ಸಮಂತಾಗೆ ನಮ್ಮಲ್ಲಿ ಯಾರು ಅವಕಾಶ ಕೊಡ್ತಿಲ್ಲ, ಕಾರಣ ಅದೇ - ಲಕ್ಷ್ಮಿ ಮಂಚು ಮಾತಿಗೆ ಅಲ್ಲೋಲ..ಕಲ್ಲೋಲ
ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ. ಮದುವೆ ಮುನ್ನ ನಮ್ಮ ಚಿತ್ರದ ಆಕರ್ಷಣೆ ನೀವೆ ಎಂದು ಹೇಳುತ್ತಲೇ ನಾಯಕಿಯರ ಹಿಂದೆ-ಮುಂದೆ ಓಡಾಡುವ....
ಹಲವಾರು ಜನ ಆ ನಾಯಕಿ ಮದುವೆಯಾಗುತ್ತಿದ್ದಂತೆಯೇ ಆಕೆಯ ಮನೆಯತ್ತ ತಲೆ ಹಾಕಿ ಕೂಡ ಮಲಗುವುದಿಲ್ಲ. ಅದರಲ್ಲಿಯೂ ಮಕ್ಕಳಾದರೆ ಮುಗೀತು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿ ಹೋದಂತೆಯೇ. ಚಿತ್ರರಂಗ ಸಂಪೂರ್ಣವಾಗಿ ಮದುವೆಯಾಗಿ ಮಗು ಮಾಡಿಕೊಂಡ ನಾಯಕಿಯನ್ನು ಮರೆತೇ ಹೋಗುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಭಾಗ್ಯಶ್ರೀಯಿಂದ ಹಿಡಿದು ಟ್ವಿಂಕಲ್ ಖನ್ನಾವರೆಗೆ.. ಆಯೇಶ್ ಟಾಕೀಯಾ ಅವರಿಂದ ಹಿಡಿದು ಆಸಿನ್ವರೆಗೆ.. ಹಲವಾರು ನಾಯಕಿಯರು ಮದುವೆಯಾದ ನಂತರ ಕಣ್ಮರೆಯಾದ ಉದಾಹರಣೆಗಳಿವೆ.

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಚಿತ್ರರಂಗದ ಮನೋಭಾವ ಕೂಡ ಬದಲಾಗಿರಬಹುದು ಎಂದು ಹಲವರು ಅಂದುಕೊಂಡಿದ್ದರು. ಆದರೆ.. ಈಗ ಮನಸ್ಥಿತಿ ಇನ್ನೂ ಹಾಳಾಗಿದೆ. ಮದುವೆಯಾದರೆ ಮಾತ್ರವಲ್ಲ.. ಮಕ್ಕಳಾದರೆ ಅಷ್ಟೇ ಅಲ್ಲ.. ಡಿವೋರ್ಸ್ ಆದರೂ ಕೂಡ ಆ ನಾಯಕಿಯನ್ನು ಚಿತ್ರರಂಗ ಬ್ಲಾಕ್ ಲಿಸ್ಟ್ಗೆ ಹಾಕಿ ಬಿಡುತ್ತೆ. ಜಪ್ಪಯ್ಯ ಅಂದರೂ ವಿಚ್ಛೇದನ ಪಡೆದ ನಟಿಗೆ ಅವಕಾಶ ನೀಡುವುದಿಲ್ಲ. ಇದಕ್ಕೆ ಸದ್ಯದ ಉದಾಹರಣೆಯೇ ಸಮಂತಾ. ಇಂತಹದ್ದೊಂದು ಚರ್ಚೆಗೆ ಸದ್ಯ ಲಕ್ಷ್ಮಿ ಮಂಚು ನಾಂದಿ ಹಾಡಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ನಾಗಚೈತನ್ಯ ಅವರಿಂದ ಸಮಂತಾ ದೂರವಾಗಿ ನಾಲ್ಕು ವರ್ಷಗಳಾಗಿವೆ. ಆದರೆ ಈ ನಾಲ್ಕು ವರ್ಷದಲ್ಲಿ ಸಮಂತಾ ಆಂಧ್ರದ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದು ಕೇವಲ ನಾಲ್ಕು ಬಾರಿ ಮಾತ್ರ. ಸದ್ಯ..ಸಮಂತಾ ಕೈಯಲ್ಲಿ ಒಂದೇ ಒಂದು ತೆಲುಗು ಚಿತ್ರ ಇಲ್ಲ. ಈ ಹಿನ್ನೆಲೆ ಹಲವರು ಅದರಲ್ಲಿಯೂ ವಿಶೇಷವಾಗಿ ಸಮಂತಾ ಅವರ ಅಭಿಮಾನಿಗಳು ಈ ವಿಚಾರದ ಕುರಿತು ಆಗಾಗ ಚರ್ಚೆ ಮಾಡುತ್ತಲೇ ಇದ್ದಾರೆ. ಬಹುತೇಕರು ಚಿತ್ರಗಳ ಆಯ್ಕೆ ವಿಚಾರದಲ್ಲಿ ಸಮಂತಾ ಚ್ಯೂಸಿಯಾಗಿದ್ದಾರೆ ಎಂದೇ ಅಂದುಕೊಂಡಿದ್ದಾರೆ.
ಆದರೆ.. ವಾಸ್ತವದಲ್ಲಿ ಚಿತ್ರರಂಗವೇ ಸಮಂತಾ ಅವರನ್ನು ದೂರ ತಳ್ಳಿದೆ. ನಿಜಾ ಸಮಂತಾ ಹೆಸರನ್ನು ಲಕ್ಷ್ಮಿ ಮಂಚು ಎಲ್ಲಿಯೂ ತೆಗೆದುಕೊಂಡಿಲ್ಲವಾದರು ಅವರ ಮಾತು ಸದ್ಯ ಹಲವರಲ್ಲಿ ಅನುಮಾನ ಮೂಡಿಸಿದೆ. ಈ ಕುರಿತು ತಮ್ಮ ಮುಂದಿನ ಚಿತ್ರ '' ದಕ್ಷ- ಎ ಡೆಡ್ಲಿ ಕಾನ್ಸ್ಪಿರೆಸಿ'' ಚಿತ್ರದ ಪ್ರಚಾರದ ಸಮಯದಲ್ಲಿ ಮಾತನಾಡಿರುವ ಲಕ್ಷ್ಮಿ ಮಂಚು ನಮ್ಮ ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಕಷ್ಟಗಳು ಎಂದು ಹೇಳಿದ್ದಾರೆ.

ತಮ್ಮ ಈ ಮಾತುಗಳಿಗೆ ಉದಾಹರಣೆಯನ್ನು ಕೂಡ ನೀಡಿರುವ ಲಕ್ಷ್ಮಿ ಮಂಚು ನಮ್ಮಲ್ಲಿ ಒಬ್ಬ ಸೂಪರ್ ಸ್ಟಾರ್ನ ಮಾಜಿ ಪತ್ನಿ ಇದ್ದಾರೆ. ದುರಂತ ಅಂದರೆ ಅವರು ವಿಚ್ಚೇದನ ಪಡೆದ ನಂತರ ಅವರ ಕೈಯಲ್ಲಿದ್ದ ಅವಕಾಶಗಳನ್ನೆಲ್ಲಾ ಏಕಾಏಕಿ ಕಿತ್ತುಕೊಳ್ಳಲಾಯ್ತು ಎಂದು ಹೇಳಿದ್ದಾರೆ. ಅವರಿಗೆ ಅವಕಾಶ ನೀಡದಂತೆ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ ಎಂದು ಕೂಡ ಹೇಳಿದ್ದಾರೆ. ಇಷ್ಟೇ ಅಲ್ಲ ಯಾರಿಗೆ ಗೊತ್ತು ಅವನು ಬೇಸರಗೊಂಡು ಈ ತರಹದ ಕೆಲಸ ಮಾಡಿರಬಹುದು ಆದರೆ ಆ ನಟಿ ಒಳ್ಳೆಯ ಕೆಲಸ ಮಾಡಲು, ಒಳ್ಳೆಯ ಚಿತ್ರಗಳಲ್ಲಿ ಅಭಿನಯಿಸಲು ಕಾತುರದಿಂದ ಕಾಯುತ್ತಿದ್ದಾರೆ. ಅವರ ಹೆಸರನ್ನು ಹೇಳುವ ಅಗತ್ಯ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಲಕ್ಷ್ಮಿ ಮಂಚು ಅವರ ಈ ಮಾತುಗಳಿಗೆ ನೀವು ಸಮಂತಾ ಅವರ ಬಗ್ಗೆ ಮಾತನಾಡುತ್ತಿದ್ದೀರಾ ಎಂದು ಅಲ್ಲಿದ್ದ ಪತ್ರಕರ್ತರು ಪ್ರಶ್ನೆಯನ್ನು ಕೇಳಿದ್ದಾರೆ. ಆಗ ನೀವು ಸಮಂತಾ ಎಂದು ಅಂದುಕೊಂಡರೆ ನಾನೇನು ಮಾಡಲಿ ಒಬ್ಬರಲ್ಲ ಐದಾರು ಪ್ರಮುಖ ನಾಯಕಿಯರು ವಿಚ್ಚೇದನ ಪಡೆದಿದ್ದಾರೆ. ನಾನು ಅವರೆಲ್ಲರಿಗೆ ಹತ್ತಿರವಾಗಿದ್ದೇನೆ ಎಂದು ಹೇಳಿರುವ ಲಕ್ಷ್ಮಿ ಮಂಚು ಒಬ್ಬ ಪುರುಷನ ಬದುಕಿನಲ್ಲಿ ಇವೆಲ್ಲಾ ಆದರೆ ಆತನ ಜೀವನ ಬದಲಾಗಲ್ಲ ಆದರೆ ಒಬ್ಬ ಮಹಿಳೆ ಮದುವೆಯಾದ ನಂತರ ಆಕೆಗೆ ಮಕ್ಕಳಿರುತ್ತಾರೆ. ಅತ್ತೆ ಮಾವ ಇರುತ್ತಾರೆ. ಅನೇಕ ಜವಾಬ್ಧಾರಿಗಳನ್ನು ಅವಳಿಗೆ ವಹಿಸಲಾಗಿರುತ್ತೆ. ಹೆಣ್ಣಿಗೆ ಸ್ವಾತಂತ್ರ್ಯವನ್ನು ಕೊಡುವುದಿಲ್ಲ. ಅದನ್ನು ನಾವೇ ಪಡೆಯಬೇಕಾಗುತ್ತೆ ಎಂದು ಹೇಳುವ ಉದ್ದೇಶದಿಂದ ನಾನು ಈ ವಿಚಾರ ಪ್ರಸ್ತಾಪ ಮಾಡಿದೆ ಎಂದು ಹೇಳಿದ್ದಾರೆ.
ಸದ್ಯ ಲಕ್ಷ್ಮಿ ಮಂಚು ಅವರ ಈ ಹೇಳಿಕೆಯಿಂದ ಟಾಲಿವುಡ್ನಲ್ಲಿ ಅಲ್ಲೋಲ. ಕಲ್ಲೋಲವಾಗಿದ್ದು ನಾಗಾರ್ಜುನ ಮತ್ತು ನಾಗಚೈತನ್ಯ ಅಲ್ಲಿನ ನಿರ್ಮಾಪಕ ಮತ್ತು ನಿರ್ದೇಶಕರಲ್ಲಿ ಸಮಂತಾ ಅವರನ್ನು ಆಯ್ಕೆ ಮಾಡದಂತೆ ಹೇಳಿದ್ದಾರಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಸಮಂತಾ ಹೆಸರೇಳದಿದ್ದರೂ ಕೂಡ ಲಕ್ಷ್ಮಿ ಮಂಚು ಮಾತನಾಡಿದ್ದು ಸಮಂತಾ ಅವರ ಬಗ್ಗೆಯೇ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಇದಕ್ಕೆ ಸಮಂತಾ ಪ್ರತಿಕ್ರಿಯೆ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











