Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎನ್ಟಿಆರ್ ಆತ್ಮದೊಂದಿಗೆ ಮಾತನಾಡಿದ್ದೆ ಎಂದ ಎರಡನೇ ಪತ್ನಿ ಲಕ್ಷ್ಮಿ
ಅವಿಭಜಿತ ಆಂಧ್ರಪ್ರದೇಶ ರಾಜಕೀಯ ಇತಿಹಾಸದಲ್ಲಿ ಟಿಡಿಪಿ ಪಕ್ಷದ ಒಡಕು ಮತ್ತು ಸೀನಿಯರ್ ಎನ್ಟಿಆರ್ ರಾಜಕೀಯ ಪತನ ಪ್ರಮುಖ ಅಧ್ಯಾಯವೆಂದೇ ಹೇಳಬೇಕು. ಸೀನಿಯರ್ ಎನ್ಟಿಆರ್ ಪತನಕ್ಕೆ ಕಾರಣವಾಗಿದ್ದು ಅವರ ಎರಡನೇ ಪತ್ನಿ ಲಕ್ಷ್ಮಿ ಪಾರ್ವತಿ ಎನ್ನಲಾಗುತ್ತದೆ. ಇಂದು ಎನ್ಟಿಆರ್ ಅವರ 26ನೇ ಪುಣ್ಯ ತಿಥಿ. ಇಂದು ಆಶ್ಚರ್ಯಕರ ಹೇಳಿಕೆಯೊಂದನ್ನು ಲಕ್ಷ್ಮಿ ಪಾರ್ವತಿ ಮಾಧ್ಯಮಗಳಿಗೆ ನೀಡಿದ್ದಾರೆ.
ಹೈದರಾಬಾದ್ನಲ್ಲಿ ಎನ್ಟಿಆರ್ ಅವರಿಗೆ ಗೌರವ ಸಲ್ಲಿಸಿದ ಲಕ್ಷ್ಮಿ, ಸೀನಿಯರ್ ಎನ್ಟಿಆರ್ ನಿಧನರಾದ ಕೆಲವು ತಿಂಗಳುಗಳಲ್ಲಿ ತಾನು ಅವರ ಆತ್ಮದೊಂದಿಗೆ ಮಾತನಾಡಿದ್ದಾಗಿಯೂ, ಹಲವು ಪ್ರಮುಖ ವಿಷಯಗಳನ್ನು ಎನ್ಟಿಆರ್ ಆತ್ಮ ತಮಗೆ ಹೇಳಿರುವುದಾಗಿಯೂ ಹೇಳಿದ್ದಾರೆ.
''26 ವರ್ಷಗಳ ನಂತರ ನಾನು ಈ ಗುಟ್ಟನ್ನು ರಟ್ಟು ಮಾಡುತ್ತಿದ್ದೇನೆ. 1996ರಲ್ಲಿ ಎನ್ಟಿಆರ್ ನಿಧನರಾದ ಬಳಿಕ ಕೆಲವು ತಿಂಗಳಾದ ಬಳಿಕ ನನ್ನನ್ನು ನಟ ರಾಜಶೇಖರ್ ಹಾಗೂ ಅವರ ಪತ್ನಿ ಜೀವಿತ ಚೆನ್ನೈಗೆ ಕರೆದುಕೊಂಡು ಹೋದರು. ಅಲ್ಲಿ ರಾಜಶೇಖರ್ ಹಾಗೂ ಜೀವಿತ ನನ್ನನ್ನು ಒಬ್ಬ ಸಣ್ಣ ಬಾಲಕಿಯೊಟ್ಟಿಗೆ ಮಾತನಾಡಲು ಹೇಳಿದರು. ಅಂತೆಯೇ ನಾನು ಆಕೆಯೊಡನೆ ಮಾತನಾಡುತ್ತಿದ್ದೆ. ಆ ಬಾಲಕಿಯ ದೇಹದೊಳಕ್ಕೆ ಎನ್ಟಿಆರ್ ಆತ್ಮ ಪ್ರವೇಶ ಮಾಡಿತು'' ಎಂದಿದ್ದಾರೆ ಲಕ್ಷ್ಮಿ.
ಆತ್ಮದೊಂದಿಗೆ ನಾನು ಮಾತನಾಡಿದೆ: ಲಕ್ಷ್ಮಿ
''ಎನ್ಟಿಆರ್ ಆತ್ಮವು ನನ್ನೊಟ್ಟಿಗೆ ಬಹಳ ಕಾಲ ಮಾತನಾಡಿತು. ಹಲವು ವಿಷಯಗಳನ್ನು ನನ್ನೊಟ್ಟಿಗೆ ಹಂಚಿಕೊಂಡಿತು'' ಎಂದಿರುವ ಲಕ್ಷ್ಮಿ, ಎನ್ಟಿಆರ್ ಆತ್ಮ ಏನೇನು ಮಾತನಾಡಿತು ಎಂದು ಹೇಳಿಲ್ಲ. ''ಎನ್ಟಿಆರ್ ಆತ್ಮ ತೆಲುಗು ರಾಜ್ಯಗಳ ಸಿಎಂ ಅವರ ಹೃದಯವನ್ನು ಹೊಕ್ಕಲಿ'' ಎಂದು ಹೇಳಿದ್ದಾರೆ. ಲಕ್ಷ್ಮಿ ತಮ್ಮ ಜೀವನ ಕತೆಯನ್ನು ಬರೆದಿದ್ದು ಜೀವನ ಕತೆಯಲ್ಲಿ ಈ ಆತ್ಮದ ಕತೆಯನ್ನು ಅವರು ಬರೆದುಕೊಂಡಿಲ್ಲ. ಆದರೆ ಎನ್ಟಿಆರ್ ಆತ್ಮ ಹಾಗೂ ತಮ್ಮ ನಡುವೆ ನಡೆದ ಸಂಭಾಷಣೆಯನ್ನು ಪ್ರತ್ಯೇಕವಾಗಿ ಬರೆಯುವುದಾಗಿ ಇಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಪುತ್ಥಳಿಗಳ ಮೇಲೆ ದಾಳಿ ಬಗ್ಗೆ ಲಕ್ಷ್ಮಿ ಮಾತು
ಆಂಧ್ರಪ್ರದೇಶದಲ್ಲಿ ಎನ್ಟಿಆರ್ ಪುತ್ಥಳಿಗಳ ಮೇಲೆ ದಾಳಿಗಳಾಗುತ್ತಿರುವ ವಿಷಯದ ಬಗ್ಗೆ ಮಾತನಾಡಿದ ಲಕ್ಷ್ಮಿ, ''ಯಾರೇ ಆ ಕೃತ್ಯ ಮಾಡಿದ್ದರೂ ಅದು ದೊಡ್ಡ ಅಪರಾಧ. ಹಾಗೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದಿದ್ದಾರೆ. ಇದೀಗ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿರುವ ಲಕ್ಷ್ಮಿ, ಜಗನ್ ಸರ್ಕಾರವನ್ನು ಹೊಗಳಿದ್ದಾರೆ. ಆದರೆ ಆಂಧ್ರದಲ್ಲಿ ಎನ್ಟಿಆರ್ ಪುತ್ಥಳಿಗಳ ಮೇಲೆ ವೈಎಸ್ಆರ್ ಕಾಂಗ್ರೆಸ್ ಸದಸ್ಯರೇ ದಾಳಿ ಮಾಡುತ್ತಿದ್ದಾರೆ.
ಎಪ್ಪತ್ತನೇ ವಯಸ್ಸಿನಲ್ಲಿ ಲಕ್ಷ್ಮಿಯವರನ್ನು ವಿವಾಹವಾದ ಎನ್ಟಿಆರ್
ಎನ್ಟಿಆರ್, 1943ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಬಸವ ರಾಮ ತಾರಕಮ್ ಎಂಬ ಯುವತಿಯನ್ನು ವಿವಾಹವಾದರು. ಎನ್ಟಿಆರ್ಗೆ ಎಂಟು ಮಂದಿ ಗಂಡುಮಕ್ಕಳು, 4 ಮಂದಿ ಹೆಣ್ಣು ಮಕ್ಕಳು ಇದ್ದರು. ಬಸವ ರಾಮ ತಾರಕಮ್ ಅವರು 1985ರಲ್ಲಿ ಕ್ಯಾನ್ಸರ್ನಿಂದ ಬಳಲಿ ನಿಧನ ಹೊಂದಿದರು. ಬಳಿಕ 1993ರಲ್ಲಿ ಎನ್ಟಿಆರ್ ಲಕ್ಷ್ಮಿ ಪಾವರ್ತಿಯನ್ನು ವಿವಾಹವಾದರು. ಆಗ ಅವರಿಗೆ 70 ವರ್ಷ ವಯಸ್ಸು. ಲಕ್ಷ್ಮಿ ಪಾರ್ವತಿಯನ್ನು ವಿವಾಹವಾದ ಮೂರು ವರ್ಷದ ನಂತರ ಅಂದರೆ 1996ರಲ್ಲಿ ಎನ್ಟಿಆರ್ ನಿಧನರಾದರು. ಎನ್ಟಿಆರ್ ಕಟ್ಟಿದ ಟಿಡಿಪಿ ಪಕ್ಷವು ಒಡೆಯುವುದಕ್ಕೆ ಲಕ್ಷ್ಮಿಯೇ ಕಾರಣ ಎಂದು ಹಲವರು ಟೀಕಿಸಿದ್ದರು. ಎನ್ಟಿಆರ್ ಮಕ್ಕಳು ಸಹ ಲಕ್ಷ್ಮಿ ಅವರನ್ನು ತಮ್ಮ ಕುಟುಂಬದಿಂದ ದೂರ ಇಟ್ಟರು.
ಮೊದಲು ಮದುವೆಯಾಗಿದ್ದ ಲಕ್ಷ್ಮಿ
ಎನ್ಟಿಆರ್ ಅನ್ನು ವಿವಾಹವಾಗುವ ಮೊದಲು ಹರಿಕಥಾ ಕಲಾವಿದ ವೀರಗಂಧಂ ವೆಂಕಟ ಸುಬ್ಬಾರಾವ್ ಅವರನ್ನು ವಿವಾಹವಾಗಿದ್ದ ಲಕ್ಷ್ಮಿ. 1993ರ ಬಳಿಕ ಎನ್ಟಿಆರ್ ಅವರೊಟ್ಟಿಗೆ ಜೀವಿಸಲು ಆರಂಭಿಸಿದರು. ಎನ್ಟಿಆರ್ ಅವರ ಎರಡು ಜೀವನಕತೆಯನ್ನು ಲಕ್ಷ್ಮಿ ಬರೆದಿದ್ದಾರೆ. ಎನ್ಟಿಆರ್ ಅವರ ಬಾಲ್ಯ ಮತ್ತು ಸಿನಿಮಾ ಜೀವನದ ಕತೆಯನ್ನು 'ಎದುರುಲೇನಿ ಮನಿಷಿ' ಹೆಸರಿನಲ್ಲಿಯೂ, ಸಿನಿಮಾ ಮತ್ತು ರಾಜಕೀಯ ಜೀವನವನ್ನು 'ತೆಲುಗು ತೇಜಂ' ಹೆಸರಿನಲ್ಲಿ ಬರೆದಿದ್ದಾರೆ. ಲಕ್ಷ್ಮಿ ಹಾಗೂ ಎನ್ಟಿಆರ್ ಸಂಬಂಧದ ಕುರಿತಾಗಿ ರಾಮ್ ಗೋಪಾಲ್ ವರ್ಮಾ 'ಲಕ್ಷ್ಮೀಸ್ ಎನ್ಟಿಆರ್' ಹೆಸರಿನ ಪುಸ್ತಕ ಬರೆದಿದ್ದಾರೆ.
{document2}