'ಲೈಗರ್' ಹೊಡೆತಕ್ಕೆ ಮುಂಬೈ ಮನೆ ಖಾಲಿ ಮಾಡುವ ಸ್ಥಿತಿ ತಲುಪಿದ ಪುರಿ ಜಗನ್ನಾಥ್
ವಿಜಯ್ ದೇವರಕೊಂಡ, ಪುರಿ ಜಗನ್ನಾಥ್, ಚಾರ್ಮಿ, ಕರಣ್ ಜೋಹರ್ ಅವರುಗಳಿಗೆ 'ಲೈಗರ್' ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇತ್ತು. ಸಿನಿಮಾದ ಪ್ರಚಾರ ಸಮಯದಲ್ಲಿ ಸಿಕ್ಕ ಜನರ ಪ್ರತಿಕ್ರಿಯೆ ಇವರ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿತ್ತು. ಆದರೆ ಸಿನಿಮಾ ಈಗ ಮಕಾಡೆ ಮಲಗಿದೆ.
'ಲೈಗರ್' ಸಿನಿಮಾ ಧಾರುಣ ಸೋಲು ಕಂಡಿದೆ. ಸಿನಿಮಾಕ್ಕೆ ಬಂಡವಾಳ ಹಾಕಿದ್ದ ಚಾರ್ಮಿ ಹಾಗೂ ಪುರಿ ಜಗನ್ನಾಥ್ ಭಾರಿ ನಷ್ಟ ಅನುಭವಿಸಿದ್ದಾರೆ. ಪುರಿ ಜಗನ್ನಾಥ್ ಅಂತೂ ನಷ್ಟವನ್ನು ಭರಿಸಲು ಸಾಲಗಳಿಗೆ ಮೊರೆ ಹೋಗಿದ್ದಾರೆ. ಆಸ್ತಿ ಮಾರಾಟಕ್ಕೂ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
'ಲೈಗರ್'ಗೆ ಮುನ್ನ ಪುರಿ ಜಗನ್ನಾಥ್ ಮುಂಬೈಗೆ ವಾಸ್ತವ್ಯ ಬದಲಾಯಿಸಿದ್ದರು. 'ಲೈಗರ್' ಮೂಲಕ ವಿಜಯ್ ದೇವರಕೊಂಡಗೆ ಬಾಲಿವುಡ್ಗೆ ದಾರಿ ಮಾಡಿಕೊಡಬೇಕು ಹಾಗೂ ತಾವೂ ಮುಂಬೈನಲ್ಲಿ ನೆಲೆ ಕಾಣಬೇಕು ಎಂದುಕೊಂಡಿದ್ದರು ಪುರಿ ಜಗನ್ನಾಥ್ ಆದರೆ 'ಲೈಗರ್' ಕೊಟ್ಟ ಹೊಡೆತದಿಂದ ಪುರಿ ಕಂಗಾಲಾಗಿದ್ದಾರೆ.

ಮುಂಬೈ ಮನೆ ಖಾಲಿ ಮಾಡುತ್ತಿರುವ ಪುರಿ ಜಗನ್ನಾಥ್
ಪುರಿ ಜಗನ್ನಾಥ್, ತಮ್ಮ ಮುಂಬೈ ಮನೆಯಲ್ಲಿ ಖಾಲಿ ಮಾಡುವ ಸ್ಥಿತಿ ತಲುಪಿದ್ದಾರೆ. ಮುಂಬೈನ ದುಬಾರಿ ಏರಿಯಾದಲ್ಲಿ ಸೀ ಫೇಸ್ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಒಂದನ್ನು ಪುರಿ ಬಾಡಿಗೆಗೆ ಪಡೆದು ವಾಸವಿದ್ದರು. ಆ ಫ್ಲ್ಯಾಟ್ಗೆ ತಿಂಗಳಿಗೆ ಸುಮಾರು 10 ಲಕ್ಷ ರುಪಾಯಿ ಬಾಡಿಗೆ ನೀಡುತ್ತಿದ್ದರಂತೆ ಪುರಿ. ಆದರೆ 'ಲೈಗರ್' ಸಿನಿಮಾದಿಂದಾದ ನಷ್ಟದಿಂದಾಗಿ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿರುವ ಪುರಿ ಜಗನ್ನಾಥ್ ಇದೀಗ ಮುಂಬೈನ ಮನೆ ಖಾಲಿ ಮಾಡುತ್ತಿದ್ದಾರೆ. ಮುಂಬೈ ಬಿಟ್ಟು ಮತ್ತೆ ಹೈದರಾಬಾದ್ಗೆ ವಾಸ್ತವ್ಯ ಬದಲಾಯಿಸುತ್ತಿದ್ದಾರೆ ಪುರಿ ಜಗನ್ನಾಥ್. ಹೈದರಾಬಾದ್ನ ಪ್ರತಿಷ್ಠಿತ ಜೂಬ್ಲಿ ಹಿಲ್ಸ್ನಲ್ಲಿ ಐಶಾರಾಮಿ ಮನೆಯನ್ನು ಪುರಿ ಜಗನ್ನಾಥ್ ಹೊಂದಿದ್ದಾರೆ. ಇದೀಗ ಮುಂಬೈ ಬಿಟ್ಟು ಮತ್ತೆ ತಮ್ಮ ಮನೆಯನ್ನು ಪುರಿ ಜಗನ್ನಾಥ್ ಸೇರುತ್ತಿದ್ದಾರೆ.

ಪುರಿಗೆ ದುಂಬಾಲು ಬಿದ್ದಿರುವ ವಿತರಕರು
'ಲೈಗರ್' ಸೋಲಿನಿಂದ ಪುರಿ ಕಂಗಾಲಾಗಿದ್ದಾರೆ. 'ಲೈಗರ್' ಸಿನಿಮಾದಿಂದ ಆಗಿರುವ ನಷ್ಟವನ್ನು ತುಂಬಿಕೊಡುವಂತೆ ಸಿನಿಮಾದ ವಿತರಕರು, ಚಿತ್ರಮಂದಿರಗಳ ಮಾಲೀಕರು ಪುರಿ ಜಗನ್ನಾಥ್ ಬೆನ್ನು ಬಿದ್ದಿದ್ದಾರೆ. ಜೊತೆಗೆ ಸಿನಿಮಾದ ನಟರಿಗೆ ಸಂಭಾವನೆ ಸೇರಿದಂತೆ ಇನ್ನಿತರೆ ಶುಲ್ಕಗಳನ್ನು ಪುರಿ ಬಾಕಿ ಉಳಿಸಿಕೊಂಡಿದ್ದರಂತೆ. ಅದನ್ನು ಸಹ ನೀಡುವುದು ಪುರಿ ಜಗನ್ನಾಥ್ಗೆ ಕಷ್ಟವಾಗಿದೆ.

ಆಸ್ತಿ ಮಾರಲು ಮುಂದಾದ ಪುರಿ ಜಗನ್ನಾಥ್
ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಪುರಿ ಜಗನ್ನಾಥ್, ತಮ್ಮ ಆಸ್ತಿಯೊಂದನ್ನು ಮಾರಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೈದರಾಬಾದ್ ಹೊರವಲಯದಲ್ಲಿರುವ ಮೌಲ್ಯ ಹೊಂದಿರುವ ಆಸ್ತಿಯನ್ನು ಪುರಿ ಜಗನ್ನಾಥ್ ಮಾರಲು ಮುಂದಾಗಿದ್ದಾರಂತೆ. ಆ ಮೂಲಕ ಕೆಲವು ಸ್ಟುಡಿಯೋಗಳ ಬಾಕಿ ಹಣವನ್ನು ಪುರಿ ಜಗನ್ನಾಥ್ ತೀರಿಸಲು ಮುಂದಾಗಿದ್ದಾರೆ. ನಟಿ ಚಾರ್ಮಿ ಸಹ ಈ ಸಿನಿಮಾದ ನಿರ್ಮಾಪಕಿ ಆಗಿದ್ದು ಅವರೂ ಸಹ ಸಿನಿಮಾದಿಂದ ಭಾರಿ ನಷ್ಟ ಅನುಭವಿಸಿದ್ದಾರೆ. ಉತ್ತರ ಭಾರತದಲ್ಲಿ ಸಿನಿಮಾದ ವಿತರಣೆ ಮಾಡಿದ್ದ ಕರಣ್ ಜೋಹರ್ ಸಹ 'ಲೈಗರ್'ನಿಂದ ಭಾರಿ ನಷ್ಟ ಅನುಭವಿಸಿದ್ದಾರೆ.

ಸೆಟ್ಟೇರುವುದಿಲ್ಲ ವಿಜಯ್ ದೇವರಕೊಂಡ-ಪುರಿ ಜಗನ್ನಾಥ್ ಸಿನಿಮಾ
'ಲೈಗರ್' ಸಿನಿಮಾ ಬಿಡುಗಡೆ ಆಗುವ ಮುನ್ನವೇ ವಿಜಯ್ ದೇವರಕೊಂಡ ಜೊತೆಗೆ 'ಜನ ಗಣ ಮನ' ಸಿನಿಮಾವನ್ನು ಪುರಿ ಜಗನ್ನಾಥ್ ಘೋಷಿಸಿದ್ದರು. ಆದರೆ ಆ ಸಿನಿಮಾ ಸೆಟ್ಟೇರುವುದು ಅನುಮಾನ ಎನ್ನಲಾಗುತ್ತಿದೆ. ಸೈನಿಕನ ಕುರಿತಾದ ಕತೆಯನ್ನು 'ಜನ ಗಣ ಮನ' ಸಿನಿಮಾ ಹೊಂದಿತ್ತು. ಆದರೆ ಆ ಸಿನಿಮಾ ಸೆಟ್ಟೇರುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ, ವಿಜಯ್ ದೇವರಕೊಂಡ ಸಹ ತಮ್ಮ ಸಂಭಾವನೆಯಲ್ಲಿ ಒಂದಷ್ಟು ಭಾಗವನ್ನು ಪುರಿ ಜಗನ್ನಾಥ್ಗೆ ಹಿಂದಿರುಗಿಸಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











