ್-ರಮ್ಯಾ ಅಭಿನಯದ ಜಸ್ಟ್ ಮಾತ್ ಮಾತಲ್ಲಿ ಚಿತ್ರ ಗಳಿಕೆಯಲ್ಲಿ ಸೋತುಹೋಗಿ ನಿರ್ಮಾಪಕ ಶಂಕರೇಗೌಡರಿಗೆ ನಷ್ಟವಾಗಿತ್ತು. ಹೀಗಾಗಿ ತಮಿಳಿಗೆ ಡಬ್ ಮಾಡುವ ಮೂಲಕ ಅವರಿಗಾದ ನಷ್ಟ ತುಂಬಿಕೊಳ್ಳಲು ಅವರು ಮಾಡಿದ್ದ ಪ್ರಯತ್ನವನ್ನು ಸುದೀಪ್ ಸ್ವಾಗತಿಸಿದ್ದರು. ಆದರೆ ಈಗ, ಲಾಭ ಮಾಡಿಕೊಂಡವರೂ ಮತ್ತೆ ಲಾಭಕ್ಕಾಗಿ ಹೊಂಚುಹಾಕಿದ್ದಾರೆ ಎಂಬುದು ಸುದೀಪ್ ಆರೋಪ.
ಸುದೀಪ್ ಆರೋಪಪಟ್ಟಿಯಲ್ಲೀಗ ನಿರ್ಮಾಪಕರಾದ ಕೆ. ಮಂಜು ಮತ್ತು ಕೋಟಿ ರಾಮು ಹೆಸರು ಕೇಳಿಬರುತ್ತಿದೆ. ಅವರೀಗ ಕ್ರಮವಾಗಿ 'ಕಿಚ್ಚ-ಹುಚ್ಚ' ಮತ್ತು 'ಗೂಳಿ' ಚಿತ್ರಗಳನ್ನು ತೆಲುಗು-ತಮಿಳಿಗೆ ಡಬ್ ಮಾಡಲಿದ್ದಾರೆ. ಕಾರಣ, ತೆಲುಗು ಚಿತ್ರ ಈಗ ಮತ್ತು ಅದರ ತಮಿಳು, ಮಲಯಾಳಂ ಆವೃತ್ತಿಗಳ ಮೂಲಕ ಸುದೀಪ್ 'ಸೌತ್ ಇಂಡಿಯಾ ಸ್ಟಾರ್' ಆಗುತ್ತಿದ್ದಾರೆ. ಇದನ್ನರಿತ ಈ ನಿರ್ಮಾಪಕರು ಸುದೀಪ್ ಹೆಸರನ್ನು 'ಎನ್ ಕ್ಯಾಶ್' ಮಾಡಿಕೊಳ್ಳಲು ಹೊರಟಿದ್ದಾರೆಂಬುದು ಕಿಚ್ಚರ ಅಭಿಪ್ರಾಯ.
ಅದು ಕಿಚ್ಚ ಸುದೀಪ್ ಕೋಪಕ್ಕೆ ಕಾರಣವಾಗಿದೆ. ತಮ್ಮ ಅಸಮಾಧಾನವನ್ನು ಟ್ವಿಟ್ಟರ್ ಮೂಲಕ ಸುದೀಪ್ ಹೀಗೆ ಹೊರಹಾಕಿದ್ದಾರೆ..."ಒಂದು ನೊಣ ತುಂಬಾ ವೇಗವಾಗಿ ಹಾರುತ್ತದೆ ಎಂದು ನೀವೆಲ್ಲರೂ ಅಂದುಕೊಂಡಿರುತ್ತೀರಿ. ಆದರೆ ಕೆ. ಮಂಜು ಮತ್ತು ರಾಮು ಅದಕ್ಕಿಂತಲೂ ಸೂಪರ್ ಫಾಸ್ಟ್. ಈಗಾಗಲೇ 'ಕಿಚ್ಚ ಹುಚ್ಚ' ಚಿತ್ರವನ್ನು ತೆಲುಗಿಗೆ ಹಾಗೂ 'ಗೂಳಿ'ಯನ್ನು ತಮಿಳಿಗೆ ಡಬ್ ಮಾಡುತ್ತಿದ್ದಾರೆ. ಅವಕಾಶವಾದಿಗಳು..."
ಇನ್ನೊಂದು ಟ್ಟೀಟ್ ನಲ್ಲಿ ಸುದೀಪ್ " ಈ ಇಬ್ಬರನ್ನು ಕನ್ನಡದ ಗೌರವಾನ್ವಿತ ನಿರ್ಮಾಪಕರೆಂದು ಅಂದುಕೊಳ್ಳುವುದಾದರೆ, ಅವರಿಬ್ಬರೂ ಅದ್ಯಾಕೆ ಕನ್ನಡಕ್ಕೆ ಡಬ್ಬಿಂಗ್ ಬೇಡವೆಂದು ವಿರೋಧಿಸುತ್ತಾರೆ. ಕನ್ನಡದ ತಮ್ಮ ಚಿತ್ರವನ್ನು ಡಬ್ ಮಾಡುವ ಅವಕಾಶವನ್ನು ತಡಮಾಡದೇ ಎಲ್ಲರಿಗಿಂತ ಮೊದಲು ಇವರೇ ಬಾಚಿಕೊಂಡಿದ್ದಾರೆ..."
ಹೀಗೆಂದು ಸುದೀಪ್ ತಮ್ಮ ಎರಡು ಟ್ವೀಟ್ ನಲ್ಲಿ ಈ ಇಬ್ಬರು ನಿರ್ಮಾಪಕರ 'ಅವಕಾಶವಾದಿ'ತನವನ್ನು ವ್ಯಂಗ್ಯ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. 'ಹೇಳುವುದು ಒಂದು ಮಾಡುವುದು ಇನ್ನೊಂದು' ಎಂಬ ಇವರ ನಿಲುವು ಸಹಜವಾಗಿಯೇ ಕಿಚ್ಚ ಸುದೀಪ್ ಪಿತ್ಥ ಕೆರಳಿಸಿದೆ. ಸುದೀಪ್ ಇಬ್ಬರಿಗೂ ಝಾಡಿಸಿದ್ದಾರೆ.
ಆದರೆ ರಾಮು ಮತ್ತು ಮಂಜು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. "ನಾವು ನಮ್ಮ ನಿರ್ಮಾಣದ ಚಿತ್ರಗಳನ್ನು ತೆಲುಗು-ತಮಿಳಿಗೆ ಡಬ್ ಮಾಡಲು 'ಈಗ' ಯಶಸ್ಸು ಕಾರಣವಲ್ಲ. ನಾವು ನಮ್ಮ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾದ ಸಂದರ್ಭದಲ್ಲೇ ಡಬ್ಬಿಂಗ್ ಹಕ್ಕುಗಳನ್ನು ಮಾರಾಟ ಮಾಡಿದ್ದೇವೆ. ಈಗ ಡಬ್ಬಿಂಗ್ ಪ್ರಾರಂಭಿಸಿದ್ದೇವೆ ಅಷ್ಟೇ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












