ಗೋವಾದಲ್ಲಿ ಸಾವಿಗೆ ಶರಣಾದ ಯುವ ನಿರ್ಮಾಪಕ...!
ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ. ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆದರೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕಾಯಿಲೆಗಳಲ್ಲಿ ಮಾನಸಿಕ ಖಿನ್ನತೆಗೆ ಮೊದಲ ಸ್ಥಾನ ಇದೆ.
ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ 20 ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಇದೆ. ಸಾವು, ಸೋಲು, ನಿರಾಶೆ, ಕಷ್ಟ, ನಷ್ಟಗಳಿಂದ ಅನೇಕರು ಖಿನ್ನತೆಗೊಳಗಾಗುತ್ತಾರೆ. ಮಾನಸಿಕ ಅಸಮತೋಲನ, ಆರ್ಥಿಕ ಮುಗ್ಗಟ್ಟು, ಕೌಟಂಬಿಕ ಸಮಸ್ಯೆ, ಪ್ರೇಮ ವೈಫಲ್ಯ, ನಂಬಿದವರಿಂದ ಮೋಸ, ಹೀಗೆ ಕ್ಷುಲಕ ಕಾರಣಗಳಿಂದ ಅನೇಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೆಲ ಒಮ್ಮೆ ಖಿನ್ನತೆಯಿಂದ ಪಾರಾಗುತ್ತಾರೆ. ಕೆಲ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವೊಮ್ಮೆ ಈ ಖಿನ್ನತೆಯಿಂದ ಹೊರ ಬರಲು ಸಾಧ್ಯವಾಗದೇ ಬದುಕೇ ಬೇಡ ಸತ್ತರೆ ಚೆಂದ ಎಂದುಕೊಂಡು ಆತುರದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಕೆಪಿ ಚೌಧರಿ ಅವರ ದುರಂತ ಸಾವು ಮತ್ತೊಂದು ಸಾಕ್ಷಿ.

ಹೌದು, ಕೆ.ಪಿ.ಚೌಧರಿ.. ತೆಲುಗು ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಹೆಸರು ಮಾಡಿದ್ದವರು. ಬಾಳಿ ಬದುಕಬೇಕಿದ್ದ ನಿರ್ಮಾಪಕ ಮತ್ತು ವಿತರಕ. 2016ರಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯಿಸಿದ್ದ ಕಬಾಲಿ ಚಿತ್ರದ ತೆಲುಗು ಅವತರಣಿಕೆಯ ಬಿಡುಗಡೆಯ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಖರೀದಿಸಿ ಎಲ್ಲರನ್ನು ನಿಬ್ಬೇರಗಾಗಿಸಿದ್ದವರು ಇವರು. ಇಷ್ಟೇ ಅಲ್ಲ ಪವನ್ ಕಲ್ಯಾಣ್ ಅಭಿನಯದ 'ಸರ್ದಾರ್ ಗಬ್ಬರ್ ಸಿಂಗ್', 'ಅರ್ಜುನ್ ಸುರವರಂ', ಮತ್ತು 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಚಿತ್ರಗಳನ್ನು ವಿತರಣೆ ಮಾಡಿದ ಹೆಗ್ಗಳಿಕೆ ಕೂಡ ಇವರದ್ದು
ಇಂತಹ ಕೆ.ಪಿ.ಚೌಧರಿ ಸೋಮವಾರ ಉತ್ತರ ಗೋವಾದ ಸಿಯೋಲಿಮ್ ಗ್ರಾಮದ ತಮ್ಮ ಬಾಡಿಗೆ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಕೆ.ಪಿ.ಚೌಧರಿ ಆತ್ಮಹತ್ಯೆ ಮಾಡಿಕೊಂಡಿರವ ವಿಚಾರವನ್ನು ಧೃಡ ಪಡಿಸಿರುವ ಪೊಲೀಸ್ ವರಿಷ್ಠಾಧಿಕಾರಿ (ಉತ್ತರ) ಅಕ್ಷತ್ ಕೌಶಲ್ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಇನ್ನು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ತನಿಖೆ ಬಳಿಕ ಸತ್ಯ ಹೊರಬರಬೇಕಿದೆಯಾದರೂ ಆತ್ಮಹತ್ಯೆಗೆ ಡ್ರಗ್ಸ್ ಮಾಯಾಜಾಲ ಕಾರಣ ಇರಬಹುದು ಎನ್ನುವ ಅನುಮಾನ ಸದ್ಯ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ ಈ ಹಿಂದೆ ಮಾದಕ ಮಾಯಾಜಾಲದಲ್ಲಿ ಇವರ ಹೆಸರು ಕೇಳಿ ಬಂದಿತ್ತು. ಡ್ರಗ್ಸ್ ಪ್ರಕರಣದಲ್ಲಿ 2023ರಲ್ಲಿ ಇವರನ್ನು ಬಂಧಿಸಲಾಗಿತ್ತು. 87.75 ಗ್ರಾಂ ಕೊಕೇನ್ ಇವರ ಬಳಿ ಪತ್ತೆಯಾಗಿತ್ತು. ಆಗ 90 ಪ್ಯಾಕೆಟ್ ಕೊಕೇನ್, ರೂ.2.05 ಲಕ್ಷ ನಗದು, ನಾಲ್ಕು ಮೊಬೈಲ್ ಫೋನ್ ಮತ್ತು ಒಂದು ಕಾರನ್ನು ಪೊಲೀಸರು ಇವರಿಂದ ವಶಪಡಿಸಿಕೊಂಡಿದ್ದರು. ತನಿಖೆಯ ವೇಳೆ ತೆಲುಗು ಮತ್ತು ತಮಿಳಿನ ಅನೇಕ ಸೆಲೆಬ್ರಿಟಿಗಳಿಗೆ ಇವರು ಖಾಯಂ ಆಗಿ ಡ್ರಗ್ಸ್ ಪೂರೈಕೆ ಮಾಡಿರುವ ವಿಚಾರ ತನಿಖೆ ಮೂಲಕ ಬೆಳಕಿಗೆ ಬಂದಿತ್ತು.
ಚಿತ್ರರಂಗದ ತಾರೆಯರು ಮಾತ್ರವಲ್ಲದೇ ಬೇರೆ ಉದ್ಯಮದ ವ್ಯಕ್ತಿಗಳಿಗೆ ಕೂಡ ಕೆ.ಪಿ.ಚೌಧರಿ ಡ್ರಗ್ಸ್ ಪೂರೈಕೆ ಮಾಡಿದ್ದರು. ಅನೇಕ ಅನೈತಿಕ ವ್ಯವಹಾರಗಳನ್ನು ಮಾಡುತ್ತಿದ್ದರು. ಇದರ ನಡುವೆ ಆರ್ಥಿಕವಾಗಿ ಸಂಕಷ್ಟಕ್ಕೆ ಕೂಡ ಸಿಲುಕಿದ್ದ ಕೆ.ಪಿ.ಚೌಧರಿ ಸಾಲವನ್ನು ಮಾಡಿಕೊಂಡಿದ್ದರು. ಚಿತ್ರರಂಗ ಕೈ ಹಿಡಿಯದೇ ಇದ್ದಾಗ ಗೋವಾದಲ್ಲಿ ಪಬ್ ಶುರು ಮಾಡಿದ್ದರು. ಆ ಆ ನಂತರ ಈ ಪವ್ಗಳಲ್ಲಿ ಸೆಲೆಬ್ರಿಟಿಗಳಿಗೆ ಡ್ರಗ್ಸ್ ನೀಡುತ್ತಿದ್ದರು ಎನ್ನುವ ಆರೋಪ ಕೂಡ ಇವರ ಮೇಲೆ ಕೇಳಿ ಬಂದಿತ್ತು.


Click it and Unblock the Notifications











