ಮಲೇಷಿಯಾ ಜಾತ್ರೆಯಲ್ಲಿ ಪಾನಿಪುರಿ ಮಾರುತ್ತಿದ್ದಾರಾ ನಟ ಬಾಲಯ್ಯ? ಇಲ್ಲಿದೆ ಸತ್ಯ
ಒಂದೇ ರೀತಿ ಕಾಣುವ ವ್ಯಕ್ತಿಗಳು ಪ್ರಪಂಚದಲ್ಲಿ 7 ಜನ ಇರ್ತಾರೆ ಎಂದು ಕೆಲವರು ಹೇಳ್ತಾರೆ. ವ್ಯಕ್ತಿಯನ್ನು ಹೋಲುವ ವ್ಯಕ್ತಿಗಳು ಆಗಾಗ್ಗೆ ಕಾಣಿಸುವುದು ಇದೆ. ಸ್ಟಾರ್ ನಟರನ್ನು ಹೋಲುವ ವ್ಯಕ್ತಿಗಳು ವೇದಿಕೆ ಏರಿ ರಂಜಿಸುವುದನ್ನು ನೋಡುತ್ತೇವೆ. ಜ್ಯೂ. ರಾಜ್ಕುಮಾರ್, ಜ್ಯೂ. ವಿಷ್ಣುವರ್ಧನ್, ಜ್ಯೂ. ಶಂಕರ್ ನಾಗ್, ಜ್ಯೂ. ಅಪ್ಪು, ಜ್ಯೂ. ರವಿಚಂದ್ರನ್ ಹೀಗೆ ಕೆಲವರು ಸ್ಟಾರ್ ನಟರನ್ನು ನೆನಪಿಸುವುದು ಇದೆ.
ತೆಲುಗು ನಟ ನಂದಮೂರಿ ಬಾಲಕೃಷ್ಣ ಬಗ್ಗೆ ಹೊಸದಾಗಿ ಹೇಳುವುದು ಬೇಕಿಲ್ಲ. ಬಿಲ್ಡಪ್ ಬಾಲಯ್ಯ ಎಂದು ಕೆಲವರು ತಮಾಷೆ ಮಾಡುವುದು ಇದೆ. ಆದರೆ ಚಿತ್ರರಂಗದಲ್ಲಿ ಬಾಲಕೃಷ್ಣ ಅವರಿಗೆ ಭಾರೀ ಅಭಿಮಾನಿ ಬಳಗವಿದೆ. ಹಿಂದೂಪುರದ ಶಾಸಕರು ಆಗಿರುವ ಬಾಲಯ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ 'ಅಖಂಡ- 2' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

ಸದ್ಯ ನಟ ಬಾಲಕೃಷ್ಣ ಹೋಲುವ ವ್ಯಕ್ತಿಯೊಬ್ಬರು ಮಲೇಷಿಯಾದ ಜಾತ್ರೆಯಲ್ಲಿ ಕಂಡಿದ್ದಾರೆ. ಜಾತ್ರೆಯಲ್ಲಿ ಪಾನಿಪುರಿ ಮಾಡುವ ವ್ಯಕ್ತಿ ನಟ ಬಾಲಯ್ಯ ಅವರನ್ನು ಹೋಲುವಂತಿದ್ದಾರೆ. ನೆಟ್ಟಿಗರೊಬ್ಬರು ಆ ವ್ಯಕ್ತಿಯ ವೀಡಿಯೋ ಹಂಚಿಕೊಂಡು ಮಲೇಷಿಯಾದಲ್ಲಿ ಪಾನಿಪುರಿ ಮಾರುತ್ತಿರುವ ಬಾಲಯ್ಯ? ಎಂದು ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ನಟ ಬಾಲಕೃಷ್ಣ ವಿಗ್ ಧರಿಸುತ್ತಾರೆ. ವಿಗ್ ಇಲ್ಲದೇ ಇದ್ದರೆ ಅವರು ನೋಡಲು ಹೆಚ್ಚು ಕಮ್ಮಿ ಇದೇ ರೀತಿ ಕಾಣುತ್ತಾರೆ. ಹಾಗಾಗಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಬೇರೆ ನಟರ ಅಭಿಮಾನಿಗಳು ಈ ವೀಡಿಯೋ ತೋರಿಸಿ ಬಾಲಕೃಷ್ಣ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಬಾಲಯ್ಯ ಅಭಿಮಾನಿಗಳು ತಿರುಗೇಟು ಕೊಡುತ್ತಿದ್ದಾರೆ. ಮಲೇಷಿಯಾದಲ್ಲಿ ಸಾಕಷ್ಟು ಜನ ಭಾರತೀಯ ಮೂಲದವರು ವಾಸಿಸುತ್ತಿದ್ದಾರೆ. ಹಾಗಾಗಿ ಹಿಂದೂ ದೇವಾಲಯಗಳು ಅಲ್ಲಿದ್ದು ಹಬ್ಬ, ಜಾತ್ರೆಗಳನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಅದೇ ರೀತಿ ಜಾತ್ರೆಯಲ್ಲಿ ಕಂಡ ದೃಶ್ಯ ಇದು. ಅಲ್ಲಿನ ಜಾತ್ರೆಯಲ್ಲಿ ತಮಿಳು ನಟ ದಳಪತಿ ವಿಜಯ್ ಕ್ರೇಜ್ ಹೇಗಿದೆ ಎನ್ನುವುದನ್ನು ಕೂಡ ಇದೇ ವಿಡಿಯೋದಲ್ಲಿ ತೋರಿಸಿದ್ದಾರೆ.
ಆ ವ್ಯಕ್ತಿಗೂ ನಮ್ಮ ಬಾಲಯ್ಯಗೂ ಹೋಲಿಕೆ ಇಲ್ಲವೇ ಇಲ್ಲ, ವೀವ್ಸ್ಗಾಗಿ ಈ ರೀತಿ ಕೆಲವರು ವೀಡಿಯೋ ಮಾಡಿ ವೈರಲ್ ಮಾಡ್ತಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಗೋಪಿಚಂದ್ ಮಲಿನೇನಿ ನಿರ್ದೇಶನದ ಚಿತ್ರದಲ್ಲಿ ಬಾಲಕೃಷ್ಣ ನಟಿಸುತ್ತಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ 'ಅಖಂಡ- 2' ಸಿನಿಮಾ ನಿರಾಸೆ ಮೂಡಿಸಿತ್ತು. ಭರ್ಜರಿ ಓಪನಿಂಗ್ ಸಿಕ್ಕರೂ ಬಳಿಕ ಸಿನಿಮಾ ಸೋಲಿನ ಹಾದಿ ಹಿಡಿಯಿತು. ಹಾಗಾಗಿ ಬಾಲಯ್ಯ ಸೈಲೆಂಟ್ ಆಗಿಬಿಟ್ಟಿದ್ದಾರೆ.
ವಿವೇಕ್ ಆತ್ರೇಯಾ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಬಾಲಯ್ಯ ನಟಿಸುತ್ತಿದ್ದಾರೆ. ಎರಡು ಭಾಗಗಳಾಗಿ ಕೆಜಿಎಫ್ ಸ್ಟೈಲ್ ಆಕ್ಷನ್ ಸಿನಿಮಾ ಇದು ಎನ್ನಲಾಗ್ತಿದೆ. 'ಕುರುಕ್ಷೇತ್ರಂ' ಎನ್ನುವ ಟೈಟಲ್ನಲ್ಲಿ ಸಿನಿಮಾ ನಿರ್ಮಾಣಕ್ಕೆ ಪ್ರಯತ್ನ ನಡೀತಿದೆ. ಭಾರೀ ಎಮೋಷನ್ ಇರುವ ಸಿನಿಮಾ ಎನ್ನು ಕಾರಣಕ್ಕೆ 2 ಭಾಗಗಳಾಗಿ ತೆರೆಗೆ ತರಲು ಬಾಲಕೃಷ್ಣ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಹಿಂದೂಪುರ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶಾಸಕ ಬಾಲಕೃಷ್ಣ ಪೊಲೀಸರ ಬೆಂಬಲಕ್ಕೆ ನಿಂತಿದ್ದಾರೆ. ದಾನಿಗಳ ಆರ್ಥಿಕ ನೆರವಿನಿಂದ ಸಂಗ್ರಹಿಸಲಾದ ಸುಮಾರು 50 ಲಕ್ಷ ರೂ. ಮೌಲ್ಯದ ವಾಹನಗಳನ್ನು ಇತ್ತೀಚೆಗೆ ಪೊಲೀಸ್ ಇಲಾಖೆಗೆ ಖುದ್ದಾಗಿ ಹಸ್ತಾಂತರಿಸಿದರು. ಹೀಗೆ ಸಿನಿಮಾ ಜೊತೆ ಜೊತೆಗೆ ರಾಜಕೀಯರಂಗದಲ್ಲಿ ಕೂಡ ಬಾಲಯ್ಯ ಹೆಜ್ಜೆ ಹಾಕಿದ್ದಾರೆ. ಸತತ ಮೂರನೇ ಬಾರಿ ಹಿಂದೂಪುರ ಕ್ಷೇತ್ರದ ಶಾಸಕರಾಗಿ ಅವರು ಆಯ್ಕೆ ಆಗಿದ್ದಾರೆ.


Click it and Unblock the Notifications











