ಅಲ್ಲು ಅರ್ಜುನ್ ಜೊತೆ ನಟಿಸದ ಸುದೀಪ್ ಗುಟ್ಟು ರಟ್ಟು
ಕನ್ನಡ ನಟ ಕಿಚ್ಚ ಸುದೀಪ್, ಅಲ್ಲು ಅರ್ಜುನ್ ನಾಯಕತ್ವದ ತೆಲುಗು ಚಿತ್ರ 'ಜುಲೈ'ದಿಂದ ಹೊರಗುಳಿದಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ. 2011ರ ನವೆಂಬರ್ ಮೊದಲ ವಾರದಲ್ಲಿ ಈ ಚಿತ್ರದ ಮುಹೂರ್ತ ನಡೆದಿತ್ತು. ಅದರಲ್ಲಿ ಸುದೀಪ್ ಭಾಗವಹಿಸಿದ್ದರು. ಮುಹೂರ್ತಕ್ಕೂ ಮೊದಲು ನಡೆದ ಮಾತುಕತೆಯಂತೆ ಸುದೀಪ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಬೇಕಿತ್ತು. ಒಪ್ಪಂದಕ್ಕೆ ಸುದೀಪ್ ಸಹಿಯನ್ನೂ ಹಾಕಿದ್ದರು.
ಆದರೆ ನಂತರ ಸುದೀಪ್ ಅದರಲ್ಲಿ ನಟಿಸಲಿಲ್ಲ. ಎಲ್ಲೂ ಆ ಚಿತ್ರದ ಕುರಿತಾಗಲೀ ಅಥವಾ ತಾನು ಯಾಕೆ ನಟಿಸುತ್ತಿಲ್ಲ ಎಂಬ ಬಗ್ಗೆಯಾಗಲೀ ಒಂದು ಮಾತನ್ನೂ ಆಡಿರಲಿಲ್ಲ ಕಿಚ್ಚ ಸುದೀಪ್. ಎಲ್ಲದಕ್ಕಿಂತ ಆಶ್ಚರ್ಯವೆಂದರೆ, ಸುದೀಪ್ ಮುಹೂರ್ತಕ್ಕೆ ಹೋಗಿಯೂ ನಟಿಸದಿರುವ ಚಿತ್ರ ಯಾವುದೆಂದು ಗೊತ್ತಾಗಿದ್ದೇ ತೀರಾ ಇತ್ತೀಚಿಗೆ. ಅದು ಜುಲೈ ಎಂಬುದು ಈಗಷ್ಟೇ ಸಿಕ್ಕ ಮಾಹಿತಿ.
ಅಲ್ಲು ಅರ್ಜುನ್ ಚಿತ್ರ ಜುಲೈದಲ್ಲಿ ಇಲಿಯಾನಾ ನಾಯಕಿ. ಸುದೀಪ್ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದರು. ಆದರೆ, ಮುಹೂರ್ತ ಆಚರಿಸಿಕೊಂಡ ಚಿತ್ರ ತೀರಾ ನಿಧಾನಗತಿ ಅನುಸರಿಸತೊಡಗಿತು. ಚಿತ್ರೀಕರಣ ಶುರುವಾಗುವ ಹೊತ್ತಿಗೆ ತುಂಬಾ ಲೇಟಾಗಿ ಸಾಕಷ್ಟು ಅವಕಾಶಗಳು ಸುದೀಪ್ ಕೈತಪ್ಪುವ ಸಂದರ್ಭ ಸೃಷ್ಟಿಯಾಗಿತ್ತು.
ತಕ್ಷಣ ಎಚ್ಚೆತ್ತ ಸುದೀಪ್, ಆ ಚಿತ್ರವನ್ನೇ ತಮ್ಮ ಅಕೌಂಟ್ ನಿಂದ ಹೊರಗಿಟ್ಟು ಆಗ ಬಂದ ಆಫರ್ ಗಳಿಗೆ ತೆರೆದುಕೊಂಡರು. ಅದೇ ವೇಳೆ, ಎಸ್ ಎಸ್ ರಾಜಮೌಳಿಯವರಿಂದ ಸುದೀಪ್ ಅವರಿಗೆ ಕರೆ ಬಂತು. ಅದೇ ಈಗ ಬಿಡುಗಡೆ ಹೊಸ್ತಿಲಲ್ಲಿ ನಿಂತಿರುವ ಸುದೀಪ್ ತೆಲುಗು 'ಈಗ' ಹಾಗೂ ತಮಿಳು 'ನಾನ್ ಈ' ಚಿತ್ರ.
ನಂತರ ಶೂಟಿಂಗ್ ಪ್ರಾರಂಭಿಸಿದ ಜುಲೈ ಚಿತ್ರ, ಬರುವ ತಿಂಗಳು ಜುಲೈ 13 ರಂದು ಬಿಡುಗಡೆ ಘೋಷಿಸಿದೆ. ಅದರಲ್ಲಿ ಸುದೀಪ್ ಬಿಟ್ಟ ಜಾಗಕ್ಕೆ ಇನ್ಯಾರು ಬಂದಿದ್ದಾರೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ರಾಜೇಂದ್ರ ಪ್ರಸಾದ್, ಸೋನು ಸೂದ್, ಕೋಟ ಶ್ರೀನಿವಾಸ ರಾವ್, ಬ್ರಹ್ಮಾನಂದಂ ಮುಂತಾದ ತೆಲುಗಿನ ಘಟಾನುಘಟಿಗಳು ಜುಲೈನಲ್ಲಿ ನಟಿಸಿದ್ದಾರೆ ಎಂಬ ಮಾಹಿತಿಯಿದೆ ಅಷ್ಟೇ.
ಒಟ್ಟಿನಲ್ಲಿ ಸುದೀಪ್ ಜುಲೈನಿಂದ ಹೊರಗುಳಿಯಲು ಇದ್ದ ನಿಜವಾದ ಕಾರಣ ಈಗ ಬಯಲಾಗಿದೆ. ಇದನ್ನು ಸ್ವತಃ ಸುದೀಪ್ ಆಗಲೀ ಅಥವಾ ಜುಲೈ ಚಿತ್ರತಂಡವಾಗಲೀ ಎಲ್ಲೂ ಹೇಳಿಕೊಂಡಿಲ್ಲ. ಆದರೂ ಈ ಸುದ್ದಿ ಸುದ್ದಿಮೂಲಗಳಿಂದಲೇ ತಡವಾಗಿ ಲೀಕ್ ಆಗಿದೆ. ಕಿಚ್ಚನ 'ಈಗ' ಚಿತ್ರ ಬರುವ ತಿಂಗಳು, ಜುಲೈ 6 ಕ್ಕೆ ಬಿಡುಗಡೆಯಾಗಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











