"30- 40 ಸೀಟ್ ಸಿಕ್ಕಿದ್ರೆ ನಾವು ಕೂಡ ಎಚ್. ಡಿ. ಕುಮಾರಸ್ವಾಮಿ ತರ ಕಿಂಗ್ ಮೇಕರ್ ಆಗಬಹುದು": ಪವನ್ ಕಲ್ಯಾಣ್
ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಗೆಲ್ಲೋದ್ಯಾರು? ಸೋಲೋದ್ಯಾರು? ಎನ್ನುವ ಲೆಕ್ಕಾಚಾರ ನಡೀತಿದೆ. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುತ್ತಾ? ಅಥವಾ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ ಎನ್ನುವ ಚರ್ಚೆ ಜೋರಾಗಿದೆ. ಇದೆಲ್ಲದರ ನಡುವೆ ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಸರ್ಕಾರ ರಚನೆಗೆ ಜೆಡಿಎಸ್ ನಿರ್ಣಾಯಕ ಎನ್ನಲಾಗ್ತಿದೆ.
ಈ ಹಿಂದೆ ಕೂಡ ಅತಂತ್ರ ಫಲಿತಾಂಶ ಬಂದಾಗ ಒಮ್ಮೆ ಬಿಜೆಪಿ ಜೊತೆ ಮತ್ತೊಮ್ಮೆ ಕಾಂಗ್ರೆಸ್ ಜೊತೆ ಸೇರಿ ಜೆಡಿಎಸ್ ಸರ್ಕಾರ ರಚಿಸಿತ್ತು. 2 ಬಾರಿ ಹೆಚ್. ಡಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಈ ಬಾರಿಯೂ ಅಂತದ್ದೇ ಸನ್ನಿವೇಶ ಎದುರಾಗಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಇದೆಲ್ಲದರ ನಡುವೆ ಅತ್ತ ಆಂಧ್ರದಲ್ಲಿ ಪವನ್ ಕಲ್ಯಾಣ್ ಕರ್ನಾಟಕದ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಉದಾಹರಣೆ ಕೊಟ್ಟು ಮಾತನಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನಸೇನಾ ಪಕ್ಷದ ನಿಲುವು ಏನು ಎನ್ನುವ ಬಗ್ಗೆ ಜನಸೇನಾನಿ ಮಾತನಾಡಿದ್ದಾರೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಜನಸೇನಾ ಪಕ್ಷ ಸ್ಥಾಪಿಸಿ ಸಕ್ರಿಯ ರಾಜಕಾರಣಕ್ಕೆ ಧುಮುಕಿರುವುದು ಗೊತ್ತೇಯಿದೆ. ಕಳೆದ ಬಾರಿ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿತ್ತು. ಖುದ್ದು ಪವನ್ ಕಲ್ಯಾಣ್ ತಮ್ಮದೇ ಕ್ಷೇತ್ರದಲ್ಲಿ ಸೋಲುಂಡಿದ್ದರು. ಆದರೂ ಕೂಡ ಪಟ್ಟು ಬಿಡದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ ಚುನಾವಣೆಯಲ್ಲಿ ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೂಡ ಒಲವು ತೋರಿಸಿದ್ದಾರೆ. ಎರಡು ಪಕ್ಷಗಳ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ.
ವೈಸಿಪಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಏನಾದರೂ ಮಾಡಿ ಮುಂದಿನ ಬಾರಿ ಚುಕ್ಕಾಣಿ ಹಿಡಿಯಬೇಕು ಎಂದು ಟಿಡಿಪಿ, ಜನಸೇನಾ ಪಕ್ಷಗಳು ಪ್ರಯತ್ನಿಸುತ್ತಿವೆ. ಈ ಬಾರಿ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆ ವಿಚಾರದ ಬಗ್ಗೆ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ಸದ್ಯ ನಮ್ಮ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಜನಸೇನಾನಿ ತಮ್ಮ ಕಾರ್ಯಕರ್ತರು, ನಾಯಕರು ಹಾಗೂ ಜನರಿಗೆ ತಿಳಿಸಿದ್ದಾರೆ. ಕರ್ನಾಟಕದ ಎಚ್ಡಿಕೆ ತರ ಇದ್ದಿದ್ದರೆ ಸಿಎಂ ಆಗುವ ಅವಕಾಶ ಇತ್ತು ಅಂತಲೂ ಹೇಳಿದ್ದಾರೆ.

"ತಮಗೆ ಸಿಎಂ ಪಟ್ಟ ಕೊಟ್ಟರೆ ಮಾತ್ರ ಮೈತ್ರಿ ಮಾಡಿಕೊಳ್ಳುತ್ತೀವಿ ಎಂದು ಟಿಡಿಪಿ ಹಾಗೂ ಬಿಜೆಪಿ ಮುಂದೆ ಬೇಡಿಕೆ ಇಡಿ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾನು ಅಂತಹ ಬೇಡಿಕೆ ಇಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಪವರ್ ಸ್ಟಾರ್ ಹೇಳಿದ್ದಾರೆ. ಕರ್ನಾಟಕದ ಮಾಜಿ ಸಿಎಂ ಕುಮಾರಸ್ವಾಮಿ ರೀತಿ 30-40 ಸೀಟ್ ಗೆದ್ದಿದ್ದರೆ ಮುಂದಿನ ಚುನಾವಣೆಯಲ್ಲಿ ನನಗೆ ಸಿಎಂ ಪಟ್ಟ ಬೇಕು ಎಂದು ಟಿಡಿಪಿ, ಬಿಜೆಪಿ ಬಳಿ ಕೇಳುತ್ತಿದ್ದೆ" ಎಂದಿದ್ದಾರೆ.
ಪವನ್ ಕಲ್ಯಾಣ್ ಹೇಳಿಕೆಯ ಹಿಂದೆ ಸಾಕಷ್ಟು ಕಾರಣಗಳಿವೆ. ಕೆಲ ದಿನಗಳಿಂದ ಟಿಡಿಪಿ- ಜನಸೇನಾ ಮೈತ್ರಿ ಬಗ್ಗೆ ಕ್ಷೇತ್ರಗಳ ಹಂತದಲ್ಲಿ ಭಾರೀ ನಿರೀಕ್ಷೆ ಇದೆ. ಅದೇ ಸಮಯದಲ್ಲಿ ಜನಸೇನಾ ಮುಖಂಡರು ಹಾಗೂ ಕಾಪು ನಾಯಕರು ಕೂಡ ಸಿಎಂ ಹುದ್ ನೀಡಿದರೆ ಮಾತ್ರ ಮೈತ್ರಿಗೆ ಒಪ್ಪಿಕೊಳ್ಳಿ ಎಂದು ಪವನ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ಸಿಎಂ ಆಗುವ ಅವಕಾಶ ಸಿಗಲ್ಲ. ಹಾಗಾಗಿ ಟಿಡಿಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಜನಸೇನಾನಿ ಚಿಂತನೆ ನಡೆಸುತ್ತಿದ್ದಾರೆ.
ಇದೇ ಕಾರಣಕ್ಕೆ ಪವನ್ ಕಲ್ಯಾಣ್ ಜನಸೇನಾ ನಾಯಕರ ಜೊತೆ ಕಾಪು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು 30-40 ಸ್ಥಾನಗಳ ಲೆಕ್ಕ ಇಟ್ಟಿದ್ಧಾರೆ ಎನ್ನಲಾಗ್ತಿದೆ. ಟಿಡಿಪಿ, ಬಿಜೆಪಿ ತನಗೆ ಅವರಾಗಿಯೇ ಸಿಎಂ ಪದವಿ ಕೊಡಲ್ಲ ಎಂದು ಈ ಮೂಲಕ ಪವನ್ ಕ್ಲಾರಿಟಿ ಕೊಟ್ಟಿದ್ದಾರೆ. ಅದೇ ಸಮಯದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡ ನಂತರವೇ ಸಿಎಂ ಹುದ್ದೆ ಹುಡುಕಿ ಬರುತ್ತದೆ, ಅದನ್ನು ಮುನ್ನ ಬೇಡಿಕೆ ಇಡುವುದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಸಿಎಂ ಪದವಿ ಕೊಟ್ಟರೆ ಮಾತ್ರ ಮೈತ್ರಿ ಮಾಡಿಕೊಳ್ಳಬೇಕು ಎನ್ನುವ ಬೇಡಿಕೆ ಬೇಡ ಎಂದು ಪವನ್ ತಮ್ಮ ಬೆಂಬಲಿಗರಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.


Click it and Unblock the Notifications











