ಜೂನಿಯರ್ ಎನ್.ಟಿ.ಆರ್ ಗೆ ಧಮ್ ಇಲ್ಲ: ಎನ್.ಟಿ ರಾಮರಾವ್ ಪತ್ನಿ ಪಂಚ್
ಟಾಲಿವುಡ್ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟರಲ್ಲಿ ಜೂನಿಯರ್ ಎನ್.ಟಿ.ಆರ್ ಕೂಡ ಒಬ್ಬರು. ತೆಲುಗು ಇಂಡಸ್ಟ್ರಿಯ ದಂತಕಥೆ ಎನ್.ಟಿ.ರಾಮರಾವ್ ಅವರ ಮೊಮ್ಮಗನಾಗಿರುವ ಜೂನಿಯರ್ ಎನ್.ಟಿ.ಆರ್ ಕುಟುಂಬ ಅಂದ್ರೆ, ಇಂಡಸ್ಟ್ರಿಯಲ್ಲಿ ವಿಶೇಷ ಸ್ಥಾನವಿದೆ.
ಅದರಲ್ಲೂ ಜೂನಿಯರ್ ಎನ್.ಟಿ.ಆರ್ ಯೂತ್ ಐಕಾನ್ ಎನಿಸಿಕೊಂಡಿದ್ದಾರೆ. ಇಂತಹ ನಟನಿಗೆ ಎನ್.ಟಿ ರಾಮರಾವ್ ಅವರ ಪತ್ನಿ ಲಕ್ಷ್ಮಿ ಪಾರ್ವತಿ ''ಅವರಿಗೆ ಧಮ್ ಇಲ್ಲ'' ಎಂದು ಕಾಲೆಳೆದಿದ್ದಾರೆ.
ಅಷ್ಟಕ್ಕೂ, ಜೂನಿಯರ್ ಎನ್.ಟಿ.ಆರ್ ಅವರ ಮೇಲೆ ಲಕ್ಷ್ಮೀ ಪಾರ್ವತಿ ಅವರಿಗೇಕೆ ಇಷ್ಟು ಕೋಪ? ಎನ್.ಟಿ.ಆರ್ ಕುರಿತು ಈ ಮಾತು ಹೇಳಿದ್ದೇಕೆ? ಮುಂದೆ ಓದಿ....

ಟಿಡಿಪಿಗೆ ಜೂನಿಯರ್ ಎನ್.ಟಿ.ಆರ್ ಸಾರಥಿ!
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಟಿಡಿಪಿ ಪಕ್ಷಕ್ಕೆ ಜೂನಿಯರ್ ಎನ್.ಟಿ.ಆರ್ ಸಾರಥಿಯಾಗುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ತಮ್ಮ ತಾತ ಎನ್.ಟಿ.ರಾಮರಾವ್ ಕಟ್ಟಿಬೆಳೆಸಿದ ಪಕ್ಷ ಈಗ ಪಾತಾಳಕ್ಕೆ ಬಿದ್ದಿದೆ. ಚಂದ್ರಬಾಬು ನಾಯ್ದು ಕುಟುಂಬದ ವಿರುದ್ಧ ವಿರೋಧಿ ಅಲೆ ಇದೆ. ಇಂತಹ ಸಮಯದಲ್ಲಿ ಟಿಡಿಪಿ ಉಳಿಯಬೇಕಾದರೆ ಅದಕ್ಕೆ ಸೂಕ್ತ ನಾಯಕನ ಅವಶ್ಯಕತೆ ಇದೆ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಹಾಗಾಗಿ, ಆ ನಾಯಕ ಎನ್.ಟಿ.ಆರ್ ಆಗಬಹುದು ಎನ್ನಲಾಗುತ್ತಿದೆ.

ಎನ್.ಟಿ.ಆರ್ ಅವರಿಗೆ ಧಮ್ ಇಲ್ಲ
ಇಂತಹ ಬೆಳವಣಿಗೆಯ ಮಧ್ಯೆ ಲಕ್ಷ್ಮಿ ಪಾರ್ವತಿ (ಎನ್.ಟಿ ರಾಮರಾವ್ ಅವರ ಎರಡನೇ ಪತ್ನಿ) ಜೂನಿಯರ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ 'ಟಿಡಿಪಿ ಪಕ್ಷಕ್ಕೆ ಜೂನಿಯರ್ ಎನ್.ಟಿ.ಆರ್ ಸೂಕ್ತ ನಾಯಕನಾಗಬಹುದಾ' ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಿ ''ಅವರಿಗೆ ನಿಜವಾಗಲೂ ಧಮ್ ಇಲ್ಲ. ಹಾಗಂದ ಮೇಲೆ ಪಕ್ಷಕ್ಕೆ ಸಾರಥಿಯಾದ್ರೆ ಏನು ಪ್ರಯೋಜನ ಬಂತು'' ಎಂದು ಕಾಲೆಳೆದಿದ್ದಾರೆ.

ಮಾವನ ಅನ್ಯಾಯ ಕೇಳುವ ಧೈರ್ಯವಿಲ್ಲ
ಮಾಜಿ ಮುಖ್ಯಮಂತ್ರಿ, ವರಸೆಯಲ್ಲಿ ಮಾವ ಆಗಿರುವ ಚಂದ್ರಬಾಬು ನಾಯ್ಡು ವಿರುದ್ಧ ಪ್ರಶ್ನಿಸುವ ಧೈರ್ಯವಿಲ್ಲ. ಅವರು ಮಾಡಿರುವ ಅನ್ಯಾಯವನ್ನ ಕೇಳುವ ತಾಕತ್ತಿಲ್ಲ. ತಾತನಿಗೆ, ತಂದೆಗೆ ಎಷ್ಟು ಅನ್ಯಾಯ ಮಾಡಿದ್ದಾರೆ. ಯಾವತ್ತಾದರೂ ಅದನ್ನ ವಿರೋಧಿಸಿ ಮಾತನಾಡಿದ್ದಾರಾ? ತಪ್ಪನ್ನು ಎಂದೂ ಪ್ರಶ್ನಿಸದ ವ್ಯಕ್ತಿ ಹೇಗೆ ನಾಯಕತ್ವ ವಹಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಇದು ಕೋಪದಿಂದ ಬರುತ್ತಿರುವ ಮಾತಲ್ಲ, ಬೇಸರದಿಂದ ಬಂದು ಮಾತು ಎಂದು ಲಕ್ಷ್ಮಿ ಪಾರ್ವತಿ ಹೇಳಿದ್ದಾರೆ.

ಎನ್.ಟಿ.ಆರ್ ನಿರ್ಧಾರವೇನು?
ಟಿಡಿಪಿ ಕಟ್ಟಿದ್ದು ಎನ್.ಟಿ.ರಾಮರಾವ್. ಆದರೆ, ಇಂದು ಅಧಿಕಾರ ಅನುಭವಿಸುತ್ತಿರುವುದು ಚಂದ್ರಬಾಬು ನಾಯ್ಡು. ಎನ್.ಟಿ.ಆರ್ ಕುಟುಂಬಕ್ಕೆ ಪಕ್ಷದ ಮೇಲೆ ಯಾವುದೇ ಹಿಡಿತವಿಲ್ಲ. ಎನ್.ಟಿ.ಆರ್ ಗೆ ಮೋಸ ಮಾಡಿ ಬಾಬು ಪಕ್ಷದಲ್ಲಿದ್ದಾರೆ ಎಂದು ಲಕ್ಷ್ಮಿ ಪಾರ್ವತಿ ಆರೋಪಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಟಿಡಿಪಿಗೆ ಜೂನಿಯರ್ ಎನ್.ಟಿ.ಆರ್ ಬಂದ್ರೆ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಜೂನಿಯರ್ ನಿರ್ಧಾರವೇನು? ಕಾದುನೋಡಬೇಕಿದೆ.


Click it and Unblock the Notifications











