'RRR' ಸಿನಿಮಾದ ಆ್ಯಕ್ಷನ್ ದೃಶ್ಯ ನೋಡಿ ಕಣ್ಣೀರು ಹಾಕಿದ್ದೆ: ವಿಜಯೇಂದ್ರ ಪ್ರಸಾದ್
ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ನಿರ್ದೇಶನದ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆರ್ ಆರ್ ಆರ್ ಸಿನಿಮಾ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ದಕ್ಷಿಣ ಭಾರತೀಯ ಸಿನಿಮಾರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ಆರ್ ಆರ್ ಆರ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.
ಟಾಲಿವುಡ್ನ ಇಬ್ಬರು ಬಿಗ್ ಸ್ಟಾರ್ ಗಳಾದ ರಾಮ್ ಚರಣ್ ಮತ್ತು ಜ್ಯೂ.ಎನ್ ಟಿ ಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿಸ್ಟೋರಿಕ್ ಸಿನಿಮಾ ಆರ್ ಆರ್ ಆರ್ ಸದ್ಯ ಕೊರೊನಾ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಾಮ್ ಭೀಮ್ ಅವರ ಕಥೆಯಾಗಿದ್ದು, ಅಲ್ಲೂರಿ ಸೀತಾರಾಮ ಆಗಿ ರಾಮ್ ಚರಣ್ ಕಾಣಿಸಿಕೊಂಡರೆ ಕೊಮರಾಮ್ ಭೀಮ್ ಪಾತ್ರದಲ್ಲಿ ಜ್ಯೂ.ಎನ್ ಟಿ ಆರ್ ಮಿಂಚಿದ್ದಾರೆ. ಇಬ್ಬರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ನಡುವೆ ಸದ್ಯ ಚಿತ್ರೀಕರಣವಾಗಿರುವ ದೃಶ್ಯವನ್ನು ವೀಕ್ಷಿಸಿರುವ ನಿರ್ದೇಶಕ ರಾಜಮೌಳಿ ತಂದೆ, ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಆ್ಯಕ್ಷನ್ ದೃಶ್ಯ ನೋಡಿ ಕಣ್ಣೀರು ಬಂತು ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಜಯೇಂದ್ರ ಪ್ರಸಾದ್, 'ರಾಮ್ ಚರಣ್ ಮತ್ತು ಜ್ಯೂ.ಎನ್ ಟಿ ಆರ್ ಆ್ಯಕ್ಷನ್ ದೃಶ್ಯ ಮೊದಲ ಬಾರಿ ನೋಡಿದಾಗ ಕಣ್ಣೀರು ಹಾಕಿದ್ದೆ. ಪ್ರತಿ ಆಕ್ಷನ್ ದೃಶ್ಯವನ್ನೂ ಪ್ರೇಕ್ಷಕರು ತುಂಬಾ ನೋವಿನಿಂದ ನೋಡುತ್ತಾರೆ. ಪ್ರೇಕ್ಷಕರಿಗೆ ವಿಭಿನ್ನ ಅನುಭವವಾಗಲಿದೆ' ಎಂದು ಬರವಸೆ ನೀಡಿದ್ದಾರೆ.
ಇನ್ನು ಇತ್ತೀಚಿಗೆ ನಟ ಜ್ಯೂ.ಎನ್ ಟಿ ಆರ್ ಕೂಡ ಮಾತನಾಡಿ, ಪ್ರತಿಯೊಂದು ಆ್ಯಕ್ಷನ್ ದೃಶ್ಯವೂ ಪ್ರೇಕ್ಷಕರು ವಾವ್ ಎನ್ನುವಂತಿದೆ ಎಂದು ಹೇಳಿದ್ದರು. ಯಾವುದರಲ್ಲೂ ಕಾಂಪ್ರುಮೈಸ್ ಆಗದೆ ಅದ್ದೂರಿಯಾಗಿ ಸೆರೆಹಿಡಿರುವ ಆರ್ ಆರ್ ಆರ್ ಸಿನಿಮಾ ಪ್ರತಿಯೊಂದು ದೃಶ್ಯವೂ ರಿಚ್ ಆಗಿ ಮೂಡಿಬರಲಿದೆ.
ಈ ಸಿನಿಮಾದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಅಲಿಯಾ ಭಟ್ ಈ ಸಿನಿಮಾ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಚಿತ್ರೀಕರಣ ಮುಂದಕ್ಕೆ ಹೋಗಿದೆ.


Click it and Unblock the Notifications











