ಕಿಚ್ಚ ಸುದೀಪ್ ತಮಿಳು ಚಿತ್ರರಂಗಕ್ಕೆ ಹೋಗಲಿದ್ದಾರಾ?
ಈ ಮೊದಲು ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿ 'ಆಲ್ ಇಂಡಿಯಾ ಫೇಮ್' ಗಳಿಸಿದ್ದ ಸುದೀಪ್ ದಕ್ಷಿಣ ಭಾರತದಲ್ಲಿ ಕನ್ನಡ ಬಿಟ್ಟರೆ ಉಳಿದ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರಲಿಲ್ಲ. ಹೀಗಾಗಿ ಕನ್ನಡದ ಸ್ಟಾರ್ ಎಂಬ ಹಣೆಪಟ್ಟಿ ಮಾತ್ರ ಸುದೀಪ್ ಅವರಿಗಿತ್ತು.
ಆದರೆ ಈಗ ಹಾಗಲ್ಲ. ತೆಲುಗಿನ (ದಕ್ಷಿಣ ಭಾರತದ) ಹೆಸರಾಂತ ನಿರ್ದೇಶಕ ಎಸ್ ಎಸ್ ರಾಜಮೌಳಿಯವರ ತೆಲುಗು ಹಾಗೂ ತಮಿಳಿನ ಚಿತ್ರದ ಮೂಲಕ ಸುದೀಪ್ ಇಡೀ ದಕ್ಷಿಣ ಭಾರತದ ಗಮನವನ್ನು ಸೆಳೆದಿದ್ದಾರೆ. ಜೊತೆಗೆ ಸುದೀಪ್ ಅವರಿಗೆ ವರ್ಮಾರಂತಹ ನಿರ್ದೇಶಕರೂ ಸೇರಿ ಬಾಲಿವುಡ್ ನಂಟಂತೂ ಮೊದಲಿನಿಂದಲೂ ಇದ್ದೇ ಇದೆ.
'ನಾನ್ ಈ' ಚಿತ್ರದ ಮೂಲಕ ತಮಿಳಿಗೂ ಸುದೀಪ್ ಕಾಲಿಟ್ಟಂತಾಯಿತು. ಮುಂದೆ ತಮಿಳು ಚಿತ್ರಗಳಲ್ಲಿ ಆಫರ್ ಬಂದರೆ ನಟಿಸುತ್ತೀರಾ ಎಂಬ ಪ್ರಶ್ನೆ ಸಹಜವಾಗಿಯೇ ಸುದೀಪ್ ಅವರಿಗೆ ಎದುರಾಗಿದೆ. ಅದಕ್ಕೆ ಸುದೀಪ್ ಎಂದಿನಂತೆ ನೇರವಾಗಿ ಉತ್ತರಿಸಿದ್ದಾರೆ. ಅವರ ಉತ್ತರದ ಝಲಕ್ ಇಲ್ಲಿದೆ ನೋಡಿ...
"ಕನ್ನಡ ಚಿತ್ರರಂಗದಲ್ಲಿ ನನ್ನ ಸ್ಥಾನ ಗಟ್ಟಿಯಾಗಿದೆ. ಹಾಗಾಗಿ ಯಾವುದೋ ಆಫರ್ ಇದೆ ಎಂಬ ಮಾತ್ರಕ್ಕೆ ಚೆನ್ನೈ ವಿಮಾನ ಹತ್ತಲಾರೆ. ನನಗೆ ಸವಾಲೊಡ್ಡುವ ಪಾತ್ರಗಳೇನಾದರೂ ಸಿಕ್ಕಿದರೆ ನೋಡೋಣ. ತಮಿಳು ಚಿತ್ರಗಳೆಂದರೆ ನನಗೆ ತುಂಬಾನೇ ಇಷ್ಟ. ಕಥೆ ಹಾಗೂ ಕಲಾವಿದರ ವಿಚಾರಕ್ಕೆ ಬಂದರೂ ಬೆಂಗಳೂರು ಮತ್ತು ಚೆನ್ನೈಗೆ ತುಂಬಾ ವ್ಯತ್ಯಾಸವೇನೂ ಇಲ್ಲ.
ಆದರೆ ಯಾರೋ ಆಫರ್ ಕೊಟ್ಟರೆಂದ ಮಾತ್ರಕ್ಕೆ ಸೀದಾ ವಿಮಾನ ಹತ್ತಿ ಹೋಗಲಾರೆ. ಹೊಸತನ ಹಾಗೂ ಸವಾಲಿನ ಪಾತ್ರವೇನಾದರೂ ನನಗೆ ಸಿಕ್ಕಿದರೆ ಖಂಡಿತಾ ಬರುತ್ತೇನೆ. ಕನ್ನಡದಲ್ಲಿ ನನ್ನ ಸ್ಥಾನದ ಬಗ್ಗೆ ನನಗೆ ಸಂಪೂರ್ಣ ತೃಪ್ತಿಯಿದೆ. ಕಲಾವದರಿಗೆ ಭಾಷೆಯ ಯಾವುದೇ ಹಂಗೂ ಇರುವುದಿಲ್ಲ." ಎಂದಿದ್ದಾರೆ ಕಿಚ್ಚ ಸುದೀಪ್.
ಇತ್ತೀಚಿಗೆ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ 'ಈಗ' ಚಿತ್ರದ ಟ್ರೈಲರ್ ಗಳನ್ನು ಬಾಲಿವುಡ್ ಘಟಾನುಘಟಿಗಳಾದ ಶಾರೂಖ್ ಖಾನ್ ಮತ್ತು ಅಕ್ಷಯ್ ಕುಮಾರ್ ನೋಡಿದ್ದಾರೆ. ಕಿಚ್ಚ ಸುದೀಪ್ ನಟನೆಗೆ ಬೆರಗಾಗಿದ್ದಾರೆ. ತಮಿಳಿನ ದೊಡ್ಡ ದೊಡ್ಡ ಸ್ಟಾರುಗಳೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಷ್ಟೇ ಅಲ್ಲ, ಇತ್ತೀಚಿಗೆ ಸೌತ್ ಇಂಡಿಯಾದತ್ತ ಬಾಲಿವುಡ್ ಮಂದಿ ಗಂಭೀರವಾಗಿ ನೋಡುತ್ತಿದ್ದಾರೆ. ಇದು ಸುದೀಪ್ ಅವರಿಗೆ ಖುಷಿ ತಂದಿದೆ. ಅನುರಾಗ್ ಕಶ್ಯಪ್ ಅವರಂತಹ ಪ್ರತಿಭಾವಂತ ನಿರ್ದೇಶಕರೇ ದಕ್ಷಿಣದತ್ತ ನೋಡಲಾರಂಭಿಸಿದ್ದಾರೆ. 'ಈಗ'ದಂತಹ ವಿಭಿನ್ನ ಕಥೆಯ ಸಿನಿಮಾ ಅವರಲ್ಲೂ ಅಚ್ಚರಿ ಹುಟ್ಟಿಸುತ್ತಿದೆ.
ಒಟ್ಟಿನಲ್ಲಿ ಕನ್ನಡದ ನಟನೊಬ್ಬ ದಕ್ಷಿಣ ಭಾರತದ ಸೂಪರ್ ಸ್ಟಾರ್ ಆಗುವ ಹಾದಿಯಲ್ಲಿದ್ದಾರೆ. ಏಕಕಾಲಕ್ಕೆ ತಮಿಳು, ತೆಲುಗಿನಲ್ಲಿ ಮಿಂಚಲಿದ್ದಾರೆ. ಒಳ್ಳೆ ಕಥೆ ಸಿಕ್ಕರೆ ಮುಂದೆ ತಮಿಳು ಚಿತ್ರಗಳನ್ನೂ ಒಪ್ಪಿಕೊಳ್ಳುವ ಮಾತನ್ನೂ ಆಡಿದ್ದಾರೆ ಸುದೀಪ್. ಕನ್ನಡದ ನಟ ಮುಂದೆ ಕನ್ನಡಿಗರಿಗೆ ಅಪರೂಪವಾಗುವ ಕ್ಷಣ ಬಂದರೂ ಆಶ್ಚರ್ಯವಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications












