ನನ್ನ ಮನೆ ಬಿಟ್ಟು ಎಲ್ಲೂ ಹೋಗಲ್ಲ; ಕಿಚ್ಚ ಸುದೀಪ್
ಈಗ ಚಿತ್ರದ ನೋಡಿದ ಪ್ರತಿಯೊಬ್ಬರೂ ಸುದೀಪ್ ನಟನೆ ಹಾಗೂ ಆಂಗ್ರಿ ಯಂಗ್ ಮ್ಯಾನ್ ಲುಕ್ ನೋಡಿ ಸಿಕ್ಕಾಪಟ್ಟೆ ಅವರನ್ನು ಕೊಂಡಾಡಿದ್ದಾರೆ. ಸುದೀಪ್ ನಟನೆಯನ್ನು ಹೊಗಳಿ ಭಾರತೀಯ ಚಿತ್ರರಂಗದ ಅತಿರಥಮಹಾರಥರು ಎಸ್ ಎಂ ಎಸ್, ಟ್ವಿಟ್ಟರ್, ಫೇಸ್ ಬುಕ್ ಮುಂತಾದ ಸಾಮಾಜಿಕ ತಾಣಗಳ ಮೂಲಕ ಸುದೀಪ್ ರನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಕರೆ ಮಾಡಿ ನೇರವಾಗಿ ಮಾತನಾಡಿದವರೂ ಇದ್ದಾರೆ.
ಕನ್ನಡ ನಟ ಕಿಚ್ಚ ಸುದೀಪ್ ತೆಲುಗು ಈಗ ಚಿತ್ರದ ಮೂಲಕ ಇಡೀ ಇಂಡಿಯಾದಲ್ಲೇ ಹವಾ ಎಬ್ಬಿಸಿರುವುದು ಈಗ ಇತಿಹಾಸ. ಈಗ ಚಿತ್ರದ ಬಿಡುಗಡೆ ನಂತರ ಸುದೀಪ್ ಅವರಿಗೆ ಆಫರ್ ಗಳ ಸುರಿಮಳೆಯೇ ಸುರಿಯುತ್ತಿದೆ ಎಂಬುದು ಎಲ್ಲಾ ಕಡೆ ಹಬ್ಬಿರುವ ಸುದ್ದಿಯಾದರೂ ಅದು ನಿಜವಲ್ಲ ಎಂದಿದ್ದಾರೆ ಸ್ವತಃ ಸುದೀಪ್. ಅದು ಕೇವಲ ಊಹೆಯಷ್ಟೇ ಎಂಬುದೀಗ ಸಾಬೀತಾಗಿದೆ. ಸುದೀಪ್ ಅವರು ಯಾವ್ಯಾವುದೋ ಆಫರ್ ಒಪ್ಪಿಕೊಳ್ಳುವವರಲ್ಲ ಎಂಬುದು ನೆರೆಯ ಚಿತ್ರರಂಗಗಳಿಗೂ ಗೊತ್ತು.
"ನನಗೆ ನೇರವಾಗಿ ಯಾವುದೇ ಆಫರ್ ಬಂದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ ಸುದೀಪ್. ಹಾಗೆ ಕರೆ ಬಂದರೂ ಇದ್ದಕ್ಕಿದ್ದಂತೆ ಹೋರಟುಬಿಡುವುದಿಲ್ಲ. ಸಾಕಷ್ಟು ಯೋಚಿಸಿಯೇ ತೀರ್ಮಾನ ತೆಗೆದುಕೊಳ್ಳುತ್ತೇನೆ. ಇದು (ಕನ್ನಡ ಚಿತ್ರರಂಗ) ನನ್ನ ಮನೆ. ನಾನು ಇಲ್ಲಿದ್ದೇ ಸಾಕಷ್ಟು ಸಾಧಿಸಿದ್ದೇನೆ. ಮುಂದೆ ಕೂಡ ಇಲ್ಲೇ ಸಾಧಿಸಲು ಸಾಕಷ್ಟು ಅವಕಾಶಗಳಿವೆ. ಚಿತ್ರವೊಂದು ಯಶಸ್ವಿಯಾದರೆ ತಕ್ಷಣವೇ ಭಾರೀ ಆಫರ್ ಗಳು ಬರುತ್ತವೆ ಎಂಬುದನ್ನು ನಾನು ಖಂಡಿತ ನಂಬಲಾರೆ" ಎಂದಿದ್ದಾರೆ ಸುದೀಪ್.
ಪ್ರಕಾಶ್ ರೈ, ರಜನಿಕಾಂತ್, ಅರ್ಜುನ್ ಸರ್ಜಾ ಮುಂತಾದವರು ಕನ್ನಡದಿಂದ ನೆರೆಭಾಷೆ ಚಿತ್ರರಂಗಗಳಿಗೆ ಜಂಪ್ ಮಾಡಿದವರು. ನೀವು ಅವರ ಹಾದಿಯಲ್ಲೇ ಸಾಗುತ್ತೀರಾ ಎಂಬ ಪ್ರಶ್ನೆಗೆ, "ನನಗೂ ಅವರಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಅವರು ನಿರೀಕ್ಷೆಗಳ ಬೆನ್ನು ಹತ್ತಿ ಬೇರೆ ಚಿತ್ರಂಗಕ್ಕೆ ಹೋದವರು. ಆದರೆ ನಾನು ಇಲ್ಲೇ ಸಾಕಷ್ಟು ಸಾಧಿಸಿ ಅವಕಾಶ ಬಂದಾಗ ಒಂದು ಚಿತ್ರದಲ್ಲಿ ನಟಿಸಿದ್ದೇನೆ ಅಷ್ಟೇ. ನಮ್ಮ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ತೆಲುಗು, ತಮಿಳಿನಿಂದ ನನಗೆ ಯಾವುದೇ ಆಫರ್ ನೇರವಾಗಿ ಬಂದಿಲ್ಲ. ನನಗೆ ಸಂಬಂಧಪಟ್ಟವರಲ್ಲಿ ವಿಚಾರಿಸುವುದು, ಡೇಟ್ಸ್ ಕೇಳುವುದ ಬಿಟ್ಟರೆ ಇದುವರೆಗೂ ನನಗೆ ಯಾವುದೇ ಆಫರ್ ನೇರವಾಗಿ ಬಂದಿಲ್ಲ. ನನ್ನ ಜತೆ ಈ ಬಗ್ಗೆ ಯಾರೂ ಮಾತನಾಡಿಲ್ಲ. ನೋಡೋನ ಮುಂದೆ ಅವಕಾಶ ಬಂದರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇನೆ" ಎಂದಿದ್ದಾರೆ ಕಿಚ್ಚ ಸುದೀಪ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











