ರೋಸಿ ಹೋಗಿ ಮೌನ ಮುರಿದ ಚಾರ್ಮಿ: ಎಲ್ಲಾ ವದಂತಿಗಳಿಗೂ ಶ್ರದ್ಧಾಂಜಲಿ!
ಪುರಿ ಜಗನ್ನಾಥ್ ನಿರ್ದೇಶನದ 'ಜನ ಗಣ ಮನ' ಸಿನಿಮಾ ನಿಂತು ಹೋಯ್ತು. ಬಾಡಿಗೆ ಕಟ್ಟಲು ಹಣ ಇಲ್ಲದೇ ಪುರಿ ಜಗನ್ನಾಥ್ ಮುಂಬೈ ಫ್ಲಾಟ್ ಖಾಲಿ ಮಾಡ್ತಿದ್ದಾರೆ. ವಿಜಯ್ ದೇವರಕೊಂಡ 6 ಕೋಟಿ ಸಂಭಾವನೆ ಹಣವನ್ನು ವಾಪಸ್ ಕೊಟ್ಟಿದ್ದಾರೆ. ಪುರಿ ವಿತರಕರಿಗೆ ನಷ್ಟವನ್ನು ಭರಿಸಿಕೊಡುತ್ತಾರೆ. ನಷ್ಟ ಭರಿಸಲು ಪುರಿ ಹೈದರಾಬಾದ್ನಲ್ಲಿರುವ ಆಸ್ತಿ ಮಾರಾಟ ಮಾಡುತ್ತಿದ್ದಾರೆ. ಹೀಗೆ 'ಲೈಗರ್' ಸಿನಿಮಾ ಸೋಲಿನ ಬೆನ್ನಲ್ಲೇ ಸಾಕಷ್ಟು ಗಾಳಿಸುದ್ದಿ ಹರಿದಾಡ್ತಿತ್ತು. ಇದಕ್ಕೆ ಈಗ ನಿರ್ಮಾಪಕಿ ಚಾರ್ಮಿ ಕೌರ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರೀ ನಿರೀಕ್ಷೆ ಮೂಡಿಸಿದ್ದ 'ಲೈಗರ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಆಗಸ್ಟ್ 25ಕ್ಕೆ ತೆರೆಗಪ್ಪಳಿಸಿದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿತ್ತು. ಫಸ್ಟ್ ಶೋನಿಂದಲೇ ನೆಗೆಟಿವ್ ಟಾಕ್ ಬಂದ ಹಿನ್ನೆಲೆಯಲ್ಲಿ ಪ್ರೇಕ್ಷಕರು ಥಿಯೇಟರ್ಗೆ ಹೋಗಲೇ ಇಲ್ಲ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ 5 ಭಾಷೆಗಳಲ್ಲಿ ತೆರೆಕಂಡಿದ್ದ ಸಿನಿಮಾ ಒಂದೇ ವಾರಕ್ಕೆ ಥಿಯೇಟರ್ ಖಾಲಿ ಮಾಡಿತ್ತು. ನಿರ್ದೇಶಕ ಪುರಿ ಜಗನ್ನಾಥ್ ಕರಿಯರ್ನಲ್ಲೇ ಅತಿ ದೊಡ್ಡ ಸೋಲು 'ಲೈಗರ್' ಎನ್ನಲಾಗ್ತಿದೆ. ಇದು ಪುರಿ ಹಾಗೂ ವಿಜಯ್ ಮುಂದಿನ ಸಿನಿಮಾಗಳ ಮೇಲೂ ಪರಿಣಾಮ ಬೀರಿದೆ.
ಪುರಿ ಜಗನ್ನಾಥ್ ನೆಕ್ಸ್ಟ್ ಪ್ರಾಜೆಕ್ಟ್, ಆರ್ಥಿಕ ಪರಿಸ್ಥಿತಿ, 'ಲೈಗರ್' ಸಿನಿಮಾ ಸೆಟ್ಲಮೆಂಟ್ಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿತ್ತು. 'ಲೈಗರ್' ಸಿನಿಮಾ ರಿಲೀಸ್ ನಂತರ ತಂಡದ ಯಾರೊಬ್ಬರು ಯಾವುದೇ ವಿಚಾರದ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ಹಾಗಾಗಿ ಎಲ್ಲವೂ ನಿಜ ಎಂದೇ ಕೆಲವರು ನಂಬಿದ್ದರು.

'ಜನ ಗಣ ಮನ' ಕಥೆಯೇನು?
ಪುರಿ ಜಗನ್ನಾಥ್ ಕನಸಿನ ಸಿನಿಮಾ 'ಜನ ಗಣ ಮನ'. ಮಹೇಶ್ ಬಾಬು ಜೊತೆ ಮಾಡಬೇಕಿದ್ದ ಸಿನಿಮಾವನ್ನು ವಿಜಯ್ ದೇವರಕೊಂಡ ಜೊತೆ ಶುರು ಮಾಡಿದ್ದರು. 'ಲೈಗರ್' ಸಿನಿಮಾ ಮೇಕಿಂಗ್ ಹಂತದಲ್ಲೇ ಸಿಕ್ಕಾಪಟ್ಟೆ ಕಾನ್ಫಿಡೆಂಟ್ ಆಗಿ ಇದ್ದ ಜೋಡಿ ಅದ್ಧೂರಿಯಾಗಿ ಸಿನಿಮಾ ಮುಹೂರ್ತ ಕೂಡ ಮಾಡಿದ್ದರು. 'ಲೈಗರ್' ಸಿನಿಮಾ ಸೋಲಿನ ಬೆನ್ನಲ್ಲೇ 'ಜನ ಗಣ ಮನ' ಸಿನಿಮಾ ನಿಂತು ಹೋಯಿತು ಅನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ವಿಜಯ್ ದೇವರಕೊಂಡ ನಂಬಿ ಭಾರೀ ಬಜೆಟ್ ಸಿನಿಮಾ ಮಾಡಿದರೆ ಹಣ ವಾಪಸ್ ಬರೋದಿಲ್ಲ ಎನ್ನುವ ಕಾರಣಕ್ಕೆ ನಿರ್ಮಾಪಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿತ್ತು. 20 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಸಿನಿಮಾ ಮುಹೂರ್ತ ಮಾಡಿದ್ದರು. ವಿಜಯ್ ದೇವರಕೊಂಡ ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಈ 20 ಕೋಟಿ ರೂ. ಕಥೆಯೇನು ಅನ್ನುವ ಚರ್ಚೆ ಕೂಡ ನಡೀತಿದೆ.

ಮುಂಬೈ ಫ್ಲಾಟ್ ಖಾಲಿ ಮಾಡಿದ ಪುರಿ!
'ಲೈಗರ್' ಸಿನಿಮಾ ಶುರುವಾದ ದಿನದಿಂದಲೂ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಮುಂಬೈನಲ್ಲೇ ವಾಸ್ತವ್ಯ ಹೂಡಿದ್ದರು. 10 ಲಕ್ಷದ ಸೀ ಫೇಸ್ ಫ್ಲಾಟ್ ಬಾಡಿಗೆ ಪಡೆದು ಅಲ್ಲೇ ಆಫೀಸ್ ಮಾಡಿಕೊಂಡು ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದರು. ಬಾಡಿಗೆ ಕಟ್ಟಲು ಹಣವಿಲ್ಲದೇ ಈಗ ಆ ಫ್ಲಾಟ್ ಖಾಲಿ ಮಾಡುತ್ತಿದ್ದಾರೆ ಎನ್ನುವ ಚರ್ಚೆ ಸಹ ನಡೀತಿತ್ತು.

ಎಲ್ಲಾ ಬರೀ ಗಾಸಿಪ್ ಎಂದು ಚಾರ್ಮಿ
ನಿರ್ದೇಶಕ ಪುರಿ ಜಗನ್ನಾಥ್ ಜೊತೆ ಗುರ್ತಿಸಿಕೊಂಡಿರುವ ಚಾರ್ಮಿ 'ಲೈಗರ್' ಹಾಗೂ 'ಜನ ಗಣ ಮನ' ಸಿನಿಮಾಗಳಿಗೆ ಸಹ ನಿರ್ಮಾಪಕಿ ಕೂಡ ಆಗಿದ್ದಾರೆ. 'ಲೈಗರ್' ಸೋಲಿನ ನಂತರ ಬೇಸತ್ತ ಚಾರ್ಮಿ 4 ದಿನಗಳ ಹಿಂದೆಯಷ್ಟೇ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಮತ್ತೆ ತಿರುಗೇಟು ನೀಡುವುದಾಗಿ ಟ್ವೀಟ್ ಮಾಡಿದ್ದರು. ಆದರೆ ಈಗ ದಿಢೀರ್ ವಾಪಸ್ ಬಂದು ಎಲ್ಲಾ ಬರೀ ವದಂತಿ ಎಂದು ಪೋಸ್ಟ್ ಮಾಡಿದ್ದಾರೆ.

ವದಂತಿಗಳಿಗೆ ಚಾರ್ಮಿ ಶ್ರದ್ಧಾಂಜಲಿ!
'ಲೈಗರ್' ಸಿನಿಮಾ ಸೋಲಿನ ಬೆನ್ನಲ್ಲಿ ಹತ್ತು ಹಲವು ಗಾಸಿಪ್ಗಳು ಹರಿದಾಡ್ತಿದೆ. ಗಾಸಿ ಸುದ್ದಿ ಕೇಳಿ ಕೇಳಿ ರೋಸಿಹೋದ ಚಾರ್ಮಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. 'ವದಂತಿ ವದಂತಿ ವದಂತಿ. ಎಲ್ಲಾ ವದಂತಿಗಳು ಸುಳ್ಳು. ನಾವು ಪುರಿ ಕನೆಕ್ಟ್ಸ್ ಬ್ಯಾನರ್ ಕಟ್ಟಿ ಬೆಳೆಸಲು ಶ್ರಮಿಸುತ್ತಿದ್ದೇವೆ. ಅಂದಹಾಗೆ ವದಂತಿಗಳಿಗೆಲ್ಲಾ ಶ್ರದ್ಧಾಂಜಲಿ" ಎಂದು ಬರೆದುಕೊಂಡಿದ್ದಾರೆ. ಆದರೆ ಚಾರ್ಮಿ ಯಾವುದು ವದಂತಿ, ಯಾವುದು ನಿಜ ಎನ್ನುವುದನ್ನು ಮಾತ್ರ ಹೇಳಿಲ್ಲ.


Click it and Unblock the Notifications











